ಕೆವಿಎನ್ ಪ್ರಸ್ತುತ ಅನಿರುದ್ಧ್ ಮ್ಯೂಸಿಕಲ್ ಜಾತ್ರೆಯಲ್ಲಿ ಬೆಂಗಳೂರು ಮಂದಿಯ ಸಂಭ್ರಮ.
ಅನಿರುದ್ಧ್ ಹುಕ್ಕುಂ ಟೂರ್ನಲ್ಲಿ ಮಿಂದೆದ್ದ ಸಿಲಿಕಾನ್ ಸಿಟಿ ಮಂದಿ. ಬೆಂಗಳೂರಿನಲ್ಲಿ ನಡೆದ ಅನಿರುದ್ಧ್ ಸಂಗೀತ ಸಂಜೆಗೆ ಭರ್ಜರಿ ರೆಸ್ಪಾನ್ಸ್.
ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರಸ್ತುತಪಡಿಸಿರುವ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಹಬ್ಬಕ್ಕೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ದುಬೈ, ಆಸ್ಟ್ರೇಲಿಯಾ, ಅಮೆರಿಕ, ಪ್ಯಾರಿಸ್ ಹಾಗೂ ಸ್ವಿಟ್ಜರ್ಲ್ಯಾಂಡ್ ಮುಂತಾದ ದೇಶಗಳಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದ ಇದೇ ಹುಕುಂ ಟೂರ್ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನ ಟೆರಾಫಾರ್ಮ್ ಅರೆನಾದಲ್ಲಿ ಮೊನ್ನೆ ಅದ್ಧೂರಿಯಾಗಿ ಜರುಗಿದೆ. ಅನಿರುದ್ಧ್ ಸೂಪರ್ ಹಿಟ್ ಹಾಡುಗಳಿಗೆ ಸಂಗೀತ ಪ್ರಿಯರು ತಲೆದೂಗುತ್ತಾ ಕುಣಿದು ಕುಪ್ಪಳಿಸಿದ್ದಾರೆ.
ಟೆರಾಫಾರ್ಮ್ ಅರೇನಾದಲ್ಲಿ ನಡೆದ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕನ್ಸರ್ಟ್ ಟಿಕೆಟ್ ವಿಷ್ಯದಲ್ಲಿಯೇ ಬೃಹತ್ ದಾಖಲೆ ಸೃಷ್ಟಿ ಮಾಡಿತ್ತು. ಅನಿರುದ್ಧ್ ರವಿಚಂದರ್ ಅವರ ಹುಕುಂ ಟೂರ್ ಬೆಂಗಳೂರು ಅವತರಣಿಕೆಯ 16 ಸಾವಿರಕ್ಕೂ ಅಧಿಕ ಟಿಕೆಟ್ಗಳು ಕೇವಲ 60 ನಿಮಿಷದಲ್ಲೇ ಅಂದರೆ ಕೇವಲ ಒಂದೇ ಗಂಟೆಯಲ್ಲೇ ಮಾರಾಟವಾಗಿತ್ತು. ಇದೀಗ ಈ ಟೂರ್ ಬೆಂಗಳೂರಿನಲ್ಲಿಯೂ ಧಾಮ್ ಧೂಮ್ ಆಗಿ ನಡೆದಿರುವ ಖುಷಿಯಲ್ಲಿದ್ದಾರೆ ಕೆವಿಎನ್ ಸಂಸ್ಥಾಪಕ ವೆಂಕಟ್ ಎನ್ ನಾರಾಯಣ್.
ಈ ಬಗ್ಗೆ ಮಾತನಾಡಿರುವ ಅವರು, ಬೆಂಗಳೂರು ಯಾವಾಗಲೂ ಸಂಗೀತವನ್ನು ಅದರ ನಿಜವಾದ ರೂಪದಲ್ಲಿ ಸ್ವೀಕರಿಸಿದೆ. ಟೆರಾಫಾರ್ಮ್ ಅರೆನಾದಲ್ಲಿನ ಶಕ್ತಿಯು ಅವಾಸ್ತವಿಕವಾಗಿದೆ. ಇದು ಕೇವಲ ಮ್ಯೂಸಿಕ್ ಕನ್ಸರ್ಟ್ ಅಲ್ಲ. ಅದೊಂದು ಆಚರಣೆ. ಹುಕ್ಕುಂ ಪ್ರವಾಸ ಆರಂಭಿಸಿರುವುದು ನಮಗೆ ಹೆಗ್ಗುರುತಾಗಿದೆ. ಇದು ಕೇವಲ ಆರಂಭ. ಸಾವಿರಾರು ಸಂಗೀತ ಪ್ರಿಯರು ಹಾಡಿಗೆ ಹೆಜ್ಜೆ ಹಾಕುತ್ತಾ, ನೃತ್ಯ ಮಾಡಿದ್ದಾರೆ. ಇದು ಅನಿರುದ್ದ್ ಅವರ ಅಭಿಮಾನಿಗಳ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಮನೋರಂಜನೆ ವಿಷಯವಾಗಿ ಮತ್ತೊಂದಿಷ್ಟು ಅಚ್ಚರಿಗಳನ್ನು ಕೆವಿಎನ್ ಸಂಸ್ಥೆಯ ಕಡೆಯಿಂದ ಬರುವ ನಿರೀಕ್ಷೆಗಳಿವೆ. ಇನ್ನು ಹೆಚ್ಚಿನ ಮಾಹಿತಿಗಳಿಗಾಗಿ ಕೆವಿಎನ್ ಪ್ರೊಡಕ್ಷನ್ಸ್ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಡಿ ಎಂದು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ತಿಳಿಸಿದೆ.