Cinisuddi Fresh Cini News 

“ವಿರಾಟಪುರ ವಿರಾಗಿ” ಚಿತ್ರದ ಫಸ್ಟ್ ಲುಕ್ ಅನಾವರಣ

ಆಧುನಿಕ ಬಸವಣ್ಣ ಎಂದೇ ಖ್ಯಾತರಾಗಿರುವ ಹಾನಗಲ್ ಕುಮಾರ ಶಿವಯೋಗಿಗಳ ಜೀವನಾಧಾರಿತ “ವಿರಾಟಪುರ ವಿರಾಗಿ” ಚಿತ್ರದ ಮೊದಲ ನೋಟ ಇತ್ತೀಚಿಗೆ ಬಿಡುಗಡೆಯಾಯಿತು. ಶ್ರೀಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು, ಶ್ರೀ ಸದಾಶಿವ ಮಹಾಸ್ವಾಮಿಗಳು ಹಾವೇರಿ, ಶ್ರೀ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಘನಬಸವ ಅಮರೇಶ್ವರ ಮಹಾಸ್ವಾಮಿಗಳು ಶಿವಮೊಗ್ಗ, ಕರ್ನಾಟಕ ಚಲನಚಿತ್ರ ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ, ಪದ್ಮಶ್ರೀ ಪುರಸ್ಕೃತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹಾಗೂ ಮಾಜಿ ಸಚಿವರಾದ ಅಲ್ಲಮ ವೀರಭದ್ರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು‌.‌ ಬಿ.ಎಸ್ ಲಿಂಗದೇವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ‌.‌ ಸಮಾಧಾನ ತಂಡ ಈ ಚಿತ್ರವನ್ನು ನಿರ್ಮಾಣ ಮಾಡಿದೆ.

ಎರಡೂ ವರೆ ವರ್ಷಗಳ ಹಿಂದೆ ಜಡೆಯ ಮಹಾಸ್ವಾಮಿಗಳು ನನಗೆ ಹಾನಗಲ್ ಕುಮಾರ ಶಿವಯೋಗಿಗಳ ಕುರಿತು ಸಿನಿಮಾ ಮಾಡಲು ಹೇಳಿದರು. ಆನಂತರ ನನ್ನ ಆಪ್ತರ ಬಳಿ ಈ ವಿಷಯವನ್ನು ಸಮಾಲೋಚನೆ ಮಾಡಿದೆ. ಅವರೆಲ್ಲರೂ ನೀವು ಈ ಚಿತ್ರವನ್ನು ನಿರ್ದೇಶನ ಮಾಡಿ ಎಂದು ಧೈರ್ಯ ತುಂಬಿದರು.

ನಾನು ನಿರ್ದೇಶನಕ್ಕೆ ಮುಂದಾದೆ. ಅನೇಕ ಮಠಾಧೀಶರನ್ನು ಹಾಗೂ ವಿದ್ವಾಂಸರನ್ನು ಸಂಪರ್ಕಿಸಿ ಸ್ಕ್ರಿಪ್ಟ್ ಸಿದ್ದ ಮಾಡಿದೆ. “ಸಮಧಾನ” ತಂಡದಿಂದ ಚಿತ್ರ ನಿರ್ಮಾಣವಾಗಿದೆ.

ಕುಮಾರ ಶಿವಯೋಗಿಗಳ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಆಭಿನಯಿಸಿದ್ದಾರೆ. ಈಗ ಚಿತ್ರ ಸಿದ್ದವಾಗಿದೆ. ಶಿಕ್ಷಣ, ಆರೋಗ್ಯ ಹಾಗೂ ಮಹಿಳಾ ಸಬಲೀಕರಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳ ಹರಿಕಾರರಾದ ಕುಮಾರ ಶಿವಯೋಗಿಗಳ ಜೀವನಾಧಾರಿತ ಈ ಚಿತ್ರದ ಮೊದಲ ನೋಟ ಪರಮಪೂಜ್ಯರ ಹಾಗೂ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಯಾಗಿರುವುದು ತುಂಬಾ ಸಂತೋಷವಾಗಿದೆ.

ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಅಶೋಕ್ ವಿ ರಾಮನ್ ಛಾಯಾಗ್ರಹಣ ಹಾಗೂ ಗುಣಶೇಖರನ್ ಸಂಕಲನ ಈ ಚಿತ್ರಕ್ಕಿದೆ ಎಂದು ನಿರ್ದೇಶಕ ಬಿ.ಎಸ್ ಲಿಂಗದೇವರು ಚಿತ್ರದ ಕುರಿತು ಮಾಹಿತಿ ನೀಡಿದರು. ಇಂತಹ ಪಾತ್ರದಲ್ಲಿ ನಾನು ಅಭಿನಯಿಸಿರುವುದು ನನ್ನ ಪುಣ್ಯ ಎಂದರು ನಟ ಸುಚೇಂದ್ರ ಪ್ರಸಾದ್.

ನೂರು ವರ್ಷಗಳ ಹಿಂದೆ ಸಮಾಜ ಈ ರೀತಿ ಇರಲಿಲ್ಲ. ಅಂತಹ ಸಮಯದಲ್ಲಿ ಅನೇಕ ಸುಧಾರಣೆಗೆ ಮುಂದಾದ, ಆಧುನಿಕ ಬಸವಣ್ಣ ಎಂದೇ ಎಲ್ಲರಿಂದಲೂ ಕರೆಯಲ್ಪಡುವ ಹಾನಗಲ್ ಕುಮಾರ ಶಿವಯೋಗಿಗಳ ಜೀವನಾಧಾರಿತ ಈ ಚಿತ್ರವನ್ನು ಪ್ರತಿಯೊಬ್ಬರೂ ನೋಡಬೇಕು. ಲಿಂಗ ದೇವರು ನಿರ್ದೇಶನದ ಈ ಚಿತ್ರ ಜನವರಿ 12ರಂದು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ರಾಜ್ಯದ ಐದು ಕಡೆಗಳಿಂದ ರಥಯಾತ್ರೆ ನಡೆಯಲಿದೆ ಎಂದು ಜಡೆ ಅಮರೇಶ್ವರ ಶ್ರೀಗಳು ತಿಳಿಸಿದರು.

ಶಾಮನೂರು ಶಿವಶಂಕರಪ್ಪ, ನಿರ್ದೇಶಕ ಗಿರೀಶ್ ಕಾಸರವಳ್ಳಿ ಹಾಗೂ ಅಲ್ಲಮ ವೀರಭದ್ರಪ್ಪ ಮುಂತಾದ ಗಣ್ಯರು ಮಾತನಾಡಿ, ಚಿತ್ರಕ್ಕೆ ಶುಭ ಕೋರಿದರು.

Related posts