Cini NewsSandalwood

ಯುವ ಪ್ರತಿಭೆಗಳ “ಉಸಿರು” ಚಿತ್ರದ ಟೈಟಲ್ ಬಿಡುಗಡೆ

ಆರ್‌.ಎಸ್‌.ಪಿ. ಪ್ರೊಡಕ್ಷನ್ಸ್ ಮೂಲಕ ಲಕ್ಷ್ಮಿ ಹರೀಶ್ ಅವರು ನಿರ್ಮಿಸುತ್ತಿರುವ ಉಸಿರು ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ನಟ ತಿಲಕ್, ಪ್ರಿಯಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ಪ್ರಭಾಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಆರ್‌ಎಸ್‌ಪಿ ಗ್ರೂಪ್ ಆಫ್ ಕಂಪನೀಸ್ ನಡೆಸುತ್ತಿರುವ, ಲಕ್ಷ್ಮಿ ಹರೀಶ್ ಅವರು ನೂತನ ಪ್ರೊಡಕ್ಷನ್ ಹೌಸ್ ಆರಂಭಿಸಿ ಆ ಮೂಲಕ ಉಸಿರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭಿಸುತ್ತಿರುವ ಈ ಚಿತ್ರದ ಪೋಸ್ಟರ್ ಅನಾವರಣ ಹಾಗೂ ಪತ್ರಿಕಾಗೋಷ್ಠಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು, ಒಬ್ಬ ಬೇಜವಾಬ್ದಾರಿ ಪೊಲೀಸ್ ಅಧಿಕಾರಿ, ತನ್ನ ಹೆಂಡತಿಗೆ ಅನಾಮಿಕ ವ್ಯಕ್ತಿಯಿಂದ ಪ್ರಾಣಕ್ಕೆ ಆಪತ್ತು ಬಂದಾಗ ಆತ ಪತ್ನಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ, ತನ್ನ ತಾಯಿಯನ್ನು ಕೊಂದವರ ಮೇಲೆ ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಾನೆ ಎಂಬುದನ್ನು ಉಸಿರು ಚಿತ್ರದ ಮೂಲಕ ನಿರ್ದೇಶಕ ಪ್ರಭಾಕರ್ ಅವರು ಹೇಳಹೊರಟಿದ್ದಾರೆ, ಸುಮಾರು 6 ತಿಂಗಳವರೆಗೆ ವರ್ಕ್ ಷಾಪ್ ನಡೆಸಿ ತಯಾರಾಗಿರುವ ಚಿತ್ರತಂಡ ಇದೇ ತಿಂಗಳ 17ರಿಂದ ಮಡಿಕೇರಿಯಲ್ಲಿ ಚಿತ್ರದ ಮುಹೂರ್ತ ನಡೆಸಿ ಶೂಟಿಂಗ್ ಆರಂಭಿಸಲಿದೆ.

ಈ ಸಂದರ್ಭದಲ್ಲಿ ನಿರ್ಮಾಪಕಿ ಲಕ್ಷ್ಮೀ ಹರೀಶ್ ಮಾತನಾಡುತ್ತ ನಮ್ಮ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿರುವ ಪ್ರಥಮ ಚಿತ್ರವಿದು. ನಿರ್ದೇಶಕ ಪ್ರಭಾಕರ್ ನಮಗೆ ಬಹಳ ದಿನಗಳ ಪರಿಚಯ. ಅವರು ಈ ಥರ ಒಂದು ಕಥೆಯಿದೆ ಎಂದು ಹೇಳಿದ ಸ್ಟೋರಿ ಲೈನ್ ನಮಗೆ ಇಷ್ಟವಾಯ್ತು, ಹಾಗಾಗಿ ಚಿತ್ರ ನಿರ್ಮಾಣಕ್ಕೆ ಮುಂದಾದೆವು. ತಿಲಕ್ ಚಿತ್ರದ ನಾಯಕನಾಗಿ ನಟಿಸುತ್ತಿದ್ದು, ಬೇರೆ ಶೂಟಿಂಗ್‌ನಲ್ಲಿರುವ ಕಾರಣ ಇವತ್ತು ಬಂದಿಲ್ಲ ಎಂದರು.

ನಂತರ ನಿರ್ದೇಶಕ ಪ್ರಭಾಕರ್ ಮಾತನಾಡಿ ನನ್ನ 12 ವರ್ಷಗಳ ಕನಸೀಗ ನನಸಾಗುತ್ತಿದೆ. ಈಗಾಗಲೇ ಒಂದೆರಡು ತಮಿಳು ಸಿನಿಮಾಗಳಿಗೆ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದು, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗುತ್ತಿದ್ದೇನೆ. ಇದೊಂದು ಸೈಕೋ ಥ್ರಿಲ್ಲರ್ ಕಥಾಹಂದರ ಇರುವ ಚಿತ್ರವಾಗಿದ್ದು, “ಉಸಿರು” ಟೈಟಲ್ ನಮ್ಮ ಕಥೆಗೆ ಸೂಕ್ತವಾಗುತ್ತೆ ಅಂತ ಇಡಲಾಗಿದೆ. ಒಂದೊಳ್ಳೇ ಟೀಮ್ ಕಟ್ಟಿಕೊಂಡು ಈ ಸಿನಿಮಾ ಮಾಡುತ್ತಿದ್ದೇವೆ ತಿಲಕ್ ಒಬ್ಬ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ, ನಾಯಕಿಯಾಗಿ ಪ್ರಿಯಾ ಹೆಗ್ಡೆ ಉಳಿದಂತೆ ರಘು ರಮಣಕೊಪ್ಪ, ರಂಗಾಯಣ ರಘು ನಟಿಸುತ್ತಿದ್ದಾರೆ, ಮುಖ್ಯವಾಗಿ 9 ಪಾತ್ರಗಳ ಮೇಲೆ ಚಿತ್ರದ ಕಥೆ ಸಾಗುತ್ತದೆ. ಮೊದಲ ಹಂತದಲ್ಲಿ ಮಡಿಕೇರಿ ಸುತ್ತಮುತ್ತ 15 ದಿನಗಳ ಚಿತ್ರೀಕರಣ ನಡೆಸಿ, ನಂತರ ಬೆಂಗಳೂರಲ್ಲಿ ಮುಂದುವೆಸುತ್ತೇವೆ ಎಂದು ಹೇಳಿದರು.

ಸಂಗೀತ ನಿರ್ದೇಶಕ ಆರ್‌ಎಸ್‌ಜಿ ನಾರಾಯಣ ಮಾತನಾಡುತ್ತ ನನ್ನ ಸಿನಿ ಜರ್ನಿಯ 25ನೇ ವರ್ಷವಿದು, ಕಥೆಯಲ್ಲಿರುವ ಸನ್ನಿವೇಶಗಳು ನನಗೆ ತುಂಬಾ ಇಷ್ಟವಾಯ್ತು. ಬೇರೆ ಬೇರೆ ಜಾನರ್‌ನ 4 ಹಾಡುಗಳನ್ನು ಕಂಪೋಜ್ ಮಾಡಿದ್ದು, ತುಂಬಾ ಚೆನ್ನಾಗಿ ಮೂಡಿಬಂದಿವೆ, ಅಭಿ ಅರ್ಥಗರ್ಭಿತವಾದ ಲಿರಿಕ್ ಬರೆದಿದ್ದಾರೆ ಎಂದರು. ಚಿತ್ರದ ನಾಯಕಿ ಪ್ರಿಯಾ ಹೆಗ್ಡೆ ಮಾತನಾಡಿ ಚಿತ್ರದ ಕಾನ್ಸೆಪ್ಟ್, ಟೈಟಲ್ ಎರಡೂ ಚೆನ್ನಾಗಿದೆ, ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಎರಡು ಶೇಡ್ಸ್ ಇದೆ. ಈಗಾಗಲೇ ಕನ್ನಡದ ಜಿಲ್ಕಾ, ಕುದ್ರು ಅಲ್ಲದೆ ಒಂದು ತೆಲುಗು ಚಿತ್ರದಲ್ಲೂ ಸಹ ಅಭಿನಯಿಸಿದ್ದೇನೆ ಎಂದು ಹೇಳಿದರು. ಮತ್ತೊಬ್ಬ ನಟ ಸಂತೋಷ್ ಮಾತನಾಡಿ ನಾನು ರಂಗಭೂಮಿಯಿಂದ ಬಂದವನು, ಇದು ನನ್ನ ಮೊದಲ ಚಿತ್ರವಾಗಿದ್ದು, ಪಾತ್ರ ತುಂಬಾ ಎಮೋಷನಲ್ ಪಾತ್ರವಿದೆ ಎಂದರು. ನಟಿ ಅಪೂರ್ವ ಮಾತನಾಡಿ ನಾನು ಭರತನಾಟ್ಯ ಕಲಾವಿದೆ, ರಂಗಭೂಮಿ ನಟಿ, ನಿರ್ದೇಶಕಿ ಕೂಡ ಎಂದು ಹೇಳಿದರು, ಮತ್ತೊಬ್ಬನಟ ಅರುಣ್, ಸಾಹಿತಿ, ಡೈಲಾಗ್ ರೈಟರ್ ಭೈರವರಾಮ(ಅಭಿ), ಸಂಕಲನಕಾರ ಹರೀಶ್ ಕೊಮ್ಮೆ ಎಲ್ಲರೂ ಚಿತ್ರದ ಕುರಿತಂತೆ ಮಾತನಾಡಿದರು.

error: Content is protected !!