ಇದೇ 20ರಂದು “ಕಾಲವೇ ಮೋಸಗಾರ” ರಿಲೀಸ್.. ಟ್ರೈಲರ್, ಪ್ರೋಮೋ ಸಾಂಗ್ ಗೆ ನಟ ವಸಿಷ್ಠ ಸಿಂಹ ಸಾಥ್.
ಸ್ಯಾಂಡಲ್ ವುಡ್ ಗೆ ಯುವ ಪ್ರತಿಭೆಗಳ ತಂಡ ಸೇರಿಕೊಂಡು ಒಂದು ಸೈಲೆಂಟ್ ಲವ್ ಸ್ಟೋರಿ ಯಲ್ಲಿ ವೈಲೆಂಟ್ ಅಂಶವನ್ನ ಸೇರಿಸಿಕೊಂಡು “ಕಾಲವೇ ಮೋಸಗಾರ” ಎಂಬ ಚಿತ್ರವನ್ನ ಸಿದ್ದಪಡಿಸಿ , ಈಗ ಚಿತ್ರದ ಟ್ರೈಲರ್ ಹಾಗೂ ಪ್ರೋಮೋ ಸಾಂಗ್ ಬಿಡುಗಡೆ ಕಾರ್ಯಕ್ರಮವನ್ನು ಜಿ.ಟಿ. ಮಾಲ್ ನಲ್ಲಿರುವ ಎಂ.ಎಂ. ಬಿ ಲೆಗಸಿಯಲ್ಲಿ ಆಯೋಜನೆ ಮಾಡಿತು. ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಂಚಿನ ಕಂಠದ ನಟ ವಸಿಷ್ಠ ಸಿಂಹ ಮತ್ತು ಕೆಂಪೇಗೌಡ ಸೇನೆಯ ರಾಜ್ಯಾಧ್ಯಕ್ಷ ರವಿ ಕುಮಾರ್ , ಸೇನೆಯ ಮಹಿಳಾ ಅಧ್ಯಕ್ಷೆ
ಲಕ್ಷ್ಮೀ ರವರು ಆಗಮಿಸಿ ಚಿತ್ರದ ಟ್ರೈಲರ್ ಹಾಗೂ ಪ್ರೊಮೋ ಸಾಂಗ್ ಬಿಡುಗಡೆ ಮಾಡಿದರು. ಹಿರಿಯ ಕಲಾವಿದರಾದ ಬಿರಾದಾರ್, ರಮಾನಂದ್ ಮೈಸೂರ್ ಉಪಸಿತರಿದ್ದು ಚಿತ್ರ ತಂಡಕ್ಕೆ ಶುಭಕೋರಿದರು. ಇದೇ ಸಂದರ್ಭದಲ್ಲಿ ಪರದೆಯ ಮೇಲೆ ಕಲಾವಿದರಾದ ತಾರಾ ಅನುರಾಧ , ಡಾರ್ಲಿಂಗ್ ಕೃಷ್ಣ , ಗರುಡ ರಾಮ್, ಧನಂಜಯ , ವಿನಯ್ ರಾಜ್ ಕುಮಾರ್, ಚಂದನ್ ಶೆಟ್ಟಿ ತಂಡಕ್ಕೆ ಶುಭಕೋರಿದ ವಿಡಿಯೋ ಪ್ರದೇಶಿಸಲಾಯಿತು.
ನಂತರ ನಟ ವಸಿಷ್ಟ ಸಿಂಹ ಮಾತನಾಡುತ್ತಾ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಕ್ಷಮಿಸಿ ಎನ್ನುತ್ತಾ, ನನ್ನ ಗೆಳೆಯ ಹಾಗೂ ನಾಯಕ ನಟ ಭರತ್ ಸಾಗರ್ ಗಾಗಿ ಬಂದೆ. ಯಾಕೆಂದರೆ ನಾವಿಬ್ಬರೂ ಆರಂಭದ ದಿನಗಳಲ್ಲಿ ಮಾಡಲಿಂಗ್ ಕ್ಷೇತ್ರದಲ್ಲಿ ಬೇರ್ ಬಾಡಿ ರಾಂಪ್ ವಾಕ್ ಮಾಡ್ತಿದ್ವಿ. ಸಿನಿಮಾ ಮೇಲಿನ ಅಪಾರ ಪ್ರೀತಿ ನಮ್ಮನ್ನು ಈ ಮಟ್ಟಕ್ಕೆ ತಂದಿದೆ. ಬಹಳಷ್ಟು ಶ್ರಮದ ಮೂಲಕ ಈಗ ನಾಯಕನಾಗಿ ಹೊರ ಬರುತ್ತಿದ್ದಾನೆ. ಗೆಳೆಯ ಭರತ್ ಅಭಿನಯಿಸಿರುವ ಈ ಕಾಲವೇ ಮೋಸಗಾರ ಚಿತ್ರ ಬಿಡುಗಡೆಗೊಂಡು ಯಶಸ್ವಿಯಾಗಲಿ , ನಮ್ಮಂತೆ ಅವನನ್ನು ಬೆಳೆಸಿ ಎಂದು ಕೇಳಿಕೊಂಡಿರು. ಅದೇ ರೀತಿ ಕೆಂಪೇಗೌಡ ಸೇನೆಯ ರಾಜ್ಯಾಧ್ಯಕ್ಷ ರವಿಕುಮಾರ್ ಮಾತನಾಡುತ್ತಾ ನಮ್ಮ ಇಡೀ ಸೇನೆ ಈ ಚಿತ್ರತಂಡಕ್ಕೆ ಬೆಂಬಲವಾಗಿ ನಿಲ್ಲುತ್ತೆ. ಈಗಾಗಲೇ ಚಿತ್ರದ ಪೋಸ್ಟರ್ ಪ್ರಚಾರಕ್ಕೆ ಸಾತ್ ಕೊಟ್ಟಿದ್ದೇವೆ. ನಮ್ಮ 192 ವಾರ್ಡಿನ ಎಲ್ಲಾ ಕಾರ್ಯಕರ್ತರಿಗೂ ಈ ಚಿತ್ರವನ್ನು ಪ್ರೋತ್ಸಾಹಿಸಲು ತಿಳಿಸಿದ್ದೇವೆ ಎಂದರು.
ಈ ಚಿತ್ರದ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಸಂಜಯ್ ಪುರಾಣಿಕ್ ಮಾತನಾಡುತ್ತಾ ಇದು ನನ್ನ ಮೊದಲನೆಯ ಚಿತ್ರ , ನಾನು ನನ್ನ ಇಂಜಿನಿಯರಿಂಗ್ ಮುಗಿಸಿದ ನಂತರ ಸಿನಿಮಾ ಬಗ್ಗೆ ಆಸಕ್ತಿ ಹೆಚ್ಚಾಗಿ ನಾನು ಒಂದು ಸಿನಿಮಾ ನಿರ್ದೇಶನ ಮಾಡಬೇಕೆಂದು ನಿರ್ಧರಿಸಿದೆ. ಹಾಗೆಯೇ ಪೂರ್ವ ತಯಾರಿ ಮಾಡಿಕೊಂಡು ಈ ಒಂದು ಚಿತ್ರವನ್ನು 2019ರಲ್ಲಿ ಸಿದ್ಧಪಡಿಸಿದೆ. ಆಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನನ್ನ ಚಿತ್ರದ ಹಾಡು ಹಾಗೂ ಟ್ರೈಲರ್ ನೋಡಿ ಖುಷಿಪಟ್ಟು ವಿಶ್ ಮಾಡಿದ್ರು , ಅವರು ಇದ್ದಿದ್ರೆ ಈ ಒಂದು ಕಾರ್ಯಕ್ರಮಕ್ಕೆ ಬರ್ತಿದ್ರು ಅನ್ಸುತ್ತೆ. ಆಗ ಕೊರೋನಾ ಕಾರಣ ಮತ್ತು ಒಂದಷ್ಟು ಸಮಸ್ಯೆಗಳಿಂದ ಚಿತ್ರ ಬಿಡುಗಡೆ ಆಗಲಿಲ್ಲ , ಈಗ ನಮ್ಮ ಚಿತ್ರವನ್ನು ಇದೇ 20ರಂದು ಬಿಡುಗಡೆ ಮಾಡುತ್ತಿದ್ದೇವೆ. ಈ ಒಂದು ಚಿತ್ರ ಸ್ಟಾರ್ಟ್ ಟೊ ಎಂಡ್ ಕ್ಯೂರಿಯಾಸಿಟಿ ಮೂಡಿಸುತ್ತಾ ಸಾಗುತ್ತೆ. ಚಿತ್ರದ ಟೈಟಲ್ಲೇ ಹೇಳುವಂತೆ ಟೈಮ್ ಗೆಲ್ಲುತ್ತಾ , ವ್ಯಕ್ತಿ ಗೆಲ್ತಾರಾ ಅನ್ನೋದರ ಜೊತೆಗೆ ಪ್ರೀತಿ , ಸ್ವಾರ್ಥ ಒಂದೇ ಕಡೆ ಇರಬಾರದು ಎಂಬ ವಿಚಾರದವಿದೆ. ಈ ಚಿತ್ರ 4ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ನಮ್ಮ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ ಎಂದರು.
ನಾಯಕ ನಟ ಭಾರತ್ ಸಾಗರ್ ಮಾತನಾಡುತ್ತಾ , ಇದು ನನ್ನ ಮೊದಲ ಚಿತ್ರ. ಮೊದ್ಲು ಮಾಡೆಲಿಂಗ್ ನಲ್ಲಿ ಇದೆ, ರಂಗಶಂಕರದಲ್ಲಿ ಅಭಿನಯಿಸುತ್ತ ಒಳ್ಳೆಯ ಸಂಪರ್ಕ ಬೆಳೆಸಿಕೊಂಡೆ. ತದನಂತರ ಸಣ್ಣ ಸಣ್ಣ ಪಾತ್ರಗಳನ್ನ ಚಿತ್ರದಲ್ಲಿ ಮಾಡುತ್ತಾ ಬಂದೆ. ಈಗ ನಾಯಕನಾಗಿ ಅಭಿನಯಿಸಿದ್ದೇನೆ. ಇದೊಂದು ಲವ್ ಸಬ್ಜೆಕ್ಟ್ ಆಗಿದ್ದು , ಆಕ್ಷನ್, ಲವ್ , ಫೈಟ್, ಎಂಟ್ರಿಟೈನ್ಮೆಂಟ್ ಎಲ್ಲವೂ ಇದೆ. ಈಗಾಗಲೇ ಪ್ರಮೋಷನ್ ಸ್ಟಾರ್ಟ್ ಮಾಡಿದ್ದು , ರಾಜ್ಯಾದ್ಯಂತ 60 ಥಿಯೇಟರ್ ನಲ್ಲಿ ಬಿಡುಗಡೆ ಮಾಡುತ್ತಿದ್ದೇವೆ .ನಮ್ಮ ಚಿತ್ರವನ್ನು ನೋಡಿ ಬೆಂಬಲಿಸಿ ಎಂದರು. ಈ ಚಿತ್ರದ ನಾಯಕಿಯಾಗಿ ಯಶಸ್ವಿನಿ ರವೀಂದ್ರ ನಟಿಸಿದ್ದಾರೆ.
ಈ ಚಿತ್ರದಲ್ಲಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಹಾಸ್ಯ ನಟ ವಿಜಯ್ ಚೆಂಡೂರ್ ಮಾತನಾಡುತ್ತಾ ನಾನು ಈ ಹಿಂದೆ ಮಾಡಿರದಂತಹ ವಿಭಿನ್ನ ಪಾತ್ರ ತಂಡ ನೀಡಿದೆ. ನಮ್ಮ ನಿರ್ದೇಶಕರ ಕೆಲಸ ನನಗೆ ಬಹಳ ಇಷ್ಟವಾಯಿತು. ಚಿತ್ರ ಬಹಳ ಚೆನ್ನಾಗಿ ಬಂದಿದೆ. ಇದೇ ಜೂನ್ 20ರಂದು ತೆರೆಗೆ ಬರ್ತಿದೆ , ನಿಮ್ಮೆಲ್ಲರ ಪ್ರೀತಿ , ಪ್ರೋತ್ಸಾಹ ನಮ್ಮ ತಂಡದ ಮೇಲೆ ಇರಲಿ ಎಂದರು. ಈ ಚಿತ್ರವು ರಜತ್ ದುರ್ಗೋಜಿ ಸಲಂಕೆ ನಿರ್ಮಾಣದಲ್ಲಿ ಬಿಡುಗಡೆ ಆಗುತ್ತಿದ್ದು , ಈ ಚಿತ್ರಕ್ಕೆ ಕೆ .ಲೋಕೇಶ್ ಸಂಗೀತ , ಕ್ರಾಂತಿ ಕುಮಾರ್ ಕೊಂಡೇಲಾ ಛಾಯಾಗ್ರಹಣ , ರಿತ್ವಿಕ್ ಸಂಕಲನವಿದೆ.