ಜಿಟೊ ಕಿಡ್ಸ್ ಸ್ಟೆಪ್ನಲ್ಲಿ ಮಲ್ಟಿಸ್ಟಾರರ್ “45” ಚಿತ್ರದ “AFRO ಟಪಾಂಗ” ಸಾಂಗ್ ಬಿಡುಗಡೆ.
ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಪ್ರಸ್ತುತ “45” ಚಿತ್ರದ “AFRO ಟಪಾಂಗ” ಅದ್ದೂರಿ ಪ್ರಮೋಷನ್ ಸಾಂಗ ಬಿಡುಗಡೆಯಾಗಿದೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಪ್ರಮೋಷನ್ ಸಾಂಗ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಹಾಡಿನಲ್ಲಿ ಉಗಾಂಡ ದೇಶದ ಹೆಸರಾಂತ ಜಿಟೊ ಕಿಡ್ಸ್ ಜೊತೆಗೆ ಚಿತ್ರದ ನಾಯಕರಾದ ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಕನ್ನಡ ರಾಜ್ಯೋತ್ಸವದ ದಿನ ಈ ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಮ್ಮ ಚಿತ್ರದ “AFRO ಟಪಾಂಗ”
ಪ್ರಮೋಷನ್ ಸಾಂಗ್ ಅದ್ದೂರಿಯಾಗಿ ಮೂಡಿಬಂದಿದೆ. ಇದೇ ಮೊದಲ ಬಾರಿಗೆ ಈ ಹಾಡಿಗೆ ನೃತ್ಯ ಮಾಡಲು ಉಗಾಂಡದಿಂದ ಜಿಟೊ ಕಿಡ್ಸ್ ಎಂಬ ಹೆಸರಾಂತ ನೃತ್ಯಗಾರರು ಭಾರತಕ್ಕೆ ಬಂದಿದ್ದಾರೆ. ಅವರು ಅಭಿನಯಿಸಿರುವ ಮೊದಲ ಭಾರತದ ಚಿತ್ರ ಕೂಡ “45” ಆಗಿದೆ. ಯಾವುದೇ ಕೊರತೆ ಬಾರದ ಹಾಗೆ ಈ ಹಾಡನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದೇವೆ. ತೆರೆಯ ಮೇಲೆ ನೋಡಿದಾಗ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ಇದರ ಕ್ರೆಡಿಟ್ ನಿರ್ದೇಶಕರಿಗೆ ಸೇರಬೇಕು. ಇನ್ನೂ, ನಮ್ಮ ಚಿತ್ರ ಡಿಸೆಂಬರ್ 25 ರಂದು ತೆರೆಗೆ ಬರುತ್ತಿದೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ರಮೇಶ್ ರೆಡ್ಡಿ.
ನಾನು ನಿರ್ದೇಶಕನಾಗಲು ಶಿವರಾಜಕುಮಾರ್ ಅವರೆ ಕಾರಣ ಎಂದು ಮಾತನಾಡಿದ ನಿರ್ದೇಶಕ ಅರ್ಜುನ್ ಜನ್ಯ, ನಮ್ಮ “45” ಚಿತ್ರದಲ್ಲಿ ಹಾಡಿಲ್ಲ. ಆದರೆ, ಪ್ರಮೋಷನಲ್ ಸಾಂಗ್ ಮಾಡಬೇಕೆಂಬ ಆಸೆ ಇತ್ತು. ಮಾಮೂಲಿ ತರಹ ಮಾಡುವುದು ಬೇಡ ಅಂದುಕೊಂಡೆವು. ಆಗ ನನಗೆ ಉಗಾಂಡದ ಜಿಟೊ ಕಿಡ್ಸ್ ಈ ಪ್ರಮೋಷನ್ ಸಾಂಗ್ ನಲ್ಲಿ ಅಭಿನಯಿಸಿದರೆ ಚೆಂದ ಎನಿಸಿತು. ಕಷ್ಟಪಟ್ಟು ಅವರನ್ನು ಸಂಪರ್ಕ ಮಾಡಿದ್ದೆವು. ಇವರ ಜೊತೆಗೆ ನಮ್ಮ ಚಿತ್ರದ ಮೂರು ಜನ ನಾಯಕರು ಅಭಿನಯಿಸಿದ್ದಾರೆ. ಎಂ.ಸಿ.ಬಿಜ್ಜು ಈ ಹಾಡನ್ನು ಬರೆದು ಹಾಡಿದ್ದಾರೆ. ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಾಡು ಇಷ್ಟು ಚೆನ್ನಾಗಿ ಮೂಡಿಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ಹಾಗೂ ವಿಶೇಷವಾಗಿ ನಿರ್ಮಾಪಕರಿಗೆ ಧನ್ಯವಾದ ಎಂದರು.
“45” ಚಿತ್ರ ಬರೀ ಕರ್ನಾಟಕ ಮಾತ್ರ ಅಲ್ಲ. ಭಾರತದಾದ್ಯಂತ ಯಶಸ್ವಿಯಾಗಲಿ. ಏಕೆಂದರೆ ಅಂತಹ ಕಂಟೆಂಟ್ ವುಳ್ಳ ಸಿನಿಮಾ ಇದು. ಅರ್ಜುನ್ ಜನ್ಯ ಈ ಚಿತ್ರದ ಕಥೆ ಹೇಳಿದಾಗ ನೀವೆ ನಿರ್ದೇಶನ ಮಾಡಿ ಎಂದು ಹೇಳಿದ್ದೆ. ಈಗ ಈ ಹಾಡು ನೋಡಿದಾಗ ಅವರ ನಿರ್ದೇಶನದ ಬಗ್ಗೆ ತಿಳಿಯುತ್ತಿದೆ. ನಾನು, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಮೂರು ಜನ ಈ ಚಿತ್ರದ ನಾಯಕರು. ಅಭಿನಯದಲ್ಲಿ ಎಲ್ಲರಿಗೂ ಸಮಾನವಾದ ಅವಕಾಶವಿದೆ ಎಂದು ಶಿವರಾಜಕುಮಾರ್ ತಿಳಿಸಿದರು.
ಈ ಚಿತ್ರದ ಬಗ್ಗೆ ನನಗೆ ಆರಂಭದಿಂದಲೂ ಪ್ರೀತಿ. ಚಿತ್ರದ ಕುರಿತು ನಾನು ಅರ್ಜುನ್ ಜನ್ಯ ಅವರಿಗೆ ಕರೆ ಮಾಡಿ ಕೇಳುತ್ತಿರುತ್ತೇನೆ. ನಾನು ನೋಡಿ ಬೆಳೆದ ಇಬ್ಬರು ಕನ್ನಡ ಚಿತ್ರರಂಗದ ಮಹಾನ್ ನಟರ ಜೊತೆಗೆ ಅಭಿನಯಿಸಿರುವುದು ಬಹಳ ಖುಷಿಯಾಗಿದೆ. ಅವರಿಬ್ಬರು ತೆರೆಯ ಮೇಲೆ ಒಟ್ಟಿಗೆ ಬಂದಾಗ ವಿಷಲ್ ಹಾಕಿ ಸಂಭ್ರಮಿಸಿದ್ದೇನೆ ಎಂದು ರಾಜ್ ಬಿ ಶೆಟ್ಟಿ ಹೇಳಿದರು.
ವಿ.ಎಫ್.ಎಕ್ಸ್ ಉಸ್ತುವಾರಿ ವಹಿಸಿಕೊಂಡಿರುವ ಕೆನಡಾದ ಯಶ್ ಶೆಟ್ಟಿ ಮಾತನಾಡಿ, ಡಿಸೆಂಬರ್ 25 ಕ್ಕೆ ಚಿತ್ರ ತೆರೆಗೆ ಬರಲಿದೆ. ಅನೇಕ ಹಾಲಿವುಡ್ ಚಿತ್ರಗಳಿಗೆ ವಿ.ಎಫ್.ಎಕ್ಸ್ ಮಾಡಿರುವ ನಮ್ಮ ಸಂಸ್ಥೆ ವಿ.ಎಫ್.ಎಕ್ಸ್ ಮಾಡಿರುವ ಮೊದಲ ಕನ್ನಡದ ಹಾಗೂ ಭಾರತದ ಚಿತ್ರ ಎಂದರು. ಛಾಯಾಗ್ರಹಣದ ಕುರಿತು ಛಾಯಾಗ್ರಾಹಕ ಸತ್ಯ ಹೆಗ್ಡೆ ಮಾತನಾಡಿದರು.
