ಇದೇ 16ರಂದು “ಟಕಿಲಾ” ಎಂಟ್ರಿ… ಟ್ರೈಲರ್ ಭರ್ಜರಿ ಸದ್ದು.
ಶ್ರೀ ಸಿದ್ಧಿವಿನಾಯಕ ಫಿಲಂಸ್ ಲಾಂಛನದಲ್ಲಿ ಮರಡಿಹಳ್ಳಿ ನಾಗಚಂದ್ರ ಅವರ ನಿರ್ಮಾಣದ ಚಿತ್ರ ಟಕೀಲಾ, ಮೇ ೧೬ರಂದು ರಾಜ್ಯಾದ್ಯಂತ ನೂರೈವತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರೆವೇರಿತು.
ಉದ್ಯಮಿ ಸಂಜಯಗೌಡ್ರು ಹಾಗೂ ನಾಯಕನ ತಂದೆ ಕೀರ್ತಿರಾಜ್ ಸೇರಿ ಟಕಿಲಾ ಸಿನಿಮಾ ಟ್ರೈಲರನ್ನು ಬಕಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು, ಪ್ರವೀಣ್ ನಾಯಕ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಧರ್ಮ ಕೀರ್ತಿರಾಜ್, ನಿಖಿತಾಸ್ವಾಮಿ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಮನುಷ್ಯ ಯಾವುದಾದರೂ ಒಂದು ಚಟಕ್ಕೆ ಅಂಟಿಕೊಂಡು ಅತಿಯಾದಾಗ ಅದರ ಪರಿಣಾಮ ಏನೆಲ್ಲ ಆಗಬಹುದು ಎಂಬುದನ್ನು ನಿರ್ದೇಶಕರು ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ, ಮಾದಕ ವ್ಯಸನದ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳೋ ಯುವಕ ಯುವತಿಯರಿಗೆ ಟಕಿಲಾ ಚಿತ್ರದಲ್ಲಿ ಒಂದು ಉತ್ತಮ ಸಂದೇಶವಿದೆ, ಚಿತ್ರದ ೨ ಹಾಡುಗಳಿಗೆ ರೇಣುಕುಮಾರ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ನಿರ್ದೇಶಕ ಪ್ರವೀಣ್ ನಾಯಕ್ ಮಾತನಾಡುತ್ತ ಹುಟ್ಟಿದ ಮೇಲೆ ಜೀವನ ಅನ್ನೋದು ಇದ್ದೇ ಇರುತ್ತದೆ, ಇದರಲ್ಲಿ ಸಿಹಿ ಒಂದೇ ಇರಲ್ಲ, ಹುಳಿ, ಕಹಿ, ಖಾರ ಹೀಗೆ ಎಲ್ಲವೂ ಬಂದು ಹೋಗುತ್ತೆ, ಒಬ್ಬ ಶ್ರೀಮಂತ ಯುವಕ, ಆತನನ್ನು ಅಗಾಧವಾಗಿ ಪ್ರೀತಿಸುವ ಹೆಂಡತಿ, ಅಂಥವನ ಲೈಫಲ್ಲಿ ಬಿರುಗಾಳಿ ಬೀಸಿದಾಗ, ಅದು ಅನಾಹುತ ಮಾಡದಂತೆ ಆತ ಹೇಗೆ ನೋಡಿಕೊಂಡ ಅನ್ನೋದನ್ನು ನಾಯಕನ ಪಾತ್ರದ ಮೂಲಕ ತೋರಿಸಿದ್ದೇವೆ, ಜೀವನದಲ್ಲಿ ಹೂವಿನ ಹಾದಿ, ಮುಳ್ಳಿನ ಹಾದಿ ಎರಡೂ ಇದ್ದು, ಆದರೆ ಆಯ್ಕೆಮಾತ್ರ ನಿಮ್ಮದಾಗಿರುತ್ತದೆ, ಚಿತ್ರ ನೋಡುವಾಗ ನಮ್ಮ ಸುತ್ತ ಎಲ್ಲೋ ನಡೆದಿರಬಹುದಾದ ಕಥೆ ಅನಿಸುತ್ತದೆ. ರೊಮ್ಯಾನ್ಸ್, ಆಕ್ಷನ್, ಮರ್ಡರ್ ಮಿಸ್ಟ್ರಿ, ಹಾರರ್ ಹೀಗೆ ನವರಸಗಳ ಮಿಶ್ರಣವೇ ಟಕಿಲಾ, ಸಿನಿಮಾ ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಹೇಳಿದರು.
ನಾಯಕನಟ ಧರ್ಮ ಕೀರ್ತಿರಾಜ್ ಮಾತನಾಡುತ್ತ ಚಿತ್ರದಲ್ಲಿ ನಾನೊಬ್ಬ ಬ್ಯುಸಿನೆಸ್ಮ್ಯಾನ್ ಆಗಿ ಕಾಣಿಸಿಕೊಂಡಿದ್ದೇನೆ, ನಿರ್ದೇಶಕರು ಒಂದು ಚಿತ್ರದ ಕಥೆಗೆ ಏನು ಬೇಕೋ ಅದನ್ನೆಲ್ಲ ಕೊಟ್ಟಿದ್ದಾರೆ, ಗಂಡ ಹೆಂಡತಿ ಸಂಬಂಧ ಹೇಗಿರಬೇಕು, ಲೈಫಲ್ಲಿ ಯಾವುದೇ ಆದರೂ ಅತಿಯಾಗಬಾರದು, ಹಾಗಾದಾಗ ಏನಾಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಪರಿಣಾಮಕಾರಿಯಾಗಿ ತೋರಿಸಲಾಗಿದೆ ಎಂದರು. ವೇದಿಕೆಯಲ್ಲಿ ಸಹ ನಿರ್ಮಾಪಕರಾದ ಶಂಕರ ರಾಮರೆಡ್ಡಿ, ಚನ್ನತಿಮ್ಮಯ್ಯ, ಛಾಯಾಗ್ರಾಹಕ ಪಿ.ಕೆ.ಹೆಚ್. ದಾಸ್, ಸಂಗೀತ ನಿರ್ದೇಶಕ ಟಾಪ್ಸ್ಟಾರ್ ರೇಣು ಹಾಗೂ ಇತರರು ಉಪಸ್ಥತರಿದ್ದರು.