Cini NewsSandalwood

ಮನಸೆಳೆಯುವ ತಾಯಿ ಮಗನ ಸಾಂಗ್… ಇದೇ 29ರಂದು “ಅಂದೊಂದಿತ್ತು ಕಾಲ” ರಿಲೀಸ್.

ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿರುವ “ಅಂದೊಂದಿತ್ತು ಕಾಲ” ಚಿತ್ರದ ‘ ಮಹಾರಾಜ ಹಾಗೆಂದು.. ಮನಸಾರೆ ಹಾರೈಸಿದೆ ನೀನಮ್ಮ’… ಎಂಬ ತಾಯಿ ಮಗನ ಬಾಂಧವ್ಯದ ಮನಮುಟ್ಟುವ ಹಾಡು ಇಂದು ಅಧಿಕೃತವಾಗಿ ಬಿಡುಗಡೆಗೊಂಡಿದೆ. ಕೆಜಿಎಫ್ ಖ್ಯಾತಿಯ ಕಿನ್ನಾಲ್ ರಾಜ್ ಸಾಹಿತ್ಯ ಬರೆದಿರುವ ಈ ಹಾಡನ್ನು ಸುನಿಲ್ ಕಶ್ಯಪ್ ಹಾಡಿದ್ದಾರೆ. ತಾಯಿ-ಮಗನ ಪ್ಯಾತೋ ಸಾಂಗ್ ಇದಾಗಿದ್ದು , ಮದರ್‌ ಆ್ಯಂತಮ್ ಎಂದೇ ಹೇಳಬಹುದು. ಈ ಚಿತ್ರದ ಪ್ರತಿಯೊಂದು ಹಾಡು ವಿಭಿನ್ನವಾಗಿ ಮೂಡಿ ಬಂದಿದ್ದು , ಈಗಾಗಲೇ ಎರಡು ಹಾಡು ಭರ್ಜರಿ ಹಿಟ್ ಆಗಿದ್ದು , ಮೂರನೇ ಹಾಡು ಕೂಡ ಎಲ್ಲರ ಮನಸ್ಸನ್ನು ಗೆಲ್ಲಲು ಸಿದ್ಧವಾಗಿದೆ. ಇಡೀ ಚಿತ್ರತಂಡ ಪ್ರಚಾರದಲ್ಲಿ ಭಾಗಿಯಾಗಿದ್ದು , ಇಂದು ಹೊರ ಬಂದಿರುವ ಹಾಡು ಹಾಗೂ ಚಿತ್ರ ಬಿಡುಗಡೆಯ ಬಗ್ಗೆ ಮಾತನಾಡಲು ಪತ್ರಿಕಾಗೋಷ್ಠಿಯನ್ನು ಚಿತ್ರತಂಡ ಆಯೋಜನೆ ಮಾಡಿತ್ತು.

ನಟ ವಿನಯ್ ರಾಜಕುಮಾರ್ ಮೊದಲು ಮಾತನಾಡುತ್ತಾ ನನ್ನ ಎಲ್ಲಾ ಸಿನಿಮಾಗಳಿಗಿಂತ ಈ ಚಿತ್ರ ಬಹಳ ವಿಶೇಷ. ಈ ಚಿತ್ರದ ಒಂದೊಂದು ಹಾಡು ಬಹಳ ವಿಭಿನ್ನವಾಗಿದ್ದು , ಈ ಅಮ್ಮ ಮಗನ ಸೆಂಟಿಮೆಂಟ್ ಸಾಂಗ್ ಬಹಳ ಮನಸನ್ನ ಸೆಳೆಯುತ್ತದೆ. ಇದೊಂದು ನಿರ್ದೇಶಕನ ಲೈಫ್ ಜರ್ನಿ, ಕೀರ್ತಿ ಅವರ ಲೈಫ್ ನಲ್ಲಿ ನಡೆದ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ.

ಅದರಲ್ಲೂ ಅವರ ಸಿನಿಮಾ ಬದುಕಿನ ಸುತ್ತಮುತ್ತ ನಡೆದದ್ದನ್ನು ಕತೆಯಾಗಿಸಿಕೊಂಡು ಬಹಳ ನ್ಯಾಚುರಲ್ ಆಗಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ನನ್ನದು ಮೂರು ಶೇಡ್ ಗಳಲ್ಲಿ ಒಳಗೊಂಡಿರುವಂತಹ ಪಾತ್ರ ಬರುತ್ತದೆ. ಇದು ಮೂರು ವರ್ಷದ ಜರ್ನಿ ಶ್ರಮದ ಫಲ. ನನ್ನ ಅಮ್ಮನಾಗಿ ಅರುಣಾ ಬಾಲರಾಜ್ ಕಾಣಿಸಿಕೊಂಡಿದ್ದಾರೆ. ಅವರ ಜೊತೆ ನನ್ನ ಮೂರನೇ ಚಿತ್ರ ಇದಾಗಿದೆ. ಇದೊಂದು ಫಿಲ್ ಗುಡ್ ಚಿತ್ರವಾಗಿದ್ದು , ಎಲ್ಲಾ ವರ್ಗದವರಿಗೂ ಇಷ್ಟವಾಗುವಂತ ಕಥೆ ಒಳಗೊಂಡಿದೆ, ನಿಮ್ಮೆಲ್ಲರ ಬೆಂಬಲ ನಮ್ಮ ಚಿತ್ರಕ್ಕೆ ಬೇಕು ಎಂದರು.

ನಟಿ ಅದಿತಿ ಪ್ರಭುದೇವ್ ಮಾತನಾಡುತ್ತಾ ಇಂದು ಬಿಡುಗಡೆಯಾಗಿರುವ ಅಮ್ಮ ಮಗನ ಈ ಹಾಡು ನನಗೆ ತುಂಬಾ ಇಷ್ಟ. ಬಹಳ ಅರ್ಥಗರ್ಭಿತವಾದ ಸಾಲುಗಳು ಈ ಹಾಡಿನಲ್ಲಿದೆ. ಪ್ರತಿ ತಾಯಿಯು ತನ್ನ ಮಗು ರಾಜನಂತೆ ಬದುಕಬೇಕೆಂದು ಆಸೆ ಪಡುವುದು ಸಹಜವೇ , ಅದರಂತೆ ಈ ಹಾಡು ಬಹಳ ಸೊಗಸಾಗಿ ಮೂಡಿ ಬಂದಿದೆ.

ನಮ್ಮ ಎರಡು ಹಾಡಿಗೆ ಕೊಟ್ಟಂತ ಪ್ರೋತ್ಸಾಹ , ಬೆಂಬಲ ಹಾಗೂ ಪ್ರೀತಿ ಈ ಹಾಡಿಗೂ ನೀಡಿ. ನೈಜ ಜೀವನಕ್ಕೆ ಹತ್ತಿರವಾದ ಪಾತ್ರಗಳು ಇದರಲ್ಲಿ ಇವೆ. ಪ್ರತಿಯೊಬ್ಬ ಪ್ರೇಕ್ಷಕರಿಗೂ ಈ ಚಿತ್ರ ಕನೆಕ್ಟ್ ಆಗುತ್ತೆ , ಇದೆ 29ರಂದು ಗೌರಿ ಗಣೇಶ ಹಬ್ಬದ ಸಂಭ್ರಮದ ಸಮಯದಲ್ಲಿ ನಮ್ಮ ಚಿತ್ರ ಬರುತ್ತಿದೆ. ಎಲ್ಲರೂ ನಮ್ಮ ಚಿತ್ತವನ್ನು ನೋಡಿ ಹರಸಿ ಎಂದರು.

ನಿರ್ಮಾಪಕ ಭುವನ್ ಸುರೇಶ್ ಮಾತನಾಡುತ್ತಾ ನಮ್ಮ ಚಿತ್ರ ಇದೆ 29ರಂದು ಸುಮಾರು 180ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ವಿತರಕ ಜಗದೀಶ್ ಫಿಲ್ಮ್ಸ್ ಮೂಲಕ ನಮ್ಮ ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡುತ್ತಿದ್ದೇವೆ. ಈ ಗೌರಿ ಗಣೇಶ ಹಬ್ಬಕ್ಕೆ ಹೋಳಿಗೆಯ ಹಬ್ಬದೂಟವನ್ನೇ ವೀಕ್ಷಕರಿಗೆ ನೀಡುತ್ತಿದ್ದೇವೆ. ಇದು ಒಬ್ಬ ನಿರ್ದೇಶಕನ ಬದುಕಿನ ಸುತ್ತ ನಡೆಯುವ ಕಥೆಯಾಗಿದೆ. ನಮ್ಮ ನಿರ್ದೇಶಕ ಕೀರ್ತಿ ಕೃಷ್ಣಪ್ಪ ಹೇಳಿದಂತೆ ಚಿತ್ರವನ್ನ ಅದ್ಭುತವಾಗಿ ತಂದಿದ್ದಾರೆ. ನಮ್ಮ ಎಲ್ಲಾ ಕಲಾವಿದರು ತುಂಬಾ ಸಹಕಾರ ನೀಡಿದ್ದಾರೆ. ನಾನು ಕೂಡ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಖಂಡಿತ ನಮ್ಮ ಚಿತ್ರ ಎಲ್ಲರಿಗೂ ಇಷ್ಟ ಆಗುತ್ತೆ. ನೀವೆಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದರು.

ನಿರ್ದೇಶಕ ಕೀರ್ತಿ ಕೃಷ್ಣಪ್ಪ ಮಾತನಾಡುತ್ತಾ ಈಗಾಗಲೇ ನಮ್ಮ ಚಿತ್ರದ ಎರಡು ಸಾಂಗ್ ಸೂಪರ್ ಹಿಟ್ ಮಾಡಿದ್ದಿರಾ. ಈ ತಾಯಿ ಮಗನ ಹಾಡು ಕೂಡ ಹಿಟ್ ಆಗುವ ನಿರೀಕ್ಷೆ ಇದೆ. ಇದು ಮೂರು ವರ್ಷದ ಪ್ರಯತ್ನವಾಗಿದ್ದು, ಒಂದಿಷ್ಟು ಜನರ ಲೈಫ್ ಈ ಚಿತ್ರದ ಮೇಲಿದೆ. ನನ್ನ ಮೊದಲ ಚಿತ್ರದಲ್ಲಿ ನಿರ್ದೇಶಕರ ಬದುಕಿನ ಸುತ್ತ ಮಾಡಿರುವುದು ನನಗೆ ಹೆಮ್ಮೆಯಾಗಿದೆ. ಇದರಲ್ಲಿ ಲವ್ , ಫ್ರೆಂಡ್ಶಿಪ್ , ಸೆಂಟಿಮೆಂಟ್ ಎಲ್ಲವೂ ಇದೆ.

ಅದರಲ್ಲೂ ಎಮೋಷನ್ ಜನರಿಗೆ ತಲುಪುತ್ತದೆ ಎಂದು ಹೇಳಬಹುದು. ಇದು ನಂಗೆ ಬಹಳ ಸ್ಪೆಷಲ್ ಸಿನಿಮಾ , ನಾನು ಹೇಗೆ ಅಂದುಕೊಂಡಿದ್ದೆನೋ ಅದೇ ರೀತಿ ನನ್ನ ಚಿತ್ರ ಬಂದಿದೆ. ನಿರ್ಮಾಪಕರು ನನಗೆ ಬಹಳ ಸಹಕಾರವನ್ನು ನೀಡಿದ್ದಾರೆ. ಅದೇ ರೀತಿ ಕಲಾವಿದರು ಹಾಗೂ ತಂತ್ರಜ್ಞರ ಸಹಕಾರ ತುಂಬಾ ಸಿಕ್ಕಿದೆ. ತೀರ್ಥಹಳ್ಳಿ , ಬೆಂಗಳೂರು ಸುತ್ತ ಮುತ್ತ ಶೂಟಿಂಗ್ ಮಾಡಲಾಗಿದೆ. ಇದೇ 29ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ , ನೀವೆಲ್ಲರೂ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಯಶಸ್ವಿಗೊಳಿಸಿ ಎಂದು ಕೇಳಿಕೊಂಡರು.

ತಾಯಿ ಪಾತ್ರವನ್ನು ಮಾಡಿರುವ ಅರುಣಾ ಬಾಲರಾಜ್ ಮಾತನಾಡುತ್ತಾ ನಮ್ಮ ಚಿತ್ರದ ಲಿರಿಕಲ್ ಹಾಡು ನನಗೆ ಬಹಳ ಇಷ್ಟ , ನನಗೆ ಗೊತ್ತಿರಲಿಲ್ಲ , ಈಗಲೇ ನಾನು ನಿಮ್ಮ ಜೊತೆ ಹಾಡನ್ನು ನೋಡಿದ್ದು , ಹಾರ್ಟ್ ಗೆ ಹತ್ತಿರವಾಗುತ್ತಿದೆ. ಇದನ್ನು ಸಿನಿಮಾದಲ್ಲಿ ನೋಡಿದಾಗ ಇನ್ನೂ ಆಪ್ತವಾಗಿದೆ. ಮಗನನ್ನು ಆಶೀರ್ವಾದ ಮಾಡಿ ಕಳಿಸಿದ ಮೇಲೆ ಹೇಗೆ ಹೆಸರು ಮಾಡುತ್ತಾನೆ ಎಂಬುದರ ಮೇಲೆ ಕಥೆ ಇದೆ. ಅದರಲ್ಲೂ ಈ ಚಿತ್ರದ ಕ್ಯಾಮರಾ ವರ್ಕ್ ತುಂಬಾ ಚೆನ್ನಾಗಿ ಬಂದಿದೆ . ನಾನು ಡಬ್ಬಿಂಗ್ ಮಾಡುವ ಸಮಯದಲ್ಲಿ ಕೆಲವು ದೃಶ್ಯಗಳನ್ನು ನೋಡಿದ್ದೇನೆ. ಹಾಗೆಯೇ ವಿನಯ್ ಜೊತೆ ಮೂರು ಸಿನಿಮಾ ಮಾಡಿದ್ದು, ಮೂರು ವಿಭಿನ್ನ ಪಾತ್ರ ಸಿಕ್ಕಿದ್ದವು. ತಾಯಿ ತಾನು ಕಷ್ಟ ಪಟ್ಟರು ಮಕ್ಕಳಿಗೆ ಸಾಧನೆ ಮಾಡಲು ಕಳಿಸಲು ಏನೆಲ್ಲಾ ಶ್ರಮ ಪಡುತ್ತಾಳೆ ಎಂಬುದನ್ನು ಕೂಡ ನೋಡಬಹುದು. ಈ ಸಿನಿಮಾ ಎಲ್ಲರಿಗೂ ಇಷ್ಟವಾಗುವಂತಹ ಅಂಶವನ್ನು ಒಳಗೊಂಡಿದೆ ಎಂದರು.

ಈ ಚಿತ್ರದಲ್ಲಿ ನಾಯಕನ ಗೆಳೆಯನ ಪಾತ್ರ ಮಾಡಿರುವ ಜಗ್ಗಪ್ಪ , ನೃತ್ಯ ನಿರ್ದೇಶಕ ರಘು ಮಾಸ್ಟರ್ , ಛಾಯಾಗ್ರಹಕ ಅಭಿಷೇಕ್ .ಜಿ. ಕಾಸರಗೋಡು ಸೇರಿದಂತೆ ಬಾಲ ಪ್ರತಿಭೆಗಳು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ಚಿತ್ರದಲ್ಲಿ ಪ್ರಮುಖ ಅತಿಥಿ ಪಾತ್ರ ಒಂದರಲ್ಲಿ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅಭಿನಯಿಸಿದ್ದಾರೆ. ಹಾಗೆ ನಟಿ ನಟಿ ನಿಶಾ ರವಿಕೃಷ್ಣನ್ ಸೇರಿದಂತೆ ಹಲವು ಪಾತ್ರಧಾರಿಗಳು ಕಾಣಿಸಿಕೊಂಡಿದ್ದು , ಭುವನ್ ಸಿನಿಮಾಸ್ ಭುವನ್ ಸುರೇಶ್ ನಿರ್ಮಿಸಿದ್ದು , ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಕೀರ್ತಿ ಕೃಷ್ಣಪ್ಪ. ರಾಘವೇಂದ್ರ. ವಿ ಸಂಗೀತ ನಿರ್ದೇಶನ , ಎ. ಆರ್. ಕೃಷ್ಣ , ಸುರೇಶ್ ಆರ್ಮುಗಂ ಸಂಕಲನ , ರವಿವರ್ಮ ಸಾಹಸ , ಸುಮಂತ್ ಸಿನಿಮಾ ಪ್ರಚಾರ ನಿಭಾಯಿಸಿದ್ದಾರೆ. ಈ “ಅಂದೊಂದಿತ್ತು ಕಾಲ” ಚಿತ್ರ ಅದ್ದೂರಿಯಾಗಿ ರಾಜ್ಯದಾದ್ಯಂತ ಇದೆ ಆಗಸ್ಟ್ 29ರಂದು ಬಿಡುಗಡೆಯಾಗುತ್ತಿದೆ.

error: Content is protected !!