Cini NewsMovie ReviewSandalwood

ಪ್ಯಾನ್ ಕಾರ್ಡ್ ಎಡವಟ್ಟು… ತೀರ್ಥರ ಪರದಾಟ…’ಅವನಿರಬೇಕಿತ್ತು’ ಚಿತ್ರವಿಮರ್ಶೆ (ರೇಟಿಂಗ್ : 3.5/ 5)

ರೇಟಿಂಗ್ : 3.5/ 5
ಚಿತ್ರ : ಅವನಿರಬೇಕಿತ್ತು
ನಿರ್ದೇಶಕ : ಅಶೋಕ್ ಸಾಮ್ರಾಟ್
ನಿರ್ಮಾಣ : ನೋವಿಕಾ ಸಿನಿ ಪ್ರೊಡಕ್ಷನ್
ಸಂಗೀತ : ಲೋಕಿ ತವಸ್ಯಾ
ಛಾಯಾಗ್ರಹಣ : ದೇವರಾಜ್ ಪೂಜಾರಿ
ತಾರಾಗಣ : ಭರತ್, ಸೌಮ್ಯಾ ಜಾನ್, ಜಯಸಿಂಹ, ಲಕ್ಷ್ಮೀದೇವಮ್ಮ, ಪ್ರಶಾಂತ್ ಸಿದ್ದಿ , ಕಿರಣ್ ನಾಯಕ್, ಮಂಜುನಾಥ್.ಎ.ಜಿ, ತೀರ್ಥ ಪೊನ್ನಮ್ಮ, ರಂಗನಾಥ್, ಬಸವ ಮೇತ್ರಿ, ಆಚಾರ್ಯ, ವಿಶೇಷ್, ನಾಗರಾಜ್ ಹಾಗೂ ಮುಂತಾದವರು…

ಯಾವುದೇ ಕೆಲಸ , ಕಾರ್ಯ, ಉದ್ಯೋಗದ ಬದುಕು ನಡೆಸಲು ಸೂಕ್ತ ದಾಖಲೆಗಳು ಇದ್ದಾಗ ಮಾತ್ರ ಎಲ್ಲವೂ ಸುಲಲಿತವಾಗಿ ನಡೆಯುತ್ತದೆ. ಒಮ್ಮೆ ಏನಾದರೂ ಏರುಪೇರು ಕಂಡು ಬಂದರೆ ಅದನ್ನ ಸರಿಪಡಿಸಿಕೊಳ್ಳುಲು ಪರದಾಡುವವರು ಒಂದೆಡೆಯಾದರೆ. ಅದನ್ನು ದುರುಪಯೋಗ ಪಡಿಸಿಕೊಳ್ಳುವಲು ಸಂಚು ಹಾಕುವವರು ಇರುತ್ತಾರೆ. ಇಂಥದ್ದೇ ಕಥಾನಕದೊಂದಿಗೆ ಸಸ್ಪೆನ್ಸ್ , ಲವ್ , ಕುತೂಹಲದ ಮೂಲಕ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಅವನಿರಬೇಕಿತ್ತು”.

ಜೀವನ ನಡೆಸಲು ಕೆಲಸ ಬೇಕು , ಅದಕ್ಕಾಗಿ ನಾಯಕ ದೇವು (ಭರತ್) ಹಾಗೂ ನಾಯಕಿ ಭವ್ಯ (ಸೌಮ್ಯ) T & T ಮಾರ್ಕೆಟಿಂಗ್ ಕಂಪನಿಯಲ್ಲಿ ಮಿಸ್ಟರಿ ಶಾಪಿಂಗ್ ಉದ್ಯೋಗಿಗಳಾಗಿ ಸೇರಿಕೊಳ್ಳುತ್ತಾರೆ. ಇನ್ನು ಅದರ ಓನರ್ ಭಗವಾನ್ (ಜಯಸಿಂಹ) ಇವರಿಬ್ಬರಿಗೂ ಕೆಲವೊಂದು ಶಾಪ್‌ಗಳಿಗೆ ಹೋಗಿ ಮಿಸ್ಟರಿ ಶಾಪಿಂಗ್ ಮಾಡಿಕೊಂಡು ಬರುವ ಕೆಲಸ ವಹಿಸುತ್ತಿರುತ್ತಾನೆ , ಶಾಪಿಂಗ್ ನಲ್ಲಿ ಅದರ ವಿಚಾರದ ಮಾಹಿತಿಯನ್ನು ಕಲೆ ಹಾಕಲು ಒಂದೊಂದು ಅವತಾರದಲ್ಲಿ ಇಬ್ಬರು ದಂಪತಿಗಳಾಗಿ , ಪ್ರೇಮಿಗಳಾಗಿ , ಕೆಲವೊಮ್ಮೆ ಪೋಷಕರಾಗಿಯೂ ಶಾಪಿಂಗ್ ಮಾಡುತ್ತಾರೆ.

ಅದರಲ್ಲೂ ಕಂಡೀಶನ್ ಮೂಲಕವೇ ಕೆಲಸದಲ್ಲಿ ತೊಡಗಿಕೊಂಡ ಇವರಿಬ್ಬರ ನಡುವೆ ಪರಿಚಯ , ಸ್ನೇಹವಾಗಿ ನಂತರ ಪ್ರೇಮಕ್ಕೆ ತಿರುಗುವ ಹಂತದಲ್ಲಿ ಇಬ್ಬರಲ್ಲೂ ಒಂದಷ್ಟು ಅನುಮಾನ ಮೂಡುತ್ತದೆ. ಇದರ ಹಿನ್ನೆಲೆಯಲ್ಲಿ ತೀರ್ಥ ಎಂಬ ಹೆಸರಿನ ಧ್ವನಿ ಸದ್ದು ಮಾಡುತ್ತದೆ. ಅದು ಯಾರು , ಯಾಕೆ , ಎಂಬ ಪ್ರಶ್ನೆಯ ನಡುವೆ ದೇವುಗೆ ಒಂದು ಹಣಕಾಸಿನ ಸಮಸ್ಯೆ ಎದುರಾಗುತ್ತದೆ. ತನಗೆ ತಿಳಿಯದಂತೆಯೇ ಒಂದು ಕೋಟಿಯ ಸಾಲಕ್ಕೆ ಹೊಣೆಗಾರ ನಾಗಬೇಕಾಗುತ್ತದೆ, ಇದರ ಹಿಂದೆ ಯಾರಿದ್ದಾರೆ ಎಂದು ದೇವು ಹುಡುಕುತ್ತಾ ಹೋದಂತೆ ಆತನಿಗೆ ದೊಡ್ಡ ಆಶ್ಚರ್ಯ ಕಾದಿರುತ್ತದೆ, ಆತ ಹುಡುಕುತ್ತಿರುವ ವ್ಯಕ್ತಿ ತನ್ನನ್ನು ಪ್ರೀತಿಸುತ್ತಿರುವ ಗೆಳತಿ ಭವ್ಯ ಎಂದು ತಿಳಿದು ಆಕೆಯನ್ನು ರಹಸ್ಯವಾಗಿ ಬಂಧಿಸಿಡುತ್ತಾನೆ.

ಅದರ ಜೊತೆಗೆ ಮತ್ತೆ ಇಬ್ಬರ ವ್ಯಕ್ತಿ ಕೂಡ ಬಂಧನದಲ್ಲಿ ಹಾಕಿರುತ್ತಾನೆ. ವ್ಯಕ್ತಿ ಒಬ್ಬನನ್ನ ಹಣಕೊಟ್ಟು ಬಿಡಿಸಿಕೊಂಡು ಹೋಗಲು ಮಹಿಳೆಯ ಆಗಮನವೂ ಆಗುತ್ತದೆ. ಈ ನಿಗೂಢದ ಹಿಂದೆ ಪೊಲೀಸ್ ಬೇಟೆಯೂ ನಡೆಯುತ್ತದೆ. ಒಂದಕ್ಕೊಂದು ಕೊಂಡಿಯಂತೆ ಸಾಗುವ ಈ ಹಾದಿಯಲ್ಲಿ ಸಮಸ್ಯೆ ಶುರುವಾಗಿದ್ದು ಹೇಗೆ..
ಅಪರಾಧಿ ಯಾರು…
ಪ್ರೇಮಿಗಳ ಪಾಡೇನು…
ತೀರ್ಥ ಹೆಸರು ಯಾಕೆ…
ಕ್ಲೈಮಾಕ್ಸ್ ನೀಡುವ ಉತ್ತರ ಏನು… ಇದಕ್ಕಾಗಿ ಒಮ್ಮೆ ಚಿತ್ರ ನೋಡಲೇಬೇಕು.

ನಿರ್ದೇಶಕ ಅಶೋಕ್ ಸಾಮ್ರಾಟ್ ಬಹಳ ಸೂಕ್ಷ್ಮವಾಗಿ ಆಲೋಚನೆ ಮಾಡಿ , ದೇಶದ ಗಮನ ಸೆಳೆಯುವಂತ ಒಂದೇ ಹೆಸರಿನ ದಾಖಲೆಗಳು , ಪ್ಯಾನ್ ಕಾರ್ಡ್ ಎಡವಟ್ಟಿನ ದೊಡ್ಡ ಸಮಸ್ಯೆಯನ್ನು ಹೇಳಲು ಹೊರಟಿರುವ ಪ್ರಯತ್ನ ಉತ್ತಮವಾಗಿದೆ. ಒಂದೇ ಹೆಸರಿರುವ ಇಬ್ಬರ, ಅವರ ತಂದೆಯ ಹೆಸರೂ ಒಂದೇ ಆಗಿರುವ ವ್ಯಕ್ತಿಗಳು ಎದುರಿಸುವ ಕಾನೂನಾತ್ಮಕ ತೊಡಕುಗಳು, ಸಮಸ್ಯೆಗಳ ಬಗ್ಗೆ ಕಥಾಹಂದರ ಗಮನ ಸೆಳೆಯುತ್ತದೆ. ಆದರೆ ಚಿತ್ರಕಥೆಯ ಶೈಲಿಯಲ್ಲಿ ಗೊಂದಲ ಮೂಡಿಸಿ , ಇದೇನು ಕಥೆ ಎಲ್ಲಿಂದ ಎಲ್ಲೆಲ್ಲಿಗೋ ಹೋಗುತ್ತಿದೆ ಎನ್ನುವಂತೆ ಮಾಡಿದೆ. ಕ್ಲೈಮಾಕ್ಸ್ ನಲ್ಲಿ ಸಿಗುವ ಉತ್ತರಕ್ಕೆ ತಾಳ್ಮೆಯಿಂದ ನೋಡುವ ಪ್ರೇಕ್ಷಕರು ಸಿಗಬೇಕು ಅಷ್ಟೇ.

ಪಾತ್ರವರ್ಗ ಹಾಗೂ ತಾಂತ್ರಿಕ ವರ್ಗದ ಶ್ರಮ ಕಾಣುತ್ತದೆ. ಇನ್ನು ಈ ಚಿತ್ರದ ಹೈಲೈಟ್ ಎಂದರೆ ಲೋಕಿ ತವಸ್ಯಾ ಸುಂದರವಾದ ಸಂಗೀತ , ದೇವರಾಜ್ ಪೂಜಾರಿ , ಪೃಥ್ವಿ ಮಾಲೂರು ಛಾಯಾಗ್ರಹಣ ಅದ್ಭುತವಾಗಿದೆ. ಚಿತ್ರಕ್ಕೆ ಸಂಕಲನ ಮಾಡಿದವರ ತಾಳ್ಮೆಯನ್ನು ಮೆಚ್ಚಲೇಬೇಕು.ಈ ರೀತಿಯ ಕಥೆಗೆ ಧೈರ್ಯ ಮಾಡಿ ಹಣ ಹಾಕಿರುವ ನಿರ್ಮಾಪಕರ ಸಾಹಸವನ್ನು ಕೂಡ ಮೆಚ್ಚಲೇಬೇಕು. ಇನ್ನು ನಾಯಕ ಭರತ್ ತನ್ನ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ.

ಮಾತಿನ ವೇಗ ಸ್ವಲ್ಪ ಹೆಚ್ಚಾಯಿತು ಅನಿಸುತ್ತದೆ. ಡ್ಯಾನ್ಸ್ ನಲ್ಲಿ ಸೈ ಎನ್ನುವಂತೆ ಕುಣಿದಿದ್ದು , ನೋಡಲು ಸುಂದರವಾಗಿರುವ ಈ ಪ್ರತಿಭೆ ನಟ ಪ್ರಜ್ವಲ್ ದೇವರಾಜ್ ರಂತೆ ಕಾಣುತ್ತಾರೆ.
ನಾಯಕಿ ಸೌಮ್ಯ ಜಾನ್ ಕೂಡ ತೆರೆಮೇಲೆ ಮುದ್ದು ಮುದ್ದಾಗಿ ಕಾಣಿಸಿಕೊಳ್ಳುವುದರ ಜೊತೆಗೆ ಉತ್ತಮವಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದು , ಡಾನ್ಸ್ ನಲ್ಲಿ ನಾನು ಏನು ಕಮ್ಮಿ ಇಲ್ಲ ಎನ್ನುವಂತೆ ಹೆಜ್ಜೆ ಹಾಕಿದ್ದಾರೆ.

ಇನ್ನು ಭಗವಾನ್ ಪಾತ್ರವನ್ನು ಜಯಸಿಂಹ ಅಬ್ಬರದ ಧ್ವನಿಯಲ್ಲಿ ಸಮರ್ಥವಾಗಿ ನಿರ್ವಹಿಸಿದ್ದು, ಎಲ್ಲರ ಗಮನ ಸೆಳೆಯುತ್ತಾರೆ. ಇನ್ನು ಬೀದಿ ನಾಟಕದ ವೇಷದಾರಿಯ ಪಾತ್ರದಲ್ಲಿ ಪ್ರಶಾಂತ್ ಸಿದ್ಧಿಯ ಹಾಡು ಗಮನ ಸೆಳೆಯುತ್ತದೆ. ಉಳಿದಂತೆ ಇರುವ ಅಂದಕಾಲತ್ತಿಲ್, ಇಂದ ಕಾಲತ್ತಿಲ್ ಹಾಗೂ ಓ ಹೃದಯಾ ಹಾಡುಗಳು ಚಿತ್ರದ ಹೈಲೈಟ್ ಎನ್ನಬಹುದು. ಹಾಗೆಯೇ ಕಲಾವಿದರಾದ ಕಿರಣ್ ನಾಯಕ್, ಮಂಜುನಾಥ್, ಹಿರಿಯ ಕಲಾವಿದೆ ಎಂ . ಏನ್. ಲಕ್ಷ್ಮೀದೇವಿ , ಬಸವ ಸೇರಿದಂತೆ ಎಲ್ಲರ ಸಾಥ್ ಚಿತ್ರಕ್ಕೆ ಸಿಕ್ಕಿದೆ. ಒಟ್ಟಾರೆ ವಿಭಿನ್ನ ಪ್ರಯತ್ನದ ಈ ಚಿತ್ರ ನೋಡಬಹುದು.

error: Content is protected !!