Cini NewsSandalwood

ಘೋಸ್ಟ್ ಹಂಟರ್ ಕಥಾನಕ “ಮಾಂತ್ರಿಕ”

ಚಂದನವನಕ್ಕೆ ಮತ್ತೊಂದು ಯುವ ಪಡೆಗಳ ತಂಡ ಸೇರಿಕೊಂಡು ಆತ್ಮಗಳನ್ನು ಹುಡುಕುತ್ತಾ ಹೊರಟಿದ್ದಾರೆ. ಐಟಿ ಉದ್ಯೋಗದಲ್ಲಿ ಕೆಲಸ ಮಾಡುತ್ತಾ “ಮಾಂತ್ರಿಕ” ಎಂಬ ವಿಭಿನ್ನ ಟೈಟಲ್ ಇಟ್ಟುಕೊಂಡು ಚಲನಚಿತ್ರವೊಂದು ನಿರ್ಮಿಸಿದ್ದಾರೆ. ಕೃಷ್ಣ ಸಂಕುಲ ಬ್ರಾಂಡಿಂಗ್ ಪಿಕ್ಚರ್ಸ್ ಲಾಂಛನದಲ್ಲಿ ವ್ಯಾನ ವರ್ಣ ಜಮ್ಮುಲ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಹಾಗೂ ನಿರ್ಮಾಣದ ಜೊತೆಗೆ ಪ್ರಮುಖ ಪಾತ್ರದಲ್ಲೂ ಸಹ ಕಾಣಿಸಿಕೊಂಡಿದ್ದಾರೆ. ಈಗಾಗಲೇ ತನ್ನೆಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಮೇಕಿಂಗ್ ವಿಡಿಯೋ ಪ್ರದರ್ಶನ ಹಾಗೂ ಪತ್ರಿಕಾಗೋಷ್ಟಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಇದೊಂದು ಘೋಸ್ಟ್ ಹಂಟರ್ ಸುತ್ತ ನಡೆಯುವ ಇಂಟಲೆಕ್ಚುಯಲ್, ಸಸ್ಪೆನ್ಸ್ , ಥ್ರಿಲ್ಲರ್ ಕಥೆಯಾಗಿದ್ದು, ದೆವ್ವ ಅನ್ನೋದು ಇದೆಯೋ ಇಲ್ಲವೋ ಅಥವಾ ಅದೆಲ್ಲಾ ನಮ್ಮ ಭ್ರಮೆಯೋ ಎಂಬ ವಿಷಯದ ಮೇಲೆ ಈ ಚಿತ್ರ ಸಾಗುತ್ತದೆ. ರಾಧಿಕಾ ಮಾಲಿ ಪಾಟೀಲ ಹಾಗೂ ಮೈಥಿಲಿ ನಾಯಕ್ ಚಿತ್ರದ ಇಬ್ಬರು ನಾಯಕಿಯರಾಗಿ ನಟಿಸಿದ್ದಾರೆ.

ಈ ಸಂದರ್ಭದಲ್ಲಿ ನಿರ್ದೇಶಕ , ನಾಯಕ ವ್ಯಾನ ವರ್ಣ ಮಾತನಾಡಿ ನಾನು ಐಟಿ ಬ್ಯಾಕ್ ಗ್ರೌಂಡ್‌ನಿಂದ ಬಂದವನು. ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದೇನೆ, ಆರಂಭದಲ್ಲಿ ಇದನ್ನ ಪುನೀತ್ ರಾಜ್‌ ಕುಮಾರ್ ಅವರನ್ನು ಹಾಕಿಕೊಂಡು ವೆಬ್ ಸೀರೀಸ್ ಮಾಡಬೇಕು ಅಂದುಕೊಂಡಿದ್ದೆ, ಅದಾಗಲ್ಲ ಅಂದಾಗ, ಸ್ನೇಹಿತರ ಸಲಹೆಯಂತೆ ಸಿನಿಮಾ ಮಾಡೋ ಯೋಚನೆ ಬಂತು.

ಮನುಷ್ಯರು ದೆವ್ವಗಳನ್ನು ನಂಬುತ್ತಾರೆ, ದೆವ್ವ ಇದೆಯೋ, ಇಲ್ವೋ, ಇದ್ರೆ ಅದು ಹೇಗಿರುತ್ತೆ, ಅಥವಾ ಇದೇನು ಸೈಕಲಾಜಿಕಲ್ ಫೀಲಿಂಗೋ ? ಅನ್ನೋದೇ ಈ ಚಿತ್ರದ ಕಾನ್ಸೆಪ್ಟ್, ನಾಯಕ ಕೃಷ್ಣ ಸಿಟಿಆರ್ (ಕಮ್ ಟು ರಿಯಾಲಿಟಿ) ಅನ್ನೋ ಅರ್ಗನೈಜೇಶನ್ ಇಟ್ಟುಕೊಂಡಿರುತ್ತಾನೆ. ದೆವ್ವಗಳನ್ನು ಹುಡುಕಿಕೊಂಡು ಹೋಗುವುದು, ದೆವ್ವಗಳ ಬಗ್ಗೆ ಕೇಳಿಕೊಂಡು ಬಂದವರಿಗೆ ಸಲಹೆ ನೀಡುವುದು, ಯಾರಾದ್ರೂ ತಮ್ಮ ಮನೆಯಲ್ಲಿ ದೆವ್ವ ಇದೆ ಅಂತ ಬಂದಾಗ ಅವರಿಗೆ ಅದೆಲ್ಲ ಇಲ್ಲ ಎಂದು ಪ್ರೂವ್ ಮಾಡುವುದು ಈತನ ಕೆಲಸ.

ಬೆಂಗಳೂರು, ಮಂಗಳೂರು ಅಲ್ಲದೆ ಬೆಂಗಳೂರಿನ ಮಾಲ್‌ವೊಂದರಲ್ಲಿ ೩೦ರಿಂದ ೪೦ ದಿನಗಳ ಕಾಲ ಚಿತ್ರದ ಶೂಟಿಂಗ್ ನಡೆಸಿದ್ದೇವೆ. ಮಾಲ್‌ನಲ್ಲಿ ಶೂಟ್ ಮಾಡುವಾಗ ಚಿತ್ರತಂಡಕ್ಕೆ ಸಾಕಷ್ಟು ವಿಚಿತ್ರ ಅನುಭವಗಳಾದವು, ಪ್ರಾರಂಭದಲ್ಲಿದ್ದ ಕ್ಯಾಮೆರಾಮ್ಯಾನ್ ಭಯಗೊಂಡು ಬಿಟ್ಟುಹೋದರು, ಅಲ್ಲದೆ ಆರಂಭದಲ್ಲಿ ೪೦ ರಿಂದ ೫೦ ಜನರಿದ್ದ ಚಿತ್ರತಂಡ ಕೊನೆಗೆ ೨೦ ಕ್ಕಿಳಿಯಿತು.

ಈಗಾಗಲೇ ಚಿತ್ರದ ಎಲ್ಲಾ ಕೆಲಸಗಳು ಮುಗಿದು ಸೆನ್ಸಾರ್ ನಿಂದ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಒಮ್ಮೊಮ್ಮೆ ವಿಚಿತ್ರವಾದ ಶಬ್ದಗಳೇ ಮನುಷ್ಯರನ್ನು ಭಯ ಬೀಳಿಸುತ್ತೆ, ಮೂಢನಂಬಿಕೆ ಗಳಿಂದ ಮೂಢರಾಗಬೇಡಿ, ಅದರ ಹಿಂದಿನ ಸತ್ಯಾಂಶ ಬೇರೇನೇ ಇರುತ್ತೆ, ಅದನ್ನು ನೋಡಿದ ಮೇಲೆ ನಿರ್ಧರಿಸಿ ಅಂತ ಹೇಳಿದ್ದೇವೆ ಎಂದರು.

ನಿರ್ದೇಶಕರ ಸಾಕಷ್ಟು ಕೆಲಸಗಳಿಗೆ ಜೊತೆಯಾಗಿದ್ದ ಅವರ ಪತ್ನಿ ಆಯನ ಮಾತನಾಡಿ ಮೂಢನಂಬಿಕೆಗಳ ಮೇಲೆ ಯಾರೂ ಡಿಪೆಂಡ್ ಆಗಬಾರದು ಅನ್ನೋದನ್ನೇ ನಮ್ಮ ಚಿತ್ರದಲ್ಲಿ ತೋರಿಸಿದ್ದೇವೆ ಎಂದರು. ನಾಯಕಿ ರಾಧಿಕಾ ಮಾಲಿ ಪಾಟೀಲ್ ಮಾತನಾಡಿ ನಾನು ಚಿತ್ರದಲ್ಲಿ ಕಾತ್ಯಾಯಿನಿ ಎಂಬ ಜರ್ನಲಿಸ್ಟ್ ಪಾತ್ರ ಮಾಡಿದ್ದೇನೆ ಎಂದರು, ಉಳಿದಂತೆ ದುಷ್ಯಂತ್, ಜಗದೀಶ್ ಮುಂತಾದವರು ಮಾಂತ್ರಿಕ ಚಿತ್ರದ ವಿಶೇಷತೆಗಳ ಕುರಿತಂತೆ ಮಾತನಾಡಿದರು.

ಇನ್ನು ಈ ಚಿತ್ರಕ್ಕೆ ನಿರ್ದೇಶಕರೇ ಸಂಕಲನ ಮಾಡಿದ್ದು, ಸ್ಟಾಲಿನ್ ಅವರ ಸಂಗೀತ ಸಂಯೋಜನೆ, ಅನಿಲ್ ಆಂಟೋನಿ ಹಾಗೂ ರಮೇಶ್ ಮರ‍್ರಿಪಲ್ಲಿ ಅವರ ಛಾಯಾಗ್ರಹಣ, ಲಯನ್ ಜಿ.ಗಂಗರಾಜು ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದು ಚಿತ್ರದಂಡ ಮಾಹಿತಿ ಯನ್ನು ಹಂಚಿಕೊಂಡರು.

error: Content is protected !!