ಲಂಕೆ ನಿರ್ದೇಶಕ ರಾಮಪ್ರಸಾದ್ ದಾಸಪ್ಪ ನ ಮುಂದಿನ ಚಿತ್ರ “ಡೀಟಾಕ್ಸ್”

Spread the love

ಈ ಹಿಂದೆ “ಲಂಕೆ” ಚಿತ್ರವನ್ನು ನಿರ್ದೇಶಿಸಿದ್ದ, “ಬಣ್ಣಬಣ್ಣದ ಲೋಕ” ಚಿತ್ರದಲ್ಲಿ ನಟನೆಯನ್ನೂ ಮಾಡಿದ್ದ ರಾಮಪ್ರಸಾದ್ ದಾಸಪ್ಪ ನಿರ್ದೇಶನದ ಎರಡನೇ ಚಿತ್ರ “ಡೀಟಾಕ್ಸ್”. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಪ್ರಮುಖಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್ ಕುಮಾರ್ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಪತ್ರಿಕಾಗೋಷ್ಠಿ ನಡೆಯಿತು. ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಾನು ಸಾಮಾನ್ಯವಾಗಿ ಚಿತ್ರ ಮುಗಿದ ಮೇಲೆ ಚಿತ್ರದ ಕುರಿತು ಮಾತನಾಡುತ್ತೇನೆ. ಏಕೆಂದರೆ ನಾವು ಮಾತನಾಡಬಾರದು. ನಮ್ಮ ಕೆಲಸ ಮಾತನಾಡಬೇಕು ಎಂಬುದರಲ್ಲಿ ನಂಬಿಕೆ ಇಟ್ಟಿರುವವನು ನಾನು. ಈ ಚಿತ್ರದ ಚಿತ್ರೀಕರಣ ಕೂಡ ಈಗ ಮುಕ್ತಾಯ ಹಂತ ತಲುಪಿದೆ. ಸೆಪ್ಟೆಂಬರ್ ಕೊನೆಯಲ್ಲಿ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ.

ಇನ್ನೂ, “ಡೀಟಾಕ್ಸ್” ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಏಳರಿಂದ ಎಪ್ಪತ್ತರ ವಯಸ್ಸಿನ ಹೆಣ್ಣುಮಕ್ಕಳ ಮನಸ್ಸಿನಲ್ಲಿ ಯಾವ ರೀತಿ ಹೋರಾಟ ಇರುತ್ತದೆ. ಹೊಡೆದಾಟ ಇರುತ್ತದೆ ಇಂತಹ ವಿಷಯಗಳನ್ನು ಕ್ರೋಢೀಕರಿಸಿ ಈ ಕಥೆ ಬರೆದಿದ್ದೇನೆ. ಸಮಾಜದಲ್ಲಿರುವ ತೊಡಕುಗಳನ್ನು ಸಿನಿಮಾ ಮಾಧ್ಯಮದ ಮೂಲಕ “ಡೀಟಾಕ್ಸ್” ಮಾಡುವ ಪ್ರಯತ್ನ ಮಾಡಿದ್ದೇನೆ.

ಇದೊಂದು ಸಮಾಜಕ್ಕೆ ಹತ್ತಿರವಾಗುವ ಕಥಾಹಂದರ ಹೊಂದಿರುವ ಚಿತ್ರ. ಕನ್ನಡ ಭಾಷೆಯಲ್ಲಿ ಮಾತ್ರ ಆರಂಭವಾದ ಈ ಚಿತ್ರ ಇಂದು ಐದು ಭಾಷೆಗಳಲ್ಲಿ ಬರುತ್ತಿದೆ. ಇದೊಂದು ಯುನಿವರ್ಸಲ್ ಕಂಟೆಂಟ್ ಆಗಿರುವುದರಿಂದ ಈ ಪ್ರಯತ್ನ ಮಾಡಿದ್ದೇವೆ. ಕನ್ನಡ ಸೇರಿದಂತೆ ಹಲವು ಭಾಷೆಗಳ ಅನೇಕ ಕಲಾವಿದರು ನಟಿಸಿರುವ ಚಿತ್ರವಿದು. ಇದೊಂದು ತಂತ್ರಜ್ಞರ ಸಿನಿಮಾ ಕೂಡ ಹೌದು. ಎಂದಿನಂತೆ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ರಾಮಪ್ರಸಾದ್ ದಾಸಪ್ಪ.

ನನಗೆ ರಾಮಪ್ರಸಾದ್ ಅವರು ಬಂದು ಕಥೆ ಹೇಳಿದಾಗ ಇನ್ಸ್‌ಪೆಕ್ಟರ್ ಪಾತ್ರ ಆದರೆ ಬೇಡ ಅಂತ ಹೇಳಿದೆ. ಅವರು ಇಲ್ಲ. ಇದು ಇನ್ಸ್‌ಪೆಕ್ಟರ್ ಪಾತ್ರ ಅಲ್ಲ. ಅವರು ಹೇಳಿದ ಹಾಗೆ ನಾನು ಈ ಚಿತ್ರದಲ್ಲಿ ಇನ್ಸ್‌ಪೆಕ್ಟರ್ ಪಾತ್ರ ಮಾಡುತ್ತಿಲ್ಲ. ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ರಾಮ್ ಪ್ರಸಾದ್ ಒಂದೊಳ್ಳೆ ಕಥೆ ಮಾಡಿಕೊಂಡಿದ್ದಾರೆ. ಅದು ಜನರಿಗೂ ಮೆಚ್ಚುಗೆಯಾಗುವ ಭರವಸೆ ಇದೆ ಎಂದರು ನಟ ಕಿಶೋರ್ ಕುಮಾರ್.

ಎಲ್ಲರೂ ವಶೀಕರಣದ ಸಿನಿಮಾ ಮಾಡುತ್ತಿರುವ ಈ ಸಮಯದಲ್ಲಿ ನಿರ್ವಿಶಿಕರಣ ಮಾಡುವ ಸಿನಿಮಾ ಮಾಡಲು ರಾಮಪ್ರಸಾದ್ ಹೊರಟಿದ್ದಾರೆ. ನಾನು ಈ ಹಿಂದಿನ ಅವರ ಚಿತ್ರದಲ್ಲೂ ನಟಿಸಿದ್ದೆ. ಈ ಚಿತ್ರದಲ್ಲೂ ನಟಿಸಿದ್ದೇನೆ ಎಂದು ನಟ ಸುಚೇಂದ್ರ ಪ್ರಸಾದ್ ಹೇಳಿದರು.

ನಾನು ಈ ಹಿಂದೆ ವರುಣ್ ಎಂಬ ಹೆಸರಿನಲ್ಲಿ ಅಭಿನಯಿಸಿದ್ದೆ. ಈಗ ಅದ್ಭುತ್ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದೇನೆ. ಎಂದು ನಟ ಅದ್ಭುತ್ ತಿಳಿಸಿದರು. ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ ಕಿರಿಶಾ ತಾರಿಕಾ ದೇವಿ, ತುಮುಲ್ ಬಾಲ್ಯನ್, ವಾಣಿಶ್ರೀ ಕೂಡ ತಮ್ಮ ಪಾತ್ರದ ಕುರಿತು ಮಾತನಾಡಿದರು. ಈ ಚಿತ್ರದ ಮತ್ತೊಂದು ವಿಶೇಷವೆಂದರೆ ನಾಗೇಂದ್ರ ಅರಸ್, ಗುರುಪ್ರಸಾದ್, ಜಗದೀಶ್ ಕೊಪ್ಪ, ಮಂಜು ದೈವಜ್ಞ ಸೇರಿದಂತೆ ಆರುಜನ ನಿರ್ದೇಶಕರು ಅಭಿನಯಿಸಿದ್ದಾರೆ. ಅಭಿನಯಿಸಿರುವ ಎಲ್ಲಾ ನಿರ್ದೇಶಕರು, ವೆಂಕಟ್ ರಾಜು ಮುಂತಾದ ಕಲಾವಿದರು ಹಾಗೂ ಸಂಗೀತ ನಿರ್ದೇಶಕ ಎಲ್ವಿನ್ ಜೋಶ್ವ ಸೇರಿದಂತೆ ಅನೇಕ ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದರು.

ದಿ ಗ್ರೇಟ್ ಎಂಟರ್ ಟೇನರ್ಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಸುರೇಖ ರಾಮಪ್ರಸಾದ್ ಎಲ್ಲರಿಗೂ ಧನ್ಯವಾದ ಹೇಳಿದರು. ಹಾಲೇಶ್ ಈ ಚಿತ್ರದ ಛಾಯಾಗ್ರಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

Visited 1 times, 1 visit(s) today
error: Content is protected !!