Cini NewsSandalwood

ಭವಿಷ್ಯದ ಬೆಳಕಿನತ್ತ ಅರಿವು : ಸೀಸ್ ಕಡ್ಡಿ ಚಿತ್ರವಿಮರ್ಶೆ (ರೇಟಿಂಗ್ : 3.5/5)

ರೇಟಿಂಗ್ : 3.5/5
ಚಿತ್ರ : ಸೀಸ್ ಕಡ್ಡಿ
ನಿರ್ದೇಶಕ : ರತನ್ ಗಂಗಾಧರ್
ನಿರ್ಮಾಪಕರು : ಸಂಪತ್ ಶಿವಶಂಕರ್,ರತನ್ ,ಕೃತಿ ನಾಣಯ್ಯ
ಸಂಗೀತ : ಬಳಸರಂಗನ್ ಕೆ.ಸಿ
ಛಾಯಾಗ್ರಹಣ : ಸುನಿಲ್
ತಾರಾಗಣ : ಸಿತಿನ್ ಅಪ್ಪಯ್ಯ, ರಾಮಮೂರ್ತಿ , ಮಾನ್ವಿ ಬಾಲ್ಗರ್, ಪ್ರಥಮ್ ರಜೆ, ಅನುಷ್ಕಾ , ಶ್ರೇಷ್ಟ, ಸೌಮ್ಯ, ಸಂತೋಷ್, ಮಹೇಂದ್ರ, ಸಂಜಯ್ ಕುಮಾರ್ ಹಾಗೂ ಮುಂತಾದವರು…

ಸಾಮಾನ್ಯವಾಗಿ ಪುಸ್ತಕ ಓದುವವರಿಗೆ ವಿಕ್ರಂ ಹಾಗೂ ಬೇತಾಳ ಕಥೆ ತಿಳಿದೆ ಇದೆ. ಅಲ್ಲಿ ಬರುವ ಒಂದೊಂದು ಕಥೆಯು ಬದುಕಿನ ಹಾಗೂ ನಮ್ಮನ್ನ ಜಾಗೃತಿಗೊಳಿಸುವಂತಹ ನೀತಿ ಕಥಾನಕ ಹೆಚ್ಚಾಗಿ ಕಾಣುತ್ತಿತ್ತು. ಅಂತದ್ದೇ ವಿಚಾರವುಳ್ಳ ಕೆಲವರ ಬದುಕಿನ ದೃಷ್ಟಿಕೋನದ ಹಾದಿಯ ಕನ್ನಡಿಯಂತೆ ಕಾಣುವ ಮಾರ್ಗಗಳ ಸುತ್ತ ವಿಭಿನ್ನವಾಗಿ ಕಥೆಯನ್ನ ಬೆಸೆದುಕೊಂಡು ಬಿಳಿಯ ಹಾಳೆಯ ಮೇಲೆ ಸೀಸ್ ಕಡ್ಡಿಯ ಬರಹ ಹೇಗೆ ಇರಬೇಕು ಎಂಬುದನ್ನ ಈ ವಾರ ಪ್ರೇಕ್ಷಕರ ಮುಂದೆ ಹೇಳುವ ಪ್ರಯತ್ನದ ಫಲವಾಗಿ ಬಂದಿರುವಂತಹ ಚಿತ್ರ ಇದಾಗಿದೆ.

ತಂದೆ ತಾಯಿಗೆ ಮಗಳ ಭವಿಷ್ಯವೇ ಮುಖ್ಯವಾಗಿರುತ್ತದೆ. ಆದರೆ ಮಗಳಿಗೆ ಹೆಸರನ್ನೇ ಇಡದೆ , ಅವಳ ಸಾಧನೆಯಿಂದ ಆಕೆ ಗುರುತಿಸಿಕೊಳ್ಳಬೇಕು ಎಂಬ ಮಾಧಾಸೆ ಅವರದು, ಅಂತಹ ಅಸ್ತಿತ್ವಕ್ಕಾಗಿ ಮಗು ಸಂಗೀತದ ಹಾದಿಯಲ್ಲಿ ಸಾಗುವಾಗ ಎದುರಿಸುವ ಕಷ್ಟಕಾರ್ಪಣ್ಯ ಒಂದೆಡೆಯಾದರೆ. ಗ್ರಾಮೀಣ ಭಾಗದ ಶಾಲೆಯಲ್ಲಿ ಓದುತ್ತಾ ತಂದೆ, ತಾಯಿ, ಅಜ್ಜ , ಅಜ್ಜಿ ಎಲ್ಲಾ ಇದ್ದರೂ ರವಿಶನಿಗೆ ತನ್ನ ಗುರುಗಳ ಮಾರ್ಗದರ್ಶನದಲ್ಲಿ ಕ್ಯಾಲಿಗ್ರಫಿ ಸ್ಪರ್ಧೆಗೆ ಹೋಗಲು ಸ್ಪೂರ್ತಿ , ಧೈರ್ಯವನ್ನ ತುಂಬುವ ನಿಟ್ಟಿನಲ್ಲಿ ಎದುರಾಗುವ ಸಂಕಷ್ಟಗಳು.

ಇನ್ನು ಹಳ್ಳಿಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಾ ತಾಯಿ ಇಲ್ಲದೆ , ಅನಾರೋಗ್ಯ ತಂದೆಯನ್ನ ನೋಡಿಕೊಳ್ಳುವ ಮಂಜಿ , ಬದುಕಿನ ಕಷ್ಟಗಳನ್ನು ಹತ್ತಿರದಿಂದ ಕಾಣುತ್ತಾ ಓದಿನ ಕಡೆಗೂ ಗಮನ ಹರಿಸುವ ಹುಡುಗಿಯ ಭವಿಷ್ಯಕ್ಕೆ ಬೆಂಬಲವಾಗಿ ಫೋಟೋಗ್ರಾಫರ್ ಫರೀದ್ ಬದುಕಿನ ದೃಷ್ಟಿಕೋನವು ವಿಚಿತ್ರವಾಗಿರುತ್ತದೆ. ಇನ್ನು ಗ್ಯಾರೇಜ್ ನಲ್ಲಿ ಕೆಲಸ ಮಾಡುವ ತೋಫಿಕ್ ತನ್ನ ಕುಟುಂಬ ನಿರ್ವಹಣೆಯ ಜೊತೆಗೆ ಸಿನಿಮಾ ನೋಡುವ ಹವ್ಯಾಸ. ಆದರೆ ಈತ ಚಿತ್ರ ನೋಡುವ ರೀತಿಯೇ ವಿಭಿನ್ನ.

ಆರಂಭದಿಂದ ಚಿತ್ರ ನೋಡುತ್ತಾ ಅದರ ಯೋಗ್ಯತೆ ಅನುಸಾರ ಹಣವನ್ನು ಟಿಕೆಟ್ ಕೊಡುವವರಿಗೆ ನೀಡುತ್ತಾನೆ. ಇದು ಅವರಿಬ್ಬರ ಒಪ್ಪಂದವು ಆಗಿರುತ್ತದೆ. ಈ ಸಾಲಿಗೆ ಬರುವ ಯುವ ಕಥೆಗಾರ , ನಿರ್ದೇಶಕ ವಿಕ್ಕಿ ಒಂದು ಸಿನಿಮಾ ಮಾಡಲು ನಿರ್ಮಾಪಕರ ಬಳಿ ಪರದಾಡುತ್ತಾನೆ. ಅಚನಕ್ಕಾಗಿ ತೋಫಿಕ್ ಭೇಟಿಯಾಗಿ , ಇವರಿಬ್ಬರ ಆಲೋಚನೆ ದೃಷ್ಟಿಕೋನ ಬೇರೆಯದೇ ದಾರಿಯನ್ನ ತೋರಿಸುತ್ತದೆ.

ಹೀಗೆ ಒಂದಷ್ಟು ವ್ಯಕ್ತಿಗಳ ಬದುಕಿನ ಘಟನೆಗಳು ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಸಾಗುತ್ತಾ ಹೋದರು ಕೊನೆಗೆ ಇವೆಲ್ಲವೂ ಒಂದು ಹಂತಕ್ಕೆ ಬಂದು ಅವರವರೂ ಕಂಡುಕೊಳ್ಳುವ ಮಾರ್ಗ ಏನು… ಏನನ್ನ ಅರಿಯಬೇಕು… ಹೇಗೆ ನಡೆಯಬೇಕು… ಎಂಬ ವಿಚಾರವನ್ನು ಬಹಳ ಸೂಕ್ಷ್ಮವಾಗಿ ಹೇಳಿದ್ದು , ಅದನ್ನ ಅರ್ಥೈಸಿಕೊಳ್ಳುವ ಶಕ್ತಿಯೊಂದಿಗೆ ಈ ಚಿತ್ರವನ್ನು ನೋಡಬೇಕು.

ಇನ್ನು ಈ ಕಥೆಗಳನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕ ರತನ್ ಗಂಗಾಧರ್ ಆಲೋಚನೆ ಬಹಳ ವಿಭಿನ್ನವಾಗಿದೆ. ಒಬ್ಬೊಬ್ಬರ ಬದುಕಿನಲ್ಲೂ ಎದುರಾಗುವ ಒಂದಷ್ಟು ಘಟನೆಗಳು ಹೇಗೆಲ್ಲಾ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿ , ಸಮಸ್ಯೆಗೆ ಗುರಿ ಮಾಡುತ್ತದೆ. ಅದರಿಂದ ಹೊರಬರಲು ಹೇಗೆ ಮಾರ್ಗ ಕಂಡುಕೊಳ್ಳಬೇಕು ಎಂಬ ಸೂಕ್ಷ್ಮತೆಯನ್ನು ಜಾಳ್ಮೆಯಿಂದ ಹೇಳಿದ್ದಾರೆ.

ಚಿತ್ರಕಥೆಯು ಗೊಂದಲಗಳ ನಡುವೆ ಬೆಸೆದುಕೊಂಡಿದ್ದು , ಅದರಲ್ಲಿರುವ ಎಳೆಗಳನ್ನು ಬಿಡಿಸಿಕೊಳ್ಳಲು ತುಸು ಕಷ್ಟ ಎನಿಸುವಂತಿದೆ. ಆದರೆ ಈ ಚಿತ್ರದಲ್ಲಿ ಬೇರೆ ಬೇರೆ ಬಗೆಯ ಕನ್ನಡ ಭಾಷಾ ಶೈಲಿಯೂ ಮಿಳಿತವಾಗಿದೆ. ಬೆಂಗಳೂರು ಕನ್ನಡ, ಹವ್ಯಕ ಕನ್ನಡ, ತುಮಕೂರು ಭಾಗದ ಹಳ್ಳಿಗಾಡಿನ ಶೈಲಿಯ ಕನ್ನಡ ಗಮನ ಸೆಳೆಯುವಂತಿದೆ.

ಇಂತಹ ಚಿತ್ರಗಳನ್ನು ನಿರ್ಮಿಸಲು ಧೈರ್ಯ ಮಾಡಿರುವ ನಿರ್ಮಾಪಕರ ಸಾಹಸವನ್ನ ಕೂಡ ಮೆಚ್ಚಲೇಬೇಕು. ಈ ಚಿತ್ರದ ಸಂಗೀತ , ಹಿನ್ನೆಲೆ ಸಂಗೀತ ಸೊಗಸಾಗಿ ಮೂಡಿ ಬಂದಿದೆ. ಛಾಯಾಗ್ರಹಕರ ಕೈಚಳಕವು ಉತ್ತಮವಾಗಿದೆ. ತಾಂತ್ರಿಕವಾಗಿ ತಂಡ ಬಹಳಷ್ಟು ಅಚ್ಚುಕಟ್ಟಾಗಿ ತನ್ನ ಕೆಲಸ ಮಾಡಿದೆ. ಅದರಲ್ಲೂ ವಿಶೇಷವಾಗಿ ಮಾನ್ವಿ ಬಾಲ್ಗರ್ ಸಂಗೀತ ಕಚೇರಿಯಲ್ಲಿ ಹಾಡುವ ಸಂದರ್ಭ ಸೊಗಸಾಗಿ ಬಂದಿದೆ.

ಮೌನದಲ್ಲೇ ಸೌಮ್ಯ ಜಗನ್ಮೂರ್ತಿ ಅದ್ಭುತವಾಗಿ ನಟಿಸಿದ್ದಾರೆ. ಶಾಲಾ ಶಿಕ್ಷಕರಾಗಿ ಸಂತೋಷ ಕರ್ಕಿ, ಅನಾಮಿಕ ಛಾಯಾಗ್ರಹಕನಾಗಿ ಸಂಜಯ್ ಕುಮಾರ್, ಗ್ಯಾರೇಜ್ ಮೆಕ್ಯಾನಿಕ್ಕಾಗಿ ಶ್ರೇಷ್ಟ ಜಪ್ತಿಮುಟ್, ವಿದ್ಯಾರ್ಥಿಯಾಗಿ ಪ್ರಥಮ್ ರಜೆ ಅರ್ಸ್, ಹಳ್ಳಿಯ ಹುಡುಗಿಯಾಗಿ ಅನುಷ್ಕಾ ಸೇರಿದಂತೆ ಅಭಿನಯಿಸಿರುವ ಪ್ರತಿಯೊಬ್ಬ ಕಲಾವಿದರು ಕೂಡ ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿ ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದ್ದಾರೆ. ಸೀಸ್ ಕಡ್ಡಿ ಗಿರುವ ಶಕ್ತಿ , ಅದನ್ನು ಬಳಸಿಕೊಳ್ಳುವ ಪರಿ ಹೇಗೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಹೇಳಿರುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬಹುದು.

error: Content is protected !!