Cini NewsSandalwood

ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಬಂದ “ಜಯಭೇರಿ ಕನ್ನಡ” ಸುಮಧುರ ಗೀತೆ.

“ಎಲ್ಲಾದರು ಇರು”… “ಎಂತಾದರು ಇರು”… ಎಂದೆಂದಿಗೂ ನೀ ಕನ್ನಡವಾಗಿರು… ಎಂಬ ನುಡಿಮುತ್ತು ಮಾತು ಅಕ್ಷರ ಸಹ ಸತ್ಯ. ಅದರಂತೆಯೇ ಕನ್ನಡ ನಾಡು-ನುಡಿ-ಕಲೆಯ ಮೇಲೆ ಅಪಾರ ಗೌರವವನ್ನು ಹೊಂದಿರುವಂತಹ ಡಾ||ಶೈಲೇಶ್ ಕುಮಾರ್ ನಿರ್ಮಾಣದಲ್ಲಿ , ಡಾ||ಶಶಿಕಲಾ ಪುಟ್ಟಸ್ವಾಮಿ ನಿರ್ದೇಶನದ ಸಾರಥ್ಯದಲ್ಲಿ ನಟರಾದ ಯಶಸ್ ಸೂರ್ಯ, ಕಿರಣ್ ರಾಜ್ ಹಾಗೂ ನಾಯಕಿಯರಾದ ನಿಶ್ವಿಕಾ ನಾಯ್ಡು , ವೀಣಾ ಪೊನ್ನಪ್ ಮತ್ತು ಡಾ||ಶೈಲೇಶ್ ಕುಮಾರ್ ನಟಿಸಿರುವ “ಜಯಭೇರಿ ಕನ್ನಡ” ಹಾಡು ಹೊರಬಂದಿದೆ.

ಇತ್ತೀಚಿಗಷ್ಟೇ “ಜಯಭೇರಿ ಕನ್ನಡ” ಎಂಬ ಹಾಡು ನವೆಂಬರ್ 2 ರಂದು ಹಂಪಿಯಲ್ಲಿ ನಡೆದ ಕರ್ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀಸಿದ್ದರಾಮಯ್ಯ ಬಿಡುಗಡೆ ಮಾಡಿದ್ದಾರೆ. ಈ ಹಾಡಿನ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರ್ಮಾಪಕ ಡಾ||ಶೈಲೇಶ್ ಕುಮಾರ್ ಪತ್ರಿಕಾಗೋಷ್ಠಿ ಆಯೋಜಿಸಿದ್ದರು.

ಈ ಹಾಡಿನ ನಿರ್ಮಾಪಕ ಡಾ||ಶೈಲೇಶ್ ಕುಮಾರ್ ಮಾತನಾಡುತ್ತಾ ,ನಾನು ವೃತ್ತಿಯಲ್ಲಿ ವೈದ್ಯ. ಸಿನಿಮಾ ರಂಗದಲ್ಲಿ ನನಗೆ ಡಾ||ರಾಜಕುಮಾರ್ ಅವರು ಪ್ರೇರಣೆ. ನಮ್ಮ ಶ್ರೀನಾಗಬ್ರಹ್ಮ ಕ್ರಿಯೇಷನ್ಸ್ ಲಾಂಛನದಲ್ಲಿ ಸಂಚಾರಿ ವಿಜಯ್ ಅಭಿನಯಿಸಿದ್ದ “6 ನೇ ಮೈಲಿ” ಚಿತ್ರ ನಿರ್ಮಾಣ ಮಾಡಿದ್ದೆ.

ಈಗ “ತಲ್ವಾರ್ ಪೇಟೆ” ಚಿತ್ರವನ್ನು ತೆರೆಗೆ ತರುವ ತಯಾರಿ ನಡೆಯುತ್ತಿದೆ. ನನಗೆ ಈ ಸಮಾಜ ಸಾಕಷ್ಟು ಕೊಟ್ಟಿದೆ. ನಾನು ಸಮಾಜಕ್ಕೆ ಏನಾದರೂ ಮಾಡಬೇಕೆಂದು ಹಾಗೂ ಕನ್ನಡದ ಮೇಲಿನ ಭಾಷಾಭಿಮಾನದಿಂದ “ಜಯಭೇರಿ ಕನ್ನಡ” ಎಂಬ ಕನ್ನಡದ ಹಿರಿಮೆ ಸಾರುವ ಹಾಡೊಂದನ್ನು ನಿರ್ಮಾಣ ಮಾಡಿದ್ದೇನೆ. ಡಾ||ಶಶಿಕಲಾ ಪುಟ್ಟಸ್ವಾಮಿ ಈ ಹಾಡನ್ನು ಬರೆದು ನಿರ್ದೇಶನ ಮಾಡಿದ್ದಾರೆ.

ಸಾಯಿಕಿರಣ್ ಸಂಗೀತ ನೀಡಿದ್ದಾರೆ. ಹೇಮಂತ್ ಕುಮಾರ್, ಅನಿರುದ್ದ್ ಶಾಸ್ತ್ರಿ , ಅನುರಾಧ ಭಟ್ ಹಾಡಿದ್ದಾರೆ. ಯಶಸ್ ಸೂರ್ಯ, ನಿಶ್ವಿಕಾ ನಾಯ್ಡು, ಕಿರಣ್ ರಾಜ್, ವೀಣಾ ಪೊನ್ನಪ್ಪ ಹಾಗೂ ನಾನು ಈ ಹಾಡಿನಲ್ಲಿ ಅಭಿನಯಿಸಿದ್ದೇವೆ. ಈ ಹಾಡನ್ನು ನಿರ್ಮಾಣ ಮಾಡಿ ಮಾನ್ಯ ಸಚಿವರಾದ ಶಿವರಾಜ್ ತಂಗಡಗಿ ಅವರ ಬಳಿ ಹೇಳಿದಾಗ, ಅವರು ಈ ಹಾಡನ್ನು ನವೆಂಬರ್ 2 ರಂದು ಹಂಪಿಯಲ್ಲಿ ನಡೆದ ಕರ್ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಂದ ಬಿಡುಗಡೆ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ನಾನು ಕರ್ನಾಟಕ ಸರ್ಕಾರಕ್ಕೆ ಹಾಗೂ ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು.

ಡಾ||ಶೈಲೇಶ್ ಕುಮಾರ್ ಅವರು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಹಾಡೊಂದನ್ನು ನಿರ್ಮಾಣ ಮಾಡುತ್ತಿದ್ದೇನೆ. ನೀವೇ ಬರೆದು ನಿರ್ದೇಶನ ಮಾಡಬೇಕೆಂದರು. ತುಂಬಾ ಸಂತೋಷವಾಯಿತು. ಜೊತೆಗೆ ಕನ್ನಡದ ಕುರಿತು ಹಾಡನ್ನು ಬರೆಯುವಾಗ ಸ್ವಲ್ಪ ಭಾವುಕಳಾದೆ. ಇಡೀ ತಂಡದ ಸಹಕಾರದಿಂದ ಈ ಹಾಡು ಅದ್ದೂರಿಯಾಗಿ ಬಂದಿದೆ ಎಂದರು ನಿರ್ದೇಶಕಿ ಶಶಿಕಲಾ ಪುಟ್ಟಸ್ವಾಮಿ.

ನನಗೆ ಶೈಲೇಶ್ ಕುಮಾರ್ ಅವರು ಈ ರೀತಿ ಕನ್ನಡದ ಹಾಡೊಂದರಲ್ಲಿ ಅಭಿನಯಿಸಬೇಕೆಂದು ಕೇಳಿದರು. ಕನ್ನಡದ ಮೇಲಿನ ಅಭಿಮಾನದಿಂದ ಈ ಹಾಡಿನಲ್ಲಿ ಅಭಿನಯಿಸಿದ್ದೇನೆ. ಹಾಡು ಚೆನ್ನಾಗಿದೆ ಎಂದು ನಿಶ್ವಿಕಾ ನಾಯ್ಡು ತಿಳಿಸಿದರು.

ಕನ್ನಡ ನನ್ನ ಉಸಿರು. ಅಂತಹ ಕನ್ನಡದ ಸುಂದರ ಗೀತೆಯೊಂದರಲ್ಲಿ ಕರ್ನಾಟಕ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಅಭಿನಯಿಸಿದ್ದು ತುಂಬಾ ಖುಷಿಯಾಗಿದೆ ಎನ್ನುತ್ತಾರೆ ನಟ ಯಶಸ್ ಸೂರ್ಯ. ಸಂಗೀತ ನಿರ್ದೇಶಕ ಸಾಯಿಕಿರಣ್ ಸಹ ಹಾಡಿನ ಬಗ್ಗೆ ಮಾಹಿತಿ ನೀಡಿದರು. ಧನು ಮಾಸ್ಟರ್ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.

error: Content is protected !!