Cini NewsSandalwoodTV Serial

zee ಕನ್ನಡದಲ್ಲಿ  1000 ಕಂತು ಪೂರೈಸಿದ ‘ಪುಟ್ಟಕ್ಕನ ಮಕ್ಕಳು’.

Zeeಕನ್ನಡದ ಜನಪ್ರಿಯ ಧಾರಾವಾಹಿ ಪುಟ್ಟಕ್ಕನ ಮಕ್ಕಳು ಯಶಸ್ವಿಯಾಗಿ ಸಾವಿರ ಸಂಚಿಕೆ ಪೂರೈಸಿದ್ದು, ಆರಂಭದಿಂದ ಇಲ್ಲಿವರೆಗೂ ಪ್ರೇಕ್ಷಕರ ಪ್ರೀತಿ ಪಡೆದುಕೊ‌ಂಡಿದೆ. ಗಂಡನಿಂದ ವಂಚಿಳಾದ ಹೆಣ್ಣು ಕುಗ್ಗದೇ ಜೀವನ ಕಟ್ಟಿಕೊಂಡ ಕಥೆ. ಛಲವೊಂದಿದ್ದರೆ ಸಾಕು ಸಾಧಿಸಿ ತೋರಿಸಬಹುದು ಎಂಬುಸನ್ನು ಸಾಬೀತುಪಡಿಸಿದ‌ ಕಥೆಯೇ ಪುಟ್ಟಕ್ಕನ ಮಕ್ಕಳು.


ಜೆ.ಎಸ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿ, ಜೀ ಕನ್ನಡದಲ್ಲಿ 13ನೇ ಡಿಸೆಂಬರ್ 2021 ರಿಂದ ಪ್ರಸಾರವಾದ ಧಾರಾವಾಹಿ ಪುಟ್ಟಕ್ಕನ ಮಕ್ಕಳು. ಹೆಣ್ಣು ಮಕ್ಕಳ ಹೆತ್ತೋಳೂ ಎಲ್ಲ ದೇವರಿಗೂ ದೊಡ್ಡೋಳು ಎಂಬ ಶೀರ್ಷಿಕೆ ಗೀತೆಯಿಂದಲೇ ಎಲ್ಲರ ಮನಸೆಳೆದು, ಮೊದಲ ವಾರದ ರೇಟಿಂಗ್ ನಲ್ಲಿ 13.5 ಟಿ ವಿ ಆರ್ ಗಳಿಸಿ ಇಡೀ ಭಾರತದಲ್ಲೇ ಅತಿ ಹೆಚ್ಚು ಓಪನಿಂಗ್ ಪಡೆದ ಧಾರಾವಾಹಿ ಎಂಬ ದಾಖಲೆ ಸೃಷ್ಠಿಸಿತು. ಆರೂರು ಜಗದೀಶ್ ರವರ ಸಾರಥ್ಯದಲ್ಲಿ ಚಿತ್ರೀಕರಣಗೊಂಡ ಮೊದಲ ಕಂತುಗಳು ‘ಸಣ್ಣ ಪರದೆಯ ದೊಡ್ಡ ಸಿನಿಮಾ’ ಎಂಬ ಮನ್ನಣೆ ಗಳಿಸಿದವು.

ನಿರ್ಮಾಪಕಿ ಸ್ಮಿತಾ ಜೆ ಶೆಟ್ಟಿಯವರ, ಜೆ ಎಸ್ ಪ್ರೊಡಕ್ಷನ್ಸ್ ಸಂಸ್ಥೆಯು ‘ಶುಭ ವಿವಾಹ, ಜೋಡಿ ಹಕ್ಕಿ, ಜೊತೆ ಜೊತೆಯಲಿ’ ಯಂತಹ ಯಶಸ್ವಿ ಧಾರಾವಾಹಿಗಳನ್ನು ನೀಡಿದ್ದು, ಸಾವಿರ ಸಂಚಿಕೆಗಳನ್ನು ಪೂರೈಸಿರುವ ‘ಪುಟ್ಟಕ್ಕನ ಮಕ್ಕಳು’ ಈ ಸಂಸ್ಥೆಯ ಮೈಲುಗಲ್ಲಾಗಿದೆ. ಉಮಾಶ್ರೀ, ಮಂಜು ಭಾಷಿಣಿ, ರಮೇಶ್ ಪಂಡಿತ್, ಸಾರಿಕಾ, ಗುರು ಹೆಗ್ಡೆ ನಂತಹ ಹಿರಿಯ ಕಲಾವಿದರ ಜೊತೆಗೆ, ಧನುಷ್, ಅಕ್ಷರ, ವಿದ್ಯಾ, ಶಿಲ್ಪ, ಅನಿರೀಶ್, ಮುಂತಾದ ಉದಯೋನ್ಮುಖ ಕಲಾವಿದರ ತಾರಾಗಣ ಹೊಂದಿರುವ ಪುಟ್ಟಕ್ಕನ ಮಕ್ಕಳು, ರಾಜ್ಯದ ಪ್ರತಿ ಮನೆಯ, ಪ್ರತಿದಿನದ ಅವಿಭಾಜ್ಯ ಅಂಗವಾಗಿದೆ. ಈ ಸಾಧನೆಯಲ್ಲಿ ತೆರೆಯ ಹಿಂದಿನ ತಾಂತ್ರಿಕ ವರ್ಗದ ಶ್ರಮವೂ ಸಾಕಷ್ಟಿದೆ.


ಬರಹಗಾರರಾದ ಸತ್ಯಕಿಯವರ ಚಿತ್ರಕಥೆ ಮತ್ತು ಸಂಭಾಷಣೆ ಈ ಧಾರಾವಾಹಿಯ ಜೀವಾಳ. ಪ್ರಧಾನ ನಿರ್ದೇಶಕರಾದ ಆರೂರು ಜಗದೀಶ್, ಸಂಚಿಕೆ ನಿರ್ದೇಶಕರಾದ ಮಹೇಶ್ ಸಾರಂಗ್, ಸಹ ನಿರ್ದೇಶಕರಾದ ಮುರಳಿ, ಸಂಕಲನರಾದ ಜಯಚಂದ್ರ, ಹಾಗು ಪ್ರೊಡಕ್ಷನ್ ಮ್ಯಾನೇಜರಿಂದ ಹಿಡಿದು, ಸೆಟ್ ಹುಡುಗರು, ಕ್ಯಾಮೆರಾ ಮತ್ತು ಲೈಟ್ ವಿಭಾಗ, ಮೇಕಪ್, ಊಟೋಪಚಾರ, ಆಫೀಸಿನ ಅಕೌಂಟ್ ಸೆಕ್ಷನ್ ಹೀಗೆ ಎಲ್ಲರ ಶ್ರಮವೂ ಈ ಧಾರಾವಾಹಿಯ ಯಶಸ್ಸಿಗೆ ಕಾರಣವಾಗಿದೆ.

ಧಾರಾವಾಹಿಯ ಮೂಲ ಉದ್ದೇಶ ಮನರಂಜನೆಯೇ ಆಗಿದ್ದರೂ, ಅದು ಕೇವಲ ಅಷ್ಟಕ್ಕೆ ಸೀಮಿತವಾಗದೆ, ಪುಟ್ಟಕ್ಕನ ಮಕ್ಕಳು ಸಾಕಷ್ಟು ಸಾಮಾಜಿಕ ವಿಷಯಗಳನ್ನು ಚರ್ಚಿಸುವ ಕಥೆಯಾಗಿದೆ. ಅಷ್ಟೇ ಅಲ್ಲದೆ, ಕೌಟುಂಬಿಕ ಮೌಲ್ಯಗಳು, ಹೊಂದಾಣಿಕೆ, ತ್ಯಾಗ, ಪ್ರಾಮಾಣಿಕತೆ, ಸಮಸ್ಯೆಗಳನ್ನು ಎದುರಿಸುವ ಛಲ ಇನ್ನಿತರೆ ಜೀವನ ಪಾಠಗಳನ್ನು ಆಗಾಗ್ಗೆ ಬೋಧಿಸುವಲ್ಲಿ ಪುಟ್ಟಕ್ಕ ಮೇಷ್ಟರಾಗಿದ್ದಾಳೆ. ಇತ್ತೀಚೆಗೆ ಮಹಿಳೆಯೊಬ್ಬರು ತಾವು ಪುಟ್ಟಕ್ಕನ ಮಕ್ಕಳು ಧಾರಾವಾಹಿ ನೋಡಿ, ಸ್ಫೂರ್ತಿಗೊಂಡು ತಾವೂ ಸಹ ಹೊಟೇಲ್ ಶುರು ಮಾಡಿದೆವು ಎಂದು ಸಂದರ್ಶನ ನೀಡಿದ್ದರು. ರಾಜ್ಯದ ಹಲವೆಡೆ ‘ಪುಟ್ಟಕ್ಕನ ಮೆಸ್’ ಎಂಬ ಹೋಟೆಲ್‍ಗಳೂ ಸಹ ಕಾಣ ಸಿಗುತ್ತಿವೆ.

ಒಂದು ಕಥೆಯನ್ನು ಬರಹಗಾರ ಎಷ್ಟೇ ಚಂದ ಬರೆದರೂ, ನಿರ್ದೇಶಕ ಅಚ್ಚುಕಟ್ಟಾಗಿ ಚಿತ್ರಿಸಿದರೂ, ನಟರು ಪ್ರಬುದ್ದತೆಯಿಂದ ನಟಿಸಿದರೂ, ಅದಕ್ಕೊಂದು ವಾಹಿನಿ ದೊರೆತಾಗಲೇ ಅದು ಜನರನ್ನು ಮುಟ್ಟುತ್ತದೆ. ಜೀ ಕನ್ನಡ ವಾಹಿನಿಯು ಪ್ರತಿ ಮನೆಯ ಮನರಂಜನಾ ಸಂಗಾತಿ. ಜೀ ಕನ್ನಡದ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ರವರು ಈ ಕಥೆ ಮೇಲಿಟ್ಟಂತಹ ನಂಬಿಕೆ ಮತ್ತು ವಾಹಿನಿಯ ಇಡೀ ತಂಡದ ನೆರವು, ಇಂದು ಪುಟ್ಟಕ್ಕನನ್ನು ‘ಸಾವಿರದ ಪುಟ್ಟಕ್ಕ’ಳನ್ನಾಗಿ ರೂಪಿಸಿದೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯನ್ನು ಎದೆಗಪ್ಪಿಕೊಂಡು ನಿಮ್ಮದಾಗಿಸಿಕೊಂಡ ಕನ್ನಡ ಜನತೆಗೆ ಇಡೀ ತಂಡ ತಲೆ ಬಾಗಿ, ಧನ್ಯವಾದಗಳನ್ನು ತಿಳಿಸಿದೆ.

error: Content is protected !!