ಸಂಕ್ರಾಂತಿಯ ಸುಗ್ಗಿಗೆ ‘ಸೂರ್ಯ’ನ ಆಗಮನ.
ಚಂದನವನಕ್ಕೆ ಯುವ ಪ್ರತಿಭೆಗಳ ಬಳಗ ಸಂಕ್ರಾಂತಿಯ ಹಬ್ಬಕ್ಕೆ “ಸೂರ್ಯ” ನ ಕಿರಣವನ್ನು ಬೆಳ್ಳಿ ಪರದೆ ಮೇಲೆ ತರುತ್ತಿದ್ದಾರೆ. ಉತ್ತರ ಕರ್ನಾಟಕದ ಬೆಳಗಾವಿಯ ಬಸವರಾಜ ಬೆಣ್ಣೆ ಹಾಗೂ ರವಿ ಬೆಣ್ಣೆ ಸಹೋದರರು ನಂದಿ ಸಿನಿಮಾಸ್ ಅಡಿಯಲ್ಲಿ ನಿರ್ಮಿಸಿರುವ ಚಿತ್ರ ‘ಸೂರ್ಯ’ ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ಜನವರಿ 15 ರಂದು
ಬಿಡುಗಡೆಯಾಗಲಿದೆ. ಸ್ಲಂನಲ್ಲಿ ಬೆಳೆದ ಯುವಕ ಸೂರ್ಯ, ತನ್ನ ಪ್ರೀತಿಯನ್ನು ಪಡೆದುಕೊಳ್ಳಲು ಏನೆಲ್ಲ ಹೋರಾಟ, ಸಾಹಸ ಮಾಡುತ್ತಾನೆ, ಆತನಿಗೆ ಯಾರೆಲ್ಲ ಸಹಾಯ ಮಾಡುತ್ತಾರೆ ಎಂಬುದನ್ನು ಈ ಚಿತ್ರದ ಮೂಲಕ ನಿರ್ದೇಶಕ ಸಾಗರ್ ದಾಸ್ ಅವರು ಹೇಳಹೊರಟಿದ್ದಾರೆ. ಯುವನಟ ಪ್ರಶಾಂತ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಹರ್ಷಿತಾ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಈಗಾಗಲೇ ರಿಲೀಸಾಗಿರುವ ಚಿತ್ರದ ಟ್ರೈಲರ್ ಎಲ್ಲಾಕಡೆ ವೈರಲ್ ಆಗಿದೆ. ನಿರ್ದೇಶಕ ಸಾಗರ್ ರಚನೆಯ, ಹೇಮಂತ್ ಕುಮಾರ್, ಪೃಥ್ವಿಭಟ್ ಹಾಡಿರುವ ಬಾರೆ ಬಾರೆ ಅತ್ತೆಯ ಮಗಳೇ ಎಂಬ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.

ಈ ಸಂದರ್ಭದಲ್ಲಿ ನಿರ್ದೇಶಕ ಸಾಗರ್ ಮಾತನಾಡಿ ಇದು ಮನರಂಜನೆಗೋಸ್ಕರ ಮಾಡಿದ ಚಿತ್ರ. ಹಾಗಂತ ಮೆಸೇಜ್ ಇಲ್ಲ ಅಂತಲ್ಲ. ಚಿತ್ರದಲ್ಲಿರುವುದು ಉತ್ತರ ಕರ್ನಾಟಕ ಭಾಷೆ ಅಂತ ಹೇಳಿದ್ದೆವು. ಆದರೆ ಇದು ಬೆಂಗಳೂರಲ್ಲೇ ನಡೆಯುವ ಕಥೆ. ಪ್ರಮೋದ್ ಶೆಟ್ಡಿ ಅವರ ಪಾತ್ರ ಮಾತ್ರವೇ ಆ ಭಾಷೆ ಮಾತಾಡುತ್ತೆ. 30 ವರ್ಷದ ಹಿಂದೆ ನಡೆದ ನಡೆಯುವ ಕಥೆ ಈಗಿನ ಜನರೇಶನ್ ಲವ್ ಸ್ಟೋರಿಗೆ ಲಿಂಕ್ ಆಗುತ್ತೆ. ರವಿಶಂಕರ್ ಅವರು ಕಂಟೆಂಡ್, ಕ್ವಾಲಿಟಿ ಸಿನಿಮಾ
ಮಾಡಿದ್ದೀಯ ಅದಕ್ಕಾಗಿ ನಾವು ನಿನ್ನ ಜತೆ ನಿಲ್ತೇವೆ ಅಂತ ಬಂದಿದ್ದಾರೆ. ಸಂಕ್ರಾಂತಿ ಕೊಡುಗೆಯಾಗಿ ನಮ್ಮ ಸಿನಿಮಾ ರಿಲೀಸಾಗುತ್ತಿದೆ ಎಂದರು. ನಟ ರವಿಶಂಕರ್ ಮಾತನಾಡಿ ಫಸ್ಟ್ ಟೈಂ ಆದ್ರೂ ಪ್ರೊಡ್ಯೂಸರ್ ಒಳ್ಳೆ ಚಿತ್ರ ಮಾಡಿದ್ದಾರೆ. ಸಾಗರ್ ಒಳ್ಳೆ ಕಥೆ ಮಾಡಿಕೊಂಡಿದ್ದಾರೆ. ಕಾಲೇಜ್ ಕುಮಾರ್ ನಂತರ ಶೃತಿ ಅವರ ಜತೆ ನಟಿಸಿದ್ದೇನೆ. ಕ್ಕೈಮ್ಯಾಕ್ಸ್ ನಲ್ಲಿ ತುಂಬಾ ಎಮೋಷನ್ ಕ್ಯಾರಿ ಆಗುತ್ತೆ. ಇದು ಎಮೋಷನಲ್ ಲವ್ ಸ್ಟೋರಿ, ಸೆಕೆಂಡ್ ಹಾಫ್ ನಲ್ಲಿ ಹೆವಿ ಸೀನ್ಸ್ ಇದೆ. ನಾಯಕನಿಗೆ ಡೈಲಾಗ್ ಮೆಮೋರಿ ತುಂಬಾ ಚೆನ್ನಾಗಿದೆ ಎಂದರು. ಅದೇ ರೀತಿ ಮತ್ತೊಬ್ಬ ನಟ ಕಡ್ಡಿಪುಡಿ ಚಂದ್ರು ಕೂಡ ತಮ್ಮ ವಿಲನ್ ಪಾತ್ರದ ಬಗ್ಗೆ ಹಾಗೂ ರವಿಶಂಕರ್ ಜೊತೆ ಅಭಿನಯಿಸಿದ ಅನುಭವಗಳನ್ನು ಹಂಚಿಕೊಂಡರು.

ನಾಯಕ ಪ್ರಶಾಂತ್ ಮಾತನಾಡಿ ಸ್ಲಂನಲ್ಲಿ ಬೆಳೆದ ಹುಡುಗನಾಗಿ ನಾನೀ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಆತನಿಗೆ ಹುಡುಗಿಯ ಜತೆ ಪ್ರೀತಿ ಆದ ನಂತರ ಅದನ್ನು ಆತ ಹೇಗೆ ಉಳಿಸಿಕೊಳ್ಳುತ್ತಾನೆ, ಪ್ರೀತಿಗೋಸ್ಕರ ಫೈಟ್ ಮಾಡೋ ಹುಡುಗ, ತನ್ನ ಡ್ರೀಮ್ ನನಸು ಮಾಡಿಕೊಳ್ಳಲು ಯಾವ ರೀತಿ ಹೋರಾಡ್ತಾನೆ ಎನ್ನುವುದೇ ಚಿತ್ರದ ಕಥೆ. ಟ್ರೈಲರ್ ಗೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ ಎಂದರು.
ನಾಯಕಿ ಹರ್ಷಿತಾ ಮಾತನಾಡಿ ಇದು ನನ್ನ ಫೇವರಿಟ್ ಸಾಂಗ್, ರವಿಶಂಕರ್ , ಶೃತಿಯಂಥ ಹಿರಿಯ ಕಲಾವಿದರ ಜೊತೆ ಕೆಲಸ ಮಾಡಿದ್ದು ಒಂದೊಳ್ಳೆ ಅನುಭವ ನೀಡಿದೆ. ಕಾಲೇಜ್ ಹೋಗೋ ಹುಡುಗಿ ತನ್ನ ಪ್ರೀತಿಯ ವಿಷಯದಲ್ಲಿ ಯಾವ ನಿರ್ಧಾರ ತಗೋತಾಳೆ ಅನ್ನುವುದೇ ಈ ಚಿತ್ರದ ಎಂದರು. ಉತ್ತರ ಕರ್ನಾಟಕ, ಬೆಂಗಳೂರು ಸುತ್ತಮುತ್ತ ಹಾಗೂ ಪೂನಾದಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಬಿ.ಸುರೇಶ್ ಜೊತೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಸಾಗರ್ ದಾಸ್ ಸೂರ್ಯ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ೫ ಹಾಡುಗಳಿಗೆ ಶ್ರೀ ಶಾಸ್ತ ಅವರು ಸಂಗೀತ ಸಂಯೋಜನೆ ಮಾಡಿದ್ದು, ಬಹದ್ದೂರ್ ಚೇತನ್, ಯೋಗರಾಜ ಭಟ್ ಹಾಗೂ ನಿರ್ದೇಶಕರೂ ಸಾಹಿತ್ಯ ರಚಿಸಿದ್ದಾರೆ. ಮನುರಾಜ್ ಅವರ ಛಾಯಾಗ್ರಹಣ, ಮಣಿಕಂಠ ಕೆ.ವಿ. ಅವರ ಸಂಭಾಷಣೆ, ನರಸಿಂಹ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ. ಪ್ರಮೋದ್ ಶೆಟ್ಟಿ, ಶೃತಿ, ಆರ್ಮುಗಂ ರವಿಶಂಕರ್, ಟಿ.ಎಸ್. ನಾಗಾಭರಣ, ಬಲ ರಾಜವಾಡಿ, ಭಜರಂಗಿ ಪ್ರಸನ್ನ, ಕುಂಕುಮ್ ಹರಿಹರ, ದೀಪಿಕಾ, ಕಡ್ಡಿಪುಡಿ ಚಂದ್ರು ಉಳಿದ ಪಾತ್ರ ವರ್ಗದಲ್ಲಿದ್ದಾರೆ,