ವಿಜಯ ರಾಘವೇಂದ್ರ ನಟನೆ “ರುದ್ರಾಭಿಷೇಕಂ” ಟ್ರೈಲರ್ ಬಿಡುಗಡೆ.

Spread the love

ನಮ್ಮ ನಾಡಿನ ಕಲೆ, ಸಾಂಸ್ಕೃತಿಕ‌ ಪರಂಪರೆಗಳಲ್ಲಿ ಒಂದಾದ ವೀರಗಾಸೆ ಕಲೆಯನ್ನು ಆರಾಧಿಸುತ್ತ ಬಂದಿರುವ ಕುಟುಂಬ ಹಾಗೂ ವೀರಭದ್ರ ದೇವರ ಇತಿಹಾಸ ಹೇಳುವ ರುದ್ರಾಭಿಷೇಕಂ ಚಿತ್ರ ಸೆ. 25 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ವಸಂತ್ ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಫ್ಯಾನ್ ಇಂಡಿಯಾ ಕ್ರಿಯೇಶನ್ಸ್ ಅಡಿ ವಿಜಯಪುರದ 9 ಜನ ರೈತರುಗಳು ನಿರ್ಮಿಸಿದ್ದಾರೆ. ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ವೀರಗಾಸೆ ಕಲಾವಿದ ಅಲ್ಲದೆ, ಇದೇ ಮೊದಲ ಬಾರಿಗೆ ತಂದೆ, ಮಗನಾಗಿ, ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಪ್ರಿಯಾಕಾ ತಿಮ್ಮೇಶ್ ಕೂಡ ಮಾಡ್ರನ್ ಹಾಗೂ ಟ್ರೆಡಿಷನಲ್ ಆಗಿ ಎರಡು ಪಾತ್ರಗಳನ್ನು ನಿಭಾಯಿಸಿದ್ದಾರೆ.


ವೇದಿಕೆಯಲ್ಲಿ ನಿರ್ದೇಶಕ ವಸಂತಕುಮಾರ್
ಮಾತನಾಡುತ್ತ ನನ್ನ ಕನಸು ನನಸಾಗುವಲ್ಲಿ ನವರತ್ನಗಳಾದ ನಿರ್ಮಾಪಕರ, ಕಲಾವಿದ, ತಂತ್ರಜ್ಞರ ಸಹಕಾರ ದೊಡ್ಡದು.ಶೂಟಿಂಗ್ ವೇಳೆ ಅನೇಕ ಅಹಿತಕರ ಘಟನೆಗಳು ನಡೆದರೂ ನಮಗೆ ವೀರಭದ್ರದೇವರ ಅನುಗ್ರಹವಿತ್ತು. ಜನರಿಗೆ ಏನಾದರೂ ಹೊಸದನ್ನು ಕೊಟ್ಟರೆ ನೋಡ್ತಾರೆ ಎಂದು ರಿಸ್ಕ್ ತಗೊಂಡೆವು. ವಿಜಯ ರಾಘವೇಂದ್ರ ಬೆಟ್ಟ ಹತ್ತಿ ಇಳಿದಾಗ ಅವರಿಗಿದ್ದ ಬ್ಯಾಕ್ ಪೇನ್ ಹೊರಟುಹೋಯ್ತು. 50 ದಿನಗಳ ಶೂಟಿಂಗ್ ನಲ್ಲಿ 22-23 ದಿನ ನಮ್ಮೊಂದಿಗೆ ಅವರು ಕೆಲಸ ಮಾಡಿದ್ದಾರೆ. ದೈವದ ಹಿನ್ನೆಲೆ ಇರೋ ಜನಪದ ಕಲೆಯನ್ನು ನಾಡಿನೆಲ್ಲೆಡೆ ತಲುಪಿಸಬೇಕು ಎನ್ನುವುದೇ ನಮ್ಮ ಉದ್ದೇಶ.
ಚಿತ್ರವೀಗ ರಿಲೀಸ್ ಹಂತ ತಲುಪಿದೆ. ನಿಮ್ಮೆಲ್ಲರ ಸಹಕಾರ ಬೇಕು ಎಂದು ಕೋರಿದರು.
ಸಂಗೀತ ನಿರ್ದೇಶಕ ವಿ.ಮನೋಹರ್ ಮಾತನಾಡಿ ಈ ಚಿತ್ರಕ್ಕೆ ಮ್ಯೂಸಿಕ್ ಮಾಡೋ ಜತೆಗೆ ಅಭಿನಯ ಕೂಡ ಮಾಡಿದ್ದೇನೆ. ನಿಮ್ಮನ್ನ ಬೇರೆಥರ ತೋರಿಸ್ತೇನೆಂದು ಹೊಸ ಗೆಟಪ್ ಹಾಕಿದ್ದಾರೆ ಎಂದರು.


ನಾಯಕ ವಿಜಯ ರಾಘವೇಂದ್ರ ಮಾತನಾಡುತ್ತ ನಿರ್ದೇಶಕರು ಬಂದಾಗ ನನ್ನ ಯಾಕೆ ಆಯ್ಕೆ ಮಾಡಿಕೊಂಡಿರಿ ಎಂದು ಕೇಳಿದೆ. ಈ ಪಾತ್ರ ನನ್ನ ಕೈಲಿ ಆಗುತ್ತಾ ಎಂಬ ಅನುಮಾನವಿತ್ತು. ಹೊಂದೆ ಪುಟ್ಟಜ್ಜಯ್ಯನ ಪಾತ್ರ ಮಾಡುವಾಗಲೂ ಭಯ ಇತ್ತು.
ಕಳೆದುಹೋಗ್ತಿರುವ ಕಲೆ ವೀರಗಾಸೆ,ಅಂಥ ಪಾತ್ರಕ್ಕೆ ಕಿರೀಟ ಹಾಕಿದಾಗ 5 ಸಲ ಬಿತ್ತು. ನಮಸ್ಕಾರ ಮಾಡಿ ಹಾಕಿಕೊಂಡಾಗ ಶೂಟಿಂಗ್ ಮುಗಿಯೋವರೆಗೂ ಹಾಗೇ ಇತ್ತು. ನನ್ನ ಪೂರ್ವಜರ ಕಾಲದಲ್ಲಿ ನಡೆದ ಘಟನೆ ಈಗಿನ ಕಾಲದ ವ್ಯಕ್ತಿಗೆ ಕನೆಕ್ಟ್ ಆಗುತ್ತಾ ಹೋಗುತ್ತದೆ. ತಂದೆ, ಮಗನಾಗಿ ಎರಡೂ ಪಾತ್ರಗಳನ್ನು ನಿಭಾಯಿಸಿದ್ದೇನೆ. ಟ್ರೈಲರನಲ್ಲಿ ಎಲ್ಲಾ ಅಂಶಗಳನ್ನು ಹೇಳಿದ್ದಾರೆ. ಭಕ್ತಿ, ನಂಬಿಕೆ, ವಿಶ್ವಾಸ ಜತೆಗೆ ಶಿವನ ಆಶೀರ್ವಾದ ಇವರ ಮೇಲಿದೆ ಎಂದರು.


ನಾಯಕಿ ಪ್ರಿಯಾಂಕ ತಿಮ್ಮೇಶ್ ಮಾತನಾಡಿ ಹಳ್ಳಿ ಹಾಗೂ ಸಿಟಿ ಹುಡುಗಿಯಾಗಿ ಮೊದಲಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು. ಥ್ರಿಲ್ಲರ್ ಮಂಜು ಮಾತನಾಡಿ ಚಿತ್ರದಲ್ಲಿ 2 ಅದ್ಭುತ ಆಕ್ಷನ್ ಕಂಪೋಜ್ ಮಾಡಿದ್ದೇನೆ‌ ಎಂದರು. ಗೆಳೆಯ ವಸಂತ ಕುಮಾರ್ ಅವರಿಗಾಗಿ ನಾವೆಲ್ಲ ಕೈಜೋಡಿಸಿದ್ದೇವೆ‌. ಒಂದು ಅದ್ಭುತ ಚಿತ್ರವನ್ನವರು ಕಟ್ಟಿಕೊಟ್ಟಿದ್ದಾರೆ ಎನ್ನುವುದು ಅಲ್ಲಿದ್ದ ನಿರ್ಮಾಪಕರೆಲ್ಲರ ಮಾತಾಗಿತ್ತು. ‘ರುದ್ರಾಭಿಷೇಕಂ’ ಫ್ಯಾನ್ ಇಂಡಿಯಾ ಕ್ರಿಯೇಶನ್ಸ್ ಸಂಸ್ಥೆಯ ಪ್ರಥಮ ಕಾಣಿಕೆ ಎನ್.ಜಯರಾಮ್, ಮಂಜುನಾಥ ಕೆ.ಎನ್, ಕೆ.ವೆಂಕಟೇಶ್, ಬಿ.ಚಿದಾನಂದ ಮೂರ್ತಿ, ಸುರೇಶ್ ಬಾಬು, ಬಿ.ಕೆ.ಅಶ್ವಥ್ ನಾರಾಯಣ, ಶಿವಕುಮಾರ್, ಕೆ.ಎಸ್.ರವಿಕುಮಾರ್‌, ಕುಸುಮ ವಸಂತ್ ಕುಮಾರ್ ಸೇರಿದಂತೆ 9 ಜನ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದ ವಿತರಕ ವಿಜಯ್ ಸಿನಿಮಾಸ್ ನ ವಿಜಯಕುಮಾರ್ ಮಾತನಾಡಿ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದರು.

ದೇವನಹಳ್ಳಿ ಸುತ್ತಮುತ್ತ ಹಾಗೂ ಕರಾವಳಿಯ ಗೋಕರ್ಣ, ಹೊನ್ನಾವರ, ಕುಮಟಾ, ಅಬ್ಬಕ್ಕ ಫೋರ್ಟ್ ಅಲ್ಲದೆ ಅಘನಾಶಿನಿ ಹಿನ್ನೀರಿನ, ಈವರೆಗೆ ಯಾರೂ ಶೂಟ್ ಮಾಡದಂಥ ಲೊಕೇಶನ್ ನಲ್ಲಿ ಚಿತ್ರೀಕರಿಸಲಾಗಿದೆ.
ಬಲ ರಾಜವಾಡಿ, ಮನು, ಸನತ್, ಬುಲೆಟ್ ವಿನು, ಶೇಷಾಚಲ, ಮಮತಾ ತುರುವೇಕೆರೆ, ನವನಿತಾ ಶೆಟ್ಟಿ, ಮಂಜುಳಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ವಿ.ಮನೋಹರ್ ಅವರ ಸಂಗೀತ ಸಂಯೋಜನೆ, ಮುತ್ತುರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Visited 1 times, 1 visit(s) today
error: Content is protected !!