ಹೆಣ್ಣನ್ನು ಉಳಿಸಿ… ಬೆಳೆಸಿ…ಎಂದು ಸಾರುವ ‘ತಾಯವ್ವ’ (ಚಿತ್ರವಿಮರ್ಶೆ-ರೇಟಿಂಗ್ : 2.5/5 )
ರೇಟಿಂಗ್ : 2.5/5
ಚಿತ್ರ : ತಾಯವ್ವ
ನಿರ್ದೇಶನ , ಛಾಯಾಗ್ರಹಣ : ಸಾತ್ವಿಕ್ ಪವನ್ ಕುಮಾರ್
ನಿರ್ಮಾಪಕಿ : ಗೀತಪ್ರಿಯ
ಸಂಗೀತ : ಅನಂತ್ ಆರ್ಯನ್ ತಾರಾಗಣ : ಗೀತಪ್ರಿಯ , ಯಾಶಿಕ , ಮಹೇಶ್ , ಅನ್ನಪೂರ್ಣ , ಪ್ರಜ್ಞಾ ಬ್ರಹ್ಮವರ್ , ಕೀರ್ತಿ , ಪ್ರೇರಿತ, ಸುಮನ್ , ಶ್ವೇತಾ , ವಿಶ್ವಾಸ , ರಾಜು ಕಲ್ಕುಣಿ, ಲತಾ ಜಯಪ್ರಕಾಶ್, ಈಶ್ವರ್ , ಸುಹಾಸಿನಿ, ಸುಹಾಸ್ , ಪ್ರದೀಪ್ ಹಾಗೂ ಮುಂತಾದವರು…
ಕಮರ್ಷಿಯಲ್ ಸಿನಿಮಾಗಳ ಅಬ್ಬರದ ನಡುವೆಯೇ ಸಾಮಾಜಿಕ ಕಳಕಳಿ ಇರುವಂತಹ ಕಥಾನಕವಾಗಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವ ಎರಡು ಘಟನೆಗಳನ್ನು ಇಟ್ಟುಕೊಂಡು ಹೆಣ್ಣನ್ನು ಉಳಿಸಿ , ಹೆಣ್ಣನ್ನು ಬೆಳೆಸಿ ಎಂಬ ಅರ್ಥಪೂರ್ಣ ಸಂದೇಶದೊಂದಿಗೆ ಸೂಲಗಿತ್ತಿ ಸುತ್ತ ಸಾಗುವ ಚಿತ್ರವಾಗಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ತಾಯವ್ವ”. ಸಾಮಾನ್ಯವಾಗಿ ಮನೆಯ ವಾತಾವರಣ ಹಾಗೂ ಹಿರಿಯರ ಮಾತು ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ.
ಮೊಮ್ಮಕ್ಕಳಿಗೆ ಅಜ್ಜಿ ಎಂದರೆ ಪ್ರೀತಿ , ಆದರೆ ಅಜ್ಜಿಯೇ ಹೆಣ್ಣು ಗಂಡು ಎಂಬ ತಾರತಮ್ಯ ಮಾಡುತ್ತಾ ಹೋದರೆ ಹೆಣ್ಣು ಮಗುವಿನ ಮನಸ್ಥಿತಿಯ ಮೇಲೆ ದೊಡ್ಡ ಪರಿಣಾಮವೇ ಬೀರುತ್ತದೆ. ಅಂತದೇ ಒಂದು ಘಟನೆಯ ಪ್ರಶ್ನೆಗೆ ಡಾಕ್ಟರ್ ಹಾಗೂ ಕುಟುಂಬದ ನಡುವೆ ಉತ್ತರ ತೆರೆದುಕೊಳ್ಳುತ ಕಥೆ ಸಾಗುತ್ತದೆ. ಡಾಕ್ಟರ್ ದಂಪತಿಯ ಮುದ್ದಾದ ಮಗಳು ಸ್ಪೂರ್ತಿ( ಯಾಶಿಕ) ರಜೆಯ ಸಮಯ ಕಳೆಯಲು ತನ್ನ ಕುಟುಂಬಸ್ಥರ ಹಳ್ಳಿಗೆ ಬರುತ್ತಾಳೆ. ತನ್ನ ಊರನ್ನು ನೋಡಲು ಲಕ್ಷ್ಮಿ( ಕೀರ್ತಿ) ಎಂಬ ಗೆಳತಿ ಸಿಗುತ್ತಾಳೆ.
ಇದರ ನಡುವೆ ಊರಿನ ಹಿರಿಯ ಜೀವ ಸೋಲಗಿತ್ತಿ ತಾಯವ್ವ (ಗೀತಪ್ರಿಯ) ನಾಣ್ಯ ನುಂಗಿದ ಮಗುವನ್ನ ರಕ್ಷಿಸುವ ಮೂಲಕ ತನ್ನ ಸಮಯಪ್ರಜ್ಞೆಯನ್ನು ತೋರುತ್ತಾಳೆ. ಹಾಗೆಯೇ ಆಕೆಯ ಕೈಯಿಂದ ಹಲವಾರು ಮಕ್ಕಳು ಜನ್ಮವನ್ನು ಪಡೆದಿರುವ ವಿಚಾರ ಸ್ಪೂರ್ತಿಗೆ ತಿಳಿಯುತ್ತದೆ. ಇನ್ನು ತಾಯವ್ವ ತನ್ನ ಪದಗಳ ಮೂಲಕ ಹಾಡುತ್ತಾ ಸಮಯ , ಸಂದರ್ಭಕ್ಕೆ ತಕ್ಕಂತೆ ಜನರಿಗೆ ಇದರಾಗುವ ಕಷ್ಟ ಕಾರ್ಪಣ್ಯಕ್ಕೆ ಸ್ಪಂದಿಸುತ್ತ ಊರಿನಲ್ಲಿ ವಾಸ ಮಾಡುತ್ತಾಳೆ.
ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ , ಅನ್ಯಾಯದ ವಿರುದ್ಧ ಸದಾ ಒಂದು ಕಣ್ಣು ಇಟ್ಟಿರುತ್ತಾಳೆ ತಾಯವ್ವ. ಇದರ ನಡುವೆ ಲಕ್ಷ್ಮಿಯ ತಾಯಿ ಮತ್ತೊಂದು ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ಅತ್ತೆಯ ಕಿರುಕುಳವು ಹೆಚ್ಚಾಗಿರುತ್ತದೆ. ಮಾತನಾಡದ ಗಂಡ , ಮುದ್ದಾದ ಹೆಣ್ಣು ಮಗಳು , ಇನ್ನು ಹುಟ್ಟುವ ಮಗು ಹೆಣ್ಣಾದರೆ ಏನು ಎಂಬ ಆತಂಕ ತಾಯಿಯದು. ಇದರ ನಡುವೆ ನಡೆಯೋ ಒಂದಷ್ಟು ಘಟನೆಗಳು ಜಾಗೃತಿಯ ಜೊತೆ ಹೆಣ್ಣು ಮಕ್ಕಳ ಬಗ್ಗೆ ತೋರಿರುವ ವಿಚಾರ ಏನು ಎಂಬುವುದು ಗಮನ ಸೆಳೆಯುವಂತಿದೆ.
ಇನ್ನು ನಿರ್ದೇಶಕ ಸಾತ್ವಿಕ್ ಪವನ್ ಕುಮಾರ್ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಬಹಳ ಅರ್ಥಪೂರ್ಣವಾಗಿದ್ದು , ಜಾಗೃತಿ ಮೂಡಿಸುವ ಅಂಶವನ್ನು ಒಳಗೊಂಡಿದೆ. ತಾಯಿ ಇಲ್ಲದೆ ಜನ್ಮವಿಲ್ಲ , ಹೆಣ್ಣು ಭ್ರೂಣ ಹತ್ಯೆ , ಹೆಣ್ಣು , ಗಂಡು ಎಂಬ ತಾರತಮ್ಯ ಅಗತ್ಯವಲ್ಲ , ಹೆಣ್ಣು ಮಕ್ಕಳನ್ನು ಪ್ರೀತಿಸಿ , ಗೌರವಿಸಿ , ಬೆಳೆಸಿ ಎಂಬ ವಿಚಾರವನ್ನು ಒಂದಷ್ಟು ಘಟನೆಗಳ ಮೂಲಕ ಬೆಸೆದುಕೊಂಡು ಸೂಲಗಿತ್ತಿಯ ಹಾರೈಕೆಯ ಜೊತೆ ಗಟ್ಟಿ ಧ್ವನಿಯಲ್ಲಿ ಹೇಳಿರುವ ವಿಚಾರ ಗಮನ ಸೆಳೆಯುತ್ತದೆ. ಈಗಿನ ಕಾಲಘಟ್ಟಕ್ಕೆ ವೈದಿಕೀಯ ವ್ಯವಸ್ಥೆ ಬದಲಾವಣೆ ಆಗಿದ್ದು , ಕಥೆಯಲ್ಲಿ ಹೊಸತನದ ವಿಷಯ ಕಾಣುವುದಿಲ್ಲ.
ಛಾಯಾಗ್ರಹಣವನ್ನು ನಿರ್ದೇಶಕರೇ ಅಚ್ಚುಕಟ್ಟಾಗಿ ಮಾಡಿದ್ದಾರೆ. ಸಂಗೀತ ಉತ್ತಮವಾಗಿ ಸಾಗಿದ್ದು , ಹಾಡಿನ ಪದಗಳು ಮನಸನ್ನ ಸೆಳೆಯುತ್ತದೆ. ತಾಂತ್ರಿಕತೆಯ ಕೊರತೆಯ ಕಾಣುತ್ತದೆ. ಇನ್ನು ತಾಯವ್ವ ನ್ನ ಪಾತ್ರ ಮಾಡಿರುವ ನಿರ್ಮಾಪಕಿ ಗೀತಪ್ರಿಯ ಪಾತ್ರವನ್ನು ನಿರ್ವಹಿಸಲು ಬಹಳ ಶ್ರಮಪಟ್ಟಿದ್ದಾರೆ. ಹಾಗೆಯೇ ಪುಟಾಣಿ ಹೆಣ್ಣು ಮಕ್ಕಳ ಪಾತ್ರಗಳು ಬಹಳ ಅಚ್ಚುಕಟ್ಟಾಗಿ ಅಭಿನಯಿಸಿ ಜೀವ ತುಂಬಿದ್ದಾರೆ. ಅದೇ ರೀತಿ ಪೋಷಕ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದೆ. ಇದು ತಂದೆ ತಾಯಿ ಸೇರಿದಂತೆ ಮಕ್ಕಳು ನೋಡುವಂತಹ ಚಿತ್ರ ಇದಾಗಿದೆ.