Cini NewsSandalwood

“ಉತ್ತರಕಾಂಡ” ಚಿತ್ರದ ಚಿತ್ರೀಕರಣ ಶುರು.

ಬಹು ಬೇಡಿಕೆಯ ಮತ್ತು ಬಹುನಿರೀಕ್ಷಿತ ಕನ್ನಡ ಚಿತ್ರ “ಉತ್ತರಕಾಂಡ” ಚಿತ್ರೀಕರಣವನ್ನು ಇಂದು ಆರಂಭಿಸಿದೆ. 15 ದಿನಗಳ ಪ್ರಥಮ schedule ವಿಜಯಪುರದಲ್ಲಿ ಚಿತ್ರೀಕರಣಗೊಳ್ಳಲಿದೆ. “ಉತ್ತರಕಾಂಡ”ದ ಮುಹೂರ್ತ 2022ರಲ್ಲಿ‌ ಆಗಿದ್ದು, ಚಿತ್ರಕಥೆಯು ಬಯಲುಸೀಮೆಯ ಸಂಸ್ಕೃತಿಯನ್ನು ಎಳೆ ಎಳೆಯಾಗಿ ಬಿಚ್ಚಿಡುವುದರಿಂದ,‌ ಹಾಗೂ ಚಿತ್ರವು ಉತ್ತರಕರ್ನಾಟಕದ ಆಡುಭಾಷೆಯನ್ನು ಹೊಂದಿರುವುದರಿಂದ ಚಿತ್ರಕ್ಕೆ ನಿಖರವಾದ ಸಂಶೋಧನೆ ಮತ್ತು ಪ್ಲಾನಿಂಗ್ ಅಗತ್ಯವಿತ್ತು. ಈ ಕಾರಣದಿಂದ ಮತ್ತು ಕೆಲವು ಅನಿವಾರ್ಯ ಸಂದರ್ಭಗಳಿಂದಾಗಿ ಚಿತ್ರೀಕರಣ ವಿಳಂಬಗೊಂಡಿತು. ಆದರೇ,‌ ಇದೀಗ ಸರ್ವ ಸಿದ್ಧತೆಗಳೊಂದಿಗೆ ಇಂದು ಚಿತ್ರೀಕರಣ ಆರಂಭಗೊಂಡಿದ್ದು, ಚಿತ್ರ ತಂಡದವರು ಉತ್ಸುಕರಾಗಿದ್ದಾರೆ.

ಚಿತ್ರದ ನಿರ್ದೇಶಕ ರೋಹಿತ್ ಪದಕಿ ಮಾತನಾಡಿ, “ಚಿತ್ರವನ್ನು ಆರಂಭಿಸಲು ನಾನು ಉತ್ಸಾಹಿಯಾಗಿದ್ದೇನೆ. ಈ ಚಿತ್ರಕ್ಕೆ ನಿಖರವಾದ ಪ್ಲಾನಿಂಗ್, ತಯಾರಿ ಮತ್ತು ಸಂಶೋಧನೆ ಅಗತ್ಯವಿತ್ತು. ನಾನು ಮತ್ತು ನಿರ್ಮಾಪಕರು ನಿದ್ದೆಗೆಟ್ಟು ಇದನ್ನು ಕಾರ್ಯರೂಪಕ್ಕೆ ತರವುದರಲ್ಲಿ ಶ್ರಮಿಸಿದ್ದೇವೆ. ಶಿವಣ್ಣ ಮತ್ತು ಧನಂಜಯ್ ಪಾತ್ರ ವಹಿಸಿರುವ ಬಹು ದೊಡ್ಡ ತಾರಾಗಣದ ಚಿತ್ರಕಥೆಯನ್ನು ಸಿನಿ ಪ್ರೇಕ್ಷಕರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ.

ಈ‌ ಕುರಿತು ಕುಂದು ಕೊರತೆ ಬರದಂತೆ ನಾನು ಮತ್ತು ಕೆ.ಆರ್.ಜಿ ಕೆಲಸ ಮಾಡಲಿದ್ದೇವೆ” ಎಂದರು. ಚಿತ್ರದ ನಿರ್ಮಾಪಕ, ಕಾರ್ತಿಕ್ ಗೌಡ ಮಾತನಾಡಿ, “ಉತ್ತರಕಾಂಡ ಚಿತ್ರವು ಕೆ.ಆರ್.ಜಿ.ಯ ಹೆಮ್ಮೆ ಎಂದರೆ ಉತ್ಪ್ರೇಕ್ಷೆಯಲ್ಲ. ಕೇವಲ ನಾವಷ್ಟೇ ಅಲ್ಲದೆ ಇಡೀ ಕನ್ನಡ ಚಿತ್ರರಂಗವೇ ಹೆಮ್ಮೆ ಪಡುವಂತೆ ಉತ್ತರಕಾಂಡ ಮುಂಬರಲಿದೆ” ಎಂದು ಭರವಸೆ ನೀಡಿದರು.

“ಉತ್ತರಕಾಂಡ” ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಪದಕಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ಚಿತ್ರವನ್ನು ಕೆ.ಆರ್.ಜಿ. ಸ್ಟೂಡಿಯೋಸ್ ಬ್ಯಾನರ್ ನಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ ರಾಜ್ ನಿರ್ಮಿಸಲಿದ್ದಾರೆ.

ಖ್ಯಾತ ಬಾಲಿವುಡ್ ಗಾಯಕ ಹಾಗೂ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ. ಚಿತ್ರಕ್ಕೆ ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ (ಡಿಸೈನ್)ಮಾಡಲಿದ್ದಾರೆ. ಬಹು ದೊಡ್ಡ ತಾರಾಬಳಗವನ್ನು ಹೊಂದಿರುವ ಈ ಚಿತ್ರ, ತಾರಾಬಳಗವನ್ನು ಈ ವಾರ ಘೋಷಿಸಲಿದೆ.

error: Content is protected !!