Cini NewsSandalwood

“ಕೆರೆಬೇಟೆ” ಟೈಟಲ್ ಟ್ರ್ಯಾಕ್ ರಿಲೀಸ್

‘ಕೆರೆಬೇಟೆ’ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಸಿನಿಮಾ. ಗೌರಿಶಂಕರ್ ನಟನೆಯ ರಾಜ್ ಗುರು ನಿರ್ದೇಶನದ ಕೆರೆಬೇಟೆ ಚಿತ್ರದ ಟ್ರೈಲರ್, ಟೀಸರ್ ಮತ್ತು ರೋಮ್ಯಾಂಟಿಕ್ ಹಾಡು ಈಗಾಗಲೇ ರಿಲೀಸ್ ಆಗಿದ್ದು ಕುತೂಹಲ ದುಪ್ಪಟ್ಟು ಮಾಡಿದೆ. ಇದೀಗ ಸಿನಿಮಾ ತಂಡ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡುವ ಮೂಲಕ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ. ಇತ್ತೀಚಿಗಷ್ಟೇ ಮೊದಲ ಹಾಡನ್ನು ರಿಲೀಸ್ ಮಾಡಿದ್ದ ಚಿತ್ರತಂಡ ಇದೀಗ ಸಿನಿಮಾದ ಬಹುನಿರೀಕ್ಷಿಯ ಟೈಟಲ್ ಟ್ರ್ಯಾಕ್ ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದೆ.

ವಿಶೇಷ ಎಂದರೆ ಈ ಹಾಡನ್ನು ಶಾಸಕ ಹಾಗೂ ಮಾಜಿ ಹೋಂ ಮಿನಿಸ್ಟರ್ ಆರಗ ಜ್ಞಾನೇಂದ್ರ ಹಾಗೂ ಸಂಸದರಾದ ಬಿ ವೈ ರಾಘವೇಂದ್ರ ರಿಲೀಸ್ ಮಾಡಿ ಸಿನಿಮಾ ತಂಡಕ್ಕೆ ಶುಭ ಹಾರೈಸಿದರು. ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಟೈಟಲ್ ಟ್ರ್ಯಾಕ್ ರಿಲೀಸ್ ಕಾರ್ಯಕ್ರಮದಲ್ಲಿ ಕೆರೆಬೇಟೆ ಚಿತ್ರದ ಹಾಡು ಅದ್ದೂರಿಯಾಗಿ ಬಿಡುಗಡೆಯಾಯಿತು.

‘ಕೆರಿಬ್ಯಾಟಿ ಶುರುವಾತು…’ ಎನ್ನುವ ಈ ಟೈಟಲ್ ಟ್ರ್ಯಾಕ್ ಅನ್ನು ಪ್ರಮೋದ್ ಮರವಂತೆ ಬರೆದಿದ್ದಾರೆ, ಗಗನ್ ಬಡೇರಿಯಾ ಸಂಗೀತ ಸಂಯೋಜನೆ ಮಾಡಿದ್ದು ಕರಿಬಸವ ತಡಕಲ್ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಈ ಹಾಡನ್ನು ಕೇಳಿ ಮನಸೋತ ಶಾಸಕ ಆರಗ ಜ್ಞಾನೇಂದ್ರ ಹಾಗೂ ಸಂಸದ ಬಿ ವೈ ರಾಘವೇಂದ್ರ ಅವರು ಸಂತಸ ವ್ಯಕ್ತಪಡಿಸಿದರು.

ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಿ ಮಾತನಾಡಿದ ಬಿ ವೈ ರಾಘವೇಂದ್ರ, ‘ಈ ಸಿನಿಮಾ ಸಂಪೂರ್ಣವಾಗಿ ಮಲೆನಾಡಿನ ಸುತ್ತಮುತ್ತವೇ ಚಿತ್ರೀಕರಣಗೊಂಡಿದೆ. ಜೊತೆಗೆ ಮಲೆನಾಡಿನವರೇ ಸೇರಿ ಈ ಸಿನಿಮಾ ಮಾಡಿದ್ದಾರೆ. ಮಲೆನಾಡಿನ ಸೌಂದರ್ಯವನ್ನು ತುಂಬಾ ಸುಂದರವಾಗಿ ತೋರಿಸಲಾಗಿದೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಶುಭ ಹಾರೈಸಿದರು.

ಇನ್ನು ಆರಗ ಜ್ಞಾನೇಂದ್ರ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ಸಂಸ್ಕೃತಿಗಳು ಕಣ್ಮರೆಯಾಗಿವೆ. ಅನೇಕ ಪದ್ಧತಿಗಳು ಮರೆಯಾಗಿವೆ. ಇದೀಗ ಕೆರೆಬೇಟೆ ಸಂಸ್ಕೃತಿಯ ಬಗ್ಗೆ ಸಿನಿಮಾ ಮಾಡಿರುವುದು ತುಂಬಾ ಖುಷಿ ಆಗುತ್ತೆ. ಟ್ರೈಲರ್ ಮತ್ತು ಸಾಂಗ್ ಅದ್ಭುತವಾಗಿ ಮೂಡಿ ಬಂದಿದೆ. ನಾಯಕ ನಟ, ನಿರ್ದೇಶಕ ನಿರ್ಮಾಪಕ ಸೇರಿದಂತೆ ಎಲ್ಲರೂ ಮಲೆನಾಡಿನವರೇ ಎನ್ನುವುದು ಖುಷಿಯ ವಿಚಾರ. ಸಿನಿಮಾ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣಲಿ’ ಎಂದು ಹೇಳಿದರು.

ಸಾಂಗ್ ರಿಲೀಸ್ ಬಳಿಕ, ನಿಜವಾದ ಕೆರೆಬೇಟೆ ಆಟಗಾರರು ಕೂಣಿ ಹಿಡಿದು ಪ್ರತಿ ಜಿಲ್ಲೆಗಳಿಗೂ ಚಿತ್ರದ ಪ್ರಚಾರಕ್ಕಾಗಿ ಬೈಕ್ ರ್ಯಾಲಿ ಹೊರಡಲಿದ್ದು ರ್ಯಾಲಿಗೂ ಚಾಲನೆ ನೀಡಲಾಯಿತು.

ಸದ್ಯ ರಿಲೀಸ್ ಗೆ ಸಿದ್ಧವಾಗಿರುವ ‘ಕೆರೆಬೇಟೆ’ ಸಿನಿಮಾ ಟೈಟಲ್ ಟ್ರ್ಯಾಕ್ ಮೂಲ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ ಇದಾಗಿದ್ದು ಇದೇ ಮಾರ್ಚ್ 15ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ. ಜನಮನ ಸಿನಿಮಾ ಸಂಸ್ಥೆಯಲ್ಲಿ ಮೂಡಿ ಬಂದಿರುವ ಕೆರಬೇಟೆ ಸಿನಿಮಾ ಹೇಗಿರಲಿದೆ, ಮಲೆನಾಡಿನ ಮೀನು ಬೇಟೆಯ ಸಂಸ್ಕೃತಿ ಹೇಗೆ ಮೂಡಿ ಬಂದಿದೆ ಎಂದು ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.

 

error: Content is protected !!