ಓಂ ಸಾಯಿಪ್ರಕಾಶ್ ನಿರ್ದೇಶನದ ‘ಕಾಮನ್ ಮ್ಯಾನ್’ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಲಾಂಚ್.
ಸಾಮಾನ್ಯ ವ್ಯಕ್ತಿಯೊಬ್ಬ ರಾಜ್ಯದ ಮುಖ್ಯಮಂತ್ರಿಯಾದರೆ ಹೇಗಿರುತ್ತೆ ಎಂಬ ಎಳೆ ಇಟ್ಟುಕೊಂಡು ಕಥೆ ಬರೆದು ಸುರಭಿ ಫಿಲಂಸ್ ಅಡಿ ಎನ್. ನರಸಿಂಹಮೂರ್ತಿ ಅವರು ‘ಕಾಮನ್ ಮ್ಯಾನ್’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರು ಈ ಚಿತ್ರದ ಚಿತ್ರಕಥೆ ರಚಿಸಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕೆರೆಬೇಟೆ ಖ್ಯಾತಿಯ ನಟ ಗೌರೀಶಂಕರ್ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಲಾಂಚ್ ಕಾರ್ಯಕ್ರಮ ನಡೆಯಿತು. ವಿನಯ ಚಂದ್ರ ಅವರ ಸಂಗೀತ ನಿರ್ದೇಶನ, ಜೆ.ಜಿ.ಕೃಷ್ಣ, ದೀಪಕ್ ಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಾಯಿಪ್ರಕಾಶ್ ನನ್ನ ನಿರ್ದೇಶನದ 106ನೇ ಚಿತ್ರವಿದು. ಒಬ್ಬ ಕಾಮನ್ ಮ್ಯಾನ್ ರಾಜ್ಯದ ಸಿಎಂ ಆದರೆ ಏನು ಮಾಡಬಹುದು ಎಂದು ನಮ್ಮ ಚಿತ್ರದ ಮೂಲಕ ತೋರಿಸಿದ್ದೇವೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಆಸೆ ಇರುತ್ತೆ. ನಾಯಕ ಒಬ್ಬ ಲಾಯರ್, ಆತ ಅನಿರೀಕ್ಷಿತವಾಗಿ ರಾಜ್ಯದ ಸಿಎಂ ಆಗ್ತಾನೆ. ನಂತರ ಆತ ಏನೇನು ಮಾಡಬಹುದು, ಸಮಾಜದಲ್ಲಿ ಏನಾದರೂ ಸುಧಾರಣೆ ಮಾಡಲು ಸಾಧ್ಯವಾಯಿತಾ ಎಂಬುದನ್ನು ಕುತೂಹಲಕರವಾಗಿ ಹೇಳೋ ಪ್ರಯತ್ನ ಮಾಡಿದ್ದೇನೆ.
ನಾಯಕನ ತಂದೆ ಒಬ್ಬ ಕಲಾವಿದ. ತನ್ನ ಮಗ ಲಾಯರ್ ಆಗಿ ಸಮಾಜಕ್ಕೆ ಏನಾದರೂ ಒಳ್ಳೆಯದು ಮಾಡಬೇಕು ಎನ್ನುವುದು ಆತನ ಆಸೆಯಾಗಿರುತ್ತೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದು ಅವಕಾಶ ಬರುತ್ತೆ. ಅದೇ ರೀತಿ ನಾಯಕನಿಗೂ ಅದು ಬಂದಾಗ ಅದನ್ನು ಆತ ಹೇಗೆ ಯುಟಲೈಸ್ ಮಾಡಿಕೊಳ್ತಾನೆ, ಅಲ್ಲದೆ ಆತ ಹೇಗೆ ಸಿಎಂ ಆದ ಎಂದು ಯಾರೂ ಪ್ರಶ್ನಿಸಲಾಗದ ಸಂದರ್ಭ ಕೂಡಿಬಂದಿರುತ್ತದೆ.
ಕಥೆ ಕೇಳಿದ ಕೂಡಲೇ ಇದು 100% ಓಪನಿಂಗ್ ತೆಗೆದುಕೊಳ್ಳುತ್ತದೆ ಎನಿಸಿತು. ನಾಯಕಿ ಸೋನಾ ಲದ್ವಾ ಕೂಡ ಚೆನ್ನಾಗಿ ಆ್ಯಕ್ಟ್ ಮಾಡಿದ್ದಾರೆ. ಪಾತ್ರಕ್ಕೆ ಏನು ಬೇಕೋ ಅದಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ. ಬಾಂಬೆ ಮೂಲದ ಮತ್ತೊಬ್ಬ ನಟಿಯೂ ಚಿತ್ರದಲ್ಲಿದ್ದಾರೆ. ಇದು ಕಂಟೆಂಟ್ ಸಿನಿಮಾ, ಜಾತ್ರೆ ಸಿನಿಮಾ ಅಲ್ಲ, ಶೈಲೇಶ್ ತುಂಬಾ ಚೆನ್ನಾಗಿ ಡೈಲಾಗ್ ಬರೆದಿದ್ದಾರೆ ಎಂದು ಹೇಳಿದರು.
ನಿರ್ಮಾಪಕ ಎನ್. ನರಸಿಂಹಮೂರ್ತಿ ಮಾತನಾಡುತ್ತ ನನಗೆ ಚಿಕ್ಕ ವಯಸಿನಿಂದಲೂ ರಂಗಭೂಮಿಯ ನಂಟಿದೆ. ಈ ಹಿಂದೆ 2 ಚಿತ್ರಗಳನ್ನು ನಿರ್ಮಾಣ ಮಾಡಿದ್ದೆ, ಅದರಿಂದ ಸಾಕಷ್ಟು ಪಾಠವನ್ನೂ ಕಲಿತೆ. ಇದು 3 ನೇ ಚಿತ್ರ. ಇಂಥ ನಿರ್ದೇಶಕರ ಜತೆ ಎಷ್ಟು ಸಿನಿಮಾ ಬೇಕಾದ್ರೂ ಮಾಡಬಹುದು. ಮಾತಿನ ಭಾಗ 40 ದಿನ ಶೂಟಿಂಗ್ ಅಂದಿದ್ದರು. 32 ದಿನಕ್ಕೇ ಮುಗಿಸಿದರು. ಚಿತ್ರದಲ್ಲಿ ನಾನು ಒಬ್ಬ ಮುಖ್ಯಮಂತ್ರಿಯ ಪಾತ್ರ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಟೀಸರ್ ಆಡಿಯೋ ಟ್ರೈಲರ್ ಲಾಂಚ್ ಮಾಡುವುದಾಗಿ ಹೇಳಿದರು.
ನಾಯಕ ಗೌರಿಶಂಕರ್ ಮಾತನಾಡಿ ರಾಜಹಂಸ, ಕೆರೆಬೇಟೆ ನಂತರ ನನ್ನ ಅಭಿನಯದ ಮೂರನೇ ಚಿತ್ರವಿದು. ನಿರ್ದೇಶಕರು ಹಾಕಿಕೊಂಡ ಪ್ಲಾನ್ ಪ್ರಕಾರವೇ ಸಿನಿಮಾ ಮಾಡಿ ಮುಗಿಸಿದ್ದಾರೆ. ಕೆರೆಬೇಟೆ ನಂತರ ಒಂದೊಳ್ಳೆ ಕಥೆಗಾಗಿ ಕಾಯ್ತಿದ್ದೆ. ನನಗೆ ಕಾಲ್ ಬಂದಾಗ ಆಶ್ಚರ್ಯವಾಯ್ತು. ಬಯಸಿದಂಥ ಪಾತ್ರವೇ ಹುಡುಕಿಕೊಂಡು ಬಂದಿತ್ತು.
ನಿರ್ದೇಶಕರು ನನ್ನಂಥ ಚಿಕ್ಕ ಕಲಾವಿದನಿಗೆ ಗಂಟೆಯವರೆಗೆ ತಾಳ್ಮೆಯಿಂದ ಕಥೆ ಹೇಳಿದರು. ಪಾತ್ರಗಳು, ದೃಶ್ಯಗಳನ್ನು ಆರಂಭದಿಂದ ಎಂಡ್ ವರೆಗೆ ನೀಟಾಗಿ ತೆಗೆದುಕೊಂಡು ಹೋಗಿದ್ದರು. ತುಂಬಾ ಶಿಸ್ತುಬದ್ದವಾಗಿ ಸಿನಿಮಾ ಮಾಡುತ್ತಾರೆ. ನಮಗೆಲ್ಲ ಅವರು ದೊಡ್ಡ ಪಾಠವಾಗಿದ್ದಾರೆ. ಯಾವ ಸಿನಿಮಾನೂ ಕಥೆಗಿಂತ ದೊಡ್ಡದಲ್ಲ ಎಂಬ ಅವರ ಮಾತು ಖಂಡಿತ ನಿಜ. ನನಗೂ ಅಡ್ವೊಕೇಟ್ ಆಗಬೇಕೆಂಬ ಆಸೆ ಇತ್ತು ಎಂದು ಹೇಳಿದರು.

ನಾಯಕಿ ಸೋನಾ ಲದ್ವಾ ಮಾತನಾಡಿ ಇದೇ ನಿರ್ಮಾಪಕರ ಜತೆ ೨ ಸಿನಿಮಾ ಮಾಡಿದ್ದೆ. ಇದು ಮೂರನೇ ಚಿತ್ರ ಎಂದು ಹೇಳಿದರು. ಛಾಯಾಗ್ರಾಹಕ ಜೆ.ಜಿ.ಕೃಷ್ಣ ಮಾತನಾಡಿ ನನ್ನ ಹಾಗೂ ಥ್ರಿಲ್ಲರ್ ಮಂಜುದು ಹಿಟ್ ಕಾಂಬಿನೇಶನ್ ಅನ್ನೋ ಮಾತಿದೆ. ಮಂಜು ತುಂಬಾ ರಿಸ್ಕ್ ತಗೊಂಡು ಆಕ್ಷನ್ ಕಂಪೋಜ್ ಮಾಡಿದ್ದಾರೆ. ಈ ಚಿತ್ರಕ್ಕೆ ನನ್ನಜತೆ ಮಗ ದೀಪಕ್ ಕೂಡ ಕ್ಯಾಮೆರಾ ವರ್ಕ್ ಮಾಡಿದ್ದಾನೆ ಎಂದರು.
ಸಂಗೀತ ನಿರ್ದೇಶಕ ವಿನಯಚಂದ್ರ ಮಾತನಾಡಿ ಕಮರ್ಷಿಯಲಿ ಹಿಟ್ ಆಗುವಂಥ ನಾಲ್ಕು ಹಾಡುಗಳು ಹಾಗೂ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಕೂಡ ಮಾಡಿದ್ದೇನೆ ಎಂದರು. ಚಿತ್ರದ ಉಳಿದ ಪಾತ್ರಗಳಲ್ಲಿ ಗಣೇಶರಾವ್ ಕೇಸರಕರ್, ಎಸ್ಕಾರ್ಟ್ ಶ್ರೀನಿವಾಸ್, ಪ್ರಕಾಶ್ ತುಮ್ಮಿನಾಡು ನಟಿಸಿದ್ದಾರೆ.