ಯುವ ಪ್ರತಿಭೆಗಳ “ಲೈಫ್ ಎಲ್ಲಿಂದ್ ಎಲ್ಲಿಗೆ” ಚಿತ್ರದ ಹಾಡುಗಳ ಬಿಡುಗಡೆ.
ಜೀವನವೇ ಒಂದು ಪಯಣ , ನಾವು ಹೇಗೆ ಎಲ್ಲಿಂದ ನಮ್ಮ ಪಯಣ ಆರಂಭಿಸುತ್ತೇವೆ ಯಾವ ದಡ ಸೇರುತ್ತೇವೆ ಅನ್ನೋದೇ ನಿಗೂಢ. ಅಂತದ್ದೇ ಒಂದು ವಿಚಾರದೊಂದಿಗೆ ಸ್ನೇಹ , ಸಂಬಂಧದ ಸುತ್ತ ಕಥೆ ಹೆಣೆಯಲಾದ ‘ಲೈಫ್ ಎಲ್ಲಿಂದ ಎಲ್ಲಿಗೆ’ ಎಂಬ ಚಿತ್ರವೀಗ ಬಿಡುಗಡೆಯ ಹಾದಿಯಲ್ಲಿದೆ. ಮೂವರು ಪ್ರಾಣ ಸ್ನೇಹಿತರ ಲೈಫ್ ಜರ್ನಿ ಕಥೆ ಇದಾಗಿದ್ದು, ಅವರೆಲ್ಲ ಸೇರಿ ಒಂದು ಟ್ರಿಪ್ ಹೋದಾಗ ಏನಾಗುತ್ತೆ ಎಂಬುದನ್ನು ನಿರ್ದೇಶಕ ಅರ್ಜುನ್ ಶಿವನ್ ಅವರು ಅದ್ಭುತವಾದ ಭಾವನಾತ್ಮಕ ಕಥಾಹಂದರ ಹೆಣೆದು ಈ ಚಿತ್ರವನ್ನು ನಿರೂಪಿಸುತ್ತಿದ್ದಾರೆ. ಲೈಫ್ ಎಲ್ಲಿಂದ ಎಲ್ಲಿಗೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಲೆನಿನ್, ಮಂಜುನಾಥ್, ಕ್ರಿಶ್, ಅರ್ಜುನ್ ಶಿವನ್ ಅಲ್ಲದೆ ನಾಯಕಿಯಾಗಿ ಅನು ಪ್ರೇಮ ನಟಿಸಿದ್ದಾರೆ. ವಿಪ್ರ ವೆಂಚರ್ಸ್ ಮೂಲಕ ಮುಳ್ಳೂರು ಗುರುಪ್ರಸಾದ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದು ಸದ್ಯ ಚಿತ್ರವೀಗ ಬಿಡುಗಡೆಗೆ ಸಿದ್ದವಾಗಿದೆ.

ಪ್ರಚಾರದ ಮೊದಲ ಭಾಗವಾಗಿ ಈ ಚಿತ್ರದ ಎರಡು ಹಾಡುಗಳ ಬಿಡುಗಡೆ ಸಮಾರಂಭ ಬುಧವಾರ ಸಂಜೆ ನೆರವೇರಿತು. ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ ರಾವ್, ಸುಬ್ರಮಣ್ಯ ಶರ್ಮ, ಇಳಯ ಆಳ್ವ ಗುರೂಜಿ ಹಾಗೂ ಇತರ ಗಣ್ಯರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಭಾಸ್ಕರ ರಾವ್ ಮಾತನಾಡುತ್ತ ಮನಸಿನ ನೋವು, ಸಂಕಟವನ್ನು ಮರೆಯಲು ಸಿನಿಮಾ ಸಹಕಾರಿ ಆಗುತ್ತೆ, ಈ ಹಾಡು ನೋಡಿದ್ರೆ ಸಿನಿಮಾ ನೋಡಬೇಕು ಎನಿಸುತ್ತದೆ ಎಂದರು. ಅದೇ ರೀತಿ ಅಲ್ಲಿಗೆ ಬಂದಂತಹ ಎಲ್ಲಾ ಗಣ್ಯರು ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು.

ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಅರ್ಜುನ್ ಶಿವನ್ ಮಾತನಾಡಿ ಸಿನಿಮಾ ಮಾಡೋದಲ್ಲ, ಅದಾಗೇ ಆಗಬೇಕು, ಲಾಕ್ ಡೌನ್ ಸಂದರ್ಭದಲ್ಲಿ ಒಂದು ಸಿನಿಮಾ ಮಾಡಿದ್ದೆ. ಇದು 2ನೇ ಚಿತ್ರ. ನನಗೆ ಟೀ ಅಂಗಡಿಯಲ್ಲಿ ಈ ಕಾನ್ಸೆಪ್ಟ್ ಹೊಳೆಯಿತು. ಇದೊಂದು ಸ್ನೇಹಿತರ ಜರ್ನಿ ಸಿನಿಮಾ. ಕಿರಿಕ್ ಪಾರ್ಟಿ ಥರ ಒಂದು ಫನ್ ಜರ್ನಿ.ಜೀವನದಲ್ಲಿ ಏನು ಪಡೆಯದಿದ್ದರೂ ಸ್ನೇಹಿತರು ಅಂತ ಇರಬೇಕು. ಈ ಚಿತ್ರಕ್ಕಾಗಿ ಮೈಸೂರಿನಿಂದ ಡೆಲ್ಲಿವರೆಗೆ ಸುತ್ತಾಡಿದ್ದೇವೆ. ಸ್ನೇಹಿತರ ನಡುವೆ ಇಗೋ ಇರಬಾರದು ಎಂಬುದನ್ನು ನಮ್ಮ ಚಿತ್ರದಲ್ಲಿ ತೋರಿಸಿದ್ದೇವೆ. ಸಿನಿಮಾ ರೆಡಿ ಇದ್ದು ಮಾರ್ಚ್ ವೇಳೆಗೆ ರಿಲೀಸ್ ಮಾಡುವ ಪ್ಲಾನ್ ಇದೆ ಎಂದರು.

ನಿರ್ಮಾಪಕ ಮುಲ್ಲೂರ್ ಗುರುಪ್ರಸಾದ್ ಮಾತನಾಡಿ ಈ ಕಥೆ ಕೇಳಿದಾಗಲೇ ನನಗೆ ಕನೆಕ್ಟ್ ಆಯ್ತು. ಹಾಗೆಯೇ ಜನರಿಗೂ ಇಷ್ಟ ಆಗುತ್ತದೆ ಎಂದು ಹೇಳುಬಲ್ಲೆ. ಎಲ್ಲರೂ ಸೇರಿ ಮಾಡಿರುವ ಚಿತ್ರವಿದು. ಇದೊಂದು ಸುಂದರ ಜರ್ನಿ ಚಿತ್ರ. ಇದನ್ನ ಈಗಾಗಲೇ ಕಾದಂಬರಿಯಾಗೂ ಬರೆದಿದ್ದೇನೆ. ಮಾರ್ಚ್ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದರು. ನಾಯಕ ಲೆನಿನ್ ಮಾತನಾಡಿ ಇದು ನನ್ನ ಮೊದಲ ಸಿನಿಮಾ ಎಂದರೆ, ನಾಯಕಿ ಅನು ಪ್ರೇಮ ಮಾತನಾಡಿ ಚಿತ್ರದಲ್ಲಿ ನಾನು ರಿಚಾ ಫರ್ನಾಂಡೀಸ್ ಎಂಬ ಪಾತ್ರ ಮಾಡಿದ್ದೇನೆ. ಎಲ್ಲ ಥರದ ಮಸಾಲೆ ಅಂಶಗಳು ಚಿತ್ರದಲ್ಲಿವೆ ಎಂದರು. ಲೈ ಫ್ ಎಲ್ಲಿಂದ ಎಲ್ಲಿಗೆ ಚಿತ್ರದ ಸಂಗೀತ ನಿರ್ದೇಶಕರಾದ ವೈಶಾಖ ಶಶಿಧರನ್ ಹಾಗೂ ಕಿರಣ್ ವೈಶಿಷ್ಠ ಹಾಡುಗಳ ಬಗ್ಗೆ ವಿವರಿಸಿದರು. ಸುಮಂತ್ ಅವರ ಛಾಯಾಗ್ರಹಣ, ಮಂಜು ಸ್ವಾಮಿ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ದು , ಚಿತ್ರ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಲು ತಂಡ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.