101 ಜನರಿಗೆ ಕಾಶಿಯಾತ್ರೆ ಮಾಡಿಸಲು ಮುಂದಾದ ಜಿಮ್ ರವಿ.
ಅಮ್ಮನ ಮಾತಿನಂತೆ ಅನಾಥ ಹೆಣಗಳಿಗೆ ಅಗ್ನಿಸ್ಪರ್ಶ ಮಾಡಿಸಿ ಮುಕ್ತಿ ನೀಡುವ ಕಾಯಕ ಮಾಡುವ ರವಿ , ಅಪ್ಪನ ಆಸೆ ಈಡೇರಿಸಲು ಅವರ ಹೆಸರಿನಲ್ಲೇ ಅಶಕ್ತರಿಗೆ ಕಾಶಿಯಾತ್ರೆ ಮಾಡಿಸಲು ಮುಂದಾಗಿದ್ದಾರೆ. ಇದೊಂದು ಹೃದಯಸ್ಪರ್ಶಿ ಕಾರ್ಯವಾಗಿದ್ದು, ತಮ್ಮ ಮನದ ಮಾತುಗಳನ್ನು ಹಂಚಿಕೊಳ್ಳಲು ನಿರ್ಧರಿಸಿದಾಗ ಹಿರಿಯ ಪತ್ರಕರ್ತರಾದ ಕೆ .ಎಸ್. ವಾಸು ಅವರನ್ನ ಭೇಟಿ ಮಾಡಿ ವಿಚಾರ ತಿಳಿಸಿ ತದನಂತರ ಅವರ ಮಾರ್ಗದರ್ಶನದಲ್ಲಿ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ರನ್ನ ಭೇಟಿ ಮಾಡಿ ವಿಷಯ ತಿಳಿಸಿದ್ದಾರೆ.
ಇದೊಂದು ಮಹತ್ವವಾದ ಪುಣ್ಯದ ಕೆಲಸ ಈ ಒಂದು ವಿಚಾರ ಎಲ್ಲರಿಗೂ ತಿಳಿಯಬೇಕು , ಹಾಗಾಗಿ ನಮ್ಮ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯಿಂದಲೇ ಮಾಧ್ಯಮದವರನ್ನು ಬರಮಾಡಿಕೊಳ್ಳಲು ಪತ್ರಿಕಾಗೋಷ್ಠಿಯನ್ನ ಆಯೋಜನೆ ಮಾಡುತ್ತೇವೆ , ನಿಮ್ಮ ಎಲ್ಲಾ ಮಾಹಿತಿ ವಿಚಾರಗಳನ್ನ ಅವರೊಟ್ಟಿಗೆ ಹಂಚಿಕೊಳ್ಳಿ ಎಂದು ಪಿಆರ್ ಒ ವೆಂಕಟೇಶ್ ಹೇಳಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಜಿಮ್ ರವಿ ಎಂದೇ ಖ್ಯಾತಿ ಪಡೆದಂತಹ ವ್ಯಕ್ತಿ ಎ.ಕೆ. ರವಿ. ಬಹಳ ಸರಳ ಜೀವಿ ಹಾಗೂ ಸ್ನೇಹಜೀವಿಯೂ ಕೂಡ ಹೌದು , ಕೋಲಾರ ಮೂಲದ ಎ.ಕೆ.ರವಿ ದೇಹದಾರ್ಢ್ಯ ಪಟುವಾಗಿ ದೇಶ ಹಾಗೂ ವಿದೇಶಗಳಲ್ಲೂ ಪ್ರಸಿದ್ದರಾಗಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.
ಇತ್ತೀಚೆಗೆ “ಪುರುಷೋತ್ತಮ” ಎಂಬ ಚಿತ್ರದಲ್ಲಿ ನಾಯಕನಾಗೂ ನಟಿಸಿದ್ದರು. ಇದೆಲ್ಲಾ ಒಂದು ಕಡೆಯಾದರೆ, ರವಿ ಅವರು ಸಾಮಾಜಿಕ ಕಾರ್ಯಗಳ ಮೂಲಕವೂ ಹೆಸರುವಾಸಿ. ಈಗ ಮತ್ತೊಂದು ಮಹತ್ತರವಾದ ಕಾರ್ಯಕ್ಕೆ ಮುಂದಾಗಿದ್ದಾರೆ. ಇದೊಂದು ಪ್ರತಿಯೊಬ್ಬರಿಗೂ ಮಾದರಿಯಾಗುವಂತಹ ಮಹತ್ಕಾರ್ಯ ಆಗಿದೆ. ಈ ವಿಚಾರವನ್ನು ತಿಳಿಸಲು ರವಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಜಿಮ್ ರವಿ ಮಾತನಾಡುತ್ತಾ ನಾನು ಕೋಲಾರದಿಂದ ಬೆಂಗಳೂರಿಗೆ ಬಂದು ಟೌನ್ ಹಾಲ್ ನಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಳಿಸಿದೆ ಎನ್ನುತ್ತಾ , ನಮ್ಮದು ಕೋಲಾರದಲ್ಲಿ ಮಧ್ಯಮವರ್ಗದ ಕುಟುಂಬ. ದಿನ ಮುದ್ದೆ ತಿನ್ನುತ್ತಿದ್ದ ನಾವು ಹಬ್ಬಗಳಲ್ಲೇ ಅನ್ನ ಉಣ್ಣುತ್ತಿದ್ದದ್ದು. ಆದರೆ ನನ್ನ ತಾಯಿ ನನಗೆ ತುಂಬಾ ಆದರ್ಶ. ಜೀವನದ ಪಾಠ ಕಲಿಸಿದ ಮಹಾತಾಯಿ ಅವರು. ಒಬ್ಬರ ಸುಖಕ್ಕೆ ನೀನು ಆಗದಿದ್ದರೂ ಪರವಾಗಿಲ್ಲ. ಕಷ್ಟದಲ್ಲಿ ಅವರ ಜೊತೆಗಿರು.
ಹಿರಿಯರ ಮುಂದೆ ಕೈ ಕಟ್ಟಿ ನಿಲ್ಲು ಅಂತ ಅಮ್ಮ ಹೇಳಿಕೊಟ್ಟಿದ್ದು. ಹೀಗೆ ಜೀವನ ಸಾಗುತ್ತಿದ್ದಾಗ ಅಮ್ಮ ನಮ್ಮನ್ನು ಬಿಟ್ಟು ಹೋಗುತ್ತಾರೆ. ಅಮ್ಮನ ನಿಧನದ ಕೆಲವು ತಿಂಗಳ ನಂತರ ಅಪ್ಪ, ನನ್ನ ಹತ್ತಿರ ಬಂದು ನಿಮ್ಮ ಅಮ್ಮನ ಸಾವಿನಿಂದ ಬಹಳ ದುಖವಾಗಿದೆ. ಹಾಗಾಗಿ ನನ್ನನ್ನು ಕಾಶಿಯಾತ್ರೆಗೆ ಕರೆದುಕೊಂಡು ಹೋಗು ಎನ್ನುತ್ತಾರೆ. ನನ್ನ ಹತ್ತಿರ ಆಗ ದುಡ್ಡು ಇರಲ್ಲ.
ಅಪ್ಪನಿಗೆ ಏರು ದ್ವನಿಯಲ್ಲಿ ಈಗ ಅದೆಲಾ ಆಗಲ್ಲ ಅಂದು ಬಿಡುತ್ತೇನೆ. ಅದಾದ ಕೆಲವು ತಿಂಗಳ ನಂತರ ಮತ್ತೆ ಕೇಳುತ್ತಾರೆ. ನಾನು ಅವರಿಗೆ ವಿಮಾನದಲ್ಲಿ ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿ ಸಮಾಧಾನ ಮಾಡುತ್ತೇನೆ. ಕೆಲವು ದಿನಗಳ ನಂತರ ಗೆಳೆಯರ ಹತ್ತಿರ ಸಾಲ ಮಾಡಿ ಅಪ್ಪನ ಕಾಶಿಯಾತ್ರೆಗೆ ವಿಮಾನದ ಟಿಕೇಟ್ ಬುಕ್ ಮಾಡುತ್ತೇನೆ. ಆ ವಿಷಯ ಅಪ್ಪನಿಗೆ ಫೋನ್ ಮಾಡು ಹೇಳುತ್ತೇನೆ. ಅವರು ಖುಷಿಯಾಗುತ್ತಾರೆ. ಆದರೆ ವಿಧಿಯೇ ಬೇರೆ ಆಗಿರುತ್ತದೆ.
ನಾನು ಈ ವಿಷಯ ತಿಳಿಸಿದ ಕೆಲವೇ ಗಂಟೆಗಳಲ್ಲೇ ಅಪ್ಪನ್ನು ನಮ್ಮನ್ನು ಬಿಟ್ಟು ಹೋಗಿ ಬಿಡುತ್ತಾರೆ. ಅವರ ಕಾಶಿಯಾತ್ರೆಯ ಆಸೆಯೂ ಅವರ ಜೊತೆಗೆ ಹೋಗಿ ಬಿಡುತ್ತದೆ. ಅದೇ ದಿನ ನಾನು ನಿರ್ಧಾರ ಮಾಡುತ್ತೇನೆ. ನಮ್ಮ ಅಪ್ಪನ ಆಸೆ ಈಡೇರಿಸಲು, ಕಾಶಿಯಾತ್ರೆ ಮಾಡಲು ಸಾಧ್ಯವಿಲ್ಲದ್ದ ಕೆಲವು ಅಶಕ್ತರಿಗೆ ನಮ್ಮ ಅಪ್ಪನ ಹೆಸರಿನಲ್ಲಿ ಕಾಶಿಯಾತ್ರೆ ಮಾಡಿಸಬೇಕು ಎಂದು ತೀರ್ಮಾನಿಸುತ್ತೇನೆ.
ನಮ್ಮ ಅಪ್ಪ ನಿಧನರಾಗಿ ಹದಿನಾಲ್ಕು ವರ್ಷಗಳಾಯಿತು ಅಂದಿನಿಂದ ಇಂದಿನವರೆಗೂ ಅದಕೋಸ್ಕರ ಹುಂಡಿ ಇಟ್ಟು ದುಡ್ಡು ಕೂಡಿ ಹಾಕುತ್ತಿದ್ದ. ಯಾವುದೇ ದುಂದು ವೆಚ್ವ ಮಾಡದೇ ಹತ್ತು, ಇಪ್ಪತ್ತು ರೂಪಾಯಿಯಿಂದ ಹಿಡಿದು ಸಾವಿರ ರೂಪಾಯಿಗಳ ವರೆಗೂ ಹುಂಡಿಯಲ್ಲಿ ಹಾಕುತ್ತಿದ್ದೆ.
ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ವಾಣಿಜ್ಯ ತೆರೆಗೆ ಅಧಿಕಾರಿಗಳಾದ ಜಗನ್ನಾಥ್ ಹಾಗೂ ಕುಟುಂಬದವರ ಮಾರ್ಗದರ್ಶನದಲ್ಲಿ ಈಗ ಜುಲೈ 2 ನೇ ತಾರೀಖು ರಾಜ್ಯದ ವಿವಿಧ ಕಡೆಗಳಿಂದ ಸುಮಾರು 80 ಜನ ಅಶಕ್ತರನ್ನು ನಾನೇ ಖುದ್ದಾಗಿ ಭೇಟಿ ಮಾಡಿ ಅವರ ಜೊತೆ 101 ಜನರ ತಂಡ ಪಯಣ ಬೆಳೆಸುತ್ತಿದ್ದೇವೆ. ಅವರ ಊರಿನಿಂದ ಬರುವ ಪ್ರಯಾಣದ ವೆಚ್ಚದಿಂದ ಹಿಡಿದು ಎಲ್ಲಾ ವ್ಯವಸ್ಥೆಯನ್ನು ನಾವೇ ಮಾಡುತ್ತಿದ್ದೇವೆ.
ಜುಲೈ 2 ರ ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ರಾಮ ಜನ್ಮಭೂಮಿ ಅಯೋಧ್ಯೆಗೆ ಪಯಣ. ಅಲ್ಲಿಂದ ಪ್ರಯಾಗರಾಜ್ , ಕಾಶಿ. ಒಟ್ಟು ಮೂರು ದಿನಗಳ ಯಾತ್ರೆ ಇದು. ಎಲ್ಲಾ ಕಡೆ ಎಸಿ ವಾಹನ ಹಾಗೂ ಎಸಿ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ನಮ್ಮ ಜೊತೆಗೆ ವೈದ್ಯೆರು ಹಾಗು ಸ್ವಯಸೇವಕರು ಇರುತ್ತಾರೆ. ಆಹ್ವಾನಿಸಿದ ಅತಿಥಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು.
ನನಗೆ ಈ ವಿಚಾರ ಪ್ರಚಾರ ಮಾಡುವ ಉದ್ದೇಶವಿರಲಿಲ್ಲ. ಸ್ನೇಹಿತರು, ಹಿರಿಯರ ಮಾರ್ಗದರ್ಶನ ದಿಂದ ಈ ವಿಚಾರ ಜನರಿಗೆ ತಿಳಿಯಬೇಕು , ಪ್ರತಿಯೊಬ್ಬರಿಗೂ ಆದರ್ಶವಾಗಬೇಕು ಎಂಬ ನಿಟ್ಟಿನಲ್ಲಿ ನಾನು ಈ ವಿಚಾರವನ್ನು ತಿಳಿಸುತ್ತಿದ್ದೇನೆ. ದೇವರು ಅನುಕೂಲ ಮಾಡಿಕೊಟ್ಟರೆ ಮುಂದೆ ಕೂಡ ಇದೇ ರೀತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ಇದೆ. ಪ್ರತಿಯೊಬ್ಬರಿಗೂ ಅನುಕೂಲವಾಗಬೇಕೆಂಬುದೇ ನನ್ನ ಉದ್ದೇಶ ಎಂದು ಜಿಮ್ ರವಿ ಹೇಳಿದರು.