“ಸೂರ್ಯ” ಚಿತ್ರದ ಉತ್ತರ ಕರ್ನಾಟಕದ ಸೊಗಡಿನ ‘ಕೆಂಪಾನ ಗಲ್ಲದ ಹುಡುಗಿ’ ಸಾಂಗ್ ರಿಲೀಸ್.
ಈಗೀಗ ಉತ್ತರ ಕರ್ನಾಟಕ ಭಾಗದ ಅನೇಕ ನಿರ್ಮಾಪಕರು ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅದೇರೀತಿ ಬೆಳಗಾವಿ ಮೂಲದ ಬಸವರಾಜ ಬೆಣ್ಣೆ ಹಾಗೂ ರವಿ ಬೆಣ್ಣೆ ಸಹೋದರರೂ ತಮ್ಮ ಕೊಡುಗೆ ನೀಡಲು ಅಣಿಯಾಗಿದ್ದಾರೆ. ನಂದಿ ಸಿನಿಮಾಸ್ ಮೂಲಕ “ಸೂರ್ಯ” ಎಂಬ ಮಾಸ್ ಲವ್ ಸ್ಟೋರಿಯನ್ನು ನಿರ್ಮಿಸಿ, ತೆರೆಗೆ ತರುವ ಸಿದ್ದತೆ ನಡೆಸಿದ್ದಾರೆ. ಯುವಕನೊಬ್ಬ ತನ್ನ ಪ್ರೀತಿಯನ್ನು ಪಡೆದುಕೊಳ್ಳಲು ಏನೆಲ್ಲ ಹೋರಾಟ, ಸಾಹಸ ಮಾಡುತ್ತಾನೆ ಎಂಬುದನ್ನು ಈ ಚಿತ್ರದ ಮೂಲಕ ನಿರ್ದೇಶಕ ಯುವ ನಿರ್ದೇಶಕ ಸಾಗರ್ ದಾಸ್ ಅವರು ಹೇಳಹೊರಟಿದ್ದಾರೆ. ಯುವನಟ ಪ್ರಶಾಂತ್ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಹರ್ಷಿತಾ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಬರುವ ಉತ್ತರ ಕರ್ನಾಟಕ ಶೈಲಿಯ ‘ಕೆಳಪಾನ ಗಲ್ಲದ ಹುಡುಗಿ’ ಎಂಬ ಹಾಡಿನ ಬಿಡುಗಡೆ ಸಮಾರಂಭ ಸೋಮವಾರ ಸಂಜೆ ನಡೆಯಿತು. ಯಾವುದೇ ಸೆಲಬ್ರಟಿ ಕರೆಸದೆ, ಆ ಹಾಡು ಹುಟ್ಟಲು, ತೆರೆಮೇಲೆ ಅಷ್ಟು ಚೆನ್ನಾಗಿ ಮೂಡಿಬರಲು ಕಾರಣಕರ್ತರಾದ ಎಲ್ಲಾ ಸೃಷ್ಟಿಕರ್ತರುಗಳೂ ಸೇರಿ ಆ ಸಾಂಗ್ ನ್ನು ವೇದಿಕೆಯಲ್ಲಿ ರಿಲೀಸ್ ಮಾಡಿದ್ದು ವಿಶೇಷವಾಗಿತ್ತು. ಸಾಹಿತಿ, ನಿರ್ದೇಶಕ ಸಾಗರ್, ಗಾಯಕರಾದ ರವೀಂದ್ರ ಸೊರಗಾವಿ, ಸ್ಪೂರ್ತಿ, ಸಂಗೀತ ನಿರ್ದೇಶಕ ಶ್ರೀಶ ಸಾಸ್ತಾ, ಕೊರಿಯಾಗ್ರಾಫರ್ ವಸಂತ್, ನಾಯಕ ಪ್ರಶಾಂತ್, ನಾಯಕಿ ಹರ್ಷಿತಾ ಜತೆ ನಿರ್ಮಾಪಕ ಸಹೋದರರು ಸೇರಿ ಈ ಹಾಡಿಗೆ ಚಾಲನೆ ನೀಡಿದರು.
ಹಾಡಿನ ಪ್ರದರ್ಶನದ ನಂತರ. ಚಿತ್ರದ ಕುರಿತಂತೆ ಮಾತನಾಡಿದ ನಿರ್ಮಾಪಕ ಬಸವರಾಜ ಬೆಣ್ಣೆ ಈ ಸಿನಿಮಾಗೆ ನಾವೆಲ್ಲಾ ತುಂಬಾ ಕಷ್ಟಪಟ್ಟಿದ್ದೇವೆ. ಉದ್ಯಮಿಗಳಾಗಿ ಪೂನಾದಲ್ಲಿ ನೆಲೆಸಿದ್ದರೂ ಹುಟ್ಟಿಬೆಳೆದ ಕನ್ನಡ ನಾಡಿಗೆ ಏನಾದರೂ ಕೊಡುಗೆ ನೀಡಬೇಕೆಂದು, ಕನ್ನಡ ಪ್ರತಿಭೆಗಳನ್ನು ಬೆಳೆಸಬೇಕೆಂದು ಈ ಸಿನಿಮಾ ಮಾಡಿದ್ದೇವೆ ಎಂದು ಹೇಳಿದರು. ಬಿ.ಸುರೇಶ್ ಜೊತೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಸಾಗರ್ ದಾಸ್ ವಿಭಿನ್ನವಾದ, ಹೊಸ ಥರದ ಮಾಸ್ ಲವ್ಸ್ಟೋರಿ ಇಟ್ಟುಕೊಂಡು ಸೂರ್ಯ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದು ಸಿಜಿ ವರ್ಕ್ ನಡೆಯುತ್ತಿದೆ.
ಹಾಡು, ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಸಾಗರ್, ಸೂರ್ಯ ಇದು ನಾಯಕನ ಹೆಸರು. ಆತ ತನ್ನ ಪ್ರೀತಿಗೋಸ್ಕರ ಯುದ್ದದ ರೀತಿಯಲ್ಲಿ ಸಮರ ಸಾರಿ ಅದನ್ನು ಹೇಗೆ ಉಳಿಸಿಕೊಳ್ಳುತ್ತಾನೆ ಎನ್ನುವುದೇ ಚಿತ್ರದ ಕಥಾಹಂದರ. ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಲೇ ನಾನೊಂದು ಕಥೆ ಮಾಡಿಕೊಂಡಿದ್ದೆ, ನನ್ನ ಸ್ನೇಹಿತನ ಮೂಲಕ ನಿರ್ಮಾಪಕರ ಪರಿಚಯವಾಗಿ, ಅವರಿಗೆ ಈ ಕಥೆ ಹೇಳಿದಾಗ ಇಷ್ಟಪಟ್ಟು ಚಿತ್ರ ನಿರ್ಮಾಣಕ್ಕೆ ಮುಂದಾದರು.
ಬೆಂಗಳೂರು ಸುತ್ತಮುತ್ತ ಹಾಗೂ ಪೂನಾದಲ್ಲಿ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ, ಚಿತ್ರದಲ್ಲಿ ಒಂದು ಉತ್ತರ ಕರ್ನಾಟಕ ಶೈಲಿಯ ಸಾಂಗ್ ಮಾಡಬೇಕು ಅಂದುಕೊಂಡಾಗ ಈ ಹಾಡು ತಯಾರಾಯಿತು. ಜೂನ್ ಅಥವಾ ಜುಲೈ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ. ಆರ್ಮುಗಂ ರವಿಶಂಕರ್ ಅವರನ್ನು ಈವರೆಗೆ ನೋಡಿರದಂಥ ಪಾತ್ರದಲ್ಲಿ ಕಾಣಬಹುದು. ಅಲ್ಲದೆ ನಟಿ ಶೃತಿ ಅವರು ಒಬ್ಬ ಡಾಕ್ಟರ್ ಜೊತೆಗೆ ಈಗಿನ ಕಾಲದ ಅಮ್ಮನಾಗೂ ಕಾಣಿಸಿಕೊಂಡಿದ್ದಾರೆ, ಕಾಂತಾರ ಖ್ಯಾತಿಯ ಪ್ರಮೋದ್ ಶೆಟ್ಟಿ ಅವರಿಲ್ಲಿ ಉತ್ತರ ಕರ್ನಾಟಕ ಭಾಗದ ವಿಲನ್ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದ ೫ ಹಾಡುಗಳಿಗೆ ಶ್ರೀ ಶಾಸ್ತ ಅವರು ಸಂಗೀತ ಸಂಯೋಜನೆ ಮಾಡಿದ್ದು, ಬಹದ್ದೂರ್ ಚೇತನ್, ಯೋಗರಾಜ ಭಟ್ ಅಲ್ಲದೆ ಈ ಹಾಡಿಗೆ ನಾನೇ ಸಾಹಿತ್ಯ ರಚಿಸಿದ್ದೇನೆ ಎಂದು ಹೇಳಿದರು.
ನಾಯಕ ಪ್ರಶಾಂತ್ ಮಾತನಾಡುತ್ತ ಪೂನಾ ಫಿಲಂ ಇನ್ ಸ್ಟಿಟ್ಯೂಟ್ನಲ್ಲಿ ಅಭಿನಯ ಕಲಿತು ಸೀರಿಯಲ್ಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿಕೊಂಡಿದ್ದೆ. ಈ ಚಿತ್ರದ ಮೂಲಕ ಮೊದಲಬಾರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದೇನೆ. ಒಬ್ಬ ಮಿಡಲ್ ಕ್ಲಾಸ್ ಹುಡುಗ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹೇಗೆಲ್ಲ ಹೋರಾಡುತ್ತಾನೆಂದು ನನ್ನ ಪಾತ್ರದ ಮೂಲಕ ತೋರಿಸಿದ್ದಾರೆ ಎಂದು ಹೇಳಿದರು.
ನಾಯಕಿ ಹರ್ಷಿತಾ ಮಾತನಾಡಿ ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ ತುಂಬಾ ವೇರಿಯೇಶನ್ಸ್ ಇದೆ, ಕಾಲೇಜ್ ಹೋಗೋ ಹುಡುಗಿ. ತನ್ನ ಪ್ರೀತಿಯ ವಿಷಯದಲ್ಲಿ ಆಕೆ ಯಾವ ನಿರ್ಧಾರ ತಗೋತಾಳೆ ಅನ್ನುವುದೇ ಈ ಚಿತ್ರದ ಕಥೆ ಎಂದು ವಿವರಿಸಿದರು.
ನಿರ್ಮಾಪಕ ರವಿಬೆಣ್ಣೆ ಮಾತನಾಡಿ ನಾವಿಬ್ಬರೂ ಸಹೋದರರು ಬೆಳಗಾವಿಯ ರೈತ ಕುಟುಂಬದಿಂದ ಬಂದವರು. ಪೂನಾದಲ್ಲಿ ಇಂಡಸ್ಟ್ರಿ ನಡೆಸುತ್ತಿದ್ದೇವೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಸಪೋರ್ಟ್ ಮಾಡಿ ಎಂದು ಹೇಳಿದರು. ಗಾಯಕ ರವೀಂದ್ ಸೊರಗಾವಿ ಮಾತನಾಡಿ ನಾವೆಲ್ಲ ಉತ್ತರ ಕರ್ನಾಟಕದವರು ಸೇರಿ ಈ ಸಿನಿಮಾ ಮಾಡಿದ್ದೇವೆ ಎಂದರು. ಮನುರಾಜ್ ಅವರ ಛಾಯಾಗ್ರಹಣ, ಮಣಿಕಂಠ ಕೆ.ವಿ. ಅವರ ಸಂಭಾಷಣೆ, ನರಸಿಂಹ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಮಿದೆ. ಟಿ.ಎಸ್. ನಾಗಾಭರಣ, ಬಲ ರಾಜವಾಡಿ, ಭಜರಂಗಿ ಪ್ರಸನ್ನ, ಪ್ರಮೋದ್ ಶೆಟ್ಟಿ, ಕುಂಕುಮ್ ಹರಿಹರ, ದೀಪಿಕಾ, ಕಡ್ಡಿಪುಡಿ ಚಂದ್ರು ಈ ಚಿತ್ರದ ಉಳಿದ ಪಾತ್ರ ವರ್ಗದಲ್ಲಿದ್ದಾರೆ,