Cini NewsSandalwood

ದಶಕದ ಸಂಭ್ರಮದ “ಪ್ರಿಸಂ ರೆಕಾರ್ಡಿಂಗ್ ಸ್ಟುಡಿಯೋಸ್”ಗೆ ಶಾಸಕ ಡಾ. ಅಶ್ವಥ್ ನಾರಾಯಣರಿಂದ ಚಾಲನೆ

2014ರಲ್ಲಿ ಎಂ. ಎಸ್. ರಾಮಯ್ಯ ಯೂನಿವರ್ಸಿಟಿ ಆವರಣದಲ್ಲಿ ಪ್ರಿಸಮ್ ರೆಕಾರ್ಡಿಂಗ್ ಸ್ಟುಡಿಯೊಸ್ ಮತ್ತು ಪ್ರಿಸಮ್ ಫೌಂಡೇಶನ್ ಸಂಗೀತ ಸಂಸ್ಥೆ ಪ್ರಾರಂಭವಾಯಿತು. ರಾಮ್ ಇದರ ಸಂಸ್ಥಾಪಕರು ಹಾಗು ಚೇರ್ಮನ್ ಹಾಗೂ ಸಂಗೀತ ನಿರ್ದೇಶಕ ಮಹೇಶ್ ಮಹದೇವ್ ಇದರ ವ್ಯವಸ್ಥಾಪಕ ನಿರ್ದೇಶಕರು, ಹಿನ್ನಲೆ ಗಾಯಕಿ ಡಾ ಪ್ರಿಯದರ್ಶಿನಿ ಸಹ- ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರು.

ಪಿ.ಎಂ. ಆಡಿಯೋಸ್ & ಎಂಟರ್‌ಟೈನ್‌ ಮೆಂಟ್ಸ್ ನ್ನು 2014ರಲ್ಲಿ ಸಂಗೀತ ನಿರ್ದೇಶಕ ಮಹೇಶ್ ಮಹದೇವ್ ಅವರು ಸ್ಥಾಪಿಸಿದ್ದರು. ಹಿನ್ನಲೆ ಗಾಯಕಿ ಡಾ ಪ್ರಿಯದರ್ಶಿನಿ ಇದರ ವ್ಯವಸ್ಥಾಪಕ ನಿರ್ದೇಶಕರು. ಪ್ರಿಸಂ ರೆಕಾಂರ್ಡಿಂಗ್ ಸಂಸ್ಥೆ 10 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಇದೀಗ ಒಂದೇ ಸೂರಿನಡಿ ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡ ಪ್ರಿಸಂ ರೆಕಾರ್ಡಿಂಗ್ ಸ್ಟುಡಿಯೋದ ನೂತನ ಕಛೇರಿಯನ್ನು ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಪ್ರಾರಂಭಿಸಲಾಗಿದೆ‌.

ಗುರುವಾರ ಸಂಜೆ ಪ್ರಿಸಂ ರೆಕಾರ್ಡಿಂಗ್ ಸಂಸ್ಥೆಯ ನೂತನ ಸ್ಟುಡಿಯೋದ ಉದ್ಘಾಟನೆಯನ್ನು ಮಾಜಿ ಸಚಿವ, ಶಾಸಕ ಡಾ.ಕೆ. ಅಶ್ವಥ್ ನಾರಾಯಣ್ ಅವರು ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು, ಸಂಗೀತ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಲು ಪ್ರಿಸಂ ಫೌಂಡೇಷನ್ ಆರಂಭವಾಗಿದ್ದು, ಸಂಗೀತ, ಸಂಸ್ಕೃತಿ, ಆಚಾರ ವಿಚಾರಗಳನ್ನು ಪ್ರತಿನಿಧಿಸುತ್ತದೆ.

ಸಂಗೀತಕ್ಕೆ ಅಗಾಧ ಶಕ್ತಿಯಿದೆ. ಅದಕ್ಕೆ ಯಾವುದೇ ಭಾಷೆಯ ಮಿತಿ, ಗಡಿ ಇಲ್ಲ. ಕೆಲವು ಕಾಯಿಲೆಗಳಿಗೆ ಸಂಗೀತದ ಮೂಲಕ ಚಿಕಿತ್ಸೆ ಕೊಡಬಹುದಾಗಿದೆ. ಸಂಗೀತ ಕೇಳಿಸಿಕೊಂಡು ಅರವಳಿಕೆ ಇಲ್ಲದೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕಷ್ಟ, ಸುಖ, ಒಳ್ಳೆಯ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಂಗೀತವು ಪೂರಕವಾಗಿದೆ.‌ ನಿಮ್ಮ ಹಾಗೆಯೇ ಸಾಧನೆ ಮಾಡುವಂಥ ನೂರಾರು ಪ್ರತಿಭೆಗಳನ್ನು ಹುಟ್ಟುಹಾಕಿ ಎಂದು ಮಹೇಶ್ ಮಹದೇವ್ ಹಾಗೂ ಪ್ರಿಯದರ್ಶಿನಿ ಅವರಿಗೆ ಸಲಹೆ ನೀಡಿದರು.

ನಂತರ ಅತಿಥಿಯಾಗಿ ಆಗಮಿಸಿದ್ದ ನಟ ಧರ್ಮ ಮಾತನಾಡಿ ಮಹೇಶ್, ಪ್ರಿಯದರ್ಶಿನಿ ಅವರು ಅವರು ಸಂಗೀತದಲ್ಲಿ ಒಂದಲ್ಲ ಒಂದು ರೀತಿ ಸಾಧನೆ ಮಾಡಿಕೊಂಡೇ ಬಂದಿದ್ದಾರೆ. ಇದೀಗ ಅಚ್ಚುಕಟ್ಟಾಗಿ ಸ್ಟುಡಿಯೋ ಕೂಡ ಮಾಡಿದ್ದಾರೆ. ಚಿತ್ರರಂಗ ಇದರ ಸದುಪಯೋಗ ಮಾಡಿಕೊಳ್ಳಬೇಕು‌. ನಮ್ಮ ಒಂದು ಚಿತ್ರದ ರೆಕಾರ್ಡಿಂಗ್ ಇದೇ ಸ್ಟುಡಿಯೋದಲ್ಲೇ ನಡೆದಿದೆ ಎಂದು ಹೇಳಿದರು. ಮಹೇಶ್ ಮಹದೇವ್ ಹಾಗೂ ಪ್ರಿಯದರ್ಶಿನಿ ಇಬ್ಬರೂ ಸಂಗೀತ ಕ್ಷೇತ್ರದಲ್ಲಿ ತಮ್ಮದೇ‌ ಅದ ಸಾಧನೆಗೈದಿದ್ದಾರೆ.‌

ಮಹೇಶ್ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಹಿಂದಿ, ಉರ್ದು ಸೇರಿದಂತೆ 19 ಭಾಷೆಗಳ ನೂರಾರು ಗೀತೆಗಳಿಗೆ ಸಂಗೀತ ಸಂಯೋಜಕರಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ ಡಾ‌.ಪ್ರಿಯದರ್ಶಿನಿ ಅವರೂ ಸಹ ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಎಸ್.ಪಿ.ಬಿ, ಹರಿಹರನ್, ಸೋನು ನಿಗಮ್, ಮಧು ಬಾಲಕೃಷ್ಣನ್, ರಾಜೇಶ್ ಕೃಷ್ಣನ್ ರಂಥ ಗಾಯಕರ ಜತೆ ದನಿಗೂಡಿಸಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್.ಡಿ ಡಾಕ್ಟರೇಟ್ ಪದವಿ ಪಡೆದ ಭಾರತದ ಮೊದಲ ಹಿನ್ನೆಲೆ ಗಾಯಕಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.

ಅಲ್ಲದೆ ಗಾನ ಕಲಾಸರಸ್ವತಿ ಪ್ರಶಸ್ತಿ , ಶ್ರೇಷ್ಠ ಹಿನ್ನೆಲೆ ಗಾಯಕಿ ಪ್ರಶಸ್ತಿ, ಸಿಲ್ವರ್ ಸ್ಕ್ರೀನ್ ವುಮನ್ ಅಚೀವರ್ ಅವಾರ್ಡ್, ಪುನೀತ್ ರಾಜ್‌ಕುಮಾರ್ ರಾಜರತ್ನ ಪ್ರಶಸ್ತಿ, ಅಮೇರಿಕಾದ ಅಟ್ಲಾಂಟದಿಂದ ಅಂತರರಾಷ್ಟ್ರೀಯ ಪ್ರಶಸ್ತಿಯೂ ಇವರಿಗೆ ಲಭಿಸಿದೆ.

 

error: Content is protected !!