ಯುವ ಪ್ರತಿಭೆಗಳ ‘ಜಾಲಿ’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ.
ಚಂದನವನಕ್ಕೆ ಮತ್ತೊಂದು ಯುವ ಪ್ರತಿಭೆಗಳ ಬಳಗ ಬಹಳಷ್ಟು ಕನಸುಗಳನ್ನು ಹೊತ್ತುಕೊಂಡು ಒಂದು ಉತ್ತಮ ಸಂದೇಶದ ಜೊತೆಗೆ ಒಂದು ವಿಭಿನ್ನ ಕಥಾನಕ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿರುವಂತಹ ಚಿತ್ರ “ಜಾಲಿ”. ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಜಿ ಟಿ ಮಾಲಿನಲ್ಲಿರುವ ಉತ್ಸವ ಲಗಸಿಯಲ್ಲಿ ಅಚ್ಚುಕಟ್ಟಾಗಿ ಆಯೋಜನೆಗೊಂಡಿದ್ದು , ಮುಖ್ಯ ಅತಿಥಿಗಳಾಗಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರು ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ‘ಜಾಲಿ’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಶುಭ ಕೋರಿ ನಂತರ ಮಾತನಾಡುತ್ತಾ ಈ ಚಿತ್ರವು ಜುಲೈ 31, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಸಿನಿಮಾಕ್ಕೆ ಕೋಟಿಗಟ್ಟಲೆ ಹಣ ಹೂಡುವ ನಿರ್ಮಾಪಕರೇ ನಿಜವಾದ ಹೀರೋ. ಅವರಿಗೆ ಮೊದಲು ಗೌರವ ಸಿಗಬೇಕು. ವರ್ಷಕ್ಕೆ 300 ರಿಂದ 400 ಸಿನಿಮಾಗಳು ಬರುತ್ತವೆ. ಶೋಕಿಗಾಗಿ ಸಿನಿಮಾ ಮಾಡದೆ, ಕಥೆ ಮತ್ತು ಬಜೆಟ್ ಸ್ಪಷ್ಟತೆಯೊಂದಿಗೆ ಜವಾಬ್ದಾರಿಯಿಂದ ಮಾಡಬೇಕು.
ಈಗಾಗಲೇ ಮೊಬೈಲ್, OTT, Instagramಗಳ ಕಾರಣದಿಂದ ಜನರಿಗೆ ಬೆರಳ ತುದಿಯಲ್ಲೇ ಎಂಟರ್ಟೈನ್ಮೆಂಟ್ ಸಿಗುತ್ತಿದೆ. ಹೀಗಾಗಿ ಜನರನ್ನು ಥಿಯೇಟರ್ಗೆ ಕರೆತರುವುದು ದೊಡ್ಡ ಸವಾಲು ಆಗಿದೆ. ಉತ್ತಮ ಕಂಟೆಂಟ್ ಜನರನ್ನು ಕರ್ತರ್ಬೇಕು. ತಂಡಕ್ಕೆ ಒಳ್ಳೆಯದಾಗಲಿ , ಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಇನ್ನು ಈ ಚಿತ್ರದ ನಟ ಹಾಗೂ ನಿರ್ದೇಶಕ ತಾರುಶ್ ಕೃಷ್ಣ ಮಾತನಾಡುತ್ತಾ ಸುಮಾರು 12 ವರ್ಷಗಳ ಕಾಲ ರಂಗಭೂಮಿ, ನಾಟಕ ಮತ್ತು ಕಿರುಚಿತ್ರಗಳಲ್ಲಿ ಕಷ್ಟಪಟ್ಟು ಕೆಲಸ ಮಾಡಿ ಈ ಹಂತಕ್ಕೆ ಬಂದಿದ್ದೇನೆ. ಈ ಚಿತ್ರದ ಎಡಿಟಿಂಗ್ ಹಾಗೂ ಕೆಲವು ಹಾಡುಗಳ ಸಾಹಿತ್ಯವನ್ನೂ ನಾನೇ ಬರೆದಿದ್ದೇನೆ. ನನ್ನ ಬಹುದಿನದ ಕನಸು ಈಗ ಚಿತ್ರದ ಮೂಲಕ ನನಸಾಗುತ್ತಿದೆ. ನನ್ನ ತಂದೆ ತಾಯಿ ಗುರುಗಳಿಗೆ ಕೃತಜ್ಞತನಾಗಿರುತ್ತೇನೆ.
ನನ್ನ ಪ್ರಯತ್ನಕ್ಕೆ ತುಂಬಾ ಸಹಕಾರ ನೀಡಿದ್ದಾರೆ. ಈ ಚಿತ್ರದ ಕಥೆಯ ಎಳೆಯ ಬಹಳ ವಿಭಿನ್ನವಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಿಚ್ಛೇದನ ಮತ್ತು ಸಂಬಂಧಗಳಲ್ಲಿನ ಮಿಸ್ ಅಂಡರ್ ಸ್ಟ್ಯಾಂಡಿಂಗ್ಗಳ ಕುರಿತು ಚಿತ್ರದಲ್ಲಿ ಕಥೆ ಹೆಣೆಯಲಾಗಿದ್ದು, ಇದಕ್ಕೊಂದು ಪರಿಹಾರದ ಜೊತೆಗೆ ಉತ್ತಮ ಸಂದೇಶವಿದೆ.
ಇದೊಂದು ಸಂಪೂರ್ಣ ಮನೋರಂಜನ ಚಿತ್ರವಾಗಿದ್ದು, ಚಿತ್ರದಲ್ಲಿ ಕಾಮಿಡಿ, ಆಕ್ಷನ್, ಅಪ್ಪ-ಮಗಳ ಎಮೋಷನ್ ಎಲ್ಲವೂ ಸಮ್ಮಿಶ್ರಣವಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳಿಗಾಗಿ ಸಿನಿಮಾದಲ್ಲಿ ಒಂದು ವಿಶೇಷವಾದ ಸರ್ಪ್ರೈಸ್ ಪ್ಯಾಕೇಜ್ ಇದೆ. ನಮ್ಮಂತ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳೆಸಿ ಎಂದು ಕೇಳಿಕೊಂಡರು.
ಇನ್ನು ಈ ಚಿತ್ರಕ್ಕೆ ನಿತಿನ್ ರಾಜ್ ಸಂಗೀತ ನೀಡಿದ್ದು, ಒಟ್ಟು 6 ಹಾಡುಗಳಿಗೆ ಯೋಗರಾಜ್ ಭಟ್, ಕಿನ್ನಲ್ ರಾಜ್ ,ತಾರುಶ್ ಸಾಹಿತ್ಯ ಬರೆದಿದ್ದಾರೆ. ಅದರಲ್ಲೂ ತಂದೆ ಮಗಳ ಹಾಡು ಮನ ಮುಟ್ಟುವಂತಿದೆ. ಯೋಗೇಶ್ವರನ ಛಾಯಾಗ್ರಹಣವಿರುವ ಈ ಚಿತ್ರವನ್ನು ಬ್ರಿಜ್ ಯಾದವ್ ಹಾಗೂ ನಾಗವೇಣಿ. ಎನ್ ನಿರ್ಮಾಣ ಮಾಡಿದ್ದಾರೆ.
ಈ ಚಿತ್ರದಲ್ಲಿ ಹಿರಿಯ ಕಲಾವಿದರಾದ ನಟಿ ರೇಖಾ ದಾಸ್, ಶೋಭರಾಜ್ ಸುಶ್ಮಿತಾ ಜಗಪ್ಪ , ಪದ್ಮಶ್ರೀ ಜೈನ್ , ಮಹಾಂತೇಶ್ ಹಿರೇಮಠ ಸೇರಿದಂತೆ ಹಲವಾರು ಅನುಭವಿ ಹಾಗೂ ಯುವ ಪ್ರತಿಭೆಗಳು ಅಭಿನಯಿಸಿದ್ದಾರೆ. ಇನ್ನೂ ಚಿತ್ರತಂಡದ ಕೆಲವು ಕಲಾವಿದರು ತಂತ್ರಜ್ಞರು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು. ಹಾಗೆಯೇ ಪ್ರೇಕ್ಷಕರಲ್ಲಿ ಮನವಿ ಮಾಡುತ್ತಾ ಕನ್ನಡ ಚಿತ್ರರಂಗವನ್ನು ಮತ್ತು ಹೊಸ ಪ್ರತಿಭೆಗಳನ್ನು ಉಳಿಸಿ ಬೆಳೆಸಲು ಪ್ರೇಕ್ಷಕರು ತಿಂಗಳಿಗೆ ಕನಿಷ್ಠ ಒಂದು ಅಥವಾ ಎರಡು ಸಿನಿಮಾವನ್ನು ಥಿಯೇಟರ್ಗೆ ಬಂದು ನೋಡಬೇಕೆಂದು ಕೇಳಿಕೊಂಡರು.
