Cini NewsSandalwoodTV Serial

ಸುಚೇಂದ್ರ ಪ್ರಸಾದ್ ನಿರ್ದೇಶನದಲ್ಲಿ “ಪದ್ಮಗಂಧಿ” ಸ್ವರಗಳ ಪರಿಮಳ.

ಬೆಳ್ಳಿ ಪರದೆಯ ಮೇಲೆ ಒಂದು ಜ್ಞಾನಾರ್ಜನೆಯ ಅರ್ಥ ಪೂರ್ಣವಾದ “ಪದ್ಮಗಂಧಿ” ಎಂಬ ಚಿತ್ರ ತೆರೆಗೆ ಬರಲು ಸನ್ನದ್ಧವಾಗಿದೆ. ಇದೊಂದು ಕಮಲ ಪುಷ್ಪ ಕುರಿತಾದ ಚಿತ್ರವಾಗಿದೆ. ಜಗತ್ತನ್ನ ಸುಂದರಗೊಳಿಸುವ ಶಕ್ತಿ ಇರುವುದು ಹೂವು ಮತ್ತು ಹಕ್ಕಿಗೆ ಎಂಬ ಮಾತಿದೆ. ಅದರಂತೆ ವಿಶೇಷವಾಗಿ ಕಮಲದ ಹೂ ತನ್ನದೇ ಆದ ವೈಶಿಷ್ಟ್ಯತೆಯನ್ನು ಒಳಗೊಂಡಿದ್ದು , ಕಮಲ ಪುಷ್ಪದ ಮಹತ್ವ ಅದರ ಶಕ್ತಿಯ ಕುರಿತಾದಂತ ಹಿನ್ನೆಲೆಯಲ್ಲಿ ಚಿತ್ರ ಸಿದ್ಧವಾಗಿದೆ. ಸ್ವಚ್ಛ ಕನ್ನಡದ ಮಾತುಗಾರ ಸುಚೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ “ಪದ್ಮಗಂಧಿ” ಚಿತ್ರವೀಗ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬಿಡುಗಡೆಗೆ ಸಿದ್ಧವಾಗಿದೆ. ಈ ಹಂತದಲ್ಲಿ ಚಿತ್ರತಂಡ ಮಾಧ್ಯಮದವರನ್ನ ಭೇಟಿ ಮಾಡಿ ಚಿತ್ರದ ಕುರಿತಾದಂತಹ ಒಂದಷ್ಟು ಮಾಹಿತಿಗಳನ್ನ ಹಂಚಿಕೊಳ್ಳಲು ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿತು.

ಮೊದಲಿಗೆ ಈ ಚಿತ್ರದ ನಿರ್ಮಾಪಕರೂ, ಕಥೆಗಾರರೂ ಆಗಿರುವ ಪ್ರೊ.ಎಸ್.ಆರ್ ಲೀಲಾ ಅವರು ಉಪಸ್ಥಿತರಿದ್ದು , ಈ ಚಿತ್ರದ ಶೀರ್ಷಿಕೆ , ಅದರ ಮಹತ್ವ , ಶಕ್ತಿಯ ಕುರಿತಾದಂತೆ ಸುಧೀರ್ಘವಾಗಿ ಮಾಹಿತಿಯನ್ನು ನೀಡುತ್ತಾ ಈ ಚಿತ್ರ ಶುರುವಾಗಿದ್ದು ಹೇಗೆ, ಕಥೆ ಹುಟ್ಟಿನ ಹಿಂದಿರೋ ಬೆರಗಿನ ಬಗ್ಗೆ ಒಂದಷ್ಟು ವಿಚಾರಗಳನ್ನು ಅರ್ಥಪೂರ್ಣವಾಗಿ ವಿವರಿಸಿದರು. ಇದೇ ಹೊತ್ತಿನಲ್ಲಿ ಹಾಡುಗಳ ತುಣುಕುಗನ್ನೂ ಪ್ರದರ್ಶಿಸಿ “ಪದ್ಮಗಂಧಿ” ಯ ಹಾಡುಗಳೆಲ್ಲವೂ ತಯಾರಾಗಿವೆ. ಅವುಗಳ ಒಂದಷ್ಟು ಝಲಕ್ಕುಗಳನ್ನು ಮಾಧ್ಯಮದವರ ಮುಂದೆ ಪ್ರದರ್ಶಿಸಲಾಗಿದೆ. ಈ ಮೂಲಕ ಪದ್ಮಗಂಧಿಯ ಹಾಡುಗಳ ಸಣ್ಣ ಪರಿಚಯವನ್ನು ಪ್ರೇಕ್ಷಕರತ್ತ ತಲುಪಿಸುವ ಪ್ರಯತ್ನವೂ ನಡೆದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪದ್ಮಗಂಧಿಯ ಹಾಡುಗಳು ಸಂಪೂರ್ಣವಾಗಿ ಪ್ರೇಕ್ಷಕರ ಮುಂದೆ ಬರಲಿವೆ. ಇಂತಹ ಚಿತ್ರಕ್ಕೆ ಎಲ್ಲರ ಸಹಕಾರ ಅತ್ಯಗತ್ಯ, ಈ ಚಿತ್ರವನ್ನು ಎಲ್ಲರೂ ನೋಡುವಂತಾಗಬೇಕೆಂಬುದೇ ನಮ್ಮ ಆಸೆ. ಅದಕ್ಕಾಗಿ ಮಾಧ್ಯಮದವರ ಮುಂದೆ ಈ ನಮ್ಮ ಚಿತ್ರದ ಕುರಿದಾದಂತ ವಿಚಾರವನ್ನು ಹೇಳಿಕೊಂಡಿದ್ದೇವೆ. ಸಹಕಾರ ಇರಲಿ ಎಂದು ಕೇಳಿಕೊಂಡರು.


ಇನ್ನು ಈ ಚಿತ್ರದ ನಿರ್ದೇಶಕ ಸುಚೇಂದ್ರ ಪ್ರಸಾದ್ ಮಾತನಾಡುತ್ತಾ ಒಂಬತ್ತು ವರ್ಷಗಳ ಸುದೀರ್ಘ ಚರ್ಚೆ , ಸಂಶೋಧನೆಯ ಪ್ರಯಾಣದ ಚಿತ್ರ ಇದೀಗ ನಿಮ್ಮ ಮಡಿಲಿಗೆ ಬಂದಿದೆ. ಹಾಗೆಯೇ ಎಂಎಲ್‌ಸಿಯಾಗಿ, ಪ್ರಾಧ್ಯಾಪಕಿಯಾಗಿ, ಅಂಕಣಕಾರ್ತಿಯಾಗಿ ಪ್ರಸಿದ್ಧರಾಗಿರುವ ಎಸ್ .ಆರ್ ಲೀಲಾ ಅವರು ಬಹು ವರ್ಷಗಳ ಅಧ್ಯಯಯನದ ನಂತರ ಈ ಕಥೆಯನ್ನು ರೂಪಿಸಿದ್ದಾರೆ. ಅದಕ್ಕೆ ಅಷ್ಟೇ ಪ್ರಾಮಾಣಿಕವಾಗಿ ದೃಷ್ಯ ರೂಪ ನೀಡುವ ಪ್ರಯತ್ನ ಮಾಡಿದ್ದೇನೆ. ಈ ನಮ್ಮ ಪದ್ಮಗಂಧಿ ಚಿತ್ರದ ವಿಚಾರ ಪ್ರತಿಯೊಬ್ಬರ ಗಮನಕ್ಕೂ ತಲುಪಬೇಕೆಂಬುದು ನಮ್ಮ ಉದ್ದೇಶ ಎನ್ನುತ್ತಾ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡರು. ನಮ್ಮ ಕನಸಿನ ಕೂಸನ್ನು ಪ್ರೇಕ್ಷಕರ ಮಡಿಲಿಗಿಡುವ ಹಾಕುತ್ತಿದ್ದೇವೆ. ಇದೀಗ ಎಲ್ಲ ರೀತಿಯಿಂದಲೂ ಸಂಪೂರ್ಣಗೊಂಡಿದೆ. ಎಲ್ಲಾ ಅಂದುಕೊಂಡಂತೆ ನಡೆಯುತ್ತಿದ್ದು , ಆಗಸ್ಟ್ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಆಲೋಚನೆ ಇದೆ ಎಂದು ಹೇಳಿದರು.

ಈ ಪದ್ಮಗಂಧಿ ಚಿತ್ರದ ಪರಿಕಲ್ಪನೆ, ನಿರ್ಮಾಣ , ಡಾ. ಎಸ್.ಆರ್. ಲೀಲಾ, ಚಿತ್ರಕಥೆ-ಸಂಭಾಷಣೆ-ನಿರ್ದೇಶನ ಕ. ಸುಚೇಂದ್ರ ಪ್ರಸಾದ, ಡಾ. ದೀಪಕ್ ಪರಮಶಿವನ್ ಸಂಗೀತ, ಎನ್. ನಾಗೇಶ್ ನಾರಾಯಣಪ್ಪ ಸಂಕಲನ, ಮನು ಯಾಪ್ಲಾರ್ ಮತ್ತು ನಾಗರಾಜ್ ಅದ್ವಾನಿ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಶಿಲ್ಪ ಚಂದ್ರಶೇಖರ್, ಮಹಾಪದ್ಮ, ಮೃತ್ಯುಂಜಯ ಶಾಸ್ತ್ರಿ ಪರಿಪೂರ್ಣ, ಪಂಡಿತ ಪ್ರಸನ್ನ ವೈದ್ಯ, ಡಾ. ದೀಪಕ್ ಪರಮಶಿವನ್, ಹೇಮಂತ ಕುಮಾರ. ಜಿ ಸೇರಿದಂತೆ ಗುರುಕುಲದ ವಿದ್ಯಾರ್ಥಿಗಳು , ವಿದ್ವಾಂಸರು ಸೇರಿದಂತೆ ಮುಂತಾದವರ ತಾರಾಗಣವಿದೆ. ಈ ಪದ್ಮಗಂಧಿ ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು , ಕನ್ನಡ , ಹಿಂದಿ ಹಾಗೂ ಸಂಸ್ಕೃತ ಭಾಷೆಯಲ್ಲಿ ಸಿದ್ಧವಾಗುತ್ತಿದ್ದು , ಅತಿ ಶೀಘ್ರದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.

error: Content is protected !!