ಯುವ ಪ್ರತಿಭೆಗಳ “ಕರಿಕಾಡ” ಚಿತ್ರದ ಟೈಟಲ್ , ಟೀಸರ್ ಬಿಡುಗಡೆ.
ಬೆಳ್ಳಿ ಪರದೆಯ ಮೇಲೆ ಸಾಲು ಸಾಲು ವಿಭಿನ್ನ ಬಗೆಯ ಚಿತ್ರಗಳು ಪ್ರೇಕ್ಷಕರ ಗಮನ ಸೆಳೆಯಲು ನಿರಂತರವಾಗಿ ಬರುತ್ತಿದೆ. ಆ ನಿಟ್ಟಿನಲ್ಲಿ ತನ್ನ ಶೀರ್ಷಿಕೆ ಹಾಗೂ ಟೀಸರ್ ಮೂಲಕವೇ ಸದ್ದು ಮಾಡಲು ಬರುತ್ತಿದೆ ಯುವ ಪಡೆಗಳ ಚಿತ್ರ “ಕರಿಕಾಡ”. ಈ ಚಿತ್ರವನ್ನು ರಿದ್ಧಿ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿ ದೀಪ್ತಿ ದಾಮೋದರ್ ನಿರ್ಮಿಸಿ , ಗಿಲ್ಲಿ ವೆಂಕಟೇಶ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದು , ಅತಿಶಯ್ ಜೈನ್ ಸಂಗೀತ , ಶಶಾಂಕ್ ಶೇಷಗಿರಿ ಹಿನ್ನೆಲೆ ಸಂಗೀತ , ಕಥೆ ಕೊಟ್ಟು ನಾಯಕನಟನಾಗಿ ಕಾಣಿಸಿಕೊಳ್ಳುತ್ತಿರುವ ಕಾಡ ನಟರಾಜ್ ಅಭಿನಯದ ಈ ಚಿತ್ರದ ಟೈಟಲ್ ಟೀಸರ್ ಅನ್ನು ಖ್ಯಾತ ನಿರ್ದೇಶಕ ಸಂತೋಷ್ ಆನಂದರಾಮ್ ಬಿಡುಗಡೆ ಮಾಡಿದರು. ತದನಂತರ ಮಾತನಾಡುತ್ತಾ ಇವತ್ತಿನ ಚಿತ್ರರಂಗದ ಪರಿಸ್ಥಿತಿಯ ಜೊತೆಗೆ ಕನ್ನಡ ಚಿತ್ರಗಳನ್ನು ಪ್ರೇಕ್ಷಕರು ಬಂದು ನೋಡಬೇಕು. ನನ್ನ ಜೊತೆ ಕೆಲಸ ಮಾಡಿದಂತಹ ಶಶಾಂಕ್ ಶೇಷಗಿರಿ ಈ ಕಾರ್ಯಕ್ರಮಕ್ಕೆ ಬರಲು ಆಹ್ವಾನ ನೀಡಿದರು. ಇದೊಂದು ಉತ್ಸಾಹಿ ತಂಡ. ಈ ಟೈಟಲ್ ಬಹಳಷ್ಟು ನಿರೀಕ್ಷೆ ಮೂಡಿಸುತ್ತದೆ. ಹೊಸಬರು ಟೀಸರ್ ನಲ್ಲೆ ಗಮನ ಸೆಳೆದಿದ್ದಾರೆ. ಚಿತ್ರ ಬಿಡುಗಡೆಗೊಂಡು ಯಶಸ್ವಿ ಆಗಲಿ ಎಂದು ಶುಭವನ್ನು ಹಾರೈಸಿದರು.
ಈ ಚಿತ್ರದ ಬಗ್ಗೆ ನಿರ್ದೇಶಕ ಗಿಲ್ಲಿ ವೆಂಕಟೇಶ್ ಮಾತನಾಡುತ್ತಾ ಈ ಚಿತ್ರದ ‘ಶೀರ್ಷಿಕೆ ಅಕ್ಕಪಕ್ಕ ಆನೆ ಮತ್ತು ಕಾಡು ಹಂಡಿಯ ತಲೆಗಳನ್ನು ನೋಡಬಹುದು. ಕರಿ ಎಂದರೆ ಆನೆ, ಕಾಡ ಎಂದರೆ ನಾಯಕನ ಹೆಸರು. ಇಲ್ಲಿ ನಾಯಕ ಕಾಡುಹಂದಿ ಬೇಟೆ ಆಡುತ್ತಿರುತ್ತಾನೆ. ಮದ್ದಾನೆ ತರಹದ ಪಾತ್ರ ಅವನದು. ಮದ ಹಿಡಿದ ಆನೆಯನ್ನು ಹಿಡಿಯುವುದು ಎಷ್ಟು ಕಷ್ಟವೋ, ಅದೇ ರೀತಿ ಅವನನ್ನು ಹಿಡಿಯುವುದು ಅಷ್ಟೇ ಕಷ್ಟ’ ಎಂದರು. ಇದಕ್ಕೂ ಮೊದಲು ಅವರು ‘ತಾಲಟ್ಟಿ’ ಎಂಬ ಹಾರರ್ ಚಿತ್ರ ಮಾಡಿದ್ದರಂತೆ. ಅದು ಇನ್ನೂ ಬಿಡುಗಡೆ ಆಗದಿರುವುದರಿಂದ ‘ಕರಿಕಾಡ’ ಅವರ ಮೊದಲ ಚಿತ್ರವೆನ್ನಬಹುದು. ಈ ಚಿತ್ರಕ್ಕೆ ಕಳಸ, ಚಿಕ್ಕಮಗಳೂರು, ಬೆಂಗಲೂರು ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆಯಂತೆ. ‘1990 ಮತ್ತು 2025ರ ಕಾಲಘಟ್ಟದಲ್ಲಿ ಕಥೆ ನಡೆಯುತ್ತದೆ. ಇದೊಂದು ಸಂಗೀತಮಯ ಪ್ರೇಮಕಥೆ. ನಾಯಕಿಗೂ ಒಂದು ಪ್ರಮುಖ ಪಾತ್ರವಿದೆ. ಸದ್ಯಕ್ಕೆ ಅವರನ್ನು ಪರಿಚಯಿಸಿಲ್ಲ. ನಾಯಕನ ತರಹ ನಾಯಕಿಗೂ ಒಂದು ಟೀಸರ್ ಮಾಡಿ ಪರಿಚಯಿಸಲಾಗುತ್ತದೆ. ಚಿತ್ರ ಸಂಪೂರ್ಣವಾಗಿದ್ದು, ಸದ್ಯದಲ್ಲೇ ಸೆನ್ಸಾರ್ ಆಗಲಿದೆ. ಇದೇ ವರ್ಷ ಚಿತ್ರ ಬಿಡುಗಡೆ ಆಗುತ್ತದೆ’ ಎಂದು ಮಾಹಿತಿ ಕೊಟ್ಟರು.
ಕಾಡ ನಟರಾಜ್, ಬಿಗ್ ಬಾಸ್ಕೆಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರಂತೆ. ವಾರಾಂತ್ಯದ ರಜೆಗಳಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿ ಅವರು ಚಿತ್ರ ಮುಗಿಸಿದ್ದಾರೆ. ‘ಕೆಲಸದ ಜೊತೆಗೆ ಬೇರೆ ಏನಾದರೂ ಮಾಡಬೇಕು ಅಂತನಿಸುತ್ತಿತ್ತು. ಮೊದಲಿನಿಂದಲೂ ನಟನೆಯ ಬಗ್ಗೆ ಆಸಕ್ತಿ ಇತ್ತು. ಹಾಗಾಗಿ ಕೆಲಸದ ಜೊತೆಗೆ ಈ ಚಿತ್ರ ಮಾಡಿದೆ. ವೀಕೆಂಡ್ ಮತ್ತು ರಜಾ ದಿನಗಳಲ್ಲಿ ಚಿತ್ರೀಕರಣ ಮಾಡಿ ಮುಗಿಸಿದ್ದೇವೆ. ಸುಮಾರು 60 ದಿನಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣವನ್ನು ಸತತವಾಗಿ 48 ಗಂಟೆಗಳ ಕಾಲ ಮಾಡಿದ್ದೇವೆ. ಚಿತ್ರೀಕರಣ ಸಮಯದಲ್ಲಿ ನನ್ನ ಎರುಡು ಬೆರಳು ಸಹ ಮುರಿದಿತ್ತು’ ಎಂದರು. ಅವರಿಗೆ ಕಾಡ ನಟರಾಜ್ ಎಂಬ ಹೆಸರು ಬಂದಿದ್ದು ಏಕೆ ಎಂಬ ಪ್ರಶ್ನೆಗೆ, ‘ಕಾಡ ಎಂದರೆ ಕಾಡು ಎಂದರ್ಥ. ನಮ್ಮದು ಚಿಕ್ಕಮಗಳೂರಿನ ಬಳಿಯ ಒಂದು ಹಳ್ಳಿ. ಕಾಡಿಗೆ ಅಂಟಿಕೊಂಡಿದೆ. ಬಾಲ್ಯದಲ್ಲಿ ಹೆಚ್ಚಿಗೆ ಕಾಡಿನಲ್ಲಿ ಇರುತ್ತಿದ್ದರಿಂದ, ಸ್ನೇಹಿತರೆಲ್ಲಾ ನನಗೆ ಕಾಡ ಎಂದು ಕರೆಯುತ್ತಿದ್ದರು. ಅದು ಹಾಗೆಯೇ ಮುಂದುವರೆಯಿತು ಎಂದರು.
‘ಕರಿಕಾಡ’ ಚಿತ್ರದಲ್ಲಿ ನಟರಾಜ್ ಜೊತೆಗೆ ನಿರೀಕ್ಷಾ ಶೆಟ್ಟಿ, ಯಶ್ ಶೆಟ್ಟಿ, ಬಲ ರಾಜವಾಡಿ, ವಿಜಯ್ ಚೆಂಡೂರ್, ಕರಿಸುಬ್ಬು, ಚಂದ್ರಪ್ರಭಾ, ರಾಕೇಶ್ ಪೂಜಾರಿ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಅತಿಶೈ ಜೈನ್ ಸಂಗೀತ ನೀಡಿದ್ದು , ಒಟ್ಟು ನಾಲ್ಕು ಹಾಡುಗಳಿದ್ದು , ಶಶಾಂಕ್ ಶೇಷಗಿರಿ ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಜೀವನ್ ಗೌಡ ಛಾಯಗ್ರಹಣವಿರುವ ಈ ಚಿತ್ರದಲ್ಲಿ ಗ್ರಾಫಿಕ್ಸ್ ಕೂಡ ಇದೆಯಂತೆ. ಈಗ ಟೈಟಲ್ ಟೀಸರ್ ಹೊರಬಿಟ್ಟಿದ್ದು , ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ನೀಡಲಿದೆಯಂತೆ.