Cini NewsSandalwood

“ಬ್ಯಾಡ್ ಮ್ಯಾನರ್ಸ್” ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಚಾಲೆಂಜಿಂಗ್ ಸ್ಟಾರ್

ಕೆ.ಎಂ.ಸುಧೀರ್ ನಿರ್ಮಾಣದ, “ದುನಿಯಾ” ಸೂರಿ ನಿರ್ದೇಶನದ ಹಾಗೂ ಅಭಿಷೇಕ್ ಅಂಬರೀಶ್ ನಾಯಕರಾಗಿ ನಟಿಸಿರುವ “ಬ್ಯಾಡ್ ಮ್ಯಾನರ್ಸ್” ಚಿತ್ರದ ಟ್ರೇಲರ್ ದೀಪಾವಳಿ ಹಬ್ಬದ ಶುಭದಿನದಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಂದ ಬಿಡುಗಡೆಯಾಗಿದೆ. ಸುಮಲತ ಅಂಬರೀಶ್, ರಾಕ್ ಲೈನ್ ವೆಂಕಟೇಶ್, ಅವಿವಾ ಅಭಿಷೇಕ್, ವಿನೋದ್ ಪ್ರಭಾಕರ್, ವಿಕ್ರಮ್ ರವಿಚಂದ್ರನ್, ಧನ್ವೀರ್ ಮುಂತಾದವರು ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಚಿತ್ರಕ್ಕೆ ಶುಭ ಕೋರಿದರು. ಜಿ.ಟಿ.ಮಾಲ್ ನಲ್ಲಿ ನಡೆದ ಈ ಸಮಾರಂಭಕ್ಕೆ ಸಾವಿರಾರು ಅಭಿಮಾನಿಗಳು ಸಾಕ್ಷಿಯಾದರು.

ನೀವೆಲ್ಲಾ ಟ್ರೇಲರ್ ನೋಡಿದ್ದೀರಾ. ನಾನು ಸಿನಿಮಾವನ್ನೇ ನೋಡಿದ್ದೇನೆ ಎಂದು ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸೂರಿ ಅವರ ನಿರ್ದೇಶನದಲ್ಲಿ ಈ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಅಭಿಷೇಕ್ ಬಹಳ ಮುದ್ದಾಗಿ ಕಾಣುತ್ತಾರೆ. ಅಷ್ಟೇ ಚೆನ್ನಾಗಿ ಅಭಿನಿಯಿಸಿದ್ದಾರೆ. ನವೆಂಬರ್ 24 ರಂದು ಚಿತ್ರ ಬಿಡುಗಡೆಯಾಗಿತ್ತಿದೆ ನೋಡಿ ಹಾರೈಸಿ ಎಂದರು.

ನಮ್ಮ ಕುಟುಂಬದ ಮೇಲೆ ನೀವಿಟ್ಟಿರುವ ಪ್ರೀತಿಗೆ ಧನ್ಯವಾದ. ನಾನು, ಸೂರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎಂದ ಮೇಲೆ ಕಥೆ ಕೇಳಲಿಲ್ಲ‌‌. ಅವರು ಚೆನ್ನಾಗಿ ಕಥೆ ಮಾಡಿಕೊಂಡಿರುತ್ತಾರೆ ಎಂಬ ನಂಬಿಕೆ ನನ್ನಗಿದೆ. ನವೆಂಬರ್ 24 ರಂದು ನನ್ನ ಮಗನ ಸಿನಿಮಾ ಬಿಡುಗಡೆಯಾಗುತ್ತಿದೆ. ನಿಮ್ಮೆಲ್ಲರ ಆಶೀರ್ವಾದ ಅಭಿಷೇಕ್ ಮೇಲಿರಲಿ ಎಂದು ಸುಮಲತ ಅಂಬರೀಶ್ ತಿಳಿಸಿದರು.

ಈ ಸಂದರ್ಭದಲ್ಲಿ ನಾನು ಅಂಬರೀಶ್ ಹಾಗೂ ಪುನೀತ್ ರಾಜಕುಮಾರ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ದರ್ಶನ್ ಅವರಿಗೆ ಧನ್ಯವಾದ. ನನ್ನ ಚಿತ್ರತಂಡದ ಸಹಕಾರದಿಂದ ಈ ಚಿತ್ರ ಚೆನ್ನಾಗಿ ಬಂದಿದೆ. ಅಭಿಷೇಕ್ ಅವರ ಪಾತ್ರ ಈ ಚಿತ್ರದಲ್ಲಿ ವಿಭಿನ್ನವಾಗಿದೆ. ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ಸೂರಿ.

“ಬ್ಯಾಡ್ ಮಾನರ್ಸ್” ನನ್ನ ಅಭಿನಯದ ಎರಡನೇ ಚಿತ್ರ. ನವೆಂಬರ್ 24 ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇಂದು ಟ್ರೇಲರ್ ಬಿಡುಗಡೆಯಾಗಿದೆ. ನಿರ್ಮಾಪಕ ಸುಧೀರ್, ನಿರ್ದೇಶಕ ಸೂರಿ ಅವರಿಗೆ ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ನನ್ನ ಅಣ್ಣ ದರ್ಶನ್ ಅವರಿಗೆ ಹಾಗೂ ಇಲ್ಲಿ ಅಗಮಿಸಿರುವ ಪ್ರತಿಯೊಬ್ಬ ಸ್ನೇಹಿತರಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದರು ನಾಯಕ ಅಭಿಷೇಕ್ ಅಂಬರೀಶ್.

ನಿರ್ಮಾಪಕ ಕೆ.ಎಂ ಸುಧೀರ್ ಮಾತನಾಡಿ, ಇದೇ ತಿಂಗಳ 24 ರಂದು ಬಿಡುಗಡೆಯಾಗುತ್ತಿರುವ ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು. ಹಿರಿಯ ನಟರಾದ ಉಮೇಶ್, ದತ್ತಣ್ಣ, ಶರತ್ ಲೋಹಿತಾಶ್ವ ಸೇರಿದಂತೆ ಅನೇಕ ಕಲಾವಿದರು ಹಾಗೂ ತಂತ್ರಜ್ಞರು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

error: Content is protected !!