ಬದುಕಿನ ಮೌಲ್ಯದ ಪ್ರೀತಿಯ ಪಯಣ “ಸೀತಾ ಪಯಣ” (ಚಿತ್ರವಿಮರ್ಶೆ-ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಸೀತಾ ಪಯಣ
ನಿರ್ದೇಶನ , ನಿರ್ಮಾಪಕ : ಅರ್ಜುನ್ ಸರ್ಜಾ
ಸಂಗೀತ : ಅನೂಪ್ ರೂಬೆನ್ಸ್
ಛಾಯಾಗ್ರಹಣ : ಜಿ. ಬಾಲಮುರುಗನ್
ತಾರಾಗಣ : ನಿರಂಜನ್, ಐಶ್ವರ್ಯ ಅರ್ಜುನ್ , ಸತ್ಯರಾಜ್, ಪ್ರಕಾಶ್ ರೈ , ಕೋವೈ ಸರಳಾ, ವಿಶೇಷ ಪಾತ್ರದಲ್ಲಿ ಅರ್ಜುನ್ ಸರ್ಜಾ, ಧ್ರುವ ಸರ್ಜಾ ಹಾಗೂ ಮುಂತಾದವರು…
ಜೀವನವೇ ಒಂದು ಪಯಣ , ಮಾರ್ಗ ಮಧ್ಯ ಎದುರಾಗುವಂತಹ ಒಂದಷ್ಟು ಘಟನೆಗಳು ನಮ್ಮ ಬದುಕಿನಲ್ಲಿ ಪಾಠಗಳನ್ನು ಕಲಿಸುತ್ತಾ ಹೋಗುತ್ತದೆ. ಅಂತದ್ದೇ ಒಂದು ಕೌಟುಂಬಿಕ ಕಥಾನಕವಾಗಿ ತಂದೆ ಮಗಳ ಬಾಂಧವ್ಯ , ಜೀವ , ಜೀವನ , ಮಾನವೀಯತೆಯ ಮೌಲ್ಯ, ಕೂಡು ಕುಟುಂಬದ ಜೀವನ , ಸ್ನೇಹ , ಪ್ರೀತಿ , ದ್ವೇಷದ ನಡುವೆ ಮನಸ್ಥಿತಿಯ ಒದ್ದಾಟ ಸುತ್ತ ಸಂಬಂಧಗಳ ಶಕ್ತಿಯ ಗಟ್ಟಿಕತನಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಸೀತಾ ಪಯಣ”. ತಾಯಿಯನ್ನು ಕಳೆದುಕೊಂಡು ಶ್ರೀಮಂತ ಕುಟುಂಬದಲ್ಲಿ ಬೆಳದಂತಹ ಒಬ್ಬಳೇ ಮಗಳು ಸೀತಾ (ಐಶ್ವರ್ಯ ಅರ್ಜುನ್) , ತಾಯಿಯ ಮಮತೆಯನ್ನು ತೋರಿ ಸಾಕಿದಂತಹ ತಂದೆ ಪ್ರಸಾದ್ (ಸತ್ಯರಾಜ್). ಮದುವೆ ಬಗ್ಗೆ ಆಸಕ್ತಿ ಇಲ್ಲದ ಸೀತಾ ತನ್ನ ಫುಡ್ ಚೆಫ್ ಕೆಲಸದ ಬಗ್ಗೆ ಹೆಚ್ಚು ಒಲವು. ಬೆಳಗಾಂನಲ್ಲಿ ವಿಶೇಷ ತರಬೇತಿ ನೀಡಲು ಬಂದಂತಹ ಸೋಫಿಯಾ ಅಂಡರ್ಸನ್ ಟೀಮ್ ಜೊತೆ ಸೇರಲು ಕಾರಿನಲ್ಲಿ ಪ್ರಾಣ ಬೆಳೆಸುವ ಸೀತಾಗೆ ಮಾರ್ಗ ಮಧ್ಯೆ ಡ್ರಾಪ್ ಕೇಳುವ ಯುವಕ ಅಭಿ(ನಿರಂಜನ್ ಸುಧೀಂದ್ರ). ಒಂದಷ್ಟು ಕಂಡಿಷನ್ಗಳೊಂದಿಗೆ ಜೊತೆಯಲ್ಲಿ ಪಯಣ ಮಾಡುವಾಗ ಅಭಿಷೇಕ್ ತನ್ನ ತಾತ ಹನುಮಂತ ರಾಯ ( ಪ್ರಕಾಶ್ ರೈ) ತಮ್ಮ ಅಕ್ಕಪಕ್ಕದ ರಾಮಪುರ ಹಾಗೂ ಸೀತಾಪುರ ಊರ ಸಮಸ್ಯೆ ಬಗ್ಗೆ ತೆಗೆದುಕೊಳ್ಳುವ ತೀರ್ಮಾನ ಮತ್ತು ಅವರ ಕೂಡು ಕುಟುಂಬದ ಒಡನಾಟದ ಬಗ್ಗೆ ತಿಳಿಸುತ್ತಾನೆ. ಇನ್ನು ಜರ್ನಿಯಲ್ಲಿ ಹಣ್ಣು ಮಾರುವ ಹುಡುಗಿ , ಹೋಟೆಲ್ ನಡೆಸುವ ತಾಯಿ ಮಗ ಸೊಸೆ, ಹಸು ಮೇಯಿಸುವ ಹುಡುಗ , ರೌಡಿಸಂ ಮಾಡುವ ವ್ಯಕ್ತಿಗಳು , ಆಕಸ್ಮಿಕವಾಗಿ ಎದುರಾಗುತ್ತಾ ಹೋಗುತ್ತಾರೆ.

ಇವರ ಅಡೆತಡೆಗಳು ಒಂದು ದೊಡ್ಡ ಅನಾಹುತವನ್ನು ತಪ್ಪಿಸುತ್ತದೆ. ಮನಸ್ಸಿನ ಮೇಲೆ ಬೇರೆಯದೇ ಪರಿಣಾಮ ಬೀರುವ ಸೀತಾ ತನ್ನ ಜೀವ ಉಳಿವಿಗೆ ಕಾರಣರಾದವರಿಗೆ ಧನ್ಯವಾದ ತಿಳಿಸಲು ನಿರ್ಧರಿಸುತ್ತಾಳೆ. ಮುಂದೆ ಎದುರಾಗುವ ಒಂದಷ್ಟು ಘಟನೆಗಳು ಸೀತಾಗೆ ಸ್ವಯಂ ಅನುಭವಕ್ಕೆ ಸಂಬಂಧ , ಸ್ನೇಹ , ಬದುಕಿನ ಮೌಲ್ಯ ಪ್ರೀತಿಯ ಕಡೆ ಒಲವು ಮೂಡುತ್ತಾ ಹೋಗುತ್ತೆ. ಆದರೆ ಇದೆಲ್ಲದರ ಹಿಂದೆ ಒಂದು ನಿಗೂಢದ ಸತ್ಯ ಕೂಡ ಗುಟ್ಟಾಗಿರುತ್ತದೆ. ಏನದು ಆ ಸತ್ಯ… ತಂದೆ ಮಗಳ ಬಾಂಧವ್ಯ ಏನಾಗುತ್ತೆ… ಅಭಿಷೇಕ್ ಯಾರು…
ಸೀತಾ ಮತ್ತು ಅಭಿ ಪಯಣ ಸೇರುತ್ತಾ… ಹೀಗೆ ಒಂದಷ್ಟು ವಿಚಾರಗಳ ಬಗ್ಗೆ ತಿಳಿದುಕೊಳ್ಳಕ್ಕೆ ನೀವು ಒಮ್ಮೆ ಈ ಚಿತ್ರವನ್ನು ನೋಡಬೇಕು.
ನಿರ್ದೇಶಕ , ನಿರ್ಮಾಪಕ ಅರ್ಜುನ್ ಸರ್ಜಾ ಆಯ್ಕೆ ಮಾಡಿಕೊಂಡಿರುವ ಕಥಾವಸ್ತುವಿನಲ್ಲಿ ಸಂಬಂಧಗಳ ಮೌಲ್ಯ , ಮಾನವೀಯ ಸೆಳೆತ , ಸ್ನೇಹ , ಪ್ರೀತಿಯ ಸುತ್ತ ಸಮಯ , ಸಂದರ್ಭ ಜೀವಕ್ಕೆ ಎಷ್ಟು ಮುಖ್ಯ ಎಂಬ ಸೂಕ್ಷ್ಮತೆಯ ಜೊತೆ ಮನ ಮುಟ್ಟುವಂತೆ ವಿಚಾರವನ್ನು ಹೇಳಿದ್ದಾರೆ. ಆದರೆ ಚಿತ್ರಕಥೆಯ ಪಯಣ ಸುಧೀರ್ಘ ಸಾಗಿ ಆಯಾಸ ಮಾಡುತ್ತದೆ. ಬಹಳಷ್ಟು ಅನುಭವ ಇದ್ದರು ಈ ಕೊರತೆ ಯಾಕೆ ಅನಿಸುತ್ತದೆ. ಮಗಳಿಗಾಗಿ ಮತ್ತೊಮ್ಮೆ ಕುಟುಂಬ ಸಮೇತ ನೋಡುವಂತಹ ಈ ಚಿತ್ರ ಮಾಡಿರುವುದನ್ನು ಮೆಚ್ಚುವಂತಿದೆ. ಖಡಕ್ ಎಂಟ್ರಿ ಮೂಲಕ ಆಕ್ಷನ್ ಕಿಂಗ್ ಅಬ್ಬರ ಇನ್ನೂ ಇದೆ ಎಂದು ಮತ್ತೆ ನಿರೂಪಿಸಿದ್ದಾರೆ.
ಇನ್ನು ಸಂಗೀತಕ್ಕಿಂತ ಹಿನ್ನೆಲೆ ಸಂಗೀತ ಹೆಚ್ಚು ಅಬ್ಬರಿಸಿದೆ. ಛಾಯಾಗ್ರಾಹಕರ ಕೈಚಳಕ ಅದ್ಭುತವಾಗಿದೆ. ಸಾಹಸ , ಸಂಕಲನ ಸೇರಿದಂತೆ ತಾಂತ್ರಿಕವಾಗಿ ತಂಡದ ಕೆಲಸ ಉತ್ತಮವಾಗಿದೆ. ಇನ್ನು ನಾಯಕನಾಗಿ ನಿರಂಜನ್ ಸುಧೀಂದ್ರ ಕೂಡ ಬಹಳ ಲವಲವಿಕೆಯಿಂದ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಎರಡು ಶೇಡ್ಗಳನ್ನ ಕೂಡ ನಿರ್ವಹಿಸಿದ್ದು ಆಕ್ಷನ್ , ಡಾನ್ಸ್ , ಪರ್ಫಾಮೆನ್ಸ್ ಗೂ ಜೈ ಎಂದಿದ್ದಾರೆ. ಅದೇ ರೀತಿ ನಾಯಕಿಯಾಗಿ ಐಶ್ವರ್ಯ ಅರ್ಜುನ್ ಕೂಡ ಬಹಳ ನ್ಯಾಚುರಲ್ ಆಗಿ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದು , ಕ್ಲಾಸ್ ಹಾಗೂ ಮಾಸ್ ಡ್ಯಾನ್ಸ್ ಗೂ ಸೈ ಎಂದಿದ್ದಾರೆ.
ಇನ್ನು ಹಿರಿಯ ನಟ ಪ್ರಕಾಶ್ ರೈ ಹಿರಿಯ ಅಜನಾಗಿ ತಮ್ಮ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದು , ಒಗ್ಗಟ್ಟು , ಪ್ರೀತಿ , ಸಂಬಂಧಗಳ ಬಗ್ಗೆ ಜಾಗೃತಿಯ ಮಾತು ಗಮನ ಸೆಳೆಯುತ್ತದೆ. ಇನ್ನು ಗೋಮಾತೆಯ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎನ್ನುವಂತೆ ಅಬ್ಬರಿಸಿರುವ ಧ್ರುವ ಸರ್ಜಾ ನಟನೆ ಕೂಡ ಅದ್ಬುತವಾಗಿದೆ. ನಾಯಕಿಯ ತಂದೆಯಾಗಿ ಸತ್ಯರಾಜ್ ಸೇರಿದಂತೆ ಬಿತಿರಿ ಸತಿ, ಕೋವೈ ಸರಳ ಸೇರಿದಂತೆ ಎಲ್ಲಾ ಕಲಾವಿದರು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಒಟ್ಟಾರೆ ಇಡೀ ಕುಟುಂಬ ನೋಡುವಂತಹ ಚಿತ್ರ ಇದಾಗಿದೆ.