ಹನ್ಸಿಕಾ ಮೊಟ್ವಾನಿ ಅಭಿನಯದ ಪ್ಯಾನ್ ಇಂಡಿಯಾ ‘ಪ್ಯಾರಾಡಾಕ್ಸ್’ ಚಿತ್ರಕ್ಕೆ ಚಾಲನೆ
ನೃತ್ಯ ನಿರ್ದೇಶಕರಾಗಿ ಹೆಸರು ಮಾಡಿರುವ ಕ್ಯಾಪ್ಟನ್ ಕಿಶೋರ್ ಈಗ ಮೊದಲ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಹೌದು, ಅವರು ‘ಪ್ಯಾರಾಡಾಕ್ಸ್’ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಚಿತ್ರವಾಗಿದ್ದು, ಪ್ರಮುಖ ಪಾತ್ರದಲ್ಲಿ ಬಹು ಭಾಷಾ ನಟಿ ಹನ್ಸಿಕಾ ಮೊಟ್ವಾನಿ ಅಭಿನಯ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಮುದ್ದಿನಪಾಳ್ಯದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಕ್ಯಾಪ್ಟನ್ ಕಿಶೋರ್, ‘ಇದು ಪ್ಯಾನ್ ಇಂಡಿಯಾ ಸಿನಿಮಾ. ಅಂಗಾಂಗ ಕಳ್ಳತನ (ಆರ್ಗನ್ ಸ್ಕ್ಯಾಮ್) ಬಗ್ಗೆ ಸಿನಿಮಾ ಇರಲಿದ್ದು, ಮಹಿಳಾ ಪ್ರಧಾನ ಕಥೆ ಒಳಗೊಂಡಿದೆ. ಇಂಗ್ಲೀಷ್ ಸಿನಿಮಾ ತರಾ ಚಿತ್ರಕಥೆ ಇರಲಿದ್ದು ಸಸ್ಪೆನ್ಸ್, ಥ್ರಿಲ್ಲರ್ ಜಾನರ್ ಚಿತ್ರವಿದು. ನಾನು ನಿರ್ದೇಶಕನಾಗಬೇಕು ಎಂದು ಚಿತ್ರರಂಗಕ್ಕೆ ಬಂದಿದ್ದೆ. ಆದರೆ, ಚಿಕ್ಕಪ್ಪನಿಂದಾಗಿ ನೃತ್ಯ ನಿರ್ದೇಶಕನಾದೆ.
ಒಂದಿಷ್ಟು ನಿರ್ದೇಶಕರ ಜೊತೆ ಕೆಲಸ ಮಾಡಿದ್ದು, ಈಗ ‘ಪ್ಯಾರಾಡಾಕ್ಸ್’ ಸ್ವತಂತ್ರ ನಿರ್ದೇಶನ ಮಾಡುತ್ತಿದ್ದೇನೆ. ಈ ಕಥೆಯನ್ನು ಕೇಳಿ ತುಂಬಾ ಇಷ್ಟಪಟ್ಟು ಕಾರ್ತಿಕ್ ರೆಡ್ಡಿ ಅವರು ನಿರ್ಮಾಣ ಮಾಡಲು ಮುಂದಾದರು. ಈಗಾಗಲೇ ಇವರ ಪ್ರೊಡಕ್ಷನ್ ನಲ್ಲಿ ಒಂದು ಸಿನಿಮಾ ನಡೆಯುತ್ತಿದೆ. ಇದು ಎರಡನೇ ಸಿನಿಮಾ. ಸೋನು ಸೋದ್, ಹನ್ಸಿಕಾ ಮೊಟ್ವಾನಿ, ರವಿಶಂಕರ್ ಸೇರಿದಂತೆ ಬೇರೆ ಬೇರೆ ಭಾಷೆಯ ಹಲವು ಕಲಾವಿದರು ಇದರಲ್ಲಿ ಅಭಿನಯ ಮಾಡಲಿದ್ದಾರೆ’ ಎಂದು ಹೇಳಿದರು.
ನಂತರ ಚಿತ್ರದ ನಿರ್ಮಾಪಕ ಕಾರ್ತಿಕ್ ರೆಡ್ಡಿ ಮಾತನಾಡಿ, ‘ಇದೊಂದು ಸಾಮಾನ್ಯ ಸಿನಿಮಾ ಅಲ್ಲ. ಎಲ್ಲಾ ಭಾಷೆಗೂ ಹತ್ತಿರವಾಗುವ ಕಥೆ ಇದೆ. ಪ್ರೇಕ್ಷಕರಿಗೆ ಹೊಸ ಅನುಭವ ಈ ಚಿತ್ರ ನೀಡುತ್ತದೆ. ತಾಂತ್ರಿಕವಾಗಿ ಸಿನಿಮಾ ತುಂಬಾ ಚೆನ್ನಾಗಿ ಬರಲಿದೆ. ನಮ್ಮ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಎರಡನೇ ಸಿನಿಮಾ ಇದು. ಮೊದಲ ನಿರ್ಮಾಣದ ‘ಶ್ಯಾಡೊ’ ಇಂಗ್ಲಿಷ್ ಸಿನಿಮಾ ಮುಕ್ತಾಯದ ಹಂತದಲ್ಲಿದೆ.
ಈ ‘ಪ್ಯಾರಾಡಾಕ್ಸ್’ ಚಿತ್ರವನ್ನು ಹಾಲಿವುಡ್ ಸಿನಿಮಾದಂತೆ ಮಾಡುವ ಯೋಚನೆಯಿದ್ದು, ಅದೇ ರೀತಿಯಲ್ಲಿ ಮಾಡುತ್ತಿದ್ದೇವೆ. ಯಾವುದೇ ಕೊರತೆ ಬಾರದ ಹಾಗೆ ಅದ್ದೂರಿಯಾಗಿ ಸಿನಿಮಾ ಮಾಡುತ್ತೇವೆ. ಪ್ರೇಕ್ಷಕರಿಗೆ ಕೊಡಬೇಕಾದ ಮನರಂಜನೆ ಕೊಡಲು ನಾವು ಪ್ರಯತ್ನ ಮಾಡತಾ ಇದ್ದೇವೆ. ಇದೊಂದು ಅದ್ಭುತ ಫ್ಯಾಂಟಸಿ ಸಿನಿಮಾ ಆಗಲಿದೆ ಎಂದು ಹೇಳಬಹುದು. ಬೇರೆ ಬೇರೆ ಭಾಷೆಯ 16 ಮುಖ್ಯ ಕಲಾವಿದರು ಈ ಚಿತ್ರದಲ್ಲಿರುತ್ತಾರೆ’ ಎಂದರು.
ಮುಹೂರ್ತ ಕಾರ್ಯಕ್ರಮಕ್ಕೆ ಕ್ಯಾಪ್ಟನ್ ಕಿಶೋರ್ ಅವರ ಸಹೋದ್ಯೋಗಿಗಳಾದ ಮುರಳಿ ಮಾಸ್ಟರ್, ಗಣೇಶ್ ಮಾಸ್ಟರ್, ರಾಮು ಮಾಸ್ಟರ್ ಸೇರಿದಂತೆ ಹಲವು ನೃತ್ಯ ನಿರ್ದೇಶಕರುಗಳು ಆಗಮಿಸಿ, ಕಿಶೋರ್ ಅವರ ಚಿತ್ರಕ್ಕೆ ಶುಭ ಹಾರೈಸಿದರು. ಚಿತ್ರಕ್ಕೆ ಸಾಯಿರಾಮ್ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಚಿತ್ರಕ್ಕೆ ರವಿವರ್ಮ ಅವರ ಸಾಹಸ ನಿರ್ದೇಶನ, ರಾಜು ಛಾಯಾಗ್ರಹಣ, ದೀಪಕ್ ಸಂಕಲನ ಇರಲಿದೆ.
ಹೆಸರಾಂತ ಸಾಹಸ ನಿರ್ದೇಶಕ ರವಿವರ್ಮ ಅವರು ಮಾತನಾಡಿ, ನಿರ್ದೇಶಕರು ಒಂದೊಳ್ಳೆ ಕಥೆ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ಐದು ಭರ್ಜರಿ ಸಾಹಸ ಸನ್ನಿವೇಶಗಳಿದ್ದು, ಅದ್ದೂರಿಯಾಗಿ ಮೂಡಿ ಬರಲಿದೆ ಎಂದರು.
