ಜುಲೈ 03ರಂದು “ನಾಗಬಂಧಂ” ಚಿತ್ರ ಬಿಡುಗಡೆ
ಅಭಿಷೇಕ್ ನಾಮ ನಿರ್ದೇಶನದ ಈ ಚಿತ್ರಕ್ಕೆ ವಿರಾಟ್ ಕರ್ಣ ನಾಯಕ – ಕನ್ನಡದ ಹುಡುಗಿ ನಭಾ ನಟೇಶ್ ನಾಯಕಿ. ಅಭಿಷೇಕ್ ನಾಮ ನಿರ್ದೇಶನದ ಅತ್ಯಂತ ಮಹತ್ವಾಕಾಂಕ್ಷೆಯ ಪ್ಯಾನ್ ಇಂಡಿಯಾ ಚಿತ್ರವಾದ ‘ನಾಗಬಂಧಂ’, ಜುಲೈ 03ರಂದು ಜಗತ್ತಿನಾದ್ಯಂತ ಬಿಡುಗಡೆಗೆ ಸಜ್ಜಾಗಿದೆ.
ಅದಕ್ಕೂ ಮೊದಲು ಚಿತ್ರದ ಪ್ರಚಾರದ ಕೆಲಸಗಳು ಶುರುವಾಗಿದ್ದು, ಚಿತ್ರತಂಡ ಬೆಂಗಳೂರಿನಲ್ಲಿ ಇತ್ತೀಚೆಗೆ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ನಾಯಕ ವಿರಾಟ್ ಕರ್ಣ, ನಾಯಕಿ ನಭಾ ನಟೇಶ್, ಕಲಾವಿದರಾದ ಗರುಡ ರಾಮ್, ಭಜರಂಗಿ ಪ್ರಸನ್ನ, ವಿನಯ್ ಬಿದ್ದಪ್ಪ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಸುಮಾರು ಹತ್ತು ವರ್ಷಗಳ ನಂತರ ಕನ್ನಡದ ಮಾಧ್ಯಮದ ಮಿತ್ರರ ಮುಂದೆ ಮಾತನಾಡುತ್ತಿರುವುದಕ್ಕೆ ಖುಷಿಯಾಗಿದೆ. “ವಜ್ರಕಾಯ” ಚಿತ್ರದಲ್ಲೂ ಪಾರ್ವತಿ ಎಂಬುದು ನನ್ನ ಪಾತ್ರದ ಹೆಸರಾಗಿತ್ತು “ನಾಗಬಂಧಂ” ಚಿತ್ರದಲ್ಲೂ ನನ್ನ ಪಾತ್ರದ ಹೆಸರು ಪಾರ್ವತಿ. ಇದೊಂದು ಕಾಕತಾಳೀಯ. ಆದರೆ ಆ ಚಿತ್ರದ ಪಾತ್ರ ಹಾಗೂ ಈ ಚಿತ್ರದ ಪಾತ್ರ ವಿರುದ್ದ ಪಾತ್ರಗಳು. ನಿರ್ದೇಶಕ ಅಭಿಷೇಕ್ ನಾಮ ಒಂದೊಳ್ಳೆ ಕಥೆ ಮಾಡಿದ್ದಾರೆ.
ಟ್ರೇಲರ್ ನೋಡಿದಾಗ ಇದೊಂದು ಆಧ್ಯಾತ್ಮಿಕತೆಯ ಹಿನ್ನೆಲೆಯ ಚಿತ್ರ ಅನಿಸಬಹುದು. ಆದರೆ, ಬರೀ ಆಧ್ಯಾತ್ಮಿಕತೆ ಅಷ್ಟೇ ಅಲ್ಲದೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ನಾನು ಈ ಚಿತ್ರದಲ್ಲಿ ಶಾಸ್ತ್ರೀಯ ನೃತ್ಯ ಮಾಡಿದ್ದೇನೆ. ಚಿಕ್ಕಂದಿನಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದೆ. ಈ ಚಿತ್ರದ “ನಮಾಮಿ” ಹಾಡು ಹಾಗೂ ಟ್ರೇಲರ್ ಎಲ್ಲರ ಮನ ಗೆದ್ದಿದೆ. ಜುಲೈ 3 ರಂದು ಚಿತ್ರ ತೆರೆಗೆ ಬರುತ್ತಿದ್ದು, ಎಲ್ಲರು ಇಷ್ಟಪಡುವ ಚಿತ್ರವಾಗಲಿದೆ ಎಂಬ ನಂಬಿಕೆ ಇದೆ ಎಂದು ನಾಯಕಿ ನಭಾ ನಟೇಶ್ ತಿಳಿಸಿದರು.
ನಾಯಕನಾಗಿ ನನಗೆ ಇದು ಎರಡನೇ ಚಿತ್ರ. ಭಾರತೀಯ ಪುರಾಣಗಳು ಮತ್ತು ಇತಿಹಾಸದ ಕುರಿತು ವ್ಯಾಪಕ ಅಧ್ಯಯನ ನಡೆಸಿ ಅಭಿಷೇಕ್ ನಾಮ ಈ ಚಿತ್ರದ ಕಥೆ-ಚಿತ್ರಕಥೆ ಸಿದ್ಧಪಡಿಸಿದ್ದಾರೆ. ಎರಡು ಶೇಡ್ ಗಳಲ್ಲಿ ನನ್ನ ಪಾತ್ರವಿರುತ್ತದೆ. ತಿರುವನಂತಪುರಂನ ದೇವಸ್ಥಾನ ಹೋಲುವ ಭರ್ಜರಿ ಸೆಟ್ ಈ ಚಿತ್ರದ ಪ್ರಮುಖ ಆಕರ್ಷಣೆ. ಸುಮಾರು ದಿನಗಳ ಕಾಲ ಸಮಯ ತೆಗೆದುಕೊಂಡು ಕಲಾ ನಿರ್ದೇಶಕರು ಈ ಸೆಟ್ ಹಾಕಿದ್ದಾರೆ.
ಈಗಾಗಲೇ ತಿರುವನಂತಪುರಂನ ರಥವನ್ನು ಸಿದ್ದಪಡಿಸಿದ್ದು, ಆ ರಥ ಆಂದ್ರ ಹಾಗೂ ತೆಲಂಗಾಣ ಪ್ರದೇಶದಲ್ಲಿ ಸಂಚರಿಸುತ್ತಿದೆ. NIK studios ಲಾಂಛನದಲ್ಲಿ ಕಿಶೋರ್ ಅನ್ನಾಪು ರೆಡ್ಡಿ ಹಾಗೂ ನಿಶಿತಾ ನಾಗಿರೆಡ್ಡಿ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸಹ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಚೆನ್ನಾಗಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ವಿರಾಟ್ ಕರ್ಣ.
ನಿರ್ದೇಶಕ ಅಭಿಷೇಕ್ ನಾಮ ತುಂಬಾ ಅದ್ಭುತವಾದ ಕಥೆ ಮಾಡಿದ್ದಾರೆ. ನಾನು ಈ ಚಿತ್ರದಲ್ಲಿ ಭೈರಾಗಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಮೇಕಪ್ ಹಾಕಿಕೊಳ್ಳಲು ಏಳೆಂಟು ಗಂಟೆ ಕಾಲ ಹಿಡಿಸುತ್ತಿತ್ತು. ಮುಂಬೈನ ಖ್ಯಾತ ಮೇಕಪ್ ಕಲಾವಿದರು ಮೇಕಪ್ ಮಾಡಿದ್ದಾರೆ ಎಂದು ನಟ ಗರುಡ ರಾಮ್ ಹೇಳಿದರು.
ನನ್ನದು ಈ ಚಿತ್ರದಲ್ಲಿ ನಾಗಸಾಧು ಪಾತ್ರ ಎಂದರು ನಟ ಭಜರಂಗಿ ಪ್ರಸನ್ನ. ನಟ ವಿನಯ್ ಬಿದ್ದಪ್ಪ ಸಹ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿರುವುದಾಗಿ ಹೇಳಿದರು. ಕೆ.ವಿ.ಎನ್ ಸಂಸ್ಥೆ ವಿತರಣೆ ಮಾಡುತ್ತಿರುವ ಈ ಚಿತ್ರಕ್ಕೆ ಸೌಂದರ್ ರಾಜನ್ ಛಾಯಾಗ್ರಹಣ ಹಾಗೂ ಜುನೈದ್ ಕುಮಾರ್ ಅವರ ಸಂಗೀತ ನಿರ್ದೇಶನವಿದೆ.
