ಖಿನ್ನತೆಯ ಸುಳಿಗೆ ಸಾವುಗಳೇ ಸರಮಾಲೆ.. “ಎಡಗೈಯೇ ಅಪಘಾತಕ್ಕೆ ಕಾರಣ” ಚಿತ್ರವಿಮರ್ಶೆ (ರೇಟಿಂಗ್. : 4/5)
ರೇಟಿಂಗ್ : 4/5
ಚಿತ್ರ : ಎಡಗೈಯೇ ಅಪಘಾತಕ್ಕೆ ಕಾರಣ
ನಿರ್ದೇಶಕ : ಸಮರ್ಥ್. ಬಿ.ಕಡಕೊಳ್
ನಿರ್ಮಾಣ :ಹೈಫನ್ ಪಿಕ್ಚರ್ಸ್, ಗುರುದತ್ ಗಾಣಿಗ ಫಿಲ್ಮಂಸ್.
ಸಂಗೀತ : ಪ್ರದ್ಯೋತ್ತಾನ್
ಛಾಯಾಗ್ರಹಣ : ಅಭಿಮನ್ಯು ಸದಾನಂದ್
ತಾರಾಗಣ : ದಿಗಂತ್ ಮಂಚಾಲೆ, ಧನು ಹರ್ಷ, ನಿಧಿ ಸುಬ್ಬಯ್ಯ, ರಾಧಿಕಾ ನಾರಾಯಣ್, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್, ನಿರೂಪ್ ಭಂಡಾರಿ ಹಾಗೂ ಮುಂತಾದವರು…
ಎಡಗೈ ಬಳಸುವವರನ್ನೇ ಗಮನದಲ್ಲಿಟ್ಟುಕೊಂಡು , ಅವರ ಜೀವನ ಶೈಲಿಯಲ್ಲಿ ಎದುರಾಗುವು ಒಂದಷ್ಟು ಘಟನೆಗಳ ಹಿನ್ನಲೆಯಲ್ಲಿ ಮರ್ಡರ್ ಮಿಸ್ಟರಿ , ಡಾರ್ಕ್ ಕಾಮಿಡಿ , ಸಸ್ಪೆನ್ಸ್ , ಥ್ರಿಲ್ಲರ್ ಕಥಾಹಂದರದ ಮೂಲಕ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವ ಚಿತ್ರ “ಎಡಗೈಯೇ ಅಪಘಾತಕ್ಕೆ ಕಾರಣ”. ಹುಟ್ಟುವಾಗಲೇ ತಾಯಿಯನ್ನ ಕಳೆದುಕೊಂಡ ಮಗುವಿಗೆ ತಂದೆಯೇ ಆಸರೆ, ಅವನ ಆಟ , ಪಾಠಕ್ಕೆ ಎಡಗೈ ಮೂಲ. ಬಲಗೈ ಬಳಕೆ ಗಿಂತ ಎಡಗೈಯಲ್ಲೇ ಹೆಚ್ಚು ಸಾಮರ್ಥ್ಯ ಹೊಂದಿರುವ ಯುವಕ ಲೋಹಿತ್ (ದಿಗಂತ್) ಐಟಿ ಉದ್ಯೋಗಿ. ಜೀವನದಲ್ಲಿ ಜಿಗುಪ್ಸೆಗೊಂಡು , ಖಿನ್ನತೆಗೆ ಒಳಗಾಗಿ ಸಾಯಲು ಮುಂದಾಗುವ ಲೋಹಿತ್ ಗೆ ಅಡ್ಡ ಸಿಗುವ ರಾಘವ ( ನಿರೂಪ್ ಭಂಡಾರಿ) ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರ ಅಲ್ಲ ಎನ್ನುತ್ತಾ ಕಾರಣ ಕೇಳುತ್ತಾನೆ. ಎಡಗೈ ಬಳಕೆಯಿಂದ ಸಂಬಂಧಿಕರು , ಗೆಳೆಯರಿಂದ ಮುಜುಗರ ಪಡುವ ಲೋಹಿತ್ ಗೆ ಪ್ರೀತಿಯ ಗೆಳತಿ ಪೂಜಾ (ನಿಧಿ ಸುಬ್ಬಯ್ಯ) ತನ್ನ ಅಪಾರ್ಟ್ಮೆಂಟ್ ಗೆ ಕರೆಸಿಕೊಂಡು ಎಡಗೈ ಬಳಸುವವರಿಗೆ ಸಿಗುವ ವಸ್ತುವನ್ನು ಗಿಫ್ಟ್ ನೀಡಲು ಮುಂದಾಗುತ್ತಾಳೆ. ಮಾತು , ನೋಟ , ಪ್ರೀತಿಯ ಸೆಳೆತದ ನಡುವೆ ಬಾಲ್ಕನಿಯಿಂದ ಬೀಳುವ ಪೂಜಾ ಸಾವಿಗೀಡಾಗುತ್ತಾಳೆ. ಸುದ್ದಿ ಹರಡುತ್ತಳೇ ಪೊಲೀಸ್ ಅಧಿಕಾರಿ ಸ್ಥಳಕ್ಕೆ ಬರುತ್ತಾರೆ. ಗಾಬರಿ ಗೊಳ್ಳುವ ಲೋಹಿತ್ ಪಕ್ಕದ ಫ್ಲಾಟ್ ಗೆ ಹೋಗುತ್ತಾನೆ. ಅಲ್ಲಿ ಸಿಗುವ ರಾಧಿಕಾ (ಧನು ಹರ್ಷ) ಜೊತೆ ಆತಂಕದ ಮಾತುಕತೆ , ಚರ್ಚೆ ನಡುವೆ ಅಕ್ಕ ಪಕ್ಕದ ಫ್ಲ್ಯಾಟ್ ನಿವಾಸಿಗಳು ಹಾಗೂ ಪೂಜಾ ಸ್ನೇಹಿತರ ಇನ್ವೆಸ್ಟಿಗೇಷನ್ ಆರಂಭ. ಇದರ ನಡುವೆ ಟ್ವಿನ್ಸ್ ಅಕ್ಕ ತಂಗಿಯರ ನಡುವೆ ಇರುವ ಪ್ರಿಯಕರನ ವಿಚಾರದ ಗೊಂದಲ, ಪಕ್ಕದ ಫ್ಲ್ಯಾಟ್ನ ಪ್ರಣಿತ್( ಸೌರವ್ ಲೋಕಿ) , ಪೂಜಾ ಸ್ನೇಹಿತೆ ಶ್ರದ್ಧಾ (ರಾಧಿಕಾ ನಾರಾಯಣ್) , ಹೋಟೆಲ್ ಸೆಕ್ಯೂರಿಟಿ ಸೇರಿದಂತೆ ಹಲವರ ಎನ್ಕ್ವರಿ ನಡುವೆ ಒಂದಕ್ಕೊಂದು ಕೊಂಡಿಯಂತೆ ಒಂದರ ಹಿಂದೆ ಮತ್ತೊಂದು ಕೊಲೆಗಳು ಹಲವು ಕಾರಣಕ್ಕೆ ನಡೆಯುತ್ತಾ ಹೋಗುತ್ತದೆ. ಮುಂದೇನು ಅನ್ನುವಷ್ಟರಲ್ಲಿ ಈ ಎಲ್ಲಾ ಸಾವು , ನೋವು ಕಾರಣದ ಹಿಂದೆ ಒಂದು ಸತ್ಯ ಅಡಗಿರುತ್ತದೆ. ಅದೇನು ಎಂಬುವುದನ್ನು ತಿಳಿಯಬೇಕಾದರೆ ಒಮ್ಮೆ ಎಲ್ಲರೂ ಚಿತ್ರವನ್ನು ನೋಡಲೇಬೇಕು.
ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಈ ಕಥಾವಸ್ತು ಬಹಳ ವಿಭಿನ್ನವಾಗಿದೆ. ಇಡೀ ಚಿತ್ರ ಕುತೂಹಲಕಾರಿಯಾಗಿ ಸಾಗುತ್ತಾ ಮುಂದೇನು ಎಂಬ ಪ್ರಶ್ನೆ ಕಾಡುತ್ತದೆ. ಡಾರ್ಕ್ ಕಾಮಿಡಿ ನಡುವೆ ರೋಚಕ ತಿರುವುಗಳು ಗಮನ ಸೆಳೆಯುತ್ತದೆ. ಎಡಗೈಗಿರುವ ಪ್ಲಸ್ ಅಂಡ್ ಮೈನಸ್ ಜೊತೆ ಜೀವದ ಬೆಲೆ , ಜೀವನದ ಹಾದಿ ಎಷ್ಟು ಮುಖ್ಯ ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ. ಅಪಾರ್ಟ್ಮೆಂಟ್ ನಲ್ಲಿ ನಡೆಯುವ ಕಥೆಗೆ ಇದಾಗಿದ್ದು, ಕೊಂಚ ಬೋರ್ ಎನಿಸುತ್ತದೆ. ಆದರೆ ಕುತೂಹಲಕಾರಿಯಾಗಿ ಚಿತ್ರ ಸೆಳೆಯುತ್ತದೆ. ಸ್ನೇಹಿತರ ಒಗ್ಗಟ್ಟಿನಲ್ಲಿ ಹೊರಬಂದಿರುವ ಈ ಚಿತ್ರ ಮುಚ್ಚುವಂತಿದೆ. ಛಾಯಾಗ್ರಾಹಕರ ಕೈಚಳಕ , ಸಂಗೀತ ಹಾಗೂ ಹಿನ್ನೆಲೆ ಸಂಗೀತ , ಸಂಕಲನ ಸೇರಿದಂತೆ ತಾಂತ್ರಿಕ ವರ್ಗದ ಶ್ರಮ ಸೊಗಸಾಗಿದೆ. ಸಂಭಾಷಣೆ ಕೂಡ ಗಮನ ಸೆಳೆಯುತ್ತದೆ. ಇನ್ನು ಇಡೀ ಚಿತ್ರವನ್ನ ನಟ ದಿಗಂತ್ ಆವರಿಸಿಕೊಂಡಿದ್ದು, ಅದ್ಭುತವಾಗಿ ತಮ್ಮ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ನಟಿ ಧನು ಹರ್ಷ ದ್ವಿಪಾತ್ರದಲ್ಲಿ ಅಭಿನಯಿಸಿದ್ದು , ಪಾತ್ರಕ್ಕೆ ನ್ಯಾಯ ಒದಗಿಸುವ ಜೊತೆಗೆ ಉತ್ತಮ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಇನ್ನುಳಿದಂತೆ ಅಭಿನಯಿಸಿರುವ ನಿಧಿ ಸುಬ್ಬಯ್ಯ , ರಾಧಿಕಾ ನಾರಾಯಣ್, ಸೌರವ್ ಲೋಕೇಶ್ , ನಿರೂಪ ಭಂಡಾರಿ , ಕೃಷ್ಣ ಹೆಬ್ಬಾಳೆ ಸೇರಿದಂತೆ ಎಲ್ಲಾ ಕಲಾವಿದರು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಈ ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ , ಥ್ರಿಲ್ಲರ್ ಒಳಗೊಂಡಿರುವ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾವನ್ನ ಒಮ್ಮೆ ನೋಡುವಂತಿದೆ.