Cini NewsSandalwoodTV Serial

ಯುವ ಪ್ರತಿಭೆಗಳ ‘ರಾಜರತ್ನಾಕರ’ ಟ್ರೇಲರ್ ಬಿಡುಗಡೆ.

ಬೆಳ್ಳಿ ಪರದೆ ಮೇಲೆ ಉಡಾಫೆ ಹುಡುಗನ ಅಬ್ಬರದ ಕಥೆ ಹೊಂದಿರುವಂತಹ “ರಾಜರತ್ನಾಕರ” ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಚೌಮುದ ಬ್ಯಾನರ್ ನಡಿ ಜಯರಾಮ ಸಿ.ಮಾಲೂರು ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡಿದ್ದು, ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭವನ್ನು ಎಂ. ಎಂ .ಬಿ. ಲೆಗೆಸಿಯಲ್ಲಿ ಆಯೋಜಿಸಿ ಮಾಧ್ಯಮದವರ ಕಡೆಯಿಂದ ಟ್ರೈಲರ್ ಲಾಂಚ್ ಮಾಡಿಸುವ ಮೂಲಕ ಪತ್ರಿಕಾಗೋಷ್ಠಿಗೆ ಚಾಲನೆಯನ್ನು ನೀಡಿದರು. ನಂತರ ವೇದಿಕೆ ಮೇಲಿದ್ದ ಚಿತ್ರ ತಂಡ , ತಮ್ಮ ಚಿತ್ರದ ನಾಯಕಿ ಅಪ್ಸರಾ ಸಿನಿಮಾ ರಿಲೀಸ್ ಗೂ ಮುನ್ನವೇ ಇಹಲೋಕ ತ್ಯಜಿಸಿದ್ದ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.


ಈ ಚಿತ್ರದ ನಿರ್ದೇಶಕ ವಿರೇಶ್ ಬೊಮ್ಮಸಾಗರ ಮಾತನಾಡುತ್ತ ನಾನು ಚಿತ್ರರಂಗಕ್ಕೆ ಬಂದು 12 ವರ್ಷ ಆಗಿದೆ. ಬಹಳಷ್ಟು ಕೆಲಸಗಳನ್ನು ಕಲಿತು , ಈಗ ಇದು ನನ್ನ ಮೊದಲ ನಿರ್ದೇಶನದ ಚಿತ್ರವಾಗಿದೆ. ಇದೊಂದು ಲೋಕಲ್ ಹುಡುಗನ ಸಬ್ಜೆಕ್ಟ್ ಆಗಿದ್ದು , ಪ್ರಸ್ತುತ ಎಲ್ಲರಿಗೂ ಇಷ್ಟವಾಗುವಂತ ಅಂಶ ಈ ಚಿತ್ರದಲ್ಲಿ ಇದೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇಂತನೊಬ್ಬ ಇರ್ತಾನೆ ಎನ್ನಬಹುದು. ನಮ್ಮ ನಾಯಕ ಪಕ್ಕಾ ಉಡಾಳನಾಗಿ ಕಾಣಿಸಿಕೊಂಡಿದ್ದಾರೆ. ದುಡಿಬೇಕು ಅನ್ನೋದೆಲ್ಲ ಏನಿಲ್ಲ. ದುಡ್ ಮಾಡ್ಬೇಕು ಅಷ್ಟೇ. ಅದು ಫ್ಯಾಮಿಲಿನ ಇಕ್ಕಟ್ಟಿಗೆ ಸಿಲುಕಿಸಿಯಾದರೂ ಸರಿ ಎನ್ನುವಂತಹ ಪಾತ್ರ ಮಾಡಿದ್ದಾರೆ. ಇನ್ನು ನಾಯಕಿ ಕೂಡ ಅಷ್ಟೇ ಸೊಗಸಾಗಿ ಅಭಿನಯಿಸಿದ್ದಾರೆ. ನಮ್ಮ ಚಿತ್ರದ ಸಾಂಗ್ಸ್ ಗೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ ಎಂದರು.


ಇನ್ನು ಮೂಲತಃ ರೈತರಾಗಿರುವ ಜಯರಾಮ್ ಈ ಚಿತ್ರವನ್ನು ನಿರ್ಮಿಸಿದ್ದು , ಚಿತ್ರದ ಕುರಿತು ಮಾತನಾಡುತ್ತಾ ಕಥೆಯೇ ನಿರ್ಮಾಣಕ್ಕೆ ಕಾರಣವಾಗಿದ್ದು, ನಮ್ಮ ಚಿತ್ರದಲ್ಲಿ ತಾಯಿ, ಮಗ, ಫ್ರೆಂಡ್, ಲವ್ವರ್ ಎಲ್ಲಾ ಪಾತ್ರದಲ್ಲೂ ಎಮೋಷನಲ್ ಇದೆ. ಸಿನಿಮಾ ಚೆನ್ನಾಗಿ ಬಂದಿದೆ. ಈಗಾಗಲೇ ವಿಶೇಷ ಪ್ರದರ್ಶನವನ್ನು ಮಾಡಿದ್ವಿ , ನೋಡಿದವರೆಲ್ಲ ಮೆಚ್ಚಿಕೊಂಡಿದ್ದಾರೆ. ಈಗ ನಮ್ಮ ಚಿತ್ರ ಬಿಡುಗಡೆಗೆ ಸಿದ್ಧವಿದೆ ಎಲ್ಲರೂ ನೋಡಿ ಎಂದರು.

ಈ ಚಿತ್ರದ ನಾಯಕ ಚಂದನ್ ರಾಜ್ ಮಾತನಾಡುತ್ತಾ ನನಗೆ ಈ ರೀತಿಯ ಕಥೆ ಸಿಕ್ಕಿರೋದು ಅದೃಷ್ಟ. ನಮ್ಮ ನೇಟಿವಿಟಿಯ ಕಥೆ ಇದು. ನಾನು ಬೆಂಗಳೂರಿನ ಹುಟ್ಟಿ ಬೆಳೆದ ಕಾರಣ ಇಲ್ಲಿನ ಕಥೆಯನ್ನೇ ಮಾಡಬೇಕು ಅಂದುಕೊಂಡಿದ್ದೆ ಅದರಂತೆ ಮಾಡಿದ್ದೇನೆ. ಚಿತ್ರ ಕೂಡ ಬಹಳ ಸೊಗಸಾಗಿ ಬಂದಿದೆ. ಇದು ನನ್ನ ಸಿನಿಮಾ ಜೀವನಕ್ಕೆ ಬಹಳ ಮುಖ್ಯ , ಯಾಕೆಂದರೆ ಈ ಚಿತ್ರ ಮಾಡು ಇಲ್ಲವೇ ಮಡಿ ಎನ್ನುವಂತೆ ಆಗಿದೆ ಎನ್ನಬಹುದು. ನಮ್ಮ ಚಿತ್ರ ಎಲ್ಲರೂ ನೋಡುವಂತೆ ಮೂಡಿ ಬಂದಿದೆ. ದಯವಿಟ್ಟು ನಮ್ಮನ್ನ ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು. ಈ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದ ಅಪ್ಸರಾ ಸಿನಿಮಾ ರಿಲೀಸ್ ಗೂ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ. ಇಡೀ ತಂಡ ಅಪ್ಸರಾ ಅವರಿಗೆ ಕಂಬನಿ ಮಿಡಿದಿದೆ. ಅಪ್ಸರಾ ಪರವಾಗಿ ಅವರ ತಂದೆ ಮಾತನಾಡುತ್ತಾ ಮಗಳಿಗಿದ್ದ ಸಿನಿಮಾ ಆಸಕ್ತಿಯ ಬಗ್ಗೆ ಮಾತನಾಡುತ್ತಾ ಕಂಬನಿ ಮಿಡಿಯುತ್ತಾ ನನ್ನ ಮಗಳು ಅಭಿನಯಿಸಿದ್ದಾಳೆ ದಯವಿಟ್ಟು ಎಲ್ಲರೂ ಚಿತ್ರವನ್ನು ನೋಡಿ , ತಂಡಕ್ಕೆ ಒಳ್ಳೆಯದಾಗಲಿ ಎಂದು ಹೇಳಿದರು.

ಇನ್ನು ತಾಯಿ ಪಾತ್ರ ಮಾಡಿರುವ ಯಮುನಾ ಶ್ರೀನಿಧಿ ಮಾತನಾಡುತ್ತಾ ನಿರ್ದೇಶಕರು ನನಗೆ ಕಥೆ ಹೇಳಿದ ರೀತಿ ಬಹಳ ಇಷ್ಟವಾಯಿತು. ನಾನು ಸಾಕಷ್ಟು ತಾಯಿ‌ಪಾತ್ರ ಮಾಡಿದ್ದರು ಕೂಡ ಇದು ವಿಭಿನ್ನವಾಗಿದೆ. ಇಡೀ ತಂಡ ಬಹಳ ಶ್ರಮಪಟ್ಟು ಈ ಚಿತ್ರವನ್ನು ಮಾಡಿದೆ. ತೆರೆ ಮೇಲೆ ನೋಡಿದಾಗ ಸಿನಿಮಾ ಎಲ್ಲರಿಗೂ ಕನೆಕ್ಟ್ ಆಗಲಿದೆ ಎಂದರು. ಮತ್ತೊಬ್ಬ ನಟ ಚೇತನ್ ದುರ್ಗ ಮಾತನಾಡಿ, ಇಷ್ಟು ದಿನ ಕಾಮಿಡಿಯನ್ ಆಗಿ ಮಾಡಿಕೊಂಡು ಬಂದಿದ್ದೆ. ಆದರೆ ಇದರಲ್ಲಿ ಬೇರೆಯದ್ದೇ ರೀತಿಯ ಪಾತ್ರ ಇದೆ. ನಾನು ನಾಯಕ ಒಳ್ಳೆ ಫ್ರೆಂಡ್ಸ್. ಒಂಥರ ಸೈಲೆಂಟ್ ಪಾತ್ರ ನನ್ನದು. ಪೂರ್ಣ ಪ್ರಮಾಣದ ಕಲಾವಿದನಾಗಿ ಗುರುತಿಸಿಕೊಳ್ಳಬೇಕು ಅಂದ್ರೆ ಪಾತ್ರಗಳು ಸಿಗಬೇಕು. ಆ ರೀತಿಯ ಪಾತ್ರ ಇಲ್ಲಿ ಸಿಕ್ಕಿದೆ ಎಂದರು. ಇನ್ನು ಈ ಚಿತ್ರದಲ್ಲಿ ನಾಗರಾಜ್ ರಾವ್, ಸಿದ್ದು, ಡಿಂಗ್ರಿ ನರೇಶ್ ಸೇರಿದಂತೆ ಹಲವಾರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಹರ್ಷವರ್ಧನ್ ರಾಜ್ ಸಂಗೀತ , ಸಿದ್ದು ಕಂಚನಹಳ್ಳಿ ಛಾಯಾಗ್ರಹಣ , ಶಾಂತಕುಮಾರ ಸಂಕಲನವಿದೆ. ಈ ಚಿತ್ರವು ಇದೆ 27ರಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

error: Content is protected !!