Cini NewsTollywood

ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ ಇನ್ನಿಲ್ಲ.

ರಾಮೋಜಿ ಸಮೂಹ ಸಂಸ್ಥೆಗಳ ಮುಖ್ಯಸ್ಥರು ಚೆರುಕುರಿ ರಾಮೋಜಿ ರಾವ್ (87) ವಿಧಿವಶರಾಗಿದ್ದಾರೆ. ಹೈದರಾಬಾದ್‌ ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವರು ಶನಿವಾರ ಮುಂಜಾನೆ ನಿಧನ ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು , ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ತೀವ್ರ ಅಸ್ವಸ್ಥಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿಸಿತ್ತಾದರೂ ಫಲಕಾರಿಯಾಗದೆ ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ.

ಬಹಳಷ್ಟು ಕನಸುಗಳನ್ನು ಹೊತ್ತುಕೊಂಡು ಮಾಧ್ಯಮ ಲೋಕ ಹಾಗೂ ಚಿತ್ರಂಗಕ್ಕೆ ಬಂದಂತ ಪ್ರತಿಭಾವಂತರಿಗೆ ಅನ್ನದಾತರಾದಂತಹ ರಾಮೋಜಿ ರಾವ್ ಅಗಲಿಕೆ ಲಕ್ಷಾಂತರ ಜನಕ್ಕೆ ನೋವುಂಟು ಮಾಡಿದೆ. ಈ ದಿಗ್ಗಜರ ಅಗಲಿಕೆಯು ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಇವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನ ಮಂತ್ರಿ ಸೇರಿದಂತೆ ರಾಜಕೀಯದ ಗಣ್ಯರು , ಚಿತ್ರರಂಗದ ಗಣ್ಯರು , ಸೆಲೆಬ್ರಿಟಿಗಳು ಹಾಗೂ ಮಾಧ್ಯಮ ಮಿತ್ರರು ಸಂತಾಪವನ್ನು ಸೂಚಿಸಿದ್ದಾರೆ. ಇಂದು ರಾಮೋಜಿ ರಾವ್‌ ಅವರ ಅಂತಿಮ ದರ್ಶನ ಪಡೆಯಲು ಹಲವು ಮುಖಂಡರು , ಅಭಿಮಾನಿಗಳು ಅವರ ನಿವಾಸಕ್ಕೆ ಆಗಮಿಸುತ್ತಿದ್ದಾರೆ.

ಬಹಳ ಉತ್ಸಾಹಿ ವ್ಯಕ್ತಿತ್ವದ ರಾಮೋಜಿ ರಾವ್ ರವರು ಬಹಳಷ್ಟು ಕನಸನ್ನ ಕಂಡಿದ್ದು , ಅದನ್ನು ನನಸು ಮಾಡಿಕೊಳ್ಳುವುದರಲ್ಲಿ ಯಶಸ್ವಿಯಾದವರು. ರಾಮೋಜಿ ಸಂಸ್ಥೆಯನ್ನ ಸ್ಥಾಪಿಸಿ ಅಂತರಾಷ್ಟ್ರೀಯ ಸೇರಿದಂತೆ ಭಾರತೀಯ ಚಿತ್ರೋದ್ಯಮ ಒಮ್ಮೆ ರಾಮೋಜಿ ಫಿಲಂ ಸಿಟಿ ಕಡೆ ತಿರುಗಿ ನೋಡುವಂತೆ ಮಾಡಿದಂತಹ ಮಹಾನ್ ವ್ಯಕ್ತಿ. ಆರಂಭದಲ್ಲಿ ಪ್ರಿಯಾ ಉಪ್ಪಿನಕಾಯಿ ಪ್ರಾಡಕ್ಟ್ , ಈ ನಾಡು ಪತ್ರಿಕೆ, ಮಾರ್ಗದರ್ಶಿ ಚಿಟ್ ಫಂಡ್ ಸಂಸ್ಥೆಗಳಿಗೆ ಜೀವ ಕೊಟ್ಟು , ತದನಂತರ ಈನಾಡು ಟಿವಿ ಚಾನಲ್ ಅನ್ನ ಆರಂಭಿಸಿ ರಿಸರ್ವ್ ಬ್ಯಾಂಕ್ ನೋಟ್ನಲ್ಲಿ ಇರುವ ಎಲ್ಲಾ ಭಾಷೆಯ ಚಾನಲ್ ಅನ್ನು ಮಾಡುವ ಉದ್ದೇಶದಿಂದ ಹಂತ ಹಂತವಾಗಿ ಕನ್ನಡ , ತಮಿಳು , ಹಿಂದಿ , ಉರ್ದು , ಮರಾಠಿ ಸೇರಿದಂತೆ ಹಲವು ಭಾಷೆಯ ಚಾನೆಲ್ ಅನ್ನು ಕೂಡ ಆರಂಭಿಸಿ ಆಸಕ್ತ ಪ್ರತಿಭೆಗಳಿಗೆ ಅವಕಾಶವನ್ನು ನೀಡುವುದರ ಮೂಲಕ ಯಶಸ್ವಿಯಾದರು.

ಸಿನಿಮಾ ಚಿತ್ರೀಕರಣಕ್ಕಾಗಿ ಸ್ಥಳಗಳನ್ನು ಹುಡುಕುವ ಬದಲು ಒಂದೇ ಸ್ಥಳದಲ್ಲಿ ಚಿತ್ರೀಕರಣ ನಡೆಸುವ ಉದ್ದೇಶದಿಂದ ರಾಮೋಜಿ ಫಿಲಂ ಸಿಟಿಯನ್ನ ನಿರ್ಮಿಸಿ ಬಹುತೇಕ ನಿರ್ಮಾಪಕರಿಗೆ ಚಿತ್ರೀಕರಣಕ್ಕೆ ಅನುಕೂಲ ವನ್ನು ಕೂಡ ಮಾಡಿಕೊಟ್ಟಂತ ಮಹಾನ್ ವ್ಯಕ್ತಿ ರಾಮಾಜೀರಾವ್. ಸುಮಾರು ನೂರಾರು ಸಿನಿಮಾಗಳ ನಿರ್ಮಾಪಕರಾಗಿದ್ದ ಅವರು, 4 ಸೌತ್ ಫಿಲ್ಮ್ ಫೇರ್, 5 ರಾಜ್ಯ ಪ್ರಶಸ್ತಿ ಹಾಗೂ ಒಂದು ನ್ಯಾಷನಲ್ ಅವಾರ್ಡ್ ಪಡೆದಿದ್ದರು.

ರಾಮೋಜಿ ರಾವ್ ಕನ್ನಡದಲ್ಲೂ ಸಿನಿಮಾಗಳಿಗೂ ಸಹ ಬಂಡವಾಳ ಹೂಡಿದ್ದರು. ಉಷಾ ಕಿರಣ್ ಮೂವೀಸ್ ಮೂಲಕ ಪ್ರಜ್ವಲ್ ದೇವರಾಜ್ ಚೊಚ್ಚಲ ನಟನೆಯ ಸಿನಿಮಾ ಸಿಕ್ಸರ್ ಸೇರಿದಂತೆ ಅನಿರುದ್ ಅಭಿನಯದ ಚಿತ್ರ , ವಿಜಯ ರಾಘವೇಂದ್ರ ಹಾಗೂ ರಾಧಿಕಾ ನಟನೆಯ ನಿನಗಾಗಿ, ಊಲಾ ಲ , ಸವಾರಿ ಮುಂತಾದ ಸಿನಿಮಾಗಳಿಗೆ ನಿರ್ಮಾಪಕರಾಗಿದ್ದರು. ಬಹಳಷ್ಟು ಮಂದಿಗೆ ಅನ್ನದಾತರದಂತಹ ಈ ಹಿರಿಯ ದಿಗ್ಗಜ ರಾಮೋಜಿ ರಾವ್ ಅಗಲಿಕೆ ತುಂಬಲಾರದ ನಷ್ಟವಾಗಿದ್ದು , ಅವರ ಕುಟುಂಬದವರಿಗೂ ಈ ನೋವನ್ನು ಬರಿಸುವ ಶಕ್ತಿ ಸಿಗುವಂತಾಗಲಿ.

error: Content is protected !!