Cini NewsMovie ReviewSandalwood

ಕಡಲ ಕಿನಾರೆಯಲ್ಲಿ ಕಳ್ಳ ಪೊಲೀಸರ ರೋಚಕ ಆಟ. ಮತ್ಸ್ಯಗಂಧ (ರೇಟಿಂಗ್ : 3.5/5)

ಕಡಲ ಕಿನಾರೆಯಲ್ಲಿ ಕಳ್ಳ ಪೊಲೀಸರ ರೋಚಕ ಆಟ.
ರೇಟಿಂಗ್ : 3.5/5
ಚಿತ್ರ : ಮತ್ಸ್ಯಗಂಧ
ನಿರ್ದೇಶಕ : ದೇವರಾಜ್ ಪೂಜಾರಿ
ನಿರ್ಮಾಪಕ : ವಿಶ್ವನಾಥ್
ಸಂಗೀತ : ಪ್ರಶಾಂತ್ ಸಿದ್ದಿ
ಛಾಯಾಗ್ರಹಕ : ಪ್ರವೀಣ್ ಎಂ
ತಾರಾಗಣ : ಪೃಥ್ವಿ ಅಂಬಾರ್, ಭಜರಂಗಿ ಲೋಕಿ , ಶರತ್ ಲೋಹಿತಾಶ್ವ , ಪ್ರಶಾಂತ್ ಸಿದ್ದಿ , ನಾಗರಾಜ್ ಬೈಂದೂರು, ರಾಮದಾಸ್ ಹಾಗೂ ಮುಂತಾದವರು…

ಪ್ರತಿಯೊಬ್ಬರ ಬದುಕು, ವೃತ್ತಿಜೀವನ ಆಯಾ ಪ್ರಾಂತಕ್ಕೆ ಅನುಗುಣವಾಗಿ ಸಾಗುತ್ತಾ ಹೋಗುತ್ತದೆ. ಅದರಲ್ಲಿ ಅದೆಷ್ಟು ಕರಾಳ ಸತ್ಯಗಳು ಕೂಡ ಹುದುಕಿಕೊಂಡಿರುತ್ತದೆ. ಅಂತದ್ದೆ ಒಂದು ಕಥಾನಕ ಮೂಲಕ ಸಮುದ್ರವನ್ನು ನಂಬಿಕೊಂಡು ಜೀವನ ನಡೆಸುವ ಜನರ ಬದುಕು, ಭಾವನೆ, ಗಾಂಜಾ ಅಫೀಮ್ ಗಳ ಜಾಲ , ಪಾತಕಿಗಳ ಅಟ್ಟಹಾಸ , ಪೊಲೀಸರ ತಂತ್ರ

ಹೀಗೆ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಸಮುದ್ರ ಒಡಲಲ್ಲಿ ನಡೆಯುವ ಕೆಲವು ಘಟನೆಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಮತ್ಸ್ಯಗಂಧ”.  ಟೋಂಕಾ ಎಂಬ ಹಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯ ಎಸ್.ಐ.  ಪರಮ್ (ಪೃಥ್ವಿ ಅಂಬಾರ್) ಹಾಗೂ ಅ ಹಳ್ಳಿಯ ಜನರ  ನಡುವೆ ಆಗಾಗ ನಡೆಯೋ ಘರ್ಷಣೆಗಳು, ಎಸ್. ಐ  ಪರಮ್  ಕಾನ್ಸ್ಟೇಬರ್ ಜೊತೆ  ರೌಂಡ್ಸ್ ಹೋಗಿದ್ದಾಗ  ಕೆಟ್ಟು ನಿಂತಿದ್ದ ಗೂಡ್ಸ್ ಲಾರಿಯೊಂದು ಕಂಡು ಬರುತ್ತದೆ. ಅನುಮಾನಗೊಂಡ ಪರಮ್ ಆ ಗಾಡಿಯನ್ನು  ತಪಾಸಣೆ ಮಾಡಿದಾಗ  ಮೇಲ್ಭಾಗದಲ್ಲಿ  ಮಾತ್ರ ಮೀನುಗಳ ಬಾಕ್ಸ್ ಇದ್ದರೆ, ಅದರ ಕೆಳಗೆ  ಕೋಟ್ಯಾಂತರ  ಬೆಲೆಬಾಳುವ ಗಾಂಜಾ ಸೊಪ್ಪಿನ ಬಾಕ್ಸ್ ಗಳಿರುತ್ತವೆ. ಲಾರಿಯ ಚಾಲಕನಿಗೆ ಯಾರೋ ಒಬ್ಬರು ಮಂಗಳೂರು ಬಂದರಿಗೆ ಈ ಬಾಕ್ಸ್ಗಳನ್ನು ತಲುಪಿಸಲು  ಕಳಿಸಿರುವುದು ಗೊತ್ತಾಗುತ್ತದೆ.

ಆಗ ಪರಮ್‌ಗೆ  ಆ‌ ಮಾಲನ್ನು ತಾವೇ ಇಟ್ಟುಕೊಂಡರೆ ಕೊಟ್ಯಾಂತರ ಹಣ ಗಳಿಸಬಹುದೆಂಬ ದುರಾಸೆ ಹುಟ್ಟುತ್ತದೆ.  ಕಾನ್ಸ್ ಟೇಬಲ್ ಜೊತೆ ಸೇರಿ  ಅದನ್ನು ಹೇಗೆ ಸಾಗಿಸುವುದೆಂದು ಪ್ಲಾನ್ ಮಾಡುತ್ತಾರೆ. ಇನ್ನೊಂದೆಡೆ ತಾನು ಕಳಿಸಿದ ಮಾಲು ಸೇರಬೇಕಾದ ಸ್ಥಳ ತಲುಪದೆ ಪೊಲೀಸರ ಕೈಗೆ ಸಿಕ್ಕಿರುವುದು ಜಾಯಿಂಟ್ ರವಿ (ಭಜರಂಗಿ ಲೋಕಿ)ಗೆ ಗೊತ್ತಾಗುತ್ತದೆ. ಆ ಮಾಲನ್ನು  ಪೊಲೀಸರು ಮುಚ್ಚಿಟ್ಟಿರುವುದೂ ತಿಳಿಯುತ್ತದೆ, ಪರಮ್ ಆ ಮಾಲನ್ನು ಸೇಲ್ ಮಾಡಲು,  ಆ  ವ್ಯವಹಾರ ಮಾಡಿಕೊಡುವ  ಡ್ರಗ್ ಪೆಡ್ಲರ್‌ ಒಬ್ಬನನ್ನು ಹುಡುಕಿ ಆತನಿಗೆ  ಮಾಲನ್ನು ಮಾರಾಟ ಮಾಡಿಕೊಡುವಂತೆ ಹೇಳುತ್ತಾನೆ, ಆತ  ಜಾಯಿಂಟ್ ರವಿ ಕಡೆಯವನು, ಪೊಲೀಸರು ತನ್ನ ಮಾಲನ್ನು ತನಗೇ ಮಾರಲು  ಬರುತ್ತಿರುವುದು ಆತನಿಂದ ಗೊತ್ತಾಗುತ್ತದೆ.

ರವಿ ಸಲಹೆಯಂತೆ  ಆ ಡ್ರಗ್ ಪೆಡ್ಲರ್ ಮಾಲನ್ನು ತೆಗೆದುಕೊಂಡು ಒಂದು ಜಾಗಕ್ಕೆ ಬರುವಂತೆ ಪರಂಗೆ ತಿಳಿಸುತ್ತಾನೆ, ಪರಂ ತನ್ನ ಕಾನ್ಸ್ಟೇಬಲ್ ಜೊತೆಗೆ ಅಲ್ಲಿಗೆ  ಬಂದಾಗ ಅವರಿಗೆ  ಮತ್ತು ಬರುವ ಚಾಕೊಲೆಟ್ ತಿನಿಸಿ,  ಮಾಲನ್ನು ಲಪಟಾಯಿಸುತ್ತಾರೆ, ಆದರೆ ಅಷ್ಟು ದೊಡ್ಡ ಮಾಲನ್ನು  ಎಸ್ಸೈ ಪರಂ ಪತ್ತೆ ಹಚ್ಚಿರುವುದು ಅದ್ಹೇಗೋ ಮೇಲಾಧಿಕಾರಿಗಳಿಗೆ  ಗೊತ್ತಾಗಿಬಿಡುತ್ತದೆ, ಆದರೆ ಅಷ್ಟರಲ್ಲಿ  ಮಾಲು ಕಳುವಾಗಿರುತ್ತದೆ. ಮುಂದೆ ಕಳುವಾಗಿದ್ದ ಗಾಂಜಾವನ್ನು ವಶಪಡಿಸಿಕೊಳ್ಳಲು ಪೊಲೀಸರು ಏನೆಲ್ಲ ಸಾಹಸ ಮಾಡಿದರು, ಆ ನಡುವೆ ಮತ್ತಿನ್ಯಾವ ರೌಡಿ  ಎಂಟ್ರಿ ಕೊಡುತ್ತಾನೆ. ಒಂದರ ಹಿಂದೆ ಒಂದು ತಿರುವಗಳು ಎದುರಾಗುತ್ತಾ ರೋಚಕ ಘಟ್ಟಕ್ಕೆ ಬಂದು ಮುಂದುವರೆದ ಭಾಗಕ್ಕೂ ದಾರಿ ಮಾಡಿಕೊಟ್ಟಂತೆ ನಿಲ್ಲುತ್ತದೆ.

ಮಾಲು ಸಿಗುತ್ತಾ ಇಲ್ವಾ…

ಪಾತಕಿಗಳ ಸಿಗ್ತಾರಾ…

ಎಸ್.ಐ ಪರಂ ಪ್ಲಾನ್ ಏನು…

ಕ್ಲೈಮ್ಯಾಕ್ಸ್ ಉತ್ತರ…

ಏನು ಎಂಬುದನ್ನು ತಿಳಿದುಕೊಳ್ಳಬೇಕಾದರೆ ನೀವು ಮತ್ಸ್ಯಗಂಧ  ಚಿತ್ರ ನೋಡಲೇಬೇಕು.

ನಿರ್ದೇಶಕ ದೇವರಾಜ್ ಪೂಜಾರಿ ಆಯ್ಕೆ ಮಾಡಿಕೊಂಡಿರುವ ಕಥೆ ವಿಭಿನ್ನವಾಗಿದ್ದು , ಸಮುದ್ರವನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಅದೆಷ್ಟೋ ಕುಟುಂಬಗಳ ಬದುಕಿನ ಕಥೆಯನ್ನು ತೆರೆದಿಡುವುದರ ಜೊತೆಗೆ ಪಾತಕೆಗಳ ಕಳ್ಳ ಸಾಗಾಣಿಕೆ ದಂದೆಯ , ಹಣ , ವ್ಯಾಮೋಹ ಏನೆಲ್ಲ ಮಾಡಿಸುತ್ತದೆ ಎಂಬುದರ ಸುಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಕಡಲ ಕಿನಾರೆ ಸುತ್ತಮುತ್ತ ಇರುವ ಹಳ್ಳಿಗಳ ಅಮಾಯಕ ಮೀನುಗಾರರನ್ನ ರಾಜಕೀಯದವರು, ಪೊಲೀಸರು ಹೇಗೆ ತಮ್ಮ ಹತೋಟಿಯಲ್ಲಿ ಇಟ್ಟುಕೊಂಡಿರುತ್ತಾರೆ. ಮುಗ್ಧ ಜನರನ್ನ ಯಾವ ರೀತಿ ನಂಬಿಸಿ ವಂಚಿಸುತ್ತಾರೆ ಎಂಬುದನ್ನು ಹೇಳಿರುವ ರೀತಿ ಗಮನ ಸೆಳೆಯುತ್ತದೆ.

ಚಿತ್ರಕಥೆ ಇನ್ನಷ್ಟು ವೇಗ ಮಾಡಬಹುದಿತ್ತು.  ಆದರೂ  ಕುತೂಹಲಕರವಾಗಿ ಚಿತ್ರವನ್ನು ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ವಿಭಿನ್ನ ಚಿತ್ರವನ್ನ ನಿರ್ಮಿಸಿರುವ ನಿರ್ಮಾಪಕರ ಧೈರ್ಯವನ್ನು ಮೆಚ್ಚಲೇಬೇಕು. ಇಡೀ ಚಿತ್ರದ ಹೈಲೈಟ್ ಅಂದರೆ ಮೊದಲ ಬಾರಿಗೆ ಸಂಗೀತವನ್ನು ನೀಡಿರುವಂತಹ ಪ್ರಶಾಂತ್ ಸಿದ್ದಿ ರವರ ಹಾಡುಗಳು ಹಾಗೂ  ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ,  ಅದೇ ರೀತಿ ಕ್ಯಾಮೆರಾ ಕೈಚಳಕ ಉತ್ತಮವಾಗಿ ಮೂಡಿಬಂದಿದೆ.

ಇನ್ನು  ಪೃಥ್ವಿ ಅಂಬಾರ್ ಪೋಲಿಸ್ ಪಾತ್ರಕ್ಕೆ ನ್ಯಾಯವನ್ನು ಕೊಡಲು ಬಹಳಷ್ಟು ಶ್ರಮಪಟ್ಟಿದ್ದಾರೆ. ನಾಯಕನ ಜೊತೆಗಿರುವ ಇಬ್ಬರು ಪಿಸಿ ಪಾತ್ರಗಳು ಕೂಡ ಗಮನ ಸೆಳೆಯುತ್ತದೆ. ಅದೇ ರೀತಿ ಮೀನುಗಾರ ಉದಯ್ ಪಾತ್ರದಲ್ಲಿ  ಪ್ರಶಾಂತ್ ಸಿದ್ದಿ ಉತ್ತಮ ಅಭಿನಯ ನೀಡಿದ್ದಾರೆ. ಶರತ್ ಲೋಹಿತಾಶ್ವ ಬಡಾಸಾಬ್ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇನ್ನು ಉಳಿದಂತ ಎಲ್ಲಾ ಪಾತ್ರದಾರಿಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಕಡಲ ತೀರದಲ್ಲಿ ನಡೆಯುವ ಕುತೂಹಲಕಾರಿ ರೋಚಕ ವಿಷಯಗಳ ಬೆಸುಗೆಯೊಂದಿಗೆ ಬಂದಿರುವ ಈ ಚಿತ್ರವನ್ನು ಎಲ್ಲರೂ ನೋಡುವಂತಿದೆ.

error: Content is protected !!