ದೈವದತ್ತ ಪ್ರಕೃತಿ ಮತ್ತು ಮನುಷ್ಯನ ಸುತ್ತ ‘ತಿಮ್ಮನ ಮೊಟ್ಟೆಗಳು’ (ಚಿತ್ರವಿಮರ್ಶೆ-ರೇಟಿಂಗ್ : 3.5/ 5)
ರೇಟಿಂಗ್ : 3.5/ 5
ಚಿತ್ರ : ತಿಮ್ಮನ ಮೊಟ್ಟೆಗಳು
ನಿರ್ದೇಶಕ : ರಕ್ಷಿತ್ ತೀರ್ಥಹಳ್ಳಿ
ನಿರ್ಮಾಪಕ : ಆದರ್ಶ್ ಅಯ್ಯಂಗಾರ್
ಸಂಗೀತ : ಹೇಮಂತ್ ಜೋಯಿಷ್
ಛಾಯಾಗ್ರಹಣ : ಪ್ರವೀಣ್. ಎಸ್
ತಾರಾಗಣ : ಕೇಶವ್ ಗುತ್ತಳಿಕೆ, ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಖರ್, ಶೃಂಗೇರಿ ರಾಮಣ್ಣ, ಪ್ರಗತಿ ಪ್ರಭು, ರಘು ರಾಮನಕೊಪ್ಪ, ಮಾ.ಹರ್ಷ, ವಿನಯ್ ಕಣಿವೆ, ಪೃಥ್ವಿರಾಜ್, ಪ್ರಾಣೇಶ್ ಹಾಗೂ ಮುಂತಾದವರು…
ಪ್ರತಿಯೊಂದು ಜೀವರಾಶಿಗೂ ಬದುಕುವ ಹಕ್ಕಿದೆ. ಸುಂದರ ಪರಿಸರ , ಪ್ರಕೃತಿಯಲ್ಲಿ ಕಾಣಿಸಿಕೊಳ್ಳುವ ಪ್ರಾಣಿ , ಪಕ್ಷಿಗಳು ಸೇರಿದಂತೆ ಮನುಷ್ಯರೂ ಕೂಡ ದೈವ ದತ್ತದಿಂದ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಸರ್ವೇ ಸಾಮಾನ್ಯ. ಅಪ್ಪ ಅಮ್ಮಂದಿರಿಗೆ ಮಕ್ಕಳು ಎಷ್ಟು ಮುಖ್ಯವೋ… ಅದೇ ರೀತಿ ಪ್ರಾಣಿ , ಪಕ್ಷಿಗಳಿಗೆ ತನ್ನ ಮರಿ ಹಾಗೂ ಮೊಟ್ಟೆಗಳು ಅಷ್ಟೇ ಮುಖ್ಯ. ಆದರೆ ಮನುಷ್ಯನ ಆಲೋಚನೆ , ಪ್ರಕೃತಿ ವಿಸ್ಮಯಕ್ಕೆ ತದ್ವಿರುದ್ಧವಾಗಿ ಸಾಗಿದಾಗ ಎದುರಾಗುವ ಘಟನೆಗಳು ಜೀವನದ ಹಾದಿಯಲ್ಲಿ ಜೀವದ ಬೆಲೆಯನ್ನ ಹೇಳುವಂತಹ ಸೂಕ್ಷ್ಮ ಸಂವೇದನೆಯ ಕಥಾನಕವಾಗಿ ರಕ್ಷಿತ್ ತೀರ್ಥಹಳ್ಳಿ ಬರೆದಿರುವ “ಕಾಡಿನ ನೆಂಟರು” ಕಥಾ ಸಂಕಲನದಿಂದ ಆಯ್ದ ಒಂದು ಕಥೆಯಾಗಿ ” ತಿಮ್ಮನ ಮೊಟ್ಟೆಗಳು” ಈ ವಾರ ತೆರೆಯ ಮೇಲೆ ಬಂದಿದೆ.
ಮಲೆನಾಡಿನ ಸುಂದರ ಅರಣ್ಯದ ನಡುವೆ ತಿಮ್ಮ ಎಂಬ ವ್ಯಕ್ತಿ ಊರಿನ ಶ್ರೀಮಂತರ ಮನೆಯ ಅಡಿಕೆ ಮರಗಳಿಗೆ ಔಷಧಿ ಸಿಂಪಡಿಸುವುದೇ ಈತನ ಕಾಯಕ. ಗುಡಿಸಿಲಿನಲ್ಲಿ ಪತ್ನಿ ಲಕ್ಷ್ಮಿ ಹಾಗೂ ಮಗ ಸುಬ್ಬವಿನ ಜೊತೆ ಇರಲು ಒಳ್ಳೆಯ ಮನೆ ಇಲ್ಲದೆ , ಗದ್ದೆ ಇಲ್ಲದೆ ಕಷ್ಟ ಪಡುತ್ತಿರುತ್ತಾನೆ. ತಿಮ್ಮನ ಊರಿಗೆ ಒಮ್ಮೆ ಕಾಳಿಂಗ ಸರ್ಪ ಹಾಗೂ ಅದರ ಮೊಟ್ಟೆಗಳ ಸಂರಕ್ಷಣಾ ತಂಡ ಸಂಶೋಧನೆಗಾಗಿ ಬರ್ತಾರೆ. ತಂಡದ ಮುಖಂಡ ವಿಜಯಕುಮಾರ್ ಜೊತೆ ಹಿತ , ನರ್ತನ , ಫೋಟೋಗ್ರಾಫರ್ ವೈಭವ್ ಗೆ ನಾಗೇಶ್ ಎಂಬುವ ಸಾಥ್ ನೀಡುತ್ತಾರೆ. ಊರ ಹಿರಿಯ ಮುಖಂಡ ವೆಂಕಟಯ್ಯ ಒಬ್ಬ ದೈವಭಕ್ತ , ಹಳ್ಳಿ ಜನರಿಗೂ ಹಾಗೂ ಸರ್ಪ ಹಿಡಿಯಲು ಬಂದ ತಂಡಕ್ಕೂ ಎಚ್ಚರಿಕೆಯನ್ನು ನೀಡುತ್ತಾನೆ.
ಆದರೆ ಸಂಶೋಧನೆ ತಂಡ ಯಾವುದನ್ನು ಲೆಕ್ಕಿಸದೆ, ಸರ್ಪ ಹಾಗೂ ಮೊಟ್ಟೆಗಳು ಇರುವ ಸ್ಥಳ ಹುಡುಕಾಟಕ್ಕಾಗಿ ತಿಮ್ಮನನ್ನು ಹುಡುಕುತ್ತಾರೆ. ಕಷ್ಟದಲ್ಲಿರುವ ತಿಮ್ಮ ಮನೆ ಕಟ್ಟಿಕೊಳ್ಳೋಕೆ , ಗದ್ದೆ ಪಡೆಯೋಕಾಗಿ ಹಣದ ಅವಶ್ಯಕತೆಯಿಂದ ಕಾಳಿಂಗ ಸರ್ಪ ಹಾಗೂ ಮೊಟ್ಟೆಗಳು ಇರುವ ಸ್ಥಳ ತೋರಿಸಲು ಮುಂದಾಗುತ್ತಾನೆ. ನಾಗಬನ ದೇವರ ಆಶೀರ್ವಾದ ಪಡೆಯುತ್ತಾ ದಟ್ಟ ಅರಣ್ಯದಲ್ಲಿ ಹುಡುಕಾಟ ಆರಂಭಿಸುವಾಗ ಎದುರಾಗ ಒಂದಷ್ಟು ರೋಚಕ ತಿರುವುಗಳು ಜೀವನದ ಏರಿಳಿತದ ಜೊತೆ ಜೀವದ ಮೌಲ್ಯದ ಬಗ್ಗೆ ಹೇಗೆ ಅರಿವು ಮೂಡಿಸುತ್ತದೆ ಎಂಬುದನ್ನು ನೀವು ಚಿತ್ರ ನೋಡಿ ತಿಳಿಯಬೇಕಿದೆ.
ಈ ಚಿತ್ರದ ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಬಹಳ ಅರ್ಥಪೂರ್ಣವಾಗಿದೆ. ನೈಸರ್ಗಿಕದಿಂದ ಸಿಕ್ಕ ಬಳುವಳಿಯನ್ನ ಪ್ರಾಣಿ , ಪಕ್ಷಿಗಳಾಗಲಿ , ಮನುಷ್ಯರಾಗಲ್ಲಿ ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವಂತಾಗಬೇಕು. ಪ್ರಕೃತಿಯ ವಿರುದ್ಧವಾಗಿ ಹೋಗಬಾರದು, ಅವರವರ ಸ್ವತಂತ್ರ ಬದುಕಿಗೆ ಅಡ್ಡಿ ಬರಬಾರದು. ದೈವದ ಕೊಡುಗೆಯನ್ನು ಸ್ವೀಕರಿಸುತ್ತಾ ಸಾಗುವುದು ಸರಿ ಎನ್ನುವಂತೆ ಹೇಳಿದ್ದಾರೆ. ಆದರೆ ಚಿತ್ರಕಥೆ ಇನ್ನಷ್ಟು ಬಿಗಿ ಮಾಡಬಹುದಿತ್ತು , ಹಾವು ಹುಡುಕುವ ದಾರಿಯೇ ದೂರ ಸಾಗಿ ಹೋದಂತಿದೆ.
ಇಂತಹ ಚಿತ್ರ ನಿರ್ಮಿಸಿರುವ ನಿರ್ಮಾಪಕರ ಆಲೋಚನೆಯೂ ಮೆಚ್ಚುವಂತದ್ದು , ಇಡೀ ಚಿತ್ರದ ಹೈಲೈಟ್ ಅಂದರೆ ಛಾಯಾಗ್ರಾಹಕರ ಕೈಚಳಕ ಅದ್ಭುತವಾಗಿ ಮೂಡಿ ಬಂದಿದೆ. ಅದೇ ರೀತಿ ಸಂಗೀತ , ಸಂಕಲನ ಕೂಡ ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದೆ. ಅದೇ ರೀತಿ ತಿಮ್ಮನ ಪಾತ್ರಧಾರಿ ಕೇಶವ್ ಗುತ್ತಳಿಕೆ ಇಡೀ ಚಿತ್ರದ ಕೇಂದ್ರ ಬಿಂದುವಾಗಿ ಗಮನ ಸೆಳೆಯುತ್ತಾರೆ. ಹೆಂಡತಿ ಪಾತ್ರದಲ್ಲಿ ಪ್ರಗತಿ ಪ್ರಭು ಸಿಕ್ಕ ಅವಕಾಶಕ್ಕ ಜೀವ ತುಂಬಿದ್ದಾರೆ. ತಿಮ್ಮನ ಮಗನ ಪಾತ್ರ ಮಾಡಿರುವ ಪ್ರತಿಭೆಯ ಮಾತು ನಡೆ-ನುಡಿ ಸೊಗಸಾಗಿದೆ. ಸಂಶೋಧನೆಯ ಅಧಿಕಾರಿ ಸುಚೇಂದ್ರ ಪ್ರಸಾದ್ ಹಾಗೂ ಅವರ ತಂಡದ ಆಶಿಕಾ , ರಘು ರಾಮನಕೊಪ್ಪ ವರ್ಚಸ್ಸು ಚಿತ್ರದ ಓಟಕ್ಕೆ ಪೂರಕವಾಗಿದೆ. ಉಳಿದಂತೆ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಸಾಥ್ ನೀಡಿದ್ದು, ಒಮ್ಮೆ ಚಿತ್ರ ನೋಡುವಂತಿದೆ.