Cini NewsSandalwoodUncategorized

‘ಸಂಜು ವೆಡ್ಸ್ ಗೀತಾ -2’ ಚಿತ್ರಕ್ಕೆ ಶಿವಣ್ಣ ಸಾಥ್.. ಜೂನ್ 6 ಕ್ಕೆ ಚಿತ್ರ ರಿಲೀಸ್.

ತನ್ನ ಟೈಟಲ್ ಮೂಲಕವೇ ಅಗಾಧ ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದ ನಾಗಶೇಖರ್ ನಿರ್ದೇಶನದ ಸಂಜು ವೆಡ್ಸ್ ಗೀತಾ -2, ಜೂನ್ 6ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ. ಈಗಾಗಲೇ ಚಿತ್ರ ನೋಡಿದ ಗಣ್ಯರು ಚಿತ್ರದ ಕಂಟೆಂಟ್, ಸಾಂಗ್ಸ್, ನಿರೂಪಣೆ, ಕ್ಯಾಮೆರಾ ವರ್ಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ನಾಗಶೇಖರ್ ಸಿನಿಮಾದಲ್ಲಿ ಸಂಗೀತಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಈ ಚಿತ್ರದ ಹಾಡುಗಳೂ ಮನಮೋಹಕವಾಗಿದ್ದು ಸಂಗೀತ ಪ್ರಿಯರ ಮನ ಗೆದ್ದಿವೆ. ಭಾನುವಾರ ಸಂಜೆ ನಡೆದ ಈ ಚಿತ್ರದ ಪ್ರೀರಿಲೀಸ್ ಇವೆಂಟ್ ನಲ್ಲಿ ಚಿತ್ರರಂಗದ ಸಾಕಷ್ಟು ಗಣ್ಯರು ಹಾಜರಿದ್ದು ಸಿನಿಮಾ ಬಗ್ಗೆ ನಿರ್ಮಾಪಕರ ಔದಾರ್ಯದ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಚಿತ್ರದ ಪ್ರಮುಖ ಹಾಡನ್ನು ಮುಖ್ಯ ಅತಿಥಿಯಾಗಿದ್ದ ನಟ ಶಿವರಾಜ್ ಕುಮಾರ್ ಅವರು ಬಿಡುಗಡೆ ಮಾಡಿದರು.


ಆನಂತರ ವೇದಿಕೆಯಲ್ಲಿ ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಮ್ಮ ಸಿನಿಮಾ ಚೆನ್ನಾಗಿ ಮೂಡಿ ಬರಬೇಕು, ಅದನ್ನು ಜನರಿಗೆ ತಲುಪಿಸಬೇಕೆಂದು ಹೋರಾಡುತ್ತಿರುವ, ಅಷ್ಟೇ ಧಾರಾಳವಾಗಿ ಖರ್ಚು ಮಾಡುತ್ತಿರುವ ನಿರ್ಮಾಪಕ ಕುಮಾರ್ ಅವರಿಗೆ ಹ್ಯಾಟ್ಸಾಫ್ ಹೇಳಲೇಬೇಕು. ಇಂಥ ಧೈರ್ಯ ಮಾಡಲು ಯಾರೂ ಮುಂದೆ ಬರಲ್ಲ. ಅವರಿಗೆ ಸಿನಿಮಾ ಮೇಲಿರುವ ನಂಬಿಕೆಗೆ ಧನ್ಯವಾದ. ಸತ್ಯ ಹೆಗಡೆ ಅವರ ಕ್ಯಾಮೆರಾ ವರ್ಕ್ ತುಂಬಾ ಚೆನ್ನಾಗಿದೆ.ಅವರು ಹೆಚ್ಚು ಮಾತಾಡಲ್ಲ, ಅವರ ಕೆಲಸ ಮಾತಾಡುತ್ತೆ. ನಾಗಶೇಖರ್ ಪ್ರತಿ ಸಿನಿಮಾದಲ್ಲೂ ಏನಾದರೊಂದು ವಿಶೇಷತೆ ಇಟ್ಡಿರುತ್ತಾರೆ‌. ಮನಸಿಗೆ ನಾಟುವಂಥ ಸಿನಿಮಾ ಮಾಡುತ್ತಾರೆ. ಇಂಥ ಸಿನಿಮಾಗಳು ಗೆಲ್ಲಬೇಕು, ಮುಖ್ಯವಾಗಿ ನಿರ್ಮಾಪಕರು ಗೆಲ್ಲಬೇಕು. ಮಾಧ್ಯಮಗಳೂ ಸಹ ಒಳ್ಳೆ ಚಿತ್ರ ಬರುವಾಗ ಸ್ವಲ್ಪ ಬೂಸ್ಟ್ ಒಳ್ಳೆ ಕಿಕ್ ಸ್ಟಾರ್ಟ್ ಕೊಟ್ಟರೆ ಇನ್ನೂ ಹೆಚ್ಚು ಅನುಕೂಲವಾಗುತ್ತೆ.ಸಪೋರ್ಟ್ ಮಾಡಿ ಎಂದು ಹೇಳಿದರು.

ಹಿರಿಯ ನಿರ್ದೇಶಕ ಎಸ್.ಮಹೇಂದರ್ ಮಾತನಾಡುತ್ತ ನಾಗಶೇಖರ್ ನನ್ನ ಶಿಶ್ಯ. ಅವರು ಒಳ್ಳೆಯ ಸಿನಿಮಾ ಮಾಡ್ತಾರೆ. ಕವಿರಾಜ್, ಸತ್ಯ ಹೆಗಡೆಯಂಥ ತಂತ್ರಜ್ಞರು ಜತೆಗಿದ್ದಾಗ ಆ ಚಿತ್ರಕ್ಕೆ ಇನ್ನೂ ಹೆಚ್ಚಿನ ಮೌಲ್ಯ ಬರುತ್ತದೆ. ನಿರ್ಮಾಪಕರು ಒಂದೊಂದು ಫ್ರೇಮ್ ಗೂ ಕೊಟ್ಯಾಂತರ ದುಡ್ಡು ಖರ್ಚು ಮಾಡಿದ್ದಾರೆ.ನಾನು ಸ್ನೇಹಲೋ ಮಾಡಿದಾಗಲೂ ಇದೇ ಅನುಭವ ಆಗಿತ್ತು. ರೀರಿಲೀಸ್ ಮಾಡಿದಾಗ ಚಿತ್ರ ಸೂಪರ್ ಹಿಟ್ ಆಯ್ತು. ರೇಶ್ಮೆ ಉದ್ಯಮ ಅದರ ಸಾಧಕ ಬಾಧಕಗಳನ್ನು ಹಿನ್ನೆಲೆಯಾಗುಟ್ಟುಕೊಂಡು ಅದ್ಭುತ ಪ್ರೇಮಕಥೆಯನ್ನು ನಾಗಶೇಖರ್ ಕಟ್ಟಿಕೊಟ್ಟಿದ್ದಾರೆ. ಚಿತ್ರ ನೋಡುಗರ ಮನಸನ್ನು ನಾಟುತ್ತದೆ ಎಂದರು.
ನಾಯಕನಟ ಶ್ರೀನಗರ ಕಿಟ್ಟಿ ಮಾತನಾಡಿ ನಮ್ಮ ಚಿತ್ರ ಈಗ ವೇಗ ಪಡೆದುಕೊಂಡಿದೆ. ತಂದೆ ಮಗಳ ಸೆಂಟಿಮೆಂಟ್ ಸೀನ್ ಸೇರಿದಂತೆ ಹೊಸದಾಗಿ ಸೇರಿಸಲಾಗಿರುವ 21 ನಿಮಿಷಗಳ ಹೃದಯಸ್ಪರ್ಷಿ ದೃಶ್ಯಗಳು ಪ್ರೇಕ್ಷಕರ ಮನಸನ್ನು ಭಾರವಾಗಿಸುತ್ತವೆ. ಕವಿರಾಜ್ ಬರೆದ ಚಿತ್ರದ ಕೊನೆಯ ಹಾಡನ್ನು ಶಿವಣ್ಣ ಬಿಡುಗಡೆ ಮಾಡಿದ್ದಾರೆ, ಜನರಿಗೆ ಚಿತ್ರ ಖಂಡಿತ ಇಷ್ಟವಾಗುತ್ತದೆ ಎಂದು ಹೇಳಿದರು.
ಚಿತ್ರಕ್ಕೀಗ 21 ನಿಮಿಷಗಳ ಹೃದಯ ಸ್ಪರ್ಶಿ ಚಿತ್ರಣವನ್ನು ಜೋಡಿಸಲಾಗಿದ್ದು ಜೂನ್ 6ರಂದು ಹೊಸ ವರ್ಷನ್ ನಲ್ಲಿ ಸಂಜು ವೆಡ್ಸ್ ಗೀತಾ ರಿಲೀಸಾಗುತ್ತಿದೆ. ಉಳಿದಂತೆ ನಿರ್ಮಾಪಕ ಛಲವಾದಿ ಕುಮಾರ್, ನಾಗಶೇಖರ್, ಕವಿರಾಜ್, ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಪೊಲೀಸ್ ಅಧಿಕಾರಿಗಳು, ನಿವೃತ್ತ ನ್ಯಾಯಮೂರ್ತಿಗಳು ಸೇರಿದಂತೆ ಹಲವಾರು ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಸಿನಿಮಾ ಬಗ್ಗೆ ಮಾಹಿತಿ‌ ಹಂಚಿಕೊಂಡರು.

error: Content is protected !!