ಗೊಂದಲಗಳ ಪ್ರಶ್ನೆಗಳಿಗೆ ಉತ್ತರ…’ಸಂಜು ವೆಡ್ಸ್ ಗೀತಾ 2′ ಹೊಸ ರೂಪ (ಚಿತ್ರವಿಮರ್ಶೆ-ರೇಟಿಂಗ್ : 4/5)
ರೇಟಿಂಗ್ : 4/5
ಚಿತ್ರ : ಸಂಜು ವೆಡ್ಸ್ ಗೀತಾ 2
ನಿರ್ದೇಶಕ : ನಾಗಶೇಖರ್
ನಿರ್ಮಾಪಕ : ಚಲವಾದಿ ಕುಮಾರ್
ಸಂಗೀತ : ಶ್ರೀಧರ್ ಸಂಭ್ರಮ್
ಛಾಯಾಗ್ರಹಣ : ಸತ್ಯ ಹೆಗ್ಡೆ
ತಾರಾಗಣ : ಶ್ರೀನಗರ ಕಿಟ್ಟಿ , ರಚಿತಾರಾಮ್ , ಸಾಧು ಕೋಕಿಲ , ತಬಲಾ ನಾಣಿ , ಸಂಪತ್ ರಾಜ್ , ರಂಗಾಯಣ ರಘು , ರಾಗಿಣಿ ದ್ವಿವೇದಿ , ಚೇತನ್ ಚಂದ್ರ ಹಾಗೂ ಮುಂತಾದವರು…
ಪ್ರೇಕ್ಷಕರನ್ನ ಮತ್ತೊಮ್ಮೆ ಚಿತ್ರಮಂದಿರಕ್ಕೆ ಕರೆ ತರುತ್ತಿರುವಂತಹ ಚಿತ್ರ “ಸಂಜು ವೆಡ್ಸ್ ಗೀತಾ-2”.
ಇದೆ ಜೂನ್ 06ರಂದು ಮರು ಬಿಡುಗಡೆ ಆಗುತ್ತಿದೆ. ಈ ಎರಡನೇ ವರ್ಷನ್ ಚಿತ್ರ ನೋಡಿದಾಗ ನಿರ್ದೇಶಕರು ಚಿತ್ರಕ್ಕೆ ಕೊಟ್ಟಿರುವ ಹೊಸ ರೂಪ ಪ್ರೇಕ್ಷಕರನ್ನ ಸೆಳೆಯುವಂತಹ ಬಹಳಷ್ಟು ಅಂಶವನ್ನು ಒಳಗೊಂಡಿದೆ. ಪ್ರತಿಯೊಂದು ಪ್ರೀತಿಯ ಹಿಂದೆ ನೋವು , ನಲಿವು ಎಲ್ಲವೂ ಬೆಸೆದುಕೊಂಡಿರುತ್ತದೆ. ಇಂಥದೇ ಒಂದು ನಿಷ್ಕಲ್ಮಶ ಪ್ರೀತಿಯ ಹಾದಿಯಲ್ಲಿ ಒಂದು ಗುರಿ ಮುಟ್ಟಲು ಹೊರಟವನಿಗೆ ಜೊತೆಯಾಗಿ ನಿಲ್ಲುವ ಸಂಗಾತಿಯ ಸುತ್ತ ಸಾಗುವ ಸುಂದರ ಮನ ಮಿಡಿಯುವ ಕಥಾನಕವಾಗಿ ಗಮನ ಸೆಳೆದಿದೆ.
*ಕಥಾ ಸಾರಾಂಶ*
ದೊಡ್ಡ ಬಿಸಿನೆಸ್ ಮ್ಯಾನ್ ವಿಜಯ್ ಮಲ್ಹೋತ್ರ (ಸಂಪತ್ ರಾಜ್) ಒಬ್ಬಳೇ ಮುದ್ದಾದ ಮಗಳು ಗೀತಾ (ರಚಿತಾ ರಾಮ್). ಶಿಡ್ಲಘಟ್ಟ ಮೂಲದ ರೇಷ್ಮೆ ನೇಕಾರ ಸಂಜು (ಶ್ರೀನಗರ ಕಿಟ್ಟಿ) ತನ್ನ ಮಾವ (ತಬಲಾ ನಾಣಿ) ಜೊತೆ ಪಟ್ಟಣದಲ್ಲಿ ದೊಡ್ಡ ದೊಡ್ಡ ಅಂಗಡಿಗಳಿಗೆ ಸೀರೆಗಳನ್ನ ಮಾರಾಟ ಮಾಡುತ್ತಾನೆ. ಒಮ್ಮೆ ಮಿಸ್ ಕರ್ನಾಟಕ ಬ್ಯೂಟಿ ಕಾಂಟೆಸ್ಟಿಗೆ ಗೀತಾ ಹೋಗುವಾಗ ಮಾರ್ಗ ಮಧ್ಯ ಅಚಾನಕ್ಕಾಗಿ ಸಂಜು ಭೇಟಿಯಾಗಿ ಸೀರೆ ಒಂದನ್ನು ನೀಡಿ ಹೊರಡುತ್ತಾನೆ. ಮತ್ತೆ ಸಂಜು ನೋಡಲು ಗೀತಾ ಹಲವು ಪ್ರಯತ್ನ ಮಾಡುತ್ತಾ ಹೋಗುತ್ತಾಳೆ. ಇತ್ತ ತಂದೆಯಿಂದಲೂ ವಿರೋಧ ವ್ಯಕ್ತವಾಗುತ್ತಾ ಬರುತ್ತದೆ. ಆಸ್ತಿ , ಅಂತಸ್ತನ್ನ ಲೆಕ್ಕಿಸದ ಗೀತಾ ಸಂಜುವಿನ ಸರಳತೆ , ಶ್ರಮವನ್ನ ಗಮನಿಸಿ ಪ್ರೀತಿಯ ಪಾಶಕ್ಕೆ ಬಿದ್ದು ಮದುವೆ ಆಗಿ , ತಂದೆಯ ಕೋಪಕ್ಕೆ ತುತ್ತಾಗಿ ತಮ್ಮದೇ ಬದುಕನ್ನ ಕಟ್ಟಿಕೊಳ್ಳುತ್ತಾರೆ. ಗುರಿ , ಛಲ ಇದ್ದರೆ ಖಂಡಿತ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುವಂತೆ , ಶಿಡ್ಲಘಟ್ಟದ ರೇಷ್ಮೆ ಉದ್ಯಮ ದೇಶದಲ್ಲೂ ಸದ್ದು ಮಾಡುವಂತೆ ಶ್ರಮಪಡುವ ಇವರ ಸಾಧನೆ ಹಾದಿಯಲ್ಲಿ ಹಲವು ಏಳು ಬೀಳುಗಳನ್ನು ಎದುರಿಸುತ್ತಲೇ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾ ಹೋಗುತ್ತಾರೆ. ಇದರ ಹಿನ್ನೆಲೆಯೂ ಒಂದು ಫ್ಲಾಶ್ ಬ್ಯಾಕ್ ನಲ್ಲಿ ತೆರೆದುಕೊಳ್ಳುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ವಿಧಿಯ ಆಟಕ್ಕೆ ಬೆಲೆ ಎಲ್ಲಿ ಎನ್ನುವಂತೆ, ಗೀತಾ ಹಾಗೂ ಸಂಜು ಬದುಕಿನಲ್ಲಿ ಎದುರಾಗುವ ದುರಂತ ಘಟನೆ ಬೇರೆ ಹಾದಿಯಲ್ಲಿ ಸಾಗಿ ಮನಮುಟ್ಟುವಂತಿದೆ.
ನಿರ್ದೇಶಕ ನಾಗಶೇಖರ್ ಈ ಎರಡನೇ ವರ್ಷನಲ್ಲಿ ಚಿತ್ರಕಥೆಗೆ ಹೆಚ್ಚು ಒತ್ತುಕೊಟ್ಟು , ಈ ಹಿಂದೆ ಇದ್ದಂತ ಗೊಂದಲಕ್ಕೆ ತಕ್ಕ ಉತ್ತರವನ್ನು ನೀಡಿದ್ದಾರೆ. ಚಿತ್ರದ ಓಟದಲ್ಲಿ ಕಾಣುವ ಕೆಲವು ಪಾತ್ರಗಳು ಬಂದದ್ದು ಯಾಕೆ , ಅದರ ನಿಲುವು ಏನು ಎಂಬುದನ್ನು ಸ್ಪಷ್ಟಪಡುಸುವುದರಲ್ಲಿ ಗೆದ್ದಿದ್ದಾರೆ. ನೇಕಾರರ ಬದುಕು , ರೇಷ್ಮೆ ಬೆಳೆಗಾರರ ಕಷ್ಟ , ಕಾರ್ಪಣ್ಯಗಳ ಬಗ್ಗೆ ಸೂಕ್ಷ್ಮವಾಗಿ ತೆರೆದು ಇಟ್ಟಿದ್ದಾರೆ. ನವಿರಾದ ಪ್ರೀತಿಯ ಸೆಳೆತ , ಬದುಕಿನ ಶಕ್ತಿ , ಸುಖ ದುಃಖಗಳ ಮಿಶ್ರಣವನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ದ್ವಿತೀಯ ಭಾಗ ಕೊಂಚ ಕಡತಗೊಳಿಸಿದರೆ ಇನ್ನೂ ಚೆನ್ನಾಗಿರುತ್ತಿತ್ತು. ಈ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕ ಚಲವಾದಿ ಕುಮಾರ್ ಮರು ಬಿಡುಗಡೆಗೂ ಧೈರ್ಯ ಮಾಡಿ ಖರ್ಚು ಮಾಡುತ್ತಿರುವುದು ಮೆಚ್ಚಲೇಬೇಕು. ಚಿತ್ರದ ಹೈಲೈಟ್ ಅಂದರೆ ಸತ್ಯ ಹೆಗಡೆ ಕ್ಯಾಮೆರಾ ಕೈಚಳಕ ಅದ್ಭುತವಾಗಿದೆ. ಅದಕ್ಕೆ ಪೂರಕವಾಗಿ ಸಂಗೀತ ನೀಡಿರುವ ಶ್ರೀಧರ್. ವಿ. ಸಂಭ್ರಮ್ ಸಂಗೀತ ಕೂಡ ಗುನುಗುವಂತಿದೆ. ಇನ್ನು ಪಾತ್ರವರ್ಗದಲ್ಲಿ ನಟ ಶ್ರೀನಗರ ಕಿಟ್ಟಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ನೇಕಾರನಾಗಿ ಮನಸ್ಸಿಗೆ ಹತ್ತಿರವಾಗುವ ಸಂಜು , ಪ್ರೇಮಿಯಾಗಿ ಮನಸ್ಸಿಗೆ ಮನಮುಟ್ಟುವಂತೆ ಅಭಿನಯಿಸಿದ್ದಾರೆ. ಅದೇ ರೀತಿ ನಟಿ ರಚಿತಾ ರಾಮ್ ಕೂಡ ಲೀಲಾಜಾಲವಾಗಿ ತಮ್ಮ ಪಾತ್ರಕ್ಕೆ ಜೀವ ತುಂಬಿ ಗಮನ ಸೆಳೆದಿದ್ದಾರೆ. ತಬಲಾ ನಾಣಿ ಮಾತಿನ ಸೊಗಡು , ಸಾಧು ಕೋಕಿಲ , ರಂಗಾಯಣ ರಘು ಪಾತ್ರ ಗಮನ ಸೆಳೆಯುತ್ತದೆ.
ನಾಯಕಿಯ ತಂದೆಯಾಗಿ ಸಂಪತ್ ಕುಮಾರ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದು , ವಿಶೇಷ ಪಾತ್ರದಲ್ಲಿ ಬರುವ ರಾಗಿಣಿ ಈ ಎರಡನೇ ವರ್ಷನ್ ನಲ್ಲಿ ತಮ್ಮ ಪಾತ್ರದ ನಿಲುವೇನು ಎಂಬುವುದನ್ನು ತೋರಿದ್ದಾರೆ. ಚೇತನ್ ಚಂದ್ರ ಚಿತ್ರದ ಓಟಕ್ಕೆ ಸಾತ್ ನೀಡಿದ್ದು, ಈ ಚಿತ್ರದಲ್ಲಿ ಸ್ವಿಜರ್ಲ್ಯಾಂಡಿನ ಸುಂದರ ತಾಣಗಳನ್ನು ಮನಸನ್ನ ಸೆಳೆಯುತ್ತದೆ. ಖಂಡಿತ ಈ ಚಿತ್ರ ಫ್ಯಾಮಿಲಿ ಸಮೇತ ಕುಳಿತು ನೋಡಬಹುದಾಗಿದೆ.