Cini NewsSandalwood

ಇದೇ 17ರಂದು ಧರ್ಮಣ್ಣ ನಟನೆಯ “ರಾಜಯೋಗ” ಚಿತ್ರ ರೀಲೀಸ್

ಮಾನವನ ಜೀವನದಲ್ಲಿ ರಾಜಯೋಗ ಬಂತೆಂದರೆ ಆತ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತೆ ಎನ್ನುವ ಮಾತಿದೆ. ಅದೇ ಕಾನ್ಸೆಪ್ಟ್ ಮೇಲೆ ತಯಾರಾದ ಚಿತ್ರ ರಾಜಯೋಗ. ಇದೇ 17ರಂದು ರಾಜ್ಯಾದ್ಯಂತ ತೆರೆಕಾಣುತ್ತಿರುವ ಈ ಚಿತ್ರದಲ್ಲಿ ನಾಯಕನ ಪ್ಯಾಥೋ ಸಾಂಗ್, ಟ್ರೈಲರ್ ಪ್ರದರ್ಶನ ಹಾಗೂ ಬಿಡುಗಡೆಪೂರ್ವ ಪತ್ರಿಕಾಗೋಷ್ಠಿ ಗುರುವಾರ ನಡೆಯಿತು.

ಅಕ್ಷಯ್ ಎಸ್.ರಿಶಭ್ ಅವರ ಸಂಗೀತ, ಪ್ರಮೋದ್ ಜೋಯಿಸ್ ಅವರ ಸಾಹಿತ್ಯ ಈ ಹಾಡಿಗಿದೆ. ಈ ಚಿತ್ರದ ಮೂಲಕ ಪೋಷಕ ನಟನಾಗಿದ್ದ ಧರ್ಮಣ್ಣ ಕಡೂರು ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಲಿಂಗರಾಜ ಉಚ್ಚಂಗಿದುರ್ಗ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಶ್ರೀರಾಮರತ್ನ ಪ್ರೊಡಕ್ಷನ್ಸ್ ಮೂಲಕ ಕುಮಾರ ಕಂಠೀರವ, ದೀಕ್ಷಿತ್ ಕೃಷ್ಣ, ಪ್ರಭು ಚಿಕ್ಕನಾಯ್ಕನಹಳ್ಳಿ, ಲಿಂಗರಾಜು ಕೆಎನ್, ನೀರಜ್ ಗೌಡ ಅಲ್ಲದೆ ಧರ್ಮಣ್ಣ ಕಡೂರು ಸೇರಿ ನಿರ್ಮಾಣ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಕುಮಾರ್ ಕಂಠೀರವ ಮಾತನಾಡುತ್ತ, ಈ ಹಾಡನ್ನು ಕನ್ನಡ್ ಗೊತ್ತಿಲ್ಲ ಟೈಂನಲ್ಲೇ ಧರ್ಮಣ್ಣ ನನಗೆ ಕೇಳಿಸಿದ್ದರು. ಅದರಲ್ಲಿ ಚಿಕ್ಕ ಪಾತ್ರ ಮಾಡಿದ್ದರು. ಸಂಬಂಧಗಳ‌ ಬಗ್ಗೆ ತಿಳಿಸಿಕೊಡುವ ಇಡೀ ಕಥೆಯ ಸಾರ ಹೇಳುವ ಹಾಡದು. ಮೊದಲ ಚಿತ್ರ ಮಾಡಿದಾಗ ಸಿನಿಮಾದ ಒಳಹೊರಗುಗಳನ್ನು ಅರಿತು ಸುಮ್ಮನಾಗಿದ್ದೆ. ಮತ್ತೆ ಧರ್ಮಣ್ಣ ಈ ಕಂಟೆಂಟ್ ಬಗ್ಗೆ ಮನವರಿಕೆ ಮಾಡಿದಾಗ ಈ ತಂಡದಲ್ಲಿ ನಾನೂ ಒಬ್ಬನಾಗಿ ಸೇರಿದೆ. ಚಿತ್ರದಲ್ಲಿ ಗ್ರಾಮೀಣ ಸೊಗಡನ್ನು ತುಂಬಾ ಚೆನ್ನಾಗಿ ತಂದಿದ್ದಾರೆ. ಜನ ಪ್ರೋತ್ಸಾಹಿಸುತ್ತಾರೆಂಬ ನಂಬಿಕೆಯಿದೆ ಎಂದು ಹೇಳಿದರು.

ನಿರ್ದೇಶಕ ಲಿಂಗರಾಜು ಮಾತನಾಡುತ್ತ, ನನ್ನ ನಿರ್ದೇಶನದ ಮೊದಲ ಚಿತ್ರ. ಪ್ರಾಮಾಣಿಕವಾಗಿ ಕೆಲಸಮಾಡಿ ಒಂದೊಳ್ಳೆ ಸಿನಿಮಾ ಕೊಡುತ್ತಿದ್ದೇವೆ. ಶ್ರದ್ದೆಯಿಂದ ಕೆಲಸ ಮಾಡಿದರೆ ರಾಜಯೋಗ ಬಂದೇ ಬರುತ್ತೆ ಎಂಬ ಕಾನ್ಸೆಪ್ಟ್ ಇಟ್ಟುಕೊಂಡು, ಶ್ರೀರಂಗಪಟ್ಟಣ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ನಡೆಯುವ ಕಥೆಯನ್ನು ಹೇಳಿದ್ದೇವೆ.

ಕೆಎಎಸ್ ಎಕ್ಸಾಂ ಬರೆಯಲು ಹೊರಟ ನಾಯಕ, ಕೊನೆಗಾದರೂ ಕೆಎಎಸ್ ಬರೀತಾನಾ ಇಲ್ವಾ ಅನ್ನೋದೇ ಚಿತ್ರದ ಕಾನ್ಸೆಪ್ಟ್, ಜೋತಿಷ್ಯ ಸುಳ್ಳಲ್ಲ, ಅದನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ನಮ್ಮ ಚಿತ್ರದಲ್ಲಿ ತೋರಿಸಿದ್ದೇವೆ. ಕೊನೆಯಲ್ಲಿ ಮಗನ ಮೂಲಕವೇ ತಂದೆಗೆ ಜ್ಞಾನೋದಯವಾಗುತ್ತದೆ. ಸೀರಿಯಸ್ ಕಂಟೆಂಟನ್ನು ಹಾಸ್ಯದ ಮೂಲಕ ಹೇಳಲು ಪ್ರಯತ್ನಿಸಿದ್ದೇವೆ, ಈಗಾಗಲೇ ಟ್ರೈಲರ್, ಸಾಂಗ್ಸ್ ಹಿಟ್ ಆಗಿದೆ, ಅದೇ ರೀತಿ ಜನ ಚಿತ್ರವನ್ನೂ ಗೆಲ್ಲಿಸುತ್ತಾರೆಂಬ ಭರವಸೆಯಿದೆ ಎಂದು ಹೇಳಿದರು,

ನಾಯಕನಟ ಧರ್ಮಣ್ಣ ಮಾತನಾಡುತ್ತ ತುಂಬಾ ಓದಿಕೊಂಡಿರುವವನ ಜೀವನ ಹೇಗಿರುತ್ತೆ ಅಂತ ಹೇಳುವ ಪಾತ್ರ. ಇದರಲ್ಲಿ ಕಾಮಿಡಿ, ಎಮೋಷನ್ ಎಲ್ಲಾ ಸೇರಿದೆ, ಪ್ರತಿಯೊಂದು ಪಾತ್ರಕ್ಕೂ ಸಮಾನ ಅವಕಾಶವಿದೆ ಎಂದು ಹೇಳಿದರು, ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿರುವ ನಿರೀಕ್ಷಾರಾವ್ ಮಾತನಾಡುತ್ತ ಇದಿ ನನ್ನ ಮೊದಲ ಚಿತ್ರ. ವಿದ್ಯಾವಂತೆಯಾದ ನಾನು ಗೃಹಿಣಿಯಾಗಿ ಕುಟುಂಬವನ್ನು ಹೇಗೆ ನಿಭಾಯಿಸುತ್ತೇನೆ, ಮೂಢನಂಬಿಕೆ, ನಂಬಿಕೆಗಳ ಮಧ್ಯೆ ನಡೆಯುವ ಕಥೆಯಿದು ಎಂದು ಹೇಳಿದರು. ಚಿತ್ರದ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿರುವ ಮಾರ್ಸ್ ಸುರೇಶ್ ಮಾತನಾಡುತ್ತ ಈ ಸಿನಿಮಾನ ನಾನು ನೋಡಿದ್ದೇನೆ.

ಹಾಗಾಗಿ ಪ್ರೇಕ್ಷಕ ಈ ಚಿತ್ರವನ್ನು ಏಕೆ ನೋಡಬೇಕು ಎಂಬುದಕ್ಕೆ ಒಂದಷ್ಟು ಕಾರಣಗಳನ್ನು ಕೊಡುತ್ತೇನೆ. ನಗರೀಕರಣ ಇವತ್ತು ಎಷ್ಟು ಫಾಸ್ಟ್ ಆಗಿದೆ ಎಂದರೆ, ವರ್ಷ ಬಿಟ್ಟು ಹೋದರೆ ನಮ್ಮ ಹಳ್ಳಿಯನ್ನು ನಾವೇ ನಂಬಲು ಆಗದಷ್ಟು ಚೇಂಜಾಗಿರುತ್ತದೆ. ಈ ಸಿನಿಮಾ ನೋಡುವಾಗ ನನಗೆ ನಿರ್ದೇಶಕ ಸಿದ್ದಲಿಂಗಯ್ಯ ಅವರು ನೆನಪಾದರು. ಅವರು ಹಳ್ಳಿಯ ಪಾತ್ರಗಳನ್ನು ಅದೆಷ್ಟು ಚೆನ್ನಾಗಿ ತರುತ್ತಿದ್ದರು ಎಂದರೆ ಇವತ್ತಿಗೂ ಆ ಭೂತಯ್ಯ ಎಲ್ಲರಿಗೂ ನೆನಪಾಗುತ್ತಾನೆ. ಅಂಥಾ ಮತ್ತೊಂದು ಚಿತ್ರವಿದು.

ನಗರದಲ್ಲಿ ಹುಟ್ಟಿ ಬೆಳೆದವರು ಹಳ್ಳಿಯ ವಾತಾವರಣ ಹೇಗಿರುತ್ತದೆ ಅಂತ ಇದರಲ್ಲಿ ನೋಡಬಹುದು. ಚಿತ್ರದಲ್ಲಿ ಪ್ರತಿಯೊಂದು ಪಾತ್ರಗಳೂ ಪ್ರಮುಖವಾಗಿವೆ ಎಂದು ವಿವರಿಸಿದರು. ಚಿತ್ರದ ೬ ಹಾಡುಗಳಿಗೆ, ಅಕ್ಷಯ್ ರಿಶಭ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿಕ್ಕ ನಾಗರಾಜ್ ಅವರ ಹಿನ್ನೆಲೆ ಸಂಗೀತ, ವಿಷ್ಣುಪ್ರಸಾದ್ ಅವರ ಕ್ಯಾಮೆರಾವರ್ಕ್, ಬಿ.ಎಸ್. ಕೆಂಪರಾಜು ಅವರ ಸಂಕಲನ ಈ ಚಿತ್ರಕ್ಕಿದೆ, ನಾಗೇಂದ್ರ ಶಾ ನಾಯಕನ ತಂದೆಯ ಪಾತ್ರ ನಿರ್ವಹಿಸಿದ್ದು, ಕೃಷ್ಣ ಮೂರ್ತಿ ಕವುತಾರ್ ಜನರನ್ನು ದಾರಿ ತಪ್ಪಿಸುವ ಜೋತಿಷಿಯ ಪಾತ್ರ ಮಾಡಿದ್ದಾರೆ. ಶ್ರೀನಿವಾಸಗೌಡ್ರು, ಉಷಾ ರವಿಶಂಕರ್, ಮಹಾಂತೇಶ ಹಿರೇಮಠ್ ಉಳಿದ ಪಾತ್ರವರ್ಗದಲ್ಲಿದ್ದಾರೆ

error: Content is protected !!