ಬಾಲ್ಯದ ಮದುವೆಯ ಸುಳಿಯಲ್ಲಿ ಹೃದಯಗಳ ತಳಮಳ “ಪ್ರೇಮಿ” (ಚಿತ್ರವಿಮರ್ಶೆ-ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ಪ್ರೇಮಿ
ನಿರ್ದೇಶಕ , ಸಂಗೀತ : ಎಸ್. ಪ್ರದೀಪ್ ವರ್ಮ
ನಿರ್ಮಾಪಕ : ಸಿದ್ದಲಿಂಗಯ್ಯ
ಛಾಯಾಗ್ರಹಣ : ಗೌತಮ್ ಮಟ್ಟಿ
ತಾರಾಗಣ : ಅದ್ವಿಕ್ , ಸಾತ್ವಿಕ , ಶೋಭಿತ , ಎಸ್. ಪ್ರದೀಪ್ ವರ್ಮ, ದ್ವಿತ.ಕೆ.ಗೌಡ, ಸುರೇಶ್ ಬಾಬು, ಶಂಕರ್ ಅಂಬಿ, ಹರ್ಷಿತಾ, ಹರೀಶ್ ಉಕ್ಕಡಗಾತ್ರಿ ಹಾಗೂ ಮುಂತಾದವರು…
ಪ್ರೀತಿ ಎಂದೆಂದಿಗೂ ಅಜರಾಮರ ಎಂದೆ ಹೇಳಬಹುದು. ಎಲ್ಲಾ ಕಾಲಘಟ್ಟಗಳಲ್ಲೂ ನಡೆಯುವಂತಹ ಸ್ನೇಹ , ಬಾಂಧವ್ಯ , ಪ್ರೀತಿ , ಕಂಕಣ ಭಾಗ್ಯ , ಪ್ರೇಮ ಒಂದಲ್ಲ ಒಂದು ರೀತಿಯಾದಂತಹ ಸರಪಳಿಯಲ್ಲಿ ಸಿಕ್ಕಿ ಸಾಗುವುದು ಸರ್ವೆ ಸಾಮಾನ್ಯ. ಅಂತದ್ದೇ ಒಂದು ಬಾಲ್ಯ ವಿವಾಹದ ಹಿಂದಿರುವ ನಿಗೂಢ ಘಟನೆಗಳು , ಪ್ರೇಮಿಗಳ ಮನಸ್ಸಿನಲ್ಲಿ ಆಗುವ ತಳಮಳಗಳ ಸುತ್ತ ಬೆಸೆದುಕೊಂಡು ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಪ್ರೇಮಿ”. ಜೀವನದಲ್ಲಿ ಏನೋ ಕಳೆದುಕೊಂಡಿರುವಂತೆ ಪರಿತಪಿಸುವ ಯುವಕ ಪ್ರೇಮ್ ಕುಮಾರ್ (ಅದ್ವಿಕ್). ಇನ್ನು ಆತನ ಗೆಳತಿ ಶೋಭಿತ (ಟೀನಾ) ಪ್ರೇಮ್ ನನ್ನ ಪ್ರೀತಿಸುವ ಜೊತೆಗೆ ಒಳ್ಳೆಯ ಸ್ನೇಹಿತೆಯಾಗಿ ಇರುತ್ತಾಳೆ.
ಒಮ್ಮೆ ಪ್ರೀತಿಯ ನಿವೇದನೆ ಮಾಡುತ್ತಿದ್ದಂತೆ ನನಗೆ ಬಾಲ್ಯ ವಿವಾಹ ಆಗಿದೆ ಎಂಬ ವಿಚಾರ ತಿಳಿಸುತ್ತಾನೆ ಪ್ರೇಮ್. ಇದರಿಂದ ಕಂಗಾಲಾಗುವ ಟೀನಾ ಕೋಪಿಸುಕೊಳ್ಳುತ್ತಾಳೆ. ಇದರ ನಡುವೆ ತನ್ನ ಊರಿಗೆ ಹೋಗುವ ಪ್ರೇಮ್ ಕುಮಾರ್ ಬಾಲ್ಯದ ಗೆಳತಿಯ ಹುಡುಕಾಟದ ನಡುವೆ ಮಧುಮತಿ (ಸಾತ್ವಿಕ) ಆಕೆಯ ಪುತ್ರಿ ಪುಟ್ಟಿ (ದ್ವಿತ. ಕೆ .ಗೌಡ) ಸಿಗುತ್ತಾರೆ. ಅವರ ಮನೆಯಲ್ಲಿ ಇದ್ದುಕೊಂಡು ತನ್ನ ಬಾಲ್ಯದ ಗೆಳತಿಯನ್ನ ಹರೀಶಣ್ಣನ ಮೂಲಕ ಪತ್ತೆ ಮಾಡಲು ನಿರ್ಧರಿಸುತ್ತೇನೆ.
ಇನ್ನು ತನ್ನ ಊರಿನಲ್ಲಿ ಜನರನ್ನ ಎದುರಿಸುತ್ತಾ ಅಬ್ಬರಿಸುವ ವರ (ಎಸ್. ಪ್ರದೀಪ್ ವರ್ಮ) ನಿಗೆ ಶಿಷ್ಯ ತಾರಾ (ಶಂಕರ್) ಸಾತ್. ಗಂಡನೆಲ್ಲದೆ ಒಂಟಿಯಾಗಿರುವ ಮಧುಮತಿಯನ್ನು ವರ ಸದಾ ಕಾಡುತ್ತಾನೆ. ಹೀಗೆ ಒಂದಷ್ಟು ಘಟನೆಗಳು , ನಿಗೂಢ ಸತ್ಯಗಳು ಹೊರಬರುತ್ತಾ ಹೋದಂತೆ ಪ್ರೇಮ್ ಗೆ ತನ್ನ ಬಾಲ್ಯದ ಗೆಳತಿ ಮಧುಮತಿ ಎಂದು ತಿಳಿಯುತ್ತದೆ. ಮುಂದೆ ಎಲ್ಲವೂ ಸರಿಯಾಗುತ್ತಿದೆ ಎನ್ನುವಷ್ಟರಲ್ಲಿ ಒಂದಷ್ಟು ತಿರುವು ಬೇರೆಯದೆ ದಿಕ್ಕನ್ನ ತೋರುತ್ತದೆ. ಪ್ರೇಮ್ ಗೆ ತನ್ನ ಪ್ರೀತಿ ಸಿಗುತ್ತಾ… ಆ ಮಗು ಯಾರದು… ಟೀನಾ ಲವ್ ಏನಾಗುತ್ತೆ… ಕ್ಲೈಮಾಕ್ಸ್ ಹೇಳುವ ಉತ್ತರ ಏನು? ಇದೆಲ್ಲದಕ್ಕೂ ಒಮ್ಮೆ ಈ ಪ್ರೇಮಿ ಚಿತ್ರವನ್ನು ಒಮ್ಮೆ ನೋಡಬೇಕು.
ಯುವ ನಟ ಅದ್ವಿಕ್ ಸಿದ್ದಲಿಂಗಯ್ಯ ಪ್ರಥಮ ಪ್ರಯತ್ನದಲ್ಲಿ ಬಹಳ ಶ್ರಮಪಟ್ಟು ಪಾತ್ರಕ್ಕೆ ಜೀವ ತುಂಬಿದ್ದು , ಇನ್ನಷ್ಟು ಪರಿಪಕ್ವತೆ ಅಗತ್ಯ ಅನಿಸುತ್ತದೆ. ಇನ್ನು ನಟಿ ಶ್ರಾವ್ಯ ರಾವ್ / ಸಾತ್ವಿಕ ತನ್ನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿ ಗಮನ ಸೆಳೆದಿದ್ದಾರೆ. ಇನ್ನೋರ್ವ ನಟಿ ಶೋಭಿತ ಸಿಕ್ಕ ಅವಕಾಶಕ್ಕೆ ನ್ಯಾಯವನ್ನು ನೀಡಿದ್ದಾರೆ. ಇನ್ನು ಚಿತ್ರದ ಪ್ರಮುಖ ವಿಲ್ಲನ್ ಪಾತ್ರದಲ್ಲಿ ನಿರ್ದೇಶಕ ಎಸ್ . ಪ್ರದೀಪ್ ವರ್ಮ ನಡೆ ನುಡಿ ಮೂಲಕ ಬೇರೆಯದೇ ಗತ್ತಿನಲ್ಲಿ ಮಿಂಚಿದ್ದಾರೆ.
ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಬೆಂಬಲವನ್ನ ನೀಡಿದ್ದಾರೆ. ಇನ್ನು ಚಿತ್ರದ ಕಥೆಯಲ್ಲಿ ಹೊಸದೇನು ಇಲ್ಲದಿದ್ದರೂ , ಬಾಲ್ಯ ವಿವಾಹದ ಸೆಳೆತ , ಸಂಬಂಧಿಕರ ವಂಚನೆ , ಪ್ರೇಮಿಗಳ ಪರದಾಟ , ಕಾಮುಕನ ಕಾಟ , ಸ್ನೇಹಿತರ ಸಹಕಾರದ ಸುತ್ತ ಬೆಸೆದುಕೊಂಡು ಪ್ರೀತಿಯ ಗಟ್ಟಿತನವನ್ನು ಹೇಳಲು ಹೊರಟಿರುವ ನಿರ್ದೇಶಕ ಎಸ್. ಪ್ರದೀಪ್ ವರ್ಮ ಇನ್ನಷ್ಟು ಚಿತ್ರಕಥೆಯಲ್ಲಿ ಹಿಡಿತವನ್ನು ಮಾಡಬೇಕಿತ್ತು , ಸಂಗೀತ ಗಮನ ಸೆಳೆದಿದ್ದು , ಹಿನ್ನೆಲೆ ಸಂಗೀತ ಗೊಂದಲವಾಗಿದೆ. ಛಾಯಾಗ್ರಹಣ ಹಾಗೂ ಸಂಕಲನದ ಕೆಲಸ ಗಮನ ಸೆಳೆಯುತ್ತದೆ. ಇನ್ನು ಮಗನಗಾಗಿ ಒಂದು ಚಿತ್ರ ನಿರ್ಮಿಸಬೇಕೆಂಬ ತಂದೆ , ತಾಯಿಯ ಕನಸು ನನಸಾಗಿದೆ. ಪ್ರೇಮಿಗಳ ವಿಚಾರವನ್ನು ಒಳಗೊಂಡಿರುವ ಈ ಚಿತ್ರವನ್ನು ಒಮ್ಮೆ ನೋಡುವಂತಿದೆ.
