ಯುವ ಪ್ರತಿಭೆಗಳ “ಲವ್ ಒನ್ಸ್ ಮೋರ್” ಟೈಟಲ್ ರಿವೀಲ್ ಮಾಡಿದ ಕ್ರಿಕೆಟಿಗ ಜಾವಗಲ್ ಶ್ರೀನಾಥ್

Spread the love

ಚಂದನವನಕ್ಕೆ ಬಹಳಷ್ಟು ಕನಸುಗಳನ್ನು ಹೊತ್ತುಕೊಂಡು ವಿಭಿನ್ನ ಚಿತ್ರಗಳನ್ನು ನೀಡಬೇಕೆಂಬ ಮಹದಾಸೆಯೊಂದಿಗೆ ಬರುತ್ತಿರುವವರು ನಿರಂತರ. ಆ ನಿಟ್ಟಿನಲ್ಲಿ ಈಗಾಗಲೇ ಡಾಕ್ಟರ್, ಎಂಜಿನಿಯರ್, ರಾಜಕಾರಣಿ, ಲಾಯರ್ ಹೀಗೆ ಪ್ರತಿಯೊಬ್ಬರೂ ತಮ್ಮ ಅದೃಷ್ಟಪರೀಕ್ಷೆ ಮಾಡಿಕೊಂಡಿದ್ದಾರೆ.

ಇದೀಗ ಮತ್ತೊಬ್ಬ ವೈದ್ಯರ ಆಗಮನವಾಗಿದೆ. ಅವರೇ ಡಾ.ಕಿರಣ್ ಶೇಖರ್. ಸಧ್ಯ ಆಸ್ಟ್ರೇಲಿಯಾದಲ್ಲಿ ಹೃದಯ ಹಾಗೂ ಶ್ವಾಸಕೋಶದ ತಜ್ಞವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಅವರು ‘ಮಿರಾನಾ ಪಿಕ್ಚರ್ಸ್’ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ ಆ ಮೂಲಕ ಸದಭಿರುಚಿಯ ಸಿನಿಮಾಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಅವರ ಪ್ರಥಮ ಪ್ರಯತ್ನದಲ್ಲಿ ಮೂಡಿಬರುತ್ತಿರುವ ಚಿತ್ರವೇ ‘ಲವ್ ಒನ್ಸ್ ಮೋರ್’.

ತಮ್ಮ ಹೊಸ ಬ್ಯಾನರ್ ಲಾಂಚ್ ಹಾಗೂ ಹೊಸ ಚಿತ್ರದ ಟೈಟಲ್ ಅನಾವರಣ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಂಡಿದ್ದರು. ಈ ಚಿತ್ರದ ಟೈಟಲ್ ಲಾಂಚ್ ಮಾಡಿದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್, ಡಾ.ಕಿರಣ್ ನನ್ನ ಒಳ್ಳೆ ಸ್ನೇಹಿತ. ಅವರು ತುಂಬಾ ಬುದ್ಧಿವಂತರು , ಬಹಳಷ್ಟು ತಿಳಿದುಕೊಂಡಿದ್ದಾರೆ. ಅವರು ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿದ್ದು , ಈಗ ಸಿನಿಮಾಗೆ ಬಂದಿದ್ದಾರೆ‌. ಅವರ ಸಿನಿಮಾ ಸಕ್ಸಸ್ ಆಗಲಿ , ಮುಂದಿನ ದಿನಗಳಲ್ಲಿ ನನಗೂ ಅವಕಾಶ ನೀಡಿ ಎಂದು ತಮಾಷೆ ಮಾಡಿ ಚಿತ್ರತಂಡಕ್ಕೆ ಶುಭ ಎಂದು ಹಾರೈಸಿದರು.

ನಂತರ ವೇದಿಕೆ ಮೇಲೆ ನಿರ್ಮಾಪಕ, ನಿರ್ದೇಶಕ ಡಾ.ಕಿರಣ್ ಶೇಖರ್, ಮಾತನಾಡಿ ನಮ್ಮೆಲ್ಲರಲ್ಲೂ ಕಥೆಗಳಿವೆ, ಕಥೆಗಳು ನಮ್ಮ ಜೀವನದ ಅವಿಭಾಜ್ಯ ಅಂಗ, ಅವು ಯಾವಾಗಲೂ ಸಮಾಜವನ್ನು ಪ್ರತಿಬಿಂಬಿಸುತ್ತವೆ. ಈಗಿನ ಯುವ ಜನಾಂಗಕ್ಕೆ ಪೂರಕವಾಗುವಂಥ ಕಥೆಗಳನ್ನು ಹೇಳಬೇಕೆನ್ನುವುದೇ ನಮ್ಮ ಉದ್ದೇಶ. ಈ ಲವ್ ಒನ್ಸ್ ಮೋರ್ ಒಂದು ಸೈಕಲಾಜಿಕಲ್ ಜಾನರ್ ಕಥೆಯಾಗಿದ್ದು, ಪ್ರೀತಿ, ಪ್ರೇಮ ಜತೆಗೆ ಸಂಬಂಧಗಳ ಕುರಿತಾಗಿ ಈ ಚಿತ್ರ ಹೇಳಲಿದೆ.

ನನ್ನ ವೃತ್ತಿಜೀವನವೂ ಪಾಠ ನನಗೊಂದು ಪಾಠ ಕಲಿಸಿದೆ. ಮನುಷ್ಯನಿಗೆ ತುಂಬಾ ಮುಖ್ಯವಾಗಿರುವುದು ಆರೋಗ್ಯ ಮತ್ತು ಅರ್ಥಗರ್ಭಿತ ಸಂಬಂಧಗಳು. ನಾವೆಲ್ಲಿ ದಾರಿ ತಪ್ಪಿದೆವು ಅಂತ ನೋಡುತ್ತ ಹೋದಾಗ ನನಗೆ ಒಂದಷ್ಟು ಐಡಿಯಾಗಳು ಹೊಳೆದವು. ನಮ್ನ ಕಥೆ ದೂರದ ಆಸ್ಟ್ರೇಲಿಯಾಗೂ ಕರೆದುಕೊಂಡು ಹೋಗುತ್ತೆ. ಕಾಲಕ್ಕೆ ತಕ್ಕಂತೆ ಪ್ರೀತಿಯ ಪರಿಭಾಷೆಯೂ ಬದಲಾಗಿದೆ.

ಈಗಿನ ಯುವ ಜನತೆಯ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ನಾನು ಈ ಸ್ಕ್ರಿಪ್ಟ್ ರಚಿಸಿದ್ದೇನೆ. ಸಾಕಷ್ಟು ವಿಷಯಗಳು ನಮ್ಮ ಚಿತ್ರದಲ್ಲಿರುತ್ತವೆ. ಚಿತ್ರದ ನಾಯಕನಾಗಿ ಆರ್.ಕೆ.ಚಂದನ್ ಕಾಣಿಸಿಕೊಂಡಿದ್ದು ನಾಯಕಿಯ ಪಾತ್ರವನ್ನು ನಟಿ ವಿದ್ಯಾಪ್ರಭು ಅವರು ನಿರ್ವಹಿಸುತ್ತಿದ್ದಾರೆ. ಲೀ ಚಾರ್ಲಿ ಕ್ರಿಲ್(ಆಸ್ಟ್ರೇಲಿಯಾ), ಪೂರ್ಣ ಎಸ್, ಖುಷಿ ಪ್ರಸಾದ್, ಸಾಗರ್, ಶ್ರದ್ದಾಗೌಡ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ.

ನವೀನ್ ಪಂಚಾಕ್ಷರಿ ಅವರ ಛಾಯಾಗ್ರಹಣ, ರಿತ್ವಿಕ್ ಮುರಳೀಧರನ್, ವೇದಾಂತ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಮಂಜುನಾಥ್ ದೈವಜ್ಞ ಲೈನ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಆಸ್ಟ್ರೇಲಿಯಾ ಹಾಗೂ ಬೆಂಗಳೂರಿನಲ್ಲಿ ನಡೆಯಲಿದ್ದು , ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಯನ್ನು ತಂಡ ತಿಳಿಸಲಿದೆಯಂತೆ.

Visited 1 times, 1 visit(s) today
error: Content is protected !!