ಜೂನ್ 27ಕ್ಕೆ ಬಹು ನಿರೀಕ್ಷಿತ “ಕಣ್ಣಪ್ಪ” ಚಿತ್ರ ಬಿಡುಗಡೆ… ಹಾಡು ಬಿಡುಗಡೆ ಮಾಡಿದ ಶಿವಣ್ಣ
1954 ರಲ್ಲಿ ಡಾ.ರಾಜ್ಕುಮಾರ್ ಅಭಿನಯದಲ್ಲಿ ಬೇಡರ ಕಣ್ಣಪ್ಪ ತೆರೆಕಂಡಿತ್ತು, ಆನಂತರ 1988 ರಲ್ಲಿ ಡಾ.ಶಿವರಾಜ್ಕುಮಾರ್ ಅಭಿನಯದಲ್ಲಿ “ಶಿವ ಮೆಚ್ಚಿದ ಕಣ್ಣಪ್ಪ” ಚಿತ್ರ ನಿರ್ಮಾಣವಾಯಿತು. ಆ ಚಿತ್ರದಲ್ಲಿ ಡಾ.ರಾಜ್ಕುಮಾರ್ ಪರಮೇಶ್ವರನಾಗಿ ಕಾಣಿಸಿಕೊಂಡಿದ್ದರು.
ಇದೀಗ 37 ವರ್ಷಗಳ ಬಳಿಕ ಮತ್ತೆ ಶಿವಭಕ್ತ ಕಣ್ಣಪ್ಪನ ಕಥೆ ಇಟ್ಟುಕೊಂಡು ಹೊಸ ನಿರೂಪಣೆಯೊಂದಿಗೆ “ಕಣ್ಣಪ್ಪ” ಎಂಬ ಚಿತ್ರ ಬಹು ಭಾಷೆಯಲ್ಲಿ ನಿರ್ಮಾಣವಾಗಿದೆ. ಕನ್ನಡ, ತೆಲುಗು ಸೇರಿದಂತೆ ಅನೇಕ ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ನಟ ಡಾ.ಮೋಹನ್ ಬಾಬು ಅವರು ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಮುಖೇಶ್ ಕುಮಾರ್ ಸಿಂಗ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಅಲ್ಲದೆ ಮೋಹನಬಾಬು ಅವರ ಪುತ್ರ ವಿಷ್ಣು ಮಂಚು ನಾಯಕನಾಗಿ ಕಾಣಿಸಿಕೊಂಡಿದ್ದಾರೆ, ವಿಶೇಷವಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಶಿವನ ಪಾತ್ರದಲ್ಲಿ ಹಾಗೂ ಬೆಡಗಿ ಕಾಜಲ್ ಅಗರವಾಲ್ ಪಾರ್ವತಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಇತ್ತೀಚೆಗೆ ಈ ಚಿತ್ರದ ೨ ಟೀಸರ್ ಪ್ರದರ್ಶನ ಹಾಗೂ ವಿಶೇಷ ಹಾಡೊಂದರ ಬಿಡುಗಡೆ ಕಾರ್ಯಕ್ರಮ ನೆರವೇರಿತು, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಹಾಗೂ ರಾಕ್ಲೈನ್ ವೆಂಕಟೇಶ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಕ್ಲೈನ್ ವೆಂಕಟೇಶ್, ಅಣ್ಣಾವ್ರ ಬೇಡರ ಕಣ್ಣಪ್ಪ ಚಿತ್ರವನ್ನು ಇಟ್ಟುಕೊಂಡು ಹಲವಾರು ಸಿನಿಮಾಗಳನ್ನು ಮಾಡಬಹುದು. ಈಗ ವಿಷ್ಣು ಮಂಚು ಅವರು ಕಣ್ಣಪ್ಪ ಚಿತ್ರವನ್ನು ಮಾಡಿದ್ದಾರೆ. ಈ ಸಿನಿಮಾ ಸಾಕಷ್ಟು ವಿಶೇಷತೆಗಳಿಂದ ಕೂಡಿರುತ್ತದೆ ಎನ್ನಬಹುದು. ಈಗಾಗಲೇ ನಾನು ಈ ಸಿನಿಮಾ ನೋಡಿದ್ದೇನೆ. ಎಲ್ಲಾ ಪಾತ್ರಗಳಿಗೂ ಕಲಾವಿದರು ಜೀವ ತುಂಬಿ ಅಭಿನಯಿಸಿದ್ದಾರೆ. ಚಿತ್ರ ಜೂನ್ 27 ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಕರ್ನಾಟಕದಲ್ಲಿ ಈ ಸಿನಿಮಾವನ್ನು ನಾನೇ ವಿತರಣೆ ಮಾಡುತ್ತಿದ್ದೇನೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಹಿರಿಯ ನಟ ಶಿವರಾಜ್ಕುಮಾರ್, ನಾನು ಕಣ್ಣಪ್ಪ ಚಿತ್ರದಲ್ಲಿ ನಟಿಸಬೇಕಾಗಿತ್ತು. ಹಲವು ಚಿತ್ರಗಳು ಇದ್ದುದರಿಂದ ದಿನಾಂಕದ ಸಮಸ್ಯೆಯಿಂದ ನಟಿಸಲು ಆಗಲಿಲ್ಲ. ಮುಂದೊಂದು ದಿನ ವಿಷ್ಣು ಮಂಚು ಅವರ ಜೊತೆ ಪೂರ್ಣ ಪ್ರಮಾಣದ ಚಿತ್ರದಲ್ಲಿ ನಟಿಸುತ್ತೇನೆ, ಹಿರಿಯ ನಟ ಮೋಹನ್ಬಾಬು ಅವರು ನಮ್ಮ ಕುಟುಂಬದ ಸದಸ್ಯರು ಇದ್ದಹಾಗೆ. ಅವರು ಕರೆದರೆ ಪ್ರೀತಿಯಿಂದ ನಟಿಸಿ ಬರುತ್ತೇನೆ. “ಕಣ್ಣಪ್ಪ” ಚಿತ್ರ ಜೂನ್ 27ಕ್ಕೆ ಬಿಡುಗಡೆಯಾಗುತ್ತಿದೆ. ಚಿತ್ರ ಭರ್ಜರಿ ಹಿಟ್ ಆಗುತ್ತದೆ. ನಾನು ಮೊದಲ ದಿನವೇ ಸಿನಿಮಾ ನೋಡುತ್ತೇನೆ ಎಂದರು.
ನಿರ್ಮಾಪಕ ಮೋಹನ್ ಬಾಬು ಮಾತನಾಡಿ, ಕನ್ನಡದಲ್ಲಿ ನಟಿಸಬೇಕು ಎನ್ನುವ ಬಹುದಿನದ ಆಸೆ ಇದೆ. ಪ್ರಿಯ ಮಿತ್ರ ಅಂಬರೀಷ್ ಮುಂದೆ ಸಹ ಇದನ್ನೇ ಹೇಳಿದ್ದೆ. ಶಿವಣ್ಣ ನಿಮ್ಮೊಂದಿಗೂ ನಟಿಸುವ ಆಸೆ ಕೂಡ ಇದೆ. ಇನ್ನೂ, ಕಣ್ಣಪ್ಪ ಚಿತ್ರ ಜೂನ್ 27ಕ್ಕೆ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದೆ. ನ್ಯೂಜಿಲ್ಯಾಂಡ್ ಕಾಡಿನಲ್ಲಿ ಬೃಹತ್ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದೇವೆ.
ಕಣ್ಣಪ್ಪ ಚಿತ್ರ ವರನಟ, ಕನ್ನಡದ ಕಂಠೀರವ ಡಾ.ರಾಜ್ ಕುಮಾರ್ ಅವರು ಮಾಡಿದ್ದ ಚಿತ್ರ. ಆ ನಂತರ ಶಿವರಾಜ್ ಕುಮಾರ್ ಅವರು ಕಣ್ಣಪ್ಪ ಚಿತ್ರದಲ್ಲಿ ನಟಿಸಿದ್ದರು. ಈಗ ನಾವು ಕಣ್ಣಪ್ಪ ಚಿತ್ರವನ್ನು ಜನರ ಮುಂದೆ ತರುತ್ತಿದ್ದೇವೆ. ಡಾ,ರಾಜ್ ಕುಮಾರ್ ಕುಟುಂಬ ಮತ್ತು ಅಂಬರೀಷ್ ಅವರ ಜೊತೆಗಿನ ಒಡನಾಟ ಎಂದಿಗೂ ಮರೆಯಲು ಆಗುವುದಿಲ್ಲ. ಅಂಬರೀಷ್ ಅವರ ಮೂಲಕ ಪರಿಚಯವಾದದ್ದೇ ಸಹೋದರ ರಾಕ್ ಲೈನ್ ವೆಂಕಟೇಶ್. ರಾಜ್ಯದಲ್ಲಿ ಕಣ್ಣಪ್ಪ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ವಿತರಣೆ ಮಾಡುತ್ತಿದ್ದಾರೆ. ನಿರ್ಮಾಪಕನಾಗಿ ನನ್ನ ಮತ್ತು ನಟನಾಗಿ ಪುತ್ರ ವಿಷ್ಣು ಮಂಚು ಅವರ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು.
ಚಿತ್ರದ ನಾಯಕ ವಿಷ್ಣು ಮಂಚು ಶಿವಣ್ಣನ ವಿಶಾಲ ಮನೋಭಾವದ ಬಗ್ಗೆ ಮಾತನಾಡುತ್ತಾ, ಈ ಸಿನಿಮಾದಲ್ಲಿ ನಿಮ್ಮ ಜೊತೆ ಮಾಡಲಾಗಲಿಲ್ಲ. ಮುಂದಿನ ದಿನಗಳಲ್ಲಿ ನಿಮ್ಮ ಜೊತೆ ಖಂಡಿತ ಸ್ಕ್ರೀನ್ ಶೇರ್ ಮಾಡುತ್ತೇನೆ. ನಮ್ಮ ಚಿತ್ರಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದು ಹೇಳಿದರು.
ಚಿತ್ರದ ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್ ಮಾತನಾಡಿ ಈ ಹಿಂದೆ ನಾನು ಮಹಾಭಾರತ ಸೀರಿಯಲ್ ನಿರ್ದೇಶನ ಮಾಡಿದ್ದೆ, ನಾನು ಕನ್ನಡದ ಬೇಡರ ಕಣ್ಣಪ್ಪ ಹಾಗೂ ಶಿವ ಮೆಚ್ಚಿದ ಕಣ್ಣಪ್ಪ ಎರಡೂ ಚಿತ್ರಗಳನ್ನು ನೋಡಿದ್ದೇನೆ. ರಾಜ್ಕುಮಾರ್, ಶಿವಣ್ಣ ಇಬ್ಬರ ಅಭಿನಯ ನೋಡಿ ಈ ಸಿನಿಮಾ ನಿರೂಪಿಸಿದ್ದೇನೆ ಎಂದರು. ನಟ ಆರ್ಪಿತ್ಸಿಂಗ್ ಮಾತನಾಡಿ ಮಹಾಭಾರತ ಸೀರಿಯಲ್ನಲ್ಲಿ ದುರ್ಯೋಧನನ ಪಾತ್ರ ಮಾಡಿದ್ದೆ, ಅದಾದ ನಂತರ ಈ ಚಿತ್ರದಲ್ಲಿ ನಟಿಸುವ ಅವಕಾಶ ಬಂತು. ನಾನು ಶಿವರಾಜ್ ಕುಮಾರ್ ಅವರ ಫ್ಯಾನ್ ಎಂದು ಹೇಳಿದರು.