Cini NewsSandalwood

ರಾಜವರ್ಧನ್ ನಟನೆಯ “ಗಜರಾಮ” ಟೀಸರ್ ರಿಲೀಸ್

ಹಾಸ್ಯನಟ ಡಿಂಗ್ರಿ ನಾಗರಾಜ್ ಮಗ ರಾಜವರ್ಧನ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಿಚ್ಚುಗತ್ತಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿರುವ ಮ್ಯಾಸೀವ್ ಸ್ಟಾರ್ ಈಗ ಗಜರಾಮ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ನಿನ್ನೆ ಬೆಂಗಳೂರಿನ ಮಲ್ಲೇಶ್ವರನಲ್ಲಿರುವ ಎಸ್ ಆರ್ ವಿ ಥಿಯೇಟರ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಟೀಸರ್ ಬಿಡುಗಡೆ ಬಳಿಕ ಚಿತ್ರತಂಡ ಮಾಧ್ಯಮದವರೊಟ್ಟಿಗೆ ಮಾಹಿತಿ ಹಂಚಿಕೊಂಡಿದೆ.

ನಾಯಕ ರಾಜವರ್ಧನ್ ಮಾತನಾಡಿ, ತುಂಬಾ ಎಮೋಷನಲ್ ಜರ್ನಿ. ತುಂಬಾ ಕಂಟೆಂಟ್ ಇದೆ ಮಾತನಾಡುವುದು. ಅದನ್ನು ಟ್ರೇಲರ್ ಲಾಂಚ್ ನಲ್ಲಿ ಮಾತನಾಡುತ್ತೇನೆ. ಗಜರಾಮ ಸಬ್ಜೆಕ್ಟ್. ಈ ರೀತಿ ಕಮರ್ಷಿಯಲ್ ಇರುವ ಎಲಿಮೆಂಟ್ ನ್ನು ನಾನು ಸಣ್ಣ ವಯಸ್ಸಿನಲ್ಲಿ ಬೇರೆ ಹೀರೋ ನೋಡಿ ಸಿಳ್ಳೆ ಚಪ್ಪಾಳೆ ಹೊಡೆದು ಎಂಜಾಯ್ ಮಾಡುತ್ತಿದ್ದೆ. ಇವತ್ತು ನನ್ನನ್ನು ನಾನು ಸ್ಕ್ರೀನ್ ಮೇಲೆ ನೋಡಿಕೊಂಡಿದ್ದು ಖುಷಿಯಾಗಿದೆ. ನಮ್ಮ ತಂದೆ ಟೀಸರ್ ನೋಡಿ ಖುಷಿಪಡುತ್ತಾರೆ. ಇಡೀ ತಂಡದ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ ಎಂದು ತಿಳಿಸಿದರು.

ಸಂಗೀತ ನಿರ್ದೇಶಕ ಮನೋಮೂರ್ತಿ ಮಾತನಾಡಿ, ಗಜರಾಮ ಟೀಸರ್ ನೋಡಿದ್ದೀರಾ? ನಮ್ಮ ಹೀರೋ ಇದು ಆಕ್ಷನ್ ಅಂತಾರೆ. ಆದರೆ ಆಕ್ಷನ್ ಇದೆ. ಸೆಂಟಿಮೆಂಟ್, ಲವ್ ಕೂಡ ಇದೆ. ಮೂರು ಶೇಡ್ ನಲ್ಲಿ ನಾಯಕ ಕಾಣಿಸಿಕೊಳ್ಳುತ್ತಾರೆ. ಒಂದು ಪೈಲ್ವಾನ್ ಪಾತ್ರ. ಮತ್ತೊಂದು ಸೆಂಟಿಮೆಂಟ್ ಪಾತ್ರ ಅದಕ್ಕೆ ರಾಮ. ಮಗದೊಂದು ನಾಯಕಿನ್ನು ರಕ್ಷಿಸುವ ಪಾತ್ರ. ಅದು ರಾವಣ. ಹೀಗೆ ಮೂರು ರೀತಿ ಶೇಡ್ ಇದೆ. ಇದು ವಿಭಿನ್ನ ಸಿನಿಮಾ. ಅದಕ್ಕಾಗಿ ಚಿತ್ರದ ಮ್ಯೂಸಿಕ್ ಮತ್ತು ಹಾಡುಗಳು ವಿಭಿನ್ನವಾಗಿ ಮಾಡಿದ್ದೇವೆ.

2024ರಲ್ಲಿ ಈ ಚಿತ್ರ ಗಜರಾಮ ಸೂಪರ್ ಹಿಟ್ ಆಗಬೇಕು ಎಂದರು. ನಿರ್ದೇಶಕ ಸುನಿಲ್ ಕುಮಾರ್ ಮಾತನಾಡಿ, ಟೀಸರ್ ಇಷ್ಟು ಅದ್ಭುತವಾಗಿ ಬರಲು ಕಾರಣ. ನಿರ್ಮಾಪಕರು. ಇವರು ನನ್ನ ಮೇಲೆ ನಂಬಿಕೆ ಇಟ್ಟು ಪ್ರಾಜೆಕ್ಟ್ ಕೊಟ್ಟಿದ್ದರು. ಆ ನಂಬಿಕೆ ಉಳಿಸಿಕೊಂಡಿದ್ದೇನೆ ಎಂದುಕೊಂಡಿದ್ದೇನೆ. ರಾಜವರ್ಧನ್ ಸರ್ ತುಂಬಾ ಡೆಡಿಕೇಷನ್ ಆಗಿ ಕೆಲಸ ಮಾಡಿದ್ದಾರೆ. ರಾಮ ಪಾತ್ರಕ್ಕೆ ಪರಿಪೂರ್ಣ ಜೀವ ತುಂಬಿದ್ದಾರೆ. ದೀಪಕ್ ಸರ್ ಪೊಲೀಸ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಚಂದ್ರು ಸರ್ ಕ್ಯಾಮೆರಾವರ್ಕ್, ಮನೋಮೂರ್ತಿ ಸರ್ ಸಂಗೀತ, ಧನು ಮಾಸ್ಟರ್ ಕೊರಿಯೋಗ್ರಫಿ ಅದ್ಭುತವಾಗಿದೆ ಎಂದರು.

ನಾಯಕಿ ತಪಸ್ವಿನಿ ಮಾತನಾಡಿ, ನನ್ನದು ಇದು ಎರಡನೇ ಸಿನಿಮಾ. ಇಂಡಸ್ಟ್ರೀಗೆ ನಾನು ಹೊಸಬಳು. ನನ್ನ ಮೊದಲ ಚಿತ್ರ ರಿಷಬ್ ಸರ್ ಜೊತೆ ಮಾಡಿರುವುದಕ್ಕೆ ನಾನು ಲಕ್ಕಿ. ಹರಿಕಥೆ ಅಲ್ಲ ಗಿರಿಕಥೆ ಬ್ಯೂಟಿಫುಲ್ ಜರ್ನಿಯಾಗಿತ್ತು. ಗಜರಾಮ ಸಿನಿಮಾಗೆ ಬಂದಾಗ ಸುನಿಲ್ ಸರ್ ಹೇಳಿದ ಕಥೆ ಕೇಳಿ ಖುಷಿಯಾಯ್ತು. ಇಡೀ ತಂಡ ನನಗೆ ಕಂಪರ್ಟ್ ಕೊಟ್ಟಿದೆ. ಇಡೀ ತಂಡ ಎಲ್ಲಾ ರೀತಿಯಿಂದಲೂ ಸಪೋರ್ಟ್ ಮಾಡಿದ್ದಾರೆ.

ಟೀಸರ್ ನೋಡಿ ಪಾಸಿಟಿವ್ ಎನರ್ಜಿ ಬಂದಿದೆ ಎಂದರು. ಆಕ್ಷನ್ ಅಂಶಗಳಿಂದ ಕೂಡಿರುವ ಟೀಸರ್ ನಲ್ಲಿ ಪ್ರೇಮಕಥೆಯನ್ನು ಅನಾವರಣ ಮಾಡಲಾಗಿದೆ. ಭರ್ಜರಿ ಆಕ್ಷನ್ಸ್ ಮೂಲಕ ರಾಜವರ್ಧನ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಜೋಡಿಯಾಗಿ ತಪಸ್ವಿನಿ ಬಣ್ಣ ಹಚ್ಚಿದ್ದಾರೆ. ಪೊಲೀಸ್ ಪಾತ್ರದಲ್ಲಿ ದೀಪಕ ನಟಿಸಿದ್ದಾರೆ. ಕಬೀರ್ ಸಿಂಗ್ ಖಳನಾಯಕನ ಪಾತ್ರ ಮಾಡುತ್ತಿದ್ದಾರೆ.

ಈ ಸಿನಿಮಾವನ್ನು ಯುವ ನಿರ್ದೇಶಕ ಸುನಿಲ್ ಕುಮಾರ್ ವಿ.ಎ. ನಿರ್ದೇಶನ ಮಾಡುತ್ತಿದ್ದಾರೆ. ಖ್ಯಾತ ನಿರ್ದೇಶಕರಾದ ಯೋಗರಾಜ್ ಭಟ್, ‘ದುನಿಯಾ’ ಸೂರಿ ಸೇರಿದಂತೆ ಒಂದಷ್ಟು ನಿರ್ದೇಶಕರ ಜೊತೆ ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವವಿರುವ ಸುನಿಲ್ ಕುಮಾರ್‌ ಈಗ ‘ಗಜರಾಮ’ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ.

ಆಕ್ಷನ್ ಮಾಸ್ ಎಂಟರ್‌ಟೇನರ್ ಆಗಿರುವ ‘ಗಜರಾಮ’ ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡುತ್ತಿರುವುದು ವಿಶೇಷ. ಈ ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್ ಛಾಯಾಗ್ರಾಹಣ ಮಾಡುತ್ತಿದ್ದು, ಜ್ಞಾನೇಶ್ ಬಿ. ಮಠದ್ ಸಂಕಲನದ ಹೊಣೆ ಹೊತ್ತುಕೊಂಡಿದ್ದಾರೆ. ಧನಂಜಯ್ ಅವರ ಕೊರಿಯೋಗ್ರಾಫಿ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ ಈ ಚಿತ್ರಕ್ಕಿದೆ. ‘ಬಾಂಡ್ ರವಿ’ ಸಿನಿಮಾವನ್ನು ನಿರ್ಮಾಣ ಮಾಡಿರುವ ಲೈಫ್ ಲೈನ್ ಫಿಲ್ಮ್ ಪ್ರೊಡಕ್ಷನ್ ಅಡಿಯಲ್ಲಿ ನರಸಿಂಹಮೂರ್ತಿ ‘ಗಜರಾಮ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝವೀಯರ್ ಫರ್ನಾಂಡಿಸ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

error: Content is protected !!