Cini NewsSandalwood

`ಕೆಂಡ’ ಚಿತ್ರದ ‘ತಾಜಾ ಸುದ್ದಿಯ’… ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ.

`ಗಂಟುಮೂಟೆ’ ಚಿತ್ರತಂಡದ ಕಡೆಯಿಂದ ರೂಪುಗೊಂಡಿರುವ `ಕೆಂಡ’ ಚಿತ್ರ ಹಂತ ಹಂತವಾಗಿ ಕುತೂಹಲದ ಕಾವೇರಿಸಿಕೊಂಡು ಸಾಗಿ ಬಂದಿತ್ತು. ಇದೀಗ ಕೆಂಡ ಬಿಡುಗಡೆಯ ಹೊಸ್ತಿಲಿನಲ್ಲಿ ನಿಂತಿದೆ. ಈ ಹೊತ್ತಿನಲ್ಲಿ ಜಯಂತ್‍ಕಾಯ್ಕಣಿ ರಚಿಸಿದ `ತಾಜಾ ತಾಜಾ ಸುದ್ದಿ’ ಗೀತೆಗೆ ಪುತ್ರ ರಿತ್ವಿಕ್‍ಕಾಯ್ಕಣಿ ಪ್ರಥಮ ಬಾರಿ ಸಂಗೀತ ಸಂಯೋಜಿಸಿರುವ ಲಿರಿಕಲ್ ವಿಡಿಯೋ ಹಾಡಿನ ಬಿಡುಗಡೆ ಕಾರ್ಯಕ್ರಮ ಎಸ್‍ಆರ್‍ವಿ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು.

ತಂಡಕ್ಕೆ ಶುಭಹಾರೈಸಲು ಯೋಗರಾಜಭಟ್, ಸಂಗೀತ ಸಂಯೋಜಕ ವಿ.ಹರಿಕೃಷ್ಣ, ಡಿ.ಬೀಟ್ಸ್‍ನ ಶೈಲಜಾನಾಗ್ ಮತ್ತು ಜಯಂತ್‍ಕಾಯ್ಕಣಿ ಆಗಮಿಸಿದ್ದರು. ರೂಪಾ ರಾವ್ ಕೆಂಡ ಚಿತ್ರದ ಮೂಲಕ ನಿರ್ಮಾಪಕಿಯಾಗಿದ್ದಾರೆ. ಸಹದೇವ ಕೆಲವಡಿ ಛಾಯಾಗ್ರಹಣ, ನಿರ್ದೇಶನದ ಜೊತೆಗೆ ನಿರ್ಮಾಣದಲ್ಲಿಯೂ ಭಾಗಿಯಾಗಿದ್ದಾರೆ.

ವಿಕಟ ಕವಿ ಯೋಗರಾಜಭಟ್ ಮಾತನಾಡಿ, ಎರಡನೇ ಲಾಕ್‍ಡೌನ್ ಸಂದರ್ಭದಲ್ಲಿ ರಿತ್ವಿಕ್‍ಕಾಯ್ಕಣಿ ಜೊತೆ ದೋಸ್ತಿ ಶುರುವಾಯಿತು. ಸದ್ಯದ ಪರಿಸ್ಥಿತಿಯಲ್ಲಿ ಹಾಡು ಇಲ್ಲದೆ ಸಿನಿಮಾ ಬಿಡುಗಡೆ ಅಂತ ಬಂದಾಗ ಎರಡು ತರದ ಅಪಾಯದಲ್ಲಿ ತಗಲಾಕೊಳ್ತಾರೆ. ಬೆಳಿಗ್ಗೆ ಸ್ನಾನದ ಮನೆಯಲ್ಲಿ ಇರುವಾಗ ನನ್ನ ಹಾಡು ಇಡೀ ಪ್ರಪಂಚ ತಿರುಗಿ ನೋಡುತ್ತೆ ಎನ್ನುವ ಕನಸು.

ಹೊರಗೆ ಬಂದಾಗ ಯಾರಿಗೂ ಗೊತ್ತಿಲ್ಲವೆಂಬ ದುಗುಡ. ಒಂದು ವರ್ಷ ಕಷ್ಟಪಟ್ಟು ಚಿತ್ರ ಬಿಡುಗಡೆ ಮಾಡಿದ ನಂತರ, ಚಿತ್ರಮಂದಿರದಿಂದ ಆಚೆ ಬರುವ ಪ್ರೇಕ್ಷಕ ಮುಂದೆ ಯಾವುದು ಅಂತ ಕೇಳುತ್ತಾನೆ. ಆಗ ಅದಕ್ಕಿಂತಲೂ ಉತ್ತಮವಾದುದನ್ನು ಕೊಡಬೇಕು ಎನ್ನುವ ಛಲ ಹುಟ್ಟಿಕೊಳ್ಳುವುದು ಒಂಥರ ಡೇಂಜರ್. ನಾನು ಅಂದುಕೊಂಡಿದ್ದು ಏನು ಇಲ್ಲ. ಹಾಗೆ ನಾಲ್ಕು ಮಂದಿ ತಿರುಗಿ ನೋಡುವಂತೆ ಮಾಡೋದು ತುಂಬ ಕಷ್ಟದ ಕೆಲಸ.

ಅಲ್ಲಿ ಸಕ್ಸಸ್ ಕಂಡರೆ, ಇಲ್ಲಿ ವಿರುದ್ಧವಾಗಿರುತ್ತದೆ. ಪ್ರತಿ ಸಿನಿಮಾವು ಇವರೆಡು ಡೇಂಜರ್‍ಗೆ ಬದುಕಬೇಕು. ಇವರೆಡು ಡೇಂಜರ್‍ಗಳ ಮಧ್ಯೆ ಇರೋದು ಸೃಜನಾತ್ಮಕ ಕ್ರಿಯೆ. ಇವೆಲ್ಲವು ನಿಮ್ಮೋಂದಿಗೆ ಸದಾ ಕಾಲ ಕಾಡಲಿ ಎಂದು ಮಾತಿಗೆ ವಿರಾಮ ಹಾಕಿದರು.

ಹಾಡು ಅನ್ನೋದು ಮಾರ್ಕೆಟ್‍ದಲ್ಲಿ ಎಷ್ಟು ಇದೆ ಅಂದರೆ, ನೂರಾರು ಹಾಡುಗಳ ಮಧ್ಯೆ ನಮ್ಮ ಗೀತೆಯನ್ನು ಹುಡುಕುವುದು ಸವಾಲಿನ ಕೆಲಸ ಆಗಿರುತ್ತದೆ. ಅವುಗಳ ಮಧ್ಯೆ ನಮ್ಮ ಸಾಂಗ್ ಗುರುತಿಸಿಕೊಳ್ಳಬೇಕೆಂಬುದು ಪ್ರತಿಯೊಬ್ಬ ಸಂಗೀತ ನಿರ್ದೇಶಕನ ಆಸೆಯಾಗಿರುತ್ತದೆ. ಬರಹಗಾರನ ಶ್ರಮ ಗೆದ್ದಾಗ ಖುಷಿ ಕೊಡುತ್ತೆ. ಸೋತಾಗ ಜವಬ್ದಾರಿ ಹೆಚ್ದಾಗುತ್ತದೆ. ಇದರಲ್ಲಿರುವ ಮೂರು ಗೀತೆಗಳು ಯಾವುದೇ ಸಂಗೀತದ ಛಾಯೆ ಕಾಣಿಸುವುದಿಲ್ಲ. ಅದೇ ತಂಡದ ಮೊದಲ ಗೆಲುವು ಎನ್ನಬಹದು. ಅದನ್ನು ಆಲಿಸಿದಾಗ ಹೊಸತನ ಕಂಡುಬರುತ್ತದೆ. ಹೀಗೆ ನಿಮ್ಮಗಳ ವಿನೂತನ ಪ್ರಯತ್ನ ಯಶಸ್ವಿಯಾಗಲಿ ಅಂತಾರೆ ವಿ.ಹರಿಕೃಷ್ಣ.

ಶೈಲಜಾನಾಗ್ ಹೇಳುವಂತೆ ಪ್ರತಿಯೊಂದು ಸಿನಿಮಾದ ಹಿಂದೆ ಶ್ರಮ ಇದ್ದೇ ಇರುತ್ತದೆ. ಯಾವುದೇ ನಿರ್ಮಾಪಕ ಹಣ ವಾಪಸ್ಸು ಬರಲೆಂದೇ ಬಂಡವಾಳ ಹೂಡುತ್ತಾನೆ. ಸುಮ್ಮನೆ ತಮಾಷೆಗೆ ಮಾಡುವುದಿಲ್ಲ. ಇದು ಕೂಡ ವ್ಯಾಪಾರ. ಬೇರೆ ಭಾಷೆಗಳ ನಡುವೆ ನಮ್ಮ ಚಿತ್ರ ಗುರುತಿಸಿಕೊಳ್ಳುವಂತೆ ಮಾಡಬೇಕಾಗಿದೆ. ಆಗ ಮಾತ್ರ ಎಲ್ಲಾ ಕಡೆ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು.

ಕೆಲವು ಸಲ ಹಾಡು ಬರೆಯುವಾಗ, ಈ ಸಾಲು ಎಲ್ಲೋ ಬಂದಿದೆಯೆಲ್ಲಾ ಅಂತ ಪಕ್ಕಕ್ಕೆ ಇಟ್ಟಿದ್ದುಂಟು. ಆಮೇಲೆ ನಾನೇ ಬರೆದುದಲ್ವ ಅಂತ ಗೊತ್ತಾಗುತ್ತದೆ. ತಂತ್ರಜ್ಞಾನ ಬದಲಾದಂತೆ ಮೂಲ ಹಾಡನ್ನು ಯಾರು ಕೇಳುವುದಿಲ್ಲ. ಕೇವಲ ನಾಲ್ಕು ಸಾಲುಗಳನ್ನು ಆಲಿಸುತ್ತಾರೆ. ಇದರಿಂದ ಕಲೆಯ ಮೇಲೆ ಜವಬ್ದಾರಿ ಮತ್ತು ಚ್ಯಾಲೆಂಜ್ ಬಹಳ ಜಾಸ್ತಿ ಇರುತ್ತದೆ.

ಇದಕ್ಕಾಗಿ ತಂಡಕ್ಕೆ ಅಭಿನಂದನೆಗಳನ್ನು ಹೇಳ್ತನೆ. ಮಗ ತನಗೆ ಇಷ್ಟವಾದುದನ್ನು ಮಾಡಿದ್ದರಿಂದ ಖುಷಿಯಾಗಿದೆ. ನಿರ್ದೇಶಕರು ಹಾಡು ಬರೆದುಕೊಡಿ ಎಂದು ಕೇಳಿಕೊಂಡು ಬಂದಾಗ, ನನ್ನ ಹಾಡು ಹಿಟ್ ಆಗಲೆಂದು ಬರೆಯುತ್ತೇನೆ. ಅದರಿಂದ ನಿಮ್ಮ ಚಿತ್ರಕ್ಕೆ ಸಹಾಯವಾಗಲಿ. ಹಾಡು ಚಿತ್ರದ ನಿರೂಪಣೆಯ ಭಾಗವಾಗಿರುತ್ತದೆ. ಇಂತಹ ಹೊಸ ತಲೆಮಾರಿನ ಚಿತ್ರಗಳು ಜನರಿಗೆ ತಲುಪಲಿ ಎಂದು ಜಯಂತ್ ಕಾಯ್ಕಿಣಿ ಹೇಳಿದರು.

ಬೆಂಗಳೂರಿನಂಥ ಮಹಾನಗರಿಯಲ್ಲಿ ನಿರಾಸೆಗೊಳಗಾದ ಯುವ ಸಮೂಹ. ರಾಜಕೀಯ, ಅಪರಾಧ ಸೇರಿದಂತೆ ಒಂದಷ್ಟು ಸಾಮಾಜಿಕ ಅಂಶಗಳು ಚಿತ್ರದಲ್ಲಿದೆ. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಥಾನಾಯಕ ಹೇಗೆ ಈ ವ್ಯವಸ್ಥೆಯ ಚಕ್ರವ್ಯೂಹಕ್ಕೆ ಸಿಲುಕುತ್ತಾನೆ. ಆತನನ್ನು ಪಟ್ಟಭದ್ರರು ಹೇಗೆಲ್ಲಾ ಬಳಸಿಕೊಳ್ಳುತ್ತಾರೆ. ಆ ಕ್ಷಣದೊಂದು ನಿರ್ಧಾರ ಆತನ ಬದುಕನ್ನು ಯಾವ ದಿಕ್ಕಿನತ್ತ ಮುನ್ನಡೆಸುತ್ತೆ ಎಂಬಂತಹ ಸನ್ನಿವೇಶಗಳನ್ನು ತೋರಿಸಲಾಗುತ್ತಿದೆ. ಒಟ್ಟಾರೆಯಾಗಿ ಈ ದಿನಮಾನದ ಮಟ್ಟಿಗೆ ವಿಭಿನ್ನ ಚಿತ್ರವಾಗಲಿದೆಯಂತೆ.

ನಾಯಕನಾಗಿ ಬಿ.ವಿ.ಭರತ್, ಪ್ರಣವ್‍ಶ್ರೀಧರ್, ವಿನೋದ್‍ರವೀಂದ್ರನ್, ಗೋಪಾಲ್ ಕೃಷ್ಣ ದೇಶಪಾಂಡೆ ಉಳಿದಂತೆ ಬಹುತೇಕ ರಂಗಭೂಮಿ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಆಸ್ಕರ್ ಪ್ರಶಸ್ತಿ ವಿಜೇತ ಎಲಿಫೆಂಟ್ ವಿಸ್ಪರ್ಸ್ ಚಿತ್ರದ ಭಾಗವಾಗಿದ್ದ ಶ್ರೇಯಾಂಕ್ ನಂಜಪ್ಪ ಶಬ್ಧ ಸಂಯೋಜನೆ ಮಾಡಿದ್ದಾರೆ. ಬೆಂಗಳೂರು ಸುತ್ತಮುತ್ತ, ಕೋಲಾರದಲ್ಲಿ ಚಿತ್ರೀಕರಣ ನಡೆಸಲಾಗಿದೆ.

 

error: Content is protected !!