Cini NewsSandalwood

ಕಿಚ್ಚ ಸುದೀಪ್ ಅವರಿಂದ ಅನಾವರಣವಾಯಿತು “ಉಸಿರೇ ಉಸಿರೇ” ಚಿತ್ರದ ಟ್ರೇಲರ್

ಎನ್ ಗೊಂಬೆ ಲಾಂಛನದಲ್ಲಿ ಪ್ರದೀಪ್ ಯಾದವ್ ನಿರ್ಮಾಣದ, ಸಿ.ಎಂ.ವಿಜಯ್ ನಿರ್ದೇಶನದ ಹಾಗೂ ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ನಾಯಕನಾಗಿ ನಟಿಸಿರುವ “ಉಸಿರೇ ಉಸಿರೇ” ಚಿತ್ರದ ಟ್ರೇಲರ್ ಇತ್ತೀಚಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಂದ ಅನಾವರಣವಾಯಿತು.

ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಕಿಚ್ಚ ಸುದೀಪ್, “ಉಸಿರೇ ಉಸಿರೇ” ನನ್ನ ಗೆಳೆಯ ರಾಜೀವ್ ನಾಯಕನಾಗಿ ನಟಿಸಿರುವ ಚಿತ್ರ. ಟ್ರೇಲರ್ ಚೆನ್ನಾಗಿದೆ. ದೇವರಾಜ್, ತಾರಾ, ಬ್ರಹ್ಮಾನಂದಂ, ಅಲಿ ಮುಂತಾದ ಹಿರಿಯ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ‌. ನಾನು ಕೂಡ ಈ ಚಿತ್ರದಲ್ಲಿ ನಾನು ಕೂಡ ಅಭಿನಯಿಸಿದ್ದೇನೆ. ನಿರ್ಮಾಪಕ ಪ್ರದೀಪ್ ಯಾದವ್, ನಿರ್ದೇಶಕ ಸಿ.ಎಂ.ವಿಜಯ್ ಹಾಗೂ ನಾಯಕ ರಾಜೀವ್ ಸಾಕಷ್ಟು ಶ್ರಮಪಟ್ಟು ಉತ್ತಮವಾದ ಚಿತ್ರ ಮಾಡಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರವನ್ನು ತಾವೆಲ್ಲ ನೋಡಿ ಪ್ರೋತ್ಸಾಹಿಸಿ ಎಂದರು.

ನಮ್ಮ ಚಿತ್ರದ ಹೆಸರು “ಉಸಿರೇ ಉಸಿರೇ”. ನನ್ನ ಉಸಿರು ಸುದೀಪ್ ಸರ್. ಅವರ ಕಂಡರೆ ನನಗೆ ಅಷ್ಟು ಪ್ರೀತಿ. ಅವರು ನನಗೆ ನೀಡುತ್ತಿರುವ ಸಹಕಾರಕ್ಕೆ ನಾನು ಆಬಾರಿ. ಇಡೀ ಚಿತ್ರತಂಡದ ಶ್ರಮದಿಂದ ಒಂದೊಳ್ಳೆ ಚಿತ್ರ ನಿರ್ಮಾಣವಾಗಿದೆ. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎನ್ನುತ್ತಾರೆ ನಾಯಕ ರಾಜೀವ್. ನನಗೆ ಬಾಲಿವುಡ್ ನಲ್ಲಿ ಶಾರುಖ್ ಖಾನ್‌ ಪರಿಚಯ. ಸ್ಯಾಂಡಲ್ ವುಡ್ ನಲ್ಲಿ ಕಿಚ್ಚ ಸುದೀಪ್ ಪರಿಚಯ ಎಂದು ಮಾತನಾಡಿದ ಹಿರಿಯ ನಟ ಅಲಿ, ಈ ಚಿತ್ರದಲ್ಲಿ ನನ್ನ, ಬ್ರಹ್ಮಾನಂದಂ, ಸಾಧುಕೋಕಿಲ ಹಾಗೂ ಮಂಜು ಪಾವಗಡ ಅವರ ಕಾಂಬಿನೇಶನ್ ನಲ್ಲಿ ಹಾಸ್ಯ ಸನಿವೇಶಗಳು ಚೆನ್ನಾಗಿ ಬಂದಿದೆ ಎಂದು ತಿಳಿಸಿದರು.

ನಮ್ಮ ಚಿತ್ರದ ಆರಂಭದ ದಿನದಿಂದಲೂ ಸುದೀಪ್ ಅವರು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ವಿಶೇಷ ಪಾತ್ರದಲ್ಲಿ ಅಭಿನಯ ಕೂಡ ಮಾಡಿದ್ದಾರೆ. ಅವರಿಗೆ ಧನ್ಯವಾದ. ಮೊದಲ ಬಾರಿಗೆ ಕನ್ನಡದಲ್ಲಿ ಖ್ಯಾತ ನಟರಾದ ಬ್ರಹ್ಮಾನಂದಂ ಹಾಗೂ ಅಲಿ ಅವರು ಒಟ್ಟಾಗಿ ಅಭಿನಯಿಸಿದ್ದಾರೆ. ರಾಜೀವ್, ಶ್ರೀಜಿತ ಘೋಶ್, ಡೈನಾಮಿಕ್ ಸ್ಟಾರ್ ದೇವರಾಜ್, ತಾರಾ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ಮಂಜು ಪಾವಗಡ, ಶೈನಿಂಗ್ ಸೀತರಾಮ್ ಮುಂತಾದವರು ನಮ್ಮ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ತಿಳಿಸುವುದಾಗಿ ನಿರ್ಮಾಪಕ ಪ್ರದೀಪ್ ಯಾದವ್ ಹೇಳಿದರು.

ಸುದೀಪ್ ಸರ್ ಅವರ‌ ಮುಂದೆ ನನಗೆ ಮಾತೇ ಬರುತ್ತಿಲ್ಲ. ಇಡೀ ತಂಡದ ಸಹಕಾರದಿಂದ “ಉಸಿರೇ ಉಸಿರೇ” ಉತ್ತಮವಾಗಿ ಮೂಡಿಬಂದಿದೆ ಎಂದರು ನಿರ್ದೇಶಕ ಸಿ.ಎಂ.ವಿಜಯ್. ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ ಎಂದರು ನಾಯಕಿ ಶ್ರೀಜಿತ ಘೋಶ್. ಓರಾಯನ್ ಮಾಲ್ ನ ಸುಂದರ ಹೊರಾಂಗಣದಲ್ಲಿ ಜಗಮಗಿಸುವ ವೇದಿಕೆಯಲ್ಲಿ ನಡೆದ ವರ್ಣರಂಜಿತ ಈ ಸಮಾರಂಭಕ್ಕೆ ಸಾಕಷ್ಟು ಸಂಖ್ಯೆಯ ಗಣ್ಯರು ಹಾಗೂ ಅಭಿಮಾನಿಗಳು ಸಾಕ್ಷಿಯಾದರು.

error: Content is protected !!