ವಿಭಿನ್ನ ಶೀರ್ಷಿಕೆಯ “ನಾಯಿ ಇದೆ ಎಚ್ಚರಿಕೆ” ಚಿತ್ರದ ಟೀಸರ್ ಹಾಗೂ ಹಾಡುಗಳ ” ಬಿಡುಗಡೆ.
ಡಾ||ಲೀಲಾಮೋಹನ್ ಪಿವಿಆರ್ ಮತ್ತು ತಂಡದ ಪ್ರಯತ್ನಕ್ಕೆ ಸಾಥ್ ನೀಡಿದ ಇಂದ್ರಜಿತ್ ಲಂಕೇಶ್ ಹಾಗೂ ಪ್ರಥಮ್.
ನಾಯಿ ಸಾಕಿರುವವರ ಮನೆಯ ಮುಂದೆ ಸಾಮಾನ್ಯವಾಗಿ ಕಾಣುವ ಪದ ” ನಾಯಿ ಇದೆ ಎಚ್ಚರಿಕೆ”. ಈಗ ಇದೇ ಚಿತ್ರದ ಶೀರ್ಷಿಕೆಯಾಗಿರುವುದು ವಿಶೇಷ. ಹೌದು. ವೃತ್ತಿಯಲ್ಲಿ ವೈದ್ಯರಾಗಿರುವ ಡಾ||ಲಿಲಾಮೋಹನ್ ಪಿವಿಆರ್ ಅವರು ಈ ವಿಭಿನ್ನ ಶೀರ್ಷಿಕೆಯ ಚಿತ್ರವನ್ನು ನಿರ್ಮಾಣ ಮಾಡುವುದರ ಜೊತೆಗೆ ನಾಯಕನಾಗೂ ಕಾಣಿಸಿಕೊಂಡಿದ್ದಾರೆ. ಡಾ. ಲೀಲಾಮೋಹನ್ ಅವರು ಸಿನಿಮಾ ಉದ್ಯಮದಲ್ಲಿ ಈಗಾಗಲೇ ಐದು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಅವರು ಈ ಚಿತ್ರದ ನಿರ್ಮಾಪಕನಾಗುವ ಮೊದಲು, ‘ಗಡಿಯಾರ’ ಎಂಬ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಅಲ್ಲದೆ, ‘ಕೌರ್ಯ’, ‘ಪುಟ್ಟಾಣಿ ಪಂಟರುಗಳು’, ‘ರೋಡ್ ಕಿಂಗ್’, ಮತ್ತು ತೆಲುಗಿನ ‘ಕಲ್ಯಾಣಮಸ್ತು’ ಸೇರಿದಂತೆ ಹಲವಾರು ಚಲನಚಿತ್ರಗಳಲ್ಲಿ ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶೇಷವಾಗಿ, ‘ಉಗ್ರಾವತಾರ’ ಎಂಬ ಚಿತ್ರದಲ್ಲಿ ಮನಸ್ಸಿಗೆ ನೆಮ್ಮದಿಯಿಲ್ಲದ ಸೈಕೋ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.
ಕಲಿ ಗೌಡ ಅವರು ನಿರ್ದೇಶಿಸಿರುವ “ನಾಯಿ ಇದೆ ಎಚ್ಚರಿಕೆ” ಚಿತ್ರದ ಟೀಸರ್ ಹಾಗೂ ಹಾಡುಗಳನ್ನು ಇತ್ತೀಚೆಗೆ ನಿರ್ಮಾಪಕ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಿಡುಗಡೆ ಮಾಡಿದರು. ನಟ ಪ್ರಥಮ್ ಕೂಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಹದಿನೈದು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ನಿರ್ದೇಶಕನಾಗಿ ಇದು ಎರಡನೇ ಚಿತ್ರ. ನಾಯಿ ನೀಯತ್ತಿನ ಪ್ರಾಣಿ ಎಂದು ಎಲ್ಲರಿಗೂ ಗೊತ್ತು. ಅದು ಬದುಕಿದಾಗಷ್ಟೇ ಅಲ್ಲ. ಸತ್ತ ಮೇಲೂ ಅದರ ನೀಯತ್ತು ಕಡಿಮೆ ಆಗಲ್ಲ ಎಂಬದನ್ನು ನಮ್ಮ ಚಿತ್ರದ ಮೂಲಕ ತೋರಿಸಿದ್ದೇವೆ. ನಾನು ಹೇಳಿದ ಕಥೆ ಇಷ್ಟವಾಗಿ ಬಂಡವಾಳ ಹೂಡಿದ ನಿರ್ಮಾಪಕರಿಗೆ ಹಾಗೂ ಚಿತ್ರ ಉತ್ತಮಯ ಮೂಡಿಬರಲು ಸಹಾಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ಕಲಿ ಗೌಡ.
ನಾನು ವೃತ್ತಿಯಲ್ಲೂ ವೈದ್ಯ. ಈ ಚಿತ್ರದಲ್ಲೂ ವೈದ್ಯ. ಇದರಲ್ಲೂ ನನ್ನ ಹೆಸರು ಲೀಲಾ ಅಂತಲೇ.. ಇನ್ನೂ ಇದು ನಾಯಿ ಹಾಗೂ ಮನುಷ್ಯನ ಬಾಂಧವ್ಯದ ಕುರಿತಾದ ಸಿನಿಮಾ. ಜೊತೆಗೆ ನಾಯಿ ಕಚ್ಚುವುದರಿಂದ ಆಗುವ ದುಷ್ಪರಿಣಾಮಗಳನ್ನು ತೋರಿಸಿರುವ ಸಿನಿಮಾ. ಇದರ ಜೊತೆಗೆ ಸಸ್ಪೆನ್ಸ್, ಥ್ರಿಲ್ಲರ್, ಹಾರಾರ್, ಸೆಂಟಿಮೆಂಟ್ ಎಲ್ಲವೂ ಇರುವ ಚಿತ್ರ ಕೂಡ. ದಿವ್ಯಶ್ರೀ ಈ ಚಿತ್ರದ ನಾಯಕಿ. ಪ್ರಮೋದ್ ಶೆಟ್ಟಿ, ರಾಜ್ ಬಲ್ವಾಡಿ, ದಿನೇಶ್ ಮಂಗಳೂರು, ನಾಗೇಂದ್ರ ಅರಸ್, ಮಾನಸ, ಚಂದನ ಮುಂತಾದವರು ತಾರಾಬಳಗದಲ್ಲಿದ್ದಾರೆ. ಈಗಾಗಲೇ ಸೆನ್ಸಾರ್ ಅಂಗಳದಲ್ಲಿರುವ ಈ ಚಿತ್ರವನ್ನು ಮುಂದಿನ ತಿಂಗಳಲ್ಲಿ ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ನಾಯಕ ಹಾಗೂ ನಿರ್ಮಾಪಕ ಲೀಲಾಮೋಹನ್ ತಿಳಿಸಿದರು. ನಾಯಕಿ ದಿವ್ಯಶ್ರೀ, ಚಿತ್ರದಲ್ಲಿ ನಟಿಸಿರುವ ಮಾನಸ ಹಾಗೂ ಸಂಗೀತ ನಿರ್ದೇಶಕ ಮ್ಯಾಡ್ ಡಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.