Cini NewsSandalwoodUncategorized

ಯುವನಟ ಭಾರ್ಗವಕೃಷ್ಣ ನಟನೆಯ “ಓಂ ಶಿವಂ” ಹಾಡುಗಳು ಸದ್ಯದಲ್ಲೇ ಬಿಡುಗಡೆ.

ಸ್ಯಾಂಡಲ್ ವುಡ್ ಗೆ ಹೊಸ ಪ್ರತಿಭೆಗಳು ತಮ್ಮ ಅದೃಷ್ಟದ ಪರೀಕ್ಷೆಗೆ ವಿಭಿನ್ನ ಬಗೆಯ ಕಥಾನಕಗಳ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಆ ನಿಟ್ಟಿನಲ್ಲಿ ಪ್ರೀತಿ ಪ್ರೇಮದ ಸುತ್ತ , ಆನ್ಲೈನ್ ಮಾಫಿಯಾ ಹಾಗೂ ಡ್ರಗ್ಸ್ ದಂಧೆಯ ಸೂಕ್ಷ್ಮ ಎಳೆಯೊಂದಿಗೆ ಗಮನ ಸೆಳೆಯಲು ಬರುತ್ತಿರುವಂತಹ ಯುವ ಪ್ರತಿಭೆ ಭಾರ್ಗವ್ ಕೃಷ್ಣ. ತಮ್ಮ ಪ್ರಥಮ ಪ್ರಯತ್ನದ “ಓಂ ಶಿವಂ” ಚಿತ್ರದಲ್ಲಿ ಭಾರ್ಗವ್ ಕೃಷ್ಣ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಇನ್ನು ನಾಯಕನ ತಂದೆ ಕೃಷ್ಣ ಕೆ. ಎನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮನಸ್ಸನ್ನ ಗೆಲ್ಲುವಂತಹ ಸುಂದರ ಹಾಡುಗಳ ಬಿಡುಗಡೆ ಕಾರ್ಯಕ್ರಮ ಸಧ್ಯದಲ್ಲೇ ಅದ್ದೂರಿಯಾಗಿ ನೆರವೇರಲಿದೆ.

ಇನ್ನು ಈ ಚಿತ್ರದ ನಾಯಕ ನಟ ಭಾರ್ಗವ್ ಕೃಷ್ಣ ಪ್ರಕಾರ ನಿರ್ದೇಶಕ ಆಲ್ವಿನ್ ಒಳ್ಳೆಯ ಕಥೆ ಸಿದ್ದ ಮಾಡಿಕೊಂಡು ಬಂದು ಕಥೆ ಹೇಳಿದರು. ಯುವಜನರು ಆನ್ಲೈನ್ ಮಾಫಿಯಾ ಹಾಗೂ ಡ್ರಗ್ಸ್ ದಂಧೆಗೆ ಸಿಲುಕಿಕೊಂಡು ಹೇಗೆಲ್ಲ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂಬ ವಿಚಾರದ ಜೊತೆಗೆ ಪ್ರೀತಿಯ ಬಲೆಗೆ ಬಿದ್ದಾಗ ಫ್ಯಾಮಿಲಿ ಹಾಗೂ ಪ್ರೇಮಿಗಳು ಎದುರಿಸುವ ಒಂದಷ್ಟು ಸೂಕ್ಷ್ಮ ವಿಚಾರವನ್ನು ಬಹಳ ಸೊಗಸಾಗಿ ಮಾಡಿಕೊಂಡಿದ್ದಾರೆ. ಹಾಗಾಗಿ ನಾನು ಈ ಚಿತ್ರದಲ್ಲಿ ನಾಯಕನಾಗಿ ನಟಿಸಲು ಒಪ್ಪಿಕೊಂಡೆ, ನನ್ನ ಅಭಿನಯಕ್ಕೂ ಒಳ್ಳೆಯ ಅವಕಾಶ ಇದೆ. ಚಿತ್ರಕ್ಕಾಗಿ ಪೂರ್ವಸಿದ್ಧತೆಯೊಂದಿಗೆ ಬರುತ್ತಿದ್ದೇನೆ. ಎಲ್ಲರ ಬೆಂಬಲ ಇರಲಿ ಎಂದು ಕೇಳಿಕೊಂಡಿದ್ದಾರೆ.

ಈ ಹಿಂದೆ ರಾಜ್ ಬಹದ್ದೂರ್ ಎಂಬ ಚಿತ್ರವನ್ನು ನಿರ್ದೇಶನ ಮಾಡಿದಂತ ಆಲ್ವಿನ್ ನಿರ್ದೇಶಿಸಿರುವ ಎರಡನೇ ಚಿತ್ರ “ಓಂ ಶಿವಂ”. ಲವ್ ಜಾನರ್ ನ ಜೊತೆ ಆನ್ಲೈನ್ ಮಾಫಿಯಾ ಡ್ರಗ್ಸ್ ಸುತ್ತ ಕಥೆಯನ್ನು ಹೇಳಲಾಗಿದೆಯಂತೆ. ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಈ ಚಿತ್ರದ ನಾಯಕ ನಟ ಭಾರ್ಗವ ಕೃಷ್ಣ ಬಹಳ ಸೊಗಸಾಗಿ ಅಭಿನಯಿಸಿದ್ದಾರೆ. ಅದೇ ರೀತಿ ನಾಯಕಿ ಸೇರಿದಂತೆ ಎಲ್ಲಾ ಪಾತ್ರವರ್ಗದವ್ರು ಹಾಗೂ ತಂತ್ರಜ್ಞರು ಉತ್ತಮ ಸಾತ್ ನೀಡಿದ್ದಾರೆ. ನಾಲ್ಕು ಹಾಡುಗಳು, ಅದ್ದೂರಿ ಸಾಹಸ ಸನ್ನಿವೇಶಗಳು ಈ ಚಿತ್ರದಲ್ಲಿದೆ. ಖಂಡಿತ ಈ ಚಿತ್ರ ಇಷ್ಟವಾಗುತ್ತದೆ ಎಂಬುದು ನಿರ್ದೇಶಕರ ಮಾತು.

ಈ ಚಿತ್ರದಲ್ಲಿ ನಾಯಕ ನಟ ಭಾರ್ಗವಕೃಷ್ಣ ಗೆ ಜೋಡಿಯಾಗಿ ವಿರಾನಿಕಾ ಶೆಟ್ಟಿ ಅಭಿನಯಿಸಿದ್ದು , ನಟರಾದ ಕಾಕ್ರೋಜ್ ಸುಧೀ, ರವಿ ಕಳೆ, ಉಗ್ರಂ ರವಿ, ಯಶ್ ಶೆಟ್ಟಿ, ವರ್ಧನ್, ನಟಿಯರಾದ ಅಪೂರ್ವ, ಲಕ್ಷ್ಮೀ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ವಿಜಯ್ ಯಾರ್ಡ್ಲೆ ಸಂಗೀತ ನೀಡಿದ್ದು , ಗೌಸ್ ಪೀರ್, ಕವಿರಾಜ್ , ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ಛಾಯಾಗ್ರಾಹಕ ವೀರೇಶ್ ಹಾಗೂ ಸಾಹಸ ನಿರ್ದೇಶಕ ಕೌರವ ವೆಂಕಟೇಶ್ , ಸಂಕಲನ ಸತೀಶ್ ಚಂದ್ರ , ಮೇಕಪ್ ಕುಮಾರ್ ವಸ್ತ್ರಲಂಕಾರ , ಮಲ್ಲಿಕಾರ್ಜುನ್ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಮಳವಳ್ಳಿ ಸಾಯಿ ಕೃಷ್ಣ ಸಂಭಾಷಣೆ ಬರೆದಿದ್ದಾರೆ.

ದೀಪಾ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಈಗ ಸೆನ್ಸರ್ ಮುಗಿಸಿಕೊಂಡು ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಸಿದ್ಧತೆಯನ್ನ ಮಾಡಿಕೊಂಡಿದ್ದು , ಮುಂದಿನ ತಿಂಗಳು ರಾಜ್ಯದಾದ್ಯಂತ ಅದ್ದೂರಿಯಾಗಿ ಬಿಡುಗಡೆ ಮಾಡಲು ಯೋಜನೆಯನ್ನು ಹಾಕಿಕೊಂಡಿದೆ.

error: Content is protected !!