ತಂದೆ – ಮಗನ ಬಾಂಧವ್ಯದ ಕಥಾನಕ “ಕ್ಷಮೆಯಿರಲಿ ತಂದೆ” ಟ್ರೇಲರ್ ಬಿಡುಗಡೆ

Spread the love

ರಂಗಭೂಮಿ, ಕಿರುತೆರೆ, ಹಿರಿತೆರೆ ಕಲಾವಿದರಾಗಿ ಕಳೆದ ಮೂರು ದಶಕಗಳಿಂದ ಜನಪ್ರಿಯರಾಗಿರುವ ಎಂ ಎನ್ ಸುರೇಶ್ (ಮೂಗ್ ಸುರೇಶ್ ) ಈಗ ನಿರ್ಮಾಪಕ ಹಾಗೂ ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಮೊದಲ ನಿರ್ಮಾಣ ಹಾಗೂ ನಿರ್ದೇಶನದ ಚಿತ್ರಕ್ಕೆ ” ಕ್ಷಮೆಯಿರಲಿ ತಂದೆ” ಎಂದು ಹೆಸರಿಟ್ಟಿದ್ದಾರೆ.

ಈಗಾಗಲೇ ಚಿತ್ರೀಕರಣ ಮುಗಿಸಿ ಜೂನ್ 12ರಂದು ತೆರೆಗೆ ಬರಲು‌ ಸಿದ್ದವಾಗಿರುವ ಈ ಚಿತ್ರದ ಮೋಷನ್ ಪೋಸ್ಟರ್, ಟ್ರೇಲರ್ ಹಾಗೂ ಲಿರಿಕಲ್ ವಿಡಿಯೋ ಇತ್ತೀಚೆಗೆ ಬಿಡುಗಡೆಯಾಯಿತು. ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರಾದ ಟಿ.ಎಸ್.ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ನಿರ್ಮಾಪಕ ಉಮೇಶ್ ಬಣಕಾರ್ ಹಾಗೂ ರಾಮಕೃಷ್ಣ (ಮೇಕಪ್) ಮುಖ್ಯ ಅತಿಥಿಗಳಾಗಿ ಆಗಮಿಸಿ ಮೋಷನ್ ಪೋಸ್ಟರ್, ಟ್ರೇಲರ್ ಹಾಗೂ ಲಿರಿಕಲ್ ವಿಡಿಯೋ ಅನಾವರಣ ಮಾಡಿದರು. ಚಿತ್ರದ ಟ್ರೇಲರ್ ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲಿ. ಎಂ ಎನ್ ಸುರೇಶ್ ನಿರ್ಮಾಪಕ ಹಾಗೂ ನಿರ್ದೇಶಕರಾಗಿಯೂ ಗೆಲ್ಲಲಿ ಎಂದು ಅತಿಥಿಗಳು ಹಾರೈಸಿದರು. ಆನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಸಮಾರಂಭಕ್ಕೆ ಆಗಮಿಸಿದ ಅತಿಥಿಗಳಿಗೆ ಧನ್ಯವಾದ ತಿಳಿಸಿ ಚಿತ್ರದ ಕುರಿತು ಮಾತನಾಡಿದ ನಿರ್ಮಾಪಕ ಹಾಗೂ ನಿರ್ದೇಶಕ ಎನ್ ಎಂ ಸುರೇಶ್, ನಾನು ಕೆಲವು ಚಿತ್ರಗಳಿಗರ ಸಹ ನಿರ್ಮಾಪಕನಾಗಿದ್ದೆ. ಪೂರ್ಣ‌ಪ್ರಮಾಣದ ನಿರ್ಮಾಪಕನಾಗಿರುವುದು ಈ ಚಿತ್ರದಿಂದ. ಇನ್ನೂ, ನಿರ್ದೇಶನ ನಾನು ಮಾಡಬೇಕೆಂದುಕೊಂಡಿರಲಿಲ್ಲ.

ನನ್ನ ಕಾರ್ಯವೈಖರಿ ಹತ್ತಿರದಿಂದ ಬಲ್ಲ ಸ್ನೇಹಿತರು ನೀವೇ ನಿರ್ದೇಶನ ಮಾಡಿ ಎಂದರು. ಮೊದಲ ನಿರ್ದೇಶನದ ಚಿತ್ರ, ಬೇರೆಯವರು ದುಡ್ಡು ಹಾಕುವುದು ಬೇಡ ಅಂತ ನಾನು ಕೂಡಿಟ್ಟಿದ್ದ ಹಣವನ್ನೇ ಈ ಚಿತ್ರಕ್ಕೆ ಹಾಕಿ ನಿರ್ಮಾಣ ಮಾಡಿದ್ದೇನೆ. ಇದಕ್ಕೆ ನನ್ನ ಕುಟುಂಬದ ಸಹಕಾರವೂ ಇದೆ. ಶೀರ್ಷಿಕೆಯೇ ತಿಳಿಸುವಂತೆ ಇದೊಂದು ತಂದೆ – ಮಗನ ಬಾಂಧವ್ಯದ ಚಿತ್ರ. ಹರೀಶ್ ಅವರು ಕಥೆ ಬರೆದಿದ್ದಾರೆ.

ಮಂಜುನಾಥ್ ಹೆಗ್ಡೆ, ರೇಣುಕಾಬಾಲಿ , ಶ್ರೀಮಂತ, ವಿನ್ಯಾಶೆಟ್ಟಿ ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದು, ನಾನು ಸಹ ನಟಿಸಿದ್ದೇನೆ. ಸೂರ್ಯಕಾಂತ್ ಛಾಯಾಗ್ರಹಣ, ಮುತ್ತುರಾಜ್ ಸಂಕಲನ ಹಾಗೂ ಪುಣ್ಯೇಶ್ ಕುಮಾರ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರ ಜೂನ್ 12 ರಂದು ತೆರೆಗೆ ಬರಲಿದೆ. ನನ್ನ ಮೊದಲ ನಿರ್ದೇಶನ ಹಾಗೂ ನಿರ್ಮಾಣದ ಈ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ನಟ ಶ್ರೀಮಂತ, ಕಥೆ ಬರೆದಿರುವ ಹರೀಶ್, ಸಂಕಲನಕಾರ ಮುತ್ತುರಾಜ್, ನಟ ಶಿವಕುಮಾರ್ ಆರಾಧ್ಯ ಹಾಗೂ ಕಾರ್ಯಕಾರಿ ನಿರ್ಮಾಪಕಿ ಅಹಲ್ಯ ಸುರೇಶ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Visited 1 times, 1 visit(s) today
error: Content is protected !!