”ತಿಕ್ಲುರಾಮ” ಸಿನಿಮಾದ ಪುಸ್ತಕ ಬಿಡುಗಡೆ
ಪರಿಸರ ಪ್ರೇಮಿ, ಹೃದಯಸ್ಪರ್ಶಿ ಕಥೆಯನ್ನು ಹೊಂದಿರುವ *’ತಿಕ್ಲುರಾಮ’* ಡಾ.ನಟರಾಜ ವಿರಚಿತ ಕಾದಂಬರಿಯಾಗಿದ್ದು ಸಿನಿಮಾರೂಪದಲ್ಲಿ ಬರುತ್ತಿದೆ. ಈಗಾಗಲೇ ಶೇಕಡ 40ರಷ್ಟು ಚಿತ್ರೀಕರಣ ನಡೆದಿದೆ. ಮೊನ್ನೆಯಷ್ಟೇ ಕಾದಂಬರಿ ಬಿಡುಗಡೆ ಸಮಾರಂಭವು ಮಂತ್ರಿ ಮಾಲ್ದಲ್ಲಿ ಅದ್ದೂರಿಯಾಗಿ ನಡೆಯಿತು. ಪದ್ಮಶ್ರೀ ಡಾ.ದೊಡ್ಡರಂಗೇಗೌಡ, ನಟ ನಿರ್ದೇಶಕ ಕೆ.ಸುಚೇಂದ್ರಪ್ರಸಾದ್, ಸಾಹಿತಿ ಮತ್ತು ನಿರ್ದೇಶಕ ಬಿ.ಶಿವಾನಂದ, ಡಾ.ಭರತ್ ಮುಂತಾದವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.
ಇನ್ನು ಸಿನಿಮಾಕ್ಕೆ ಮಂಜುಕವಿ ನಿರ್ದೇಶನ ಜವಬ್ದಾರಿಯನ್ನು ಹೊತ್ತುಕೊಂಡಿದ್ದು, ಡಾ.ರಾಜವೀರ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಕರಿಷ್ಮ-ಶ್ರ್ಯಾವ್ಯ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಶೃತಿ.ಜಿ.ಬಿ ಮತ್ತು ಕೋಮಲ ನಟರಾಜು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ತಾರಾಗಣದಲ್ಲಿ ಸುಚೇಂದ್ರ ಪಸ್ರಾದ್, ಜಹಾಂಗೀರ್, ಚೈತ್ರರಾಮ್, ಹಾಸ್ಯ ನಟ ಗಿರೀಶ್. ಇವರೊಂದಿಗೆ ವಿನೋದ್ ಪವಿತ್ರ, ನಿಖಿತಸ್ವಾಮಿ, ಶ್ರಾವ್ಯ ಸೇರಿದಂತೆ ಅನೇಕ ಹೆಸರಾಂತ ಕಲಾವಿದರು ಅಭಿನಯಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ಪುಸ್ತಕವನ್ನು ಪ್ರತಿಯೊಬ್ಬರು ಓದಬೇಕು. ಓದಿದವರು ಖಂಡಿತ ಒಂದಷ್ಟು ಜನ ಬದಲಾವಣೆ ಆಗ್ತಾರೆ. ಪರಿಸರ ಬಗ್ಗೆ ಯಾವ ರೀತಿ ಕಾಳಜಿ ವಹಿಸಬೇಕು. ಪ್ರಕೃತಿ ಎಲ್ಲವನ್ನು ಕೊಟ್ಟಿದೆ. ಇನ್ನು ಮುಂತಾದ ವಿಷಯಗಳ ಬಗ್ಗೆ ವರ್ಣನೆ ಮಾಡಲಾಗಿದೆ. ಸುಚೇಂದ್ರಪ್ರಸಾದ್ ಶಾಸಕರಾಗಿ ಬಣ್ಣ ಹಚ್ಚುತ್ತಿದ್ದಾರೆ. ಬೇರೆ ಟೈಟಲ್ ಇಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ತಿಳಿಸಲಾಗುವುದೆಂದು ಮಂಜುಕವಿ ತಿಳಿಸಿದರು.
ಬಿಇ ಮುಗಿಸಿದ ನನಗೆ, ನಾನು ಕಥೆ ಬರೆದಿರುವುದು ಸೋಜಿಗ ಅನಿಸಿದೆ. ಪ್ರೌಡಶಾಲೆಯಲ್ಲಿದ್ದಾಗ ದೊಡ್ಡರಂಗೇಗೌಡರ ಪ್ರವಚನ ಕೇಳಿ ಪ್ರೇರಣೆಯಾಗಿ, ಅವರಂತೆ ಜೀವನದಲ್ಲಿ ನಡೀಬೇಕು ಅಂದುಕೊಂಡಿದ್ದೆ, ಇಂದು ಹಲವು ಕಥೆಗಳನ್ನು ಬರೆಯಲು ಸಹಕಾರಿ ಆಯಿತು. ಸರ್ಕಾರಿ ಕೆಲಸದಲ್ಲಿ ಕಂಡಂತ, ಸುತ್ತಮುತ್ತಲಿನ ವಿದ್ಯಾಮಾನಗಳನ್ನು ಅಕ್ಷರರೂಪದಲ್ಲಿ ತಂದಿದ್ದೇನೆ. ಕೊನೆಗೆ ತಿಕ್ಲುರಾಮ ಹೆಸರು ಇಡಲಾಗಿದ್ದಕ್ಕೆ ಕಾರಣವೇನು ಎಂಬುದಕ್ಕೆ ಡಾ.ರಾಜ್ವೀರ್ ವಿವರಣೆ ಕೊಟ್ಟರು.
ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ವಿಶಿಷ್ಟ ಕೊಡುಗೆಗಳಾದ ಬರಹಗಳು, ಸೃಜನಶೀಲ ಸಾಹಿತ್ಯಗಳು. ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂದರ್ಭಗಳಲ್ಲಿ ನಮ್ಮ ಭಾಷೆಯು ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಂಡು, ಕನ್ನಡ ಸಂಸ್ಕ್ರತಿ ಎಲ್ಲಾ ಕಡೆ ರಾರಾಜಿಸುತ್ತಿದೆ. ತಿಕ್ಲುರಾಮ ಕಾದಂಬರಿ ಚೆನ್ನಾಗಿದೆ. ಸಿನಿಮಾ ನೋಡಲು ಕಾತುರನಾಗಿದ್ದೇನೆಂದು ಡಾ.ದೊಡ್ಡರಂಗೇಗೌಡರು ಹೇಳಿದರು.
ಸುಚೇಂದ್ರಪ್ರಸಾದ್ ಹೇಳುವಂತೆ, ಪುಸ್ತಕದಲ್ಲಿ ಗ್ರಾಮೀಣ ಸೊಗಡು, ಪರಿಸರ ಕಾಳಜಿ ಓದುಗರನ್ನು ಆಸಕ್ತಿ ತರಿಸುವಂತಿದೆ. ತಿಕ್ಲುರಾಮ ಸಿನಿಮಾ ರೂಪದಲ್ಲಿ ಸಾಕ್ಷಿಯಾಗಿರುವುದು, ಗಮನೀಯ ಮತ್ತು ಮಾದರಿ ಅನಿಸುತ್ತೆ. ಇಂತಹ ಕೃತಿಗಳು ನಿರಂತವಾಗಿ ಹೊರಬರಲಿ. ಮನದ ಗದ್ದಲ ದೂರ ಮಾಡಿಕೊಳ್ಳಲು, ಪುಸ್ತಕ ಸಹಕಾರಿಯಾಗಿ, ಮನಸ್ಸಿಗೆ ಮುದ ನೀಡುತ್ತದೆ. ಮಂಜುಕವಿ ಶ್ರಮಕ್ಕೆ ಫಲ ಸಿಗಲಿ ಎಂದರು.
