ಅಂಜನ್ ನಟನೆಯ “ಹುಲಿಬೀರ”ನ ಹಾಡುಗಳ ಬಿಡುಗಡೆ ಮಾಡಿದ ವಿ.ಮನೋಹರ್.

Spread the love

ಚಂದನವನದಲ್ಲಿ ಈ ಹಿಂದೆ ಮದರಂಗಿ, ರಂಗ್ ಬಿರಂಗಿ ಚಿತ್ರಗಳನ್ನು ನಿರ್ದೇಶಿಸಿದ್ದ ಮದರಂಗಿ ಮಲ್ಲಿಕಾರ್ಜುನ ಅವರ ನಿರ್ದೇಶನದ ಮತ್ತೊಂದು ಚಿತ್ರ ಹುಲಿಬೀರ. ಬಹುತೇಕ ಉತ್ತರ ಕರ್ನಾಟಕದವರೇ ಸೇರಿ ಮಾಡಿರುವ ಅದೇ ಸೊಗಡಿನ ಚಿತ್ರವಿದು, ಯರ‍್ರಾಬಿರ‍್ರಿ ಖ್ಯಾತಿಯ ನಟ ಅಂಜನ್ ಚಿತ್ರದ ನಾಯಕನಾಗಿದ್ದು, ಚೈತ್ರ ತೋಟದ, ವನು ಪಾಟೀಲ್ ಹಾಗೂ ಅಂಜಲಿ ನಾಯಕಿಯರಾಗಿ ನಟಿಸಿದ್ದಾರೆ. ಸಾಯಿಸ್ಟಾರ್ ಸಿನಿಮಾಸ್ ಅಡಿ ದಾವಲ ಸಾಹೇಬ ಹುಣಶೀಮರದ, ಅಶೋಕ್ ಎನ್.(ತುರುವೇಕೆರೆ) ಹಾಗೂ ಸುಜಾತ ಗಿರೀಶ್ ಈ ಚಿತ್ರದ ನಿರ್ಮಾಪಕರು.

ಈಗಾಗಲೇ ಹುಟ್ಟಿಬಂದೆ ಹುಲಿಬೀರನಾಗಿ ಹಾಗೂ ಉತ್ತರ ಕರ್ನಾಟಕ ಶೈಲಿಯ ಜಿಗ್ರಿ ದೋಸ್ತ ಜಿಗ್ರಿ ದೋಸ್ತ ಹಾಡುಗಳು ವೈರಲ್ ಆಗಿದ್ದು, ಇದೀಗ ಚಿತ್ರದ ಮತ್ತೊಂದು ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು. ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್, ಗುರುರಾಜ್ ಸೇರಿ ‘ಬಂದಾನ ನೋಡ’ ಸಾಹಿತ್ಯದ ಹಾಡಿಗೆ ಚಾಲನೆ ನೀಡಿದರು,

ಸಾಂಗ್ ಲಾಂಚ್ ಮಾಡಿದ ವಿ.ಮನೋಹರ್ ಮಾತನಾಡಿ ಈ ಹಾಡನ್ನು ವೀರಸಮರ್ಥ್ ಸಮರ್ಥವಾಗಿ ಕಂಪೋಜ್ ಮಾಡಿದ್ದಾರೆ. ಹಾಡಿನ ಸಾಹಿತ್ಯವನ್ನು ನಿರ್ದೇಶಕರು ಅರ್ಥಗರ್ಭಿತವಾಗಿ ಬರೆದಿದ್ದಾರೆ, ಪ್ರಜ್ಞಾ ಆಕರ್ಷಕವಾಗಿ ಹಾಡಿದ್ದಾರೆ, ಚಿತ್ರಕ್ಕೆ ಒಳ್ಳೇದಾಗಲಿ ಎಂದು ಹಾರೈಸಿದರು. ನಂತರ ಮಾತನಾಡಿದ ನಿರ್ದೇಶಕ ಮದರಂಗಿ ಮಲ್ಲಿಕಾರ್ಜುನ ನನ್ನ ನಿರ್ದೇಶನದ ಐದನೇ ಚಿತ್ರವಿದು. ಹುಲಿಬೀರ ನಾಯಕನ ನಿಕ್‌ನೇಮ್.

ಹಳ್ಳಿಗಳಲ್ಲಿ ಧೈರ್ಯವಂತ ಯುವಕರನ್ನು ಈಥರ ಕರೆಯುತ್ತಾರೆ. ಈಗಾಗಲೇ ರಿಲೀಸಾಗಿರುವ 2 ಹಾಡುಗಳನ್ನು ಎಲ್ಲರೂ ಮೆಚ್ಚಿದ್ದಾರೆ. ನಾಯಕ ಬೀರ ಹಳ್ಳಿಯ ಯಾವುದೇ ಸಮಸ್ಯೆ ಇರಲಿ, ಮುಂದೆನಿಂತು ಬಗೆಹರಿಸುತ್ತಾನೆ. ಆತನನ್ನು ಹಳ್ಳಿಯ ಜನರೆಲ್ಲ ಪ್ರೀತಿಯಿಂದ ಹುಲಿಬೀರ ಅಂತಿರ್ತಾರೆ. ಹಳ್ಳಿಯ ಬಹುದೊಡ್ಡ ಸಮಸ್ಯೆಯನ್ನು ಈ ಬೀರ ಹೇಗೆ ಸರಿಮಾಡುತ್ತಾನೆ ಎನ್ನುವುದೇ ಹುಲಿಬೀರನ ಕಾನ್ಸೆಪ್ಟ್. 15 ದಿನಗಳಲ್ಲಿ ಟ್ರೈಲರ್ ಲಾಂಚ್ ಮಾಡಿ ಅಕ್ಟೋಬರ್ 2 ರಂದು ತೆರೆಗೆ ಬರುತ್ತಿದ್ದೇವೆ. ಕಾಮಿಡಿ, ಸೆಂಟಿಮೆಂಟ್, ಮನರಂಜನೆಯ ಜತೆಗೆ ಉತ್ತಮ ಸಂದೇಶವೂ ಚಿತ್ರದಲ್ಲಿದೆ ಎಂದು ಹೇಳಿದರು.

ನಾಯಕ ಅಂಜನ್ ಮಾತನಾಡಿ ಮೊದಲ ಜಿಗರಿ ದೋಸ್ತ ಹಾಡಿಗೆ ಉತ್ತಮ ಪ್ರತಿಕ್ರಿಯೆ ಬಂತು. ಹುಟ್ಟಿಬಂದೆ ಹಾಡನ್ನು ಹಿರಿಯರೆಲ್ಲ ಇಷ್ಟಪಟ್ಟರು, ಅದನ್ನು ನನಗೇ ಬರೆದ ಹಾಗಿತ್ತು, ಈಗ ಮತ್ತೊಂದು ಸಾಂಗ್ ರಿಲೀಸ್ ಮಾಡಿದ್ದೇವೆ, ಸದ್ಯದಲ್ಲೇ ಟ್ರೈರ್ ಕೂಡ ಹೊರಬರಲಿದೆ. ಯುವಕರೆಲ್ಲ ಸಿಟಿಗಳಿಗೆ ಹೋದಾಗ ವೃದ್ದರು, ಬಡವರಷ್ಟೇ ಹಳ್ಳಿಗಳಲ್ಲಿ ಉಳಿದುಕೊಳ್ತಾರೆ. ಆಗ ನಮ್ಮ ಹಳ್ಳಿಗಳು ಉಳಿಯೋದಾರರೂ ಹೇಗೆ, ಮೊದಲು ನಮ್ಮ ಊರು, ಹಳ್ಳಿಗಳನ್ನು ಕಾಪಾಡಬೇಕು ಎಂಬ ಸಂದೇಶ ಚಿತ್ರದಲ್ಲಿದೆ ಎಂದರು.

ಸಂಗೀತ ನಿರ್ದೇಶಕ ವೀರ ಸಮರ್ಥ ಮಾತನಾಡಿ ಈ ಚಿತ್ರ ನನಗೆ ಮೈಲಿಗಲ್ಲಾಗಲಿದೆ. ನಾನು ಮ್ಯೂಸಿಕ್ ಮಾಡಿದ ಸಿನಿಮಾಗಳಲ್ಲೇ ಇದೊಂದು ಬೆಸ್ಟ್ ಸಿನಿಮಾ. ಈಗಾಗಲೇ ಚಿತ್ರ ನೋಡಿದ್ದೇನೆ, ಸೆಕೆಂಡ್ ಹಾಫ್ ನಂತರ 10 ನಿಮಿಷ ಭಾವುಕನಾಗಿದ್ದೆ, ಚಿತ್ರದಲ್ಲಿ ನಮ್ಮ ಮಣ್ಣಿನ ಸೊಗಡಿನ ಹಾಡುಗಳಿವೆ, ನಿರ್ದೇಶಕರು, ಶಿವು ಬೆರ್ಗಿ, ನಾಗೇಂದ್ರಪ್ರಸಾದ್ ಲಿರಿಕ್ ಬರೆದಿದ್ದಾರೆ, ಚಿತ್ರದ ಒಂದು ಸಾಂಗ್ ಹಿಟ್ ಆದರೆ ನಾವು 5 ವರ್ಷ ಬದುಕುತ್ತೇವೆ. ಸಿನಿಮಾ ಹಿಟ್ ಆದರೆ 25 ಸಿನಿಮಾಗಳು ಸಿಗುತ್ತವೆ, ಚಿತ್ರ ಗೆಲ್ಲುತ್ತೆ ಅಂತ ನನಗೆ ನೂರರಷ್ಟು ಭರವಸೆಯಿದೆ. ಈ ಹಾಡನ್ನು ಪ್ರಜ್ಞಾ ನಿರೀಕ್ಷೆಗಿಂತ ಚೆನ್ನಾಗಿ ಹಾಡಿದ್ದಾರೆ, ಜನಪದ ಶೈಲಿಯ ರೊಮ್ಯಾಂಟಿಕ್ ಹಾಡಿದು ಎಂದರು.

ನಿರ್ಮಾಪಕ ದಾವಲ್ ಸಾಹೇಬ ಹುಣಶೀಮಠದ ಮಾತನಾಡಿ ನಾವು ಹಳ್ಳಿಯವರು, uk ಯಿಂದ ಬಂದವರು, ಚಿತ್ರವನ್ನು ಗಾಂಧಿ ಜಯಂತಿಗೆ ರಿಲೀಸ್ ಮಾಡುತ್ತಿದ್ದೇವೆ ಎಂದರು. ಮತ್ತೊಬ್ಬ ನಿರ್ಮಾಪಕ ಎ.ಅಶೋಕ್, ಸುಜಾತ ಗಿರೀಶ್ ಮಾತನಾಡಿ ನಮ್ಮ ಸಿನಿಮಾಗೆ ನಿಮ್ಮ ಬೆಂಬಲ ಬೇಕು ಎಂದು ಕೇಳಿಕೊಂಡರು. ಹಾಡಲ್ಲಿ ನಟಿಸಿರುವ ವನು ಪಾಟೀಲ್, ಗಾಯಕಿ ಪ್ರಜ್ಞಾ ಮರಾಠೆ ಸಾಂಗ್ ಬಗ್ಗೆ ಮಾತನಾಡಿದರು. ಚಿತ್ರಕ್ಕೆ ಧರ್ಮವಿಶ್ ಅವರ ಹಿನ್ನೆಲೆ ಸಂಗೀತವಿದ್ದು, ಸನಾತನ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ.

Visited 1 times, 1 visit(s) today
error: Content is protected !!