ಜೂನ್ 27ಕ್ಕೆ ತೆರೆಯ ಮೇಲೆ ”ಬ್ಲಡಿ ಬಾಬು” ರೀಲಿಸ್
ಅಗ್ನಿಲೋಕ್ ಚಿತ್ರದ ನಂತರ ಯುವನಟ ಯಶಸ್ವಾ ಮತ್ತೊಮ್ಮೆ ಆ್ಯಕ್ಷನ್ ಹೀರೋ ಆಗಿ ತೆರೆಮೇಲೆ ಕಾಣಿಸಿಕೊಳ್ಳುತ್ತಿರುವ ಚಿತ್ರ ಬ್ಲಡಿಬಾಬು. ದುಷ್ಟ ಶಕ್ತಿ ಆತ್ಮಸ್ಥೈರ್ಯದ ನಡುವಿನ ಸಂಘರ್ಷದಲ್ಲಿ ಯಾವತ್ತೂ ಒಳ್ಳೆಯದಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂಬ ಕಾನ್ಸೆಪ್ಟ್ ಇಟ್ಟುಕೊಂಡು, ನಿರ್ದೇಶಕ ರಾಜೇಶ್ ಮೂರ್ತಿ ಅವರೇ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಈ ಶುಕ್ರವಾರ ದಿ.27ರಂದು ರಾಜ್ಯಾದ್ಯಂತ ಬ್ಲಡಿಬಾಬು ತೆರೆಗೆ ಬರಲು ಸಿದ್ದವಾಗಿದೆ. ಒಂದು ಕಾಲದಲ್ಲಿ ಮಾಟ, ಮಂತ್ರದಿಂದ ಜನರನ್ನು ಕೈವಶ ಮಾಡಿಕೊಳ್ಳುತ್ತಿದ್ದರು. ಆದರೆ ಹಿಪ್ನಟೈಸ್ ನಂಥ ತಂತ್ರ ಬಳಸಿ ಹೇಗೆ ವಂಚಿಸುತ್ತಿದ್ದಾರೆ, ನಾಯಕ ಅದನ್ನು ತಡೆಯುವಲ್ಲಿ ಹೇಗೆ ಯಶಸ್ವಿಯಾದ ಎಂಬುದನ್ನ ಬ್ಲಡಿ ಬಾಬು ಚಿತ್ರದಲ್ಲಿ ಹೇಳಲಾಗಿದೆ.
ರಾಜೇಶ್ ಮೂರ್ತಿ ಅವರ ನಿರ್ದೇಶನದ ೧೨ನೇ ಚಿತ್ರ ಇದಾಗಿದ್ದು, ನಾಯಕ ಯಶಸ್ವಾ ತನ್ನ ವಿಲ್ ಪವರ್ ಮೂಲಕವೇ ಹೇಗೆ ಖಳನಾಯಕನನ್ನು ಎದುರಿಸಿ ಗೆಲುವು ಸಾಧಿಸುತ್ತಾನೆ ಅಂತ ಹೇಳಲಾಗಿದೆ. ಈಗಾಗಲೇ ಈ ಚಿತ್ರದ ಟೀಸರ್, ಟ್ರೈಲರ್ ಬಿಡುಗಡೆಯಾಗಿ ಎಲ್ಲಾ ಕಡೆ ವೈರಲ್ ಆಗಿ ಚಿತ್ರದ ಬಗ್ಗೆ ಇರುವ ಕುತೂಹಲ ಇಮ್ಮಡಿಗೊಳಿಸಿವೆ. ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರ ಪಡೆದಿರುವ ಈ ಚಿತ್ರವೀಗ ಶುಕ್ರವಾರ ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಾಣುತ್ತಿದೆ.
ಪ್ರಾರಂಭದಿಂದಲೂ ವಿಭಿನ್ನ ಶೈಲಿಯ ಚಿತ್ರಗಳನ್ನು ನಿರ್ದೇಶಿಸುತ್ತ ಬಂದಿರುವ ರಾಜೇಶ್ ಮೂರ್ತಿ ಅವರು ಈ ಮೂಲಕ ವಿಭಿನ್ನ ಶೈಲಿಯ ಥ್ರಿಲ್ಲರ್ ಚಿತ್ರವನ್ನು ಪ್ರೇಕ್ಷಕರಿಗೆ ನೀಡುತ್ತಿದ್ದಾರೆ.
ಬ್ಲಡಿಬಾಬು ಮಗನಿಗೆ ತಂದೆಯೇ ಆಕ್ಷನ್ ಕಟ್ ಹೇಳಿರೋ ಚಿತ್ರ. ಈ ಮೂಲಕ ಯಶಸ್ವಾ ಎರಡನೇ ಬಾರಿಗೆ ನಾಯಕನಾಗಿ ತೆರೆಮೇಲೆ ಬರುತ್ತಿದ್ದಾರೆ.
ರಾಜೇಶ್ ಮೂರ್ತಿ ಅವರೇ ಕಥೆ,ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಏಂಜಲ್ ಡ್ರೀಮ್ಸ್ ಎಂಟರ್ ಟೈನ್ ಮೆಂಟ್ಸ್ ಮೂಲಕ ಡೋಮ್ನಿಕ್ ಅವರು ನಿರ್ಮಿಸಿದ್ದಾರೆ.
ಸೈಕಲಾಜಿಕಲ್, ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಬ್ಲಡಿ ಬಾಬು ಚಿತ್ರಕ್ಕೆ ಬೆಂಗಳೂರು, ನಂದಿ ಹಿಲ್ಸ್ ಹಾಗೂ ಚಿಕ್ಕಮಗಳೂರು ಸುತ್ತಮುತ್ತ 25ಕ್ಕೂ ಹೆಚ್ಚು ದಿನ ಚಿತ್ರೀಕರಿಸಲಾಗಿದೆ. ನವನಟಿ ಸ್ಮಿತಾ ಚಿತ್ರದ ನಾಯಕಿಯಾಗಿದ್ದು, ಬಾಲಿವುಡ್ ಖಳನಟ ದಿಲೀಪ್ ಕುಮಾರ್ ವಿಲನ್ ಪಾತ್ರ ನಿರ್ವಹಿಸಿದ್ದಾರೆ.
ನಟ, ರಾಜಕಾರಣಿ ನೆ.ಲ.ನರೇಂದ್ರ ಬಾಬು ಅವರು ಚಿತ್ರದಲ್ಲಿ ನಾಯಕಿಯ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಲಿಪ್ ಸ್ಟಿಕ್ ಮರ್ಡರ್, ಜೋಕರ್ ಜೋಕರ್, ಸೈಕೋಮ್ಯಾಕ್ಸ್ ನಂಥ ಕ್ರೈಂ, ಥ್ರಿಲ್ಲರ್ ಚಿತ್ರಗಳನ್ನು ರಾಜೇಶ್ ಮೂರ್ತಿ ಡೈರೆಕ್ಟ್ ಮಾಡಿದ್ದರು. ವಿಭಿನ್ನ ಶೈಲಿಯ 4 ಸಾಹಸ ದೃಶ್ಯಗಳು ಚಿತ್ರದಲ್ಲಿದ್ದು, 2 ಹಾಡುಗಳಿಗೆ ನಿತೀಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿನೋದ್ ಆರ್. ಅವರ ಛಾಯಾಗ್ರಹಣವಿದೆ.